लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
19/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಾ ಕಂಡ ಚೆಲುವು,
ನಾ ಉಂಡ ನಲಿವು,
ನನ್ನ ಕನ್ನಡ ಸಾಹಿತ್ಯ ಪರಿಷತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ನೇ ಸಂಸ್ಥಾಪನಾ ದಿನಾಚರಣೆಯ ನೆನಪುಗಳೊಂದಿಗೆ,,,,,,,

ಇದರ ಹುಟ್ಟು – ಶ್ರೇಯಸ್ಸು – ಕೀರ್ತಿಗೆ ಬಹುಮುಖ್ಯ ಕಾರಣರಾದ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ನಮನಗಳನ್ನು ಸಲ್ಲಿಸುತ್ತಾ ,,,,,

ಸಮಸ್ತ ಕನ್ನಡಿಗರಿಗೆ ೧೦೯ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು.

ಕನ್ನಡ ಎಂದರೆ, ಅದೊಂದು ಜಾತ್ಯತೀತ ಪ್ರಜ್ಞೆ ಇದ್ದಂತೆ, ಇದೊಂದು ಬದುಕಿನ ವಿಧಾನ,ಇದು ಹೊಗಳಿಕೆಗೆ ಮೀಸಲಾದ ಭಾಷೆಯಲ್ಲ, ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ಪ್ರತಿರೋಧ ಮತ್ತು ಪ್ರತಿಧ್ವನಿಯನ್ನು ಬಿತ್ತಿ ಬೆಳೆದ ಭಾಷೆ ಈ ಕನ್ನಡ, ಈ ತರಹದ ರಸಾನುಭಾವದೊಂದಿಗೆ ಭಾಷೆ ಮತ್ತು ಸಾಹಿತ್ಯದ ಮೂಲಕ ರೂಪಗೊಂಡ ಇಂತಹ ಕನ್ನಡ ,ವರ್ತಮಾನದ ಈ ದಿನದಲ್ಲಿ ಬಹುಪಾಲು ಜನರ ನಾಲಿಗೆಯ ಮೇಲೆ ಅವಶ್ಯಕತೆಗಿಂತ ಹೆಚ್ಚಾಗಿ ಹೊಗಳುವ ಭಾಷೆಯಾಗಿ ಒಮ್ಮೊಮ್ಮೆ ತುಟಿಮೀರಿ ಕಟುವಾಗಿ ಟೀಕಿಸುವ ಭಾಷೆಯಾಗಿ ಬಳಕೆಯಾಗುತ್ತಿರುವುದು ನೋವಿನ ಸಂಗತಿ.

ಭಾಷಾ ಸಂಪ್ರೀತಿಯೊಂದಿಗೆ ಒಂದು ಪ್ರತಿರೋಧವು ಸಹ ನಮ್ಮ ಭಾಷೆ ಮತ್ತು ಸಾಹಿತ್ಯದ ಭಾಗವಾಗಿ ಇರದೆ ಹೋದರೆ ಅಂತ ಯಾವುದೇ ಭಾಷೆ ಮತ್ತು ಸಾಹಿತ್ಯ ಗಟ್ಟಿಯಾಗಿ ಬೆಳೆದು ನಿಲ್ಲಲು ಸಾಧ್ಯವಿಲ್ಲ.

ಭಾಷೆಯ ಉದಯದೊಂದಿಗೆ ಸಾಹಿತ್ಯದ ಉದಯವು ಆಗಿದೆ ,ಅದು ಅಭಿವ್ಯಕ್ತಿ ಸಾಧನದ ಜೊತೆ ಜೊತೆಗೆ ಹೊರ ಬರುತ್ತಾ ತನ್ನ ನಿಲುವನ್ನು ಪ್ರತಿಪಾದಿಸುತ್ತದೆ, ಪ್ರತಿಪಾದಿಸಬೇಕು ಕೂಡ.

ರಾಜನ ಆಶ್ರಯದಲ್ಲಿದ್ದು,ರಾಜಶ್ರಯದ ಸರ್ವಾಧಿಕಾರಿ ಧೋರಣೆಯ ವಿರುದ್ಧವೇ ಧ್ವನಿ ಮಾಡಿದ ಆದಿ ಕವಿ ಪಂಪನು ಕನ್ನಡದ ಭಾಷೆಗೆ ಇರುವ ದಿಶಕ್ತಿಯನ್ನು ಎತ್ತಿ ಹಿಡಿದಿದ್ದಾನೆ, ಆದಿಕವಿ ಪಂಪನು ರಾಜನ ಸರ್ವಾಧಿಕಾರಿ ಧೋರಣೆ ವಿರುದ್ಧ ಬೀದಿಗಿಳಿದು ಎಂದು ಹೋರಾಟ ಮಾಡಲಿಲ್ಲ, ಅವನು ತನ್ನ ಪ್ರತಿರೋಧವನ್ನು ರಾಜನ ವಿರುದ್ಧ ವ್ಯಕ್ತಪಡಿಸಿದ್ದು ಸಾಹಿತ್ಯದ ಮೂಲಕ, ಇದು ಒಂದು ಭಾಷೆ ಮತ್ತು ಸಾಹಿತ್ಯಕ್ಕಿರುವ ಶಕ್ತಿ.

ಈ ತರಹದ ಪ್ರತಿಭಟನೆ ಮತ್ತು ಪ್ರತಿರೋಧವೇ ಕನ್ನಡದ ಶ್ರೀಮಂತಿಕೆಯಾಗಿದೆ , ಈ ತರಹದ ಪ್ರತಿರೋಧನೆ ಕನ್ನಡ ಪ್ರಾಚೀನ ಪ್ರಜ್ಞೆಯ ಭಾಷಾ ಸೌಂದರ್ಯ ಕೂಡ ಆಗಿದೆ ಎಂಬುದನ್ನು ಮನಗಾಣಬೇಕು.

ಕನ್ನಡ ನಾಡಿನ ಜನಜೀವನ, ಈ ನೆಲ ಜಲ, ಬದುಕು ಬವಣೆಗಳನ್ನು ಒಳಗೊಂಡಂತೆ ಇಲ್ಲಿನ ಜನಜೀವನದೊಳಗೆ ಹಾಸು ಹೊಕ್ಕಾಗಿರುವ ಸಾಹಿತ್ಯ,ಸಂಸ್ಕೃತಿ, ಕಲೆ ,ಪರಂಪರೆ,ಪ್ರತಿಭಟನೆ, ಪ್ರತಿರೋಧ, ಸಂಘರ್ಷ – ಈ ತರಹದ ಕನ್ನಡದ ಸಂಪ್ರೀತಿಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವದರ ಜೊತೆಗೆ, ಸಾಹಿತಿಗಳಿಗೆ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ, ನಾಡಿಗೆ ಸಂಕಷ್ಟ ಎದುರಾದಾಗ, ಜನಸಾಮಾನ್ಯರ ಬದುಕು ಬವಣೆಗೆ ಒಳಪಟ್ಟಾಗ, ಆಳುವ ವ್ಯವಸ್ಥೆ ಹಾದಿ ತಪ್ಪಿದಾಗ, ಭಾಷೆ ಮತ್ತು ಸಾಹಿತ್ಯದ ಮೂಲಕ ಕನ್ನಡಿಗರ ಕಲ್ಯಾಣದ ಸದುದ್ದೇಶದಿಂದ ದುಡಿಯುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿಯೇ ಮೈಸೂರು ರಾಜ ಸಂಸ್ಥಾನದ ಮೇರು ಪ್ರತಿಭೆಯಾದ ರಾಜ ಋಷಿ ನಾಲ್ವಡಿ ಕೃಷ್ಣರಾಜ ಒಡೆಯರ ಭಾಷಾ ಕಾಳಜಿ ಮತ್ತು ದೂರದೃಷ್ಟಿತ್ವದ ಫಲವಾಗಿ ಜನ್ಮತಾಳಿತು.

ಮೈಸೂರು ಮಹಾ ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಆ ಮೈಸೂರು ಸಂಸ್ಥಾನದ ಇತಿಹಾಸದಲ್ಲಿಯೇ ಅಚ್ಚಳಿಯದಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವನ್ನು ರೂಪಿಸಿದವರು. ರಾಜಪ್ರಭುತ್ವವಿದ್ದರೂ ಕೂಡ ಪ್ರಜಾ ಪ್ರಭುತ್ವದ ಆಶಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ.

ಅವರು ಹುಟ್ಟು ಹಾಕಿದ ಇಂತಹ ಕನ್ನಡ ಸಾಹಿತ್ಯ ಪರಿಷತ್ತು ೧೦೮ ವರ್ಷಗಳನ್ನು ಮುಗಿಸಿ ೧0೯ನೇ ವರ್ಷದ ಸಂಸ್ಥಾಪನ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ,ಪ್ರತಿಯೊಬ್ಬ ಕನ್ನಡಿಗರು ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಅವಲೋಕನ ಮಾಡಿಕೊಳ್ಳುವ ಮೂಲಕ ನಮ್ಮನ್ನು ನಾವು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾಗಿದೆ.

೧೦೮ ವರ್ಷಗಳ ಇತಿಹಾಸ ಇರುವ ಸಾಹಿತ್ಯ ಪರಿಷತ್ತನ್ನು ಈ ನಾಡಿನ ಅನೇಕ ಸಂಘಟಕರು, ಸಾಹಿತಿಗಳು, ಕವಿಗಳು, ಬರಹಗಾರರು, ಹೋರಾಟಗಾರರು ಅಲ್ಲಿಂದ ಇಲ್ಲಿಯವರೆಗೆ ಎಳೆದು ತಂದಿದ್ದಾರೆ.

ಇತ್ತೀಚೆಗೆ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ರಾಜ್ಯಾಧ್ಯಕ್ಷರು ಹಲವು ವಿಷಯಗಳಲ್ಲಿ ತೆಗೆದುಕೊಳ್ಳುತ್ತಿರುವ ನೀತಿ ನಿಯಮಗಳು ಮತ್ತು ಕಟ್ಟಳೆ ಗಳ ಬಗ್ಗೆ ಹಲವರು ಮತ್ತು ಕೆಲವು ಕಸಾಪ ಜಿಲ್ಲಾಧ್ಯಕ್ಷರು ಟೀಕೆ ಮತ್ತು ವಿಮರ್ಶೆಯನ್ನು ಮಾಡತ್ತಿರುವುದನ್ನು ಗಮನಿಸುತ್ತಿದ್ದೇನೆ.

ನಾ ಕಂಡಂತೆ,ಈ ಟೀಕೆ ಮತ್ತು ವಿಮರ್ಶೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಲ್ಲ, ಅದರ ಅಧ್ಯಕ್ಷರ ನಡವಳಿಕೆ ಕುರಿತದ್ದಾಗಿರುತ್ತದೆ, ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಮಾಡಿರುವ ಟೀಕೆಯೋ ಅಥವಾ ಆ ಪರಿಷತ್ತಿನ ಅಧ್ಯಕ್ಷರ ಮೇಲೆ ಮಾಡಿರುವ ಟೀಕೆಯೂ ಎಂಬ ಸೂಕ್ಷ್ಮವನ್ನು ಆ ಕುರ್ಚಿಯಲ್ಲಿ ಕುಳಿತ ಮಾನ್ಯ ಅಧ್ಯಕ್ಷರು ಪರಿಗಣಿಸಬೇಕಾಗಿದೆ‌.

ಕನ್ನಡ ಸಾಹಿತ್ಯ ಪರಿಷತ್ತು ಇಡಿ ಕನ್ನಡಿಗರ ಒಂದು ಸ್ವಾಯತ್ತ ಸಂಸ್ಥೆಯಾಗಿದೆ, ಪ್ರಜಾಪ್ರಭುತ್ವದ ಅಡಿಯಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಾಖಲಿಸುವ ಹಕ್ಕು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ, ಇಂಥ ಸಂದರ್ಭದಲ್ಲಿ ಅಧ್ಯಕ್ಷರು ನಡವಳಿಕೆ ಮತ್ತು ಆಡಳಿತ ವ್ಯವಸ್ಥೆಯ ಕೆಲವು ನೀತಿ ನಿಯಮಗಳನ್ನುಟೀಕೆ ಮತ್ತು ಪ್ರತಿರೋಧ ಮಾಡಿದವರನ್ನು ಪರಿಷತ್ತಿನಿಂದ ಹೊರಗೆ ಹಾಕುವುದು ಕನ್ನಡದ ಅಸ್ಮಿತೆಗೆ ಆಗತಕ್ಕಂತಹ ಅಗೌರವ ಎಂಬುದು ನನ್ನ ವೈಯಕ್ತಿಕ ಭಾವನೆ.

ಇಂತಹ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿಗೆ ಯಾರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಕೂಡ ಕನ್ನಡಿಗರ ಟೀಕೆ ವಿಮರ್ಶೆ ಪ್ರತಿರೋಧವನ್ನು ಆತ್ಮ ಸಂತೋಷದಿಂದ ಸ್ವೀಕರಿಸಬೇಕು, ಅಂತಹ ಪ್ರತಿರೋಧಗಳಿಗೆ ಆ ಕುರ್ಚಿಯ ಮೇಲೆ ಕುಳಿತುಕೊಂಡು , ತಾವು ಗಳಿಸಿಕೊಂಡ ಅನುಭವ ಮತ್ತು ಜ್ಞಾನದ ಆದಾರದ ಮೇಲೆ, ಎದುರಾಗಿರುವ ಸಮಸ್ಯೆಯನ್ನು ವಾದ ಪ್ರತಿವಾದಕ್ಕೆ ಇಳಿಯದೆ ಒಂದು ಘನ ಜವಾಬ್ದಾರಿಯಿಂದ ಯಜಮಾನನಂತೆ ಅರಿತು ತಿಳಿ ನೀರಿನಂತೆ ತಿಳಿಗೊಳಿಸಬೇಕು, ಈ ತರಹದ ಜಾಣ್ಮೆ ಮತ್ತು ಸಂಯಮ ಆ ಕುರ್ಚಿಯಲ್ಲಿ ಕುಳಿತಿರುವ ಮಾನ್ಯ ಅಧ್ಯಕ್ಷರು ಕರಗತ ಮಾಡಿಕೊಂಡಿರಬೇಕು.

ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾದ ನನ್ನಂತ ಲಕ್ಷಾಂತರ ಸದಸ್ಯರು, ರಾಜ್ಯಾಧ್ಯಕ್ಷರು ಮತ್ತು ಎಲ್ಲ ಹಂತಗಳ ಪದಾಧಿಕಾರಿಗಳ ಪ್ರತಿ ನಡೆಯನ್ನು ಗಮನಿಸುತ್ತಿರುತ್ತೇವೆ, ನಿಮ್ಮ ಉತ್ತಮ ತೀರ್ಮಾನಗಳಿಗೆ ನಾವು ಅಭಿನಂದನೆ ಸಲ್ಲಿಸುತ್ತಾ, ಸಾಹಿತ್ಯ ಪರಿಷತ್ತಿನ ಸಭೆ ಸಮಾರಂಭಗಳ ವೇದಿಕೆಯಲ್ಲಿ ಬಂದು ಮಾತನಾಡುವಾಗ ಹೀಗೆಯೇ ಮಾತನಾಡಬೇಕು, ವಿರೋಧ ಪ್ರತಿರೋಧದ ಮಾತುಗಳು ಇರಬಾರದು ಎಂಬುದಾಗಿ ಸೂಚಿಸುವ ತಮ್ಮ ಅಸಂಬದ್ಧ ಕಟ್ಟಳೆಗಳು ಮತ್ತು ನಿಯಮಗಳಿಗೆ ಒಂದು ಆರೋಗ್ಯ ಪೂರ್ಣ ಪ್ರತಿರೋಧವನ್ನು ಕೂಡ ಕೊಡಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಈ ಪ್ರತಿರೋಧ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿರುವ ಅಭಿಮಾನಕ್ಕಾಗಿಯೇ ಹೊರತು ಬೇರೆ ಯಾವುದೇ ದೃಷ್ಟಿಯಿಂದಲ್ಲ.

ಈಗ ಎದುರಾಗಿರುವ ಈ ತರಹದ ಟಿಕೆ ಟಿಪ್ಪಣಿಗಳನ್ನು ಮುಕ್ತ ಹೃದಯದಿಂದ ಸ್ವೀಕರಿಸಿ, ನ್ಯಾಯಯುತವಾಗಿ ಒಪ್ಪುವಂತಹ ಒಂದು ಪರಿಹಾರವನ್ನು ಕೊಟ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ತಮ್ಮ ಆಡಳಿತ ಅವಧಿಯಲ್ಲಿ, ಶತಮಾನಗಳ ಇತಿಹಾಸವಿರುವ ಕಸಾಪ ಕ್ಕೆ ಒಂದು ವಿಶೇಷವಾದ ಗುರುತನ್ನು ಭವಿಷ್ಯದ ಕನ್ನಡಿಗರಿಗೆ ಬಿಟ್ಟು ಹೋಗಬಕೆಂಬ ಬಯಕೆಯನ್ನು ತಮ್ಮ ಮುಂದೆ ಇಡುತ್ತಾ,,,,

ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ರಾಜ್ಯಾಧ್ಯಕ್ಷರಲ್ಲಿ ಈ ಮೂಲಕ ವಿನಂತಿಸುತ್ತಾ,,,,,

ನಾಲ್ವಡಿ ಕೃಷ್ಣರಾಜ ಒಡೆಯರು ಸಂಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತನ್ನು ೧೦೮ ವರ್ಷಗಳ ಕಾಲ ನಿರಂತರವಾಗಿ ಪ್ರತಿ ಹಂತದಲ್ಲೂ ಒಂದು ಯಶಸ್ವಿ ಹೆಜ್ಜೆಯೊಂದಿಗೆ ಪರಿಷತ್ತಿನ ಈ ರಥವನ್ನು ರಾಜ್ಯ ಕಸಾಪ ಪ್ರಥಮ ಅಧ್ಯಕ್ಷರಾದ ಹೆಚ್ ವಿ ನಂಜುಂಡಯ್ಯನವರಿಂದ ಹಿಡಿದು ಇಂದಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ, ಮಹೇಶ್ ಜೋಶಿ ಯವರ ತನಕ ಇಲ್ಲಿಯವರೆಗೆ ಎಳೆದು ತಂದು ಸ್ವಯಂಸ್ಫೂರ್ತಿಯಿಂದ ದುಡಿದ ಎಲ್ಲ ಮಹನೀಯರಿಗೆ ಗೌರವವನ್ನು ಸಲ್ಲಿಸುತ್ತಾ, ನಮನಗಳನ್ನು ಕೊಡಮಾಡುತ್ತಾ,,,,,

ಕನ್ನಡ ಸಾಹಿತ್ಯ ಪರಿಷತ್ತಿಗೆ ಪದಾಧಿಕಾರಿಯಾಗಿ ಸೇವೆಗೆಯ್ಯಲು ನನಗೆ ದೊರೆತಂತ ಅವಕಾಶದಂತೆ ಆಸಕ್ತ ಪರಿಷತ್ತಿನ ಇತರೆ ಸದಸ್ಯರಿಗೂ ಅವಕಾಶದಕ್ಕಲಿ ಎಂಬ ಕಳಕಳಿಯ ಸಾಮಾಜಿಕ ಪ್ರೇರಣೆಯೊಂದಿಗೆ,

ತಾಯ್ನೆಲದ
ತಾಯ್ನುಡಿಯ
ಹಿರಿಮೆ -ಗರಿಮೆಗಾಗಿ ಕೈಯೆತ್ತಿ ಕೊರಳೆತ್ತಿ ವೀರ ಕನ್ನಡಿಗರಾಗಿ ನಡೆಯೋಣ, ಬರೆಯೋಣ, ಮಾತೃಭಾಷೆಯಲ್ಲಿಯೇ ಸಂವಹನ ಮಾಡೋಣ.

ಬರಹ ಕೃಪೆ.
ಡಿ,ಎಂ, ಮಂಜುನಾಥಸ್ವಾಮಿ
ನಿಕಟಪೂರ್ವ
ಜಿಲ್ಲಾ ಗೌರವ ಕಾರ್ಯದರ್ಶಿ,
ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

About Author

Leave a Reply

Your email address will not be published. Required fields are marked *