“ಮಳೆಗಾಗಿ ಅಯ್ಯನಕೆರೆ,ಮದಗದಕೆರೆ ತಪ್ಪಲಿನ ಗ್ರಾಮಸ್ಥರಿಂದ ವಿಶೇಷ ಪೂಜೆ.”
1 min read
ಚಿಕ್ಕಮಗಳೂರು:ಮಳೆಯ ಕೊರತೆಯಿಂದ ಅಯ್ಯನಕೆರೆ ಹಾಗೂ ಮದಗದಕೆರೆಗಳು ಇನ್ನೂ ಭರ್ತಿಯಾಗದ ಹಿನ್ನೆಲೆಯಲ್ಲಿ ಕೆರೆಗಳ ತಪ್ಪಲಿನ ಗ್ರಾಮಸ್ಥರು ಉತ್ತಮ ಮಳೆಯಾಗಲೆಂದು ಶಕುನ ರಂಗನಾಥ ಸ್ವಾಮಿ ಹಾಗೂ ಸರಪಳಿ ಕೆಂಚರಾಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಸ್ತಿನಾಪುರ ಗ್ರಾಮದ ವತಿಯಿಂದ ನಡೆದ ಪೂಜೆಯಲ್ಲಿ ಸುಮಾರು 180 ಮನೆಗಳ ಗ್ರಾಮಸ್ಥರು ಒಟ್ಟಾಗಿ ಪಾಲ್ಗೊಂಡು ಮಳೆಯಾಗುವಂತೆ ಪ್ರಾರ್ಥಿಸಿದರು.

ಸುಮಾರು 1,300 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಅಯ್ಯನಕೆರೆ ಹಾಗೂ 800 ಹೆಕ್ಟೇರ್ ವಿಸ್ತೀರ್ಣದ ಮದಗದಕೆರೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಸುರಿಯುವ ಮಳೆಯಿಂದಲೇ ಭರ್ತಿಯಾಗುತ್ತವೆ. ಆದರೆ ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಕೆರೆಗಳು ತುಂಬದಿರುವುದು ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಅಯ್ಯನಕೆರೆ.

ಈ ಹಿನ್ನೆಲೆಯಲ್ಲಿ ಶಕುನ ರಂಗನಾಥ ಸ್ವಾಮಿಗೆ 101 ಎಡೆ ಮತ್ತು ಬಾಳೆಹಣ್ಣು ರಸಾಯನದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರಪಳಿ ಕೆಂಚರಾಯನಿಗೆ ಮೂರು ಕುರಿಗಳನ್ನು ಬಲಿ ನೀಡಿ ಹತ್ತು ಗ್ರಾಮಗಳ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿದರು.
ಮದಗದಕೆರೆ.

ಮಡಿವಾಳ ಸಮಾಜದ ವತಿಯಿಂದ ದಾಸಪ್ಪರನ್ನು ಕರೆಸಿ ಸಂಪ್ರದಾಯಬದ್ಧವಾಗಿ ಪೂಜೆ ನಡೆಸಲಾಯಿತು.ತಾ.ಪಂ. ಮಾಜಿ ಅಧ್ಯಕ್ಷ ಆನಂದ್ ನಾಯ್ಕ್ ಹಾಗೂ ಗ್ರಾಮದ ಯುವಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಅಯ್ಯನಕೆರೆ ಮತ್ತು ಮದಗದಕೆರೆಗಳು ಭರ್ತಿಯಾದರೆ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಗ್ರಾಮಸ್ಥರು ಆಶಾಭಾವ ವ್ಯಕ್ತಪಡಿಸಿದರು.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

