“ಚುನಾವಣೆ ಮುಗಿಯುವವರೆಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ.”
1 min read
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತವಾದ ಚುನಾವಣೆಗಳು ನಡೆಯುವ ಸಂಬಂಧ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳು ಹಾಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರು ಅನುಸರಿಸಬೇಕಾದ ಸೂಚನೆಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.ದಿನಾಂಕ 08/05/2023 ಸ೦ಜೆ 6.00 ಗಂಟೆಯಿಂದ ದಿನಾಂಕ 10/05/2023 ರ ಮಧ್ಯರಾತ್ರಿಯವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತಾರೆ.
• ಈ ಅವಧಿಯಲ್ಲಿ ಯಾವುದೇ ಬಹಿರಂಗ ಸಾರ್ವಜನಿಕ ಸಭೆ-ಸಮಾರಂಭ, ಜಾಥಾ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ.
• 5 ಜನರಿಗಿಂತ ಹೆಚ್ಚು ಜನರು ಒಟ್ಟಿಗೆ ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ.
• ಯಾವುದೇ ರೀತಿಯ ಪ್ರಚಾರಗಳನ್ನು ಅಂದರೆ ಭಿತ್ತಿಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ ಮಾಡುವಂತಹ, ಘೋಷಣೆ ಕೂಗುವಂತಹ, ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.
• ಸದರಿ ನಿಷೇಧಿತ ಅವಧಿಯಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು (ಗುಂಪಾಗಿ) ಹೊರಗೆ ಹೋಗತಕ್ಕದ್ದು.
• ಈ ನಿಷೇಧಾಜ್ಞೆಯು ಮದುವೆ, ಮುಂಜಿ, ಶವಸಂಸ್ಕಾರ, ಸಂತೆ, ಜಾತ್ರೆ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ. ಅದರೆ ಕಾರ್ಯಕ್ರಮಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳನ್ನು ನಡೆಸುವಂತಿಲ್ಲ.
• ದಿನಾಂಕ 08/05/2023 ರ ಸಂಜೆ 06.00 ಗಂಟೆಯಿಂದ ದಿನಾಂಕ 10/05/2023 ರ ಮಧ್ಯ ರಾತ್ರಿ 12.00 ಗಂಟೆಯವರೆಗೆ ಮತ್ತು ದಿನಾಂಕ 12/05/2023 ರ ಮಧ್ಯ ರಾತ್ರಿ 12.00 ಗ೦ಟೆಯಿಂದ ದಿನಾಂಕ 13/05/2023 ರ ಮಧ್ಯ ರಾತ್ರಿ 12.00 ಗಂಟೆಯವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ನಮೂನೆಯ ಮದ್ಯದಂಗಡಿಯನ್ನು ಮುಚ್ಚುವಂತೆಯೂ, ಹಾಗೂ ಮದ್ಯ, ಬೀರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಒಣದಿನ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
• ಪೊಲೀಸ್ ಇಲಾಖೆಯಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗಿರುತ್ತದೆ.
• ಮತದಾರರು ಮತಗಟ್ಟೆಯೊಳಗೆ ಪ್ರವೇಶಿಸುವ ಮೊದಲು ಮಾನ್ಯವಾದ ಗುರುತಿನ ಚೀಟಿಯನ್ನು ಸರಿಯಾಗಿ ಪ್ರದರ್ಶಿಸಬೇಕು.
• ಮತದಾರರನ್ನು ಹೊರತುಪಡಿಸಿ ಬೇರೆ ಯಾರು ಸಹ ಮತಗಟ್ಟೆಯೊಳಗೆ ಪ್ರವೇಶಿಸಕೂಡದು.
• ಯಾವುದೇ ರೀತಿಯ ಮಾರಕಾಸ್ತ್ರ, ಆಯುಧ, ಮೊಬೈಲ್ ಫೋನ್ ಮತ್ತು ಕ್ಯಾಮರಗಳನ್ನು ಮತಗಟ್ಟೆಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
• ಮತದಾನದ ದಿನದಂದು ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರಿಗೆ ಮೊದಲ ಆದ್ಯತೆ ನೀಡಲಾಗುವುದು.
• ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
• ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಗಳನ್ನು ಬಳಸಲು ಅನುಮತಿಸಲಾಗುವುದಿಲ್ಲ.
• ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ರಾಜಕೀಯ ಪ್ರಚಾರದ ಯಾವುದೇ ರೀತಿಯ ಗೋಡೆ ಬರಹ, ಧ್ವಜಗಳು, ಬಂಟಿಂಗ್ಸ್, ಬ್ಯಾನರ್ ಇತ್ಯಾದಿಗಳು ಗೋಚರಿಸಬಾರದು.
• ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತ ಪ್ರಚಾರ ಮಾಡುವಂತಿಲ್ಲ.
• 5 ವ್ಯಕ್ತಿಗಳಿಗೆ ಮಾತ್ರ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ.
• ಮತಗಟ್ಟೆಗೆ ತೆರಳಲು ಖಾಸಗಿ ವಾಹನಗಳನ್ನು ಮತಗಟ್ಟೆಯ 200 ಮೀ. ವ್ಯಾಪ್ತಿಯೊಳಗೆ ಅನುಮತಿಸಲಾಗುವುದಿಲ್ಲ.
• ಚುನಾವಣಾ ದಿನದಂದು ಅಭ್ಯರ್ಥಿಗೆ ಒಂದು ವಾಹನ, ಚುನಾವಣಾ ಏಜೆಂಟ್ ಗೆ ಒಂದು ವಾಹನ.
• ಹೆಚ್ಚು ವಾಹನ ಮತ್ತು ಅಭ್ಯರ್ಥಿಯ ಕಾರ್ಯಕರ್ತರು/ ಪಕ್ಷದ ಕಾರ್ಯಕರ್ತರಿಗೆ ಒಂದು ವಾಹನ ಉಪಯೋಗಿಸಲು ಅನುಮತಿಸಲಾಗುವುದು. ಚಾಲಕರು ಸೇರಿದಂತೆ 5 ಕ್ಕಿಂತ ವ್ಯಕ್ತಿಗಳನ್ನು ಅನುಮತಿಸಲಾಗುವುದಿಲ್ಲ.
• ಅಭ್ಯರ್ಥಿಯು ಪಕ್ಷದಲ್ಲಿ, ಅವರಿಗೆ ನಿಗದಿಪಡಿಸಿದ ವಾಹನವನ್ನು ಬೇರೆ ಯಾರೂ ಅನುಮತಿಸಲಾಗುವುದಿಲ್ಲ.
• ಜಿಲ್ಲಾ ಚುನಾವಣಾಧಿಕಾರಿಯಿಂದ ಪಡೆದ ಅನುಮತಿ ಪತ್ರವನ್ನು ವಾಹನದಲ್ಲಿ ಅಂಟಿಸಿರತಕ್ಕದ್ದು.
• ಅಭ್ಯರ್ಥಿ/ ಅವನ ಏಜೆಂಟ್ ಮತದಾರರನ್ನು ಮತಗಟ್ಟೆಗಳಿಗೆ ವಾಹನಗಳಲ್ಲಿ ಒಯ್ಯುವುದು ಅಪರಾಧವಾಗಿರುತ್ತದೆ ಹಾಗೂ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
• ರಾಜಕೀಯ ಪಕ್ಷದವರು ಮತಗಟ್ಟೆಯ 200 ಮೀ. ವ್ಯಾಪ್ತಿಯ ಹೊರಗೆ ಹಾಕುವಂತಹ ಶಾಮಿಯಾನ/ ಟೆಂಟ್ ನಲ್ಲಿ ಕೇವಲ 2 ಕುರ್ಚಿ ಮತ್ತು ಒಂದು ಟೇಬಲ್ ಅವಕಾಶವಿರುತ್ತದೆ. ಸದರಿ ಸ್ಥಳದಲ್ಲಿ ಜನಸಂದಣಿಗೆ ಅವಕಾಶ ಇರುವುದಿಲ್ಲ.
• ಏಜೆಂಟ್ ಗಳು ಮತದಾರರಿಗೆ ಅವರ ಮತಗಟ್ಟೆಯ ಭಾಗ ಮತ್ತು ಕ್ರಮ ಸಂಖ್ಯೆ ಬರೆದು ಕೊಡುವ ಚೀಟಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಚಿಹ್ನೆ ಅಥವಾ ಗುರುತುಗಳು ಇರಬಾರದು.ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲು ಕೋರಿದ್ದು, ಯಾವುದೇ ರೀತಿಯ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

