ಮನೋವಿಕಾಸಕ್ಕೆ ಉತ್ತೇಜನ ನೀಡುವ ಕತೆಗಳಲ್ಲಿ ಪಂಚತಂತ್ರ ಕಥೆಗಳು ವಿಶಿಷ್ಟವಾಗಿವೆ: ಇಂದು ಚಿಕ್ಕಮಗಳೂರಿನಲ್ಲಿ ನಿರ್ದಿಗಂತ ರಂಗ ತಂಡದಿಂದ ಪ್ರಾಜೆಕ್ಟ್ ಪಂಚತಂತ್ರ” ಎಂಬ ವಿಭಿನ್ನ ರಂಗ ಪ್ರಯೋಗ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಮನೋವಿಕಾಸಕ್ಕೆ ಉತ್ತೇಜನ ನೀಡುವ ಕತೆಗಳಲ್ಲಿ ಪಂಚತಂತ್ರ ಕಥೆಗಳು ವಿಶಿಷ್ಟವಾಗಿವೆ: ಇಂದು ಚಿಕ್ಕಮಗಳೂರಿನಲ್ಲಿ ನಿರ್ದಿಗಂತ ರಂಗ ತಂಡದಿಂದ ಪ್ರಾಜೆಕ್ಟ್ ಪಂಚತಂತ್ರ” ಎಂಬ ವಿಭಿನ್ನ ರಂಗ ಪ್ರಯೋಗ.
ಚಿಕ್ಕಮಗಳೂರು ಸೆ 06: ಭಾರತದ ಇತಿಹಾಸದಲ್ಲಿ ಪಂಚತಂತ್ರದ ಕಥೆಗಳು ವಿಶೇಷ ಮಹತ್ವವನ್ನು ಹೊಂದಿವೆ, ಇವು ನೀತಿ ಕಥೆಗಳಾಗಿದ್ದು ಬೇಧ ಪರೀಕ್ಷಾ ವಿಶ್ವಾಸ ವಂಚನೆ ಮಿತ್ರಕಾರ್ಯ ಎಂಬ ಐದು ಗುಣ ಧರ್ಮಗಳನ್ನು ಹೊಂದಿರುವ ಕಾರಣ ಈ ಕಥೆಗಳಿಗೆ ಪಂಚತಂತ್ರದ ಕಥೆಗಳು ಎಂದು ಹೆಸರು ಬಂದಿದೆ, ವಿಜ್ಞಾನ, ರಾಜ ತಂತ್ರ, ವ್ಯವಹಾರ ನೀತಿ, ನೀತಿಶಾಸ್ತ್ರ, ರಾಜಕಾರಣ ಮತ್ತು ರಾಜತಂತ್ರದ ವಿಧಾನಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಈ ಕಥೆಗಳು ಕಟ್ಟಿಕೊಟ್ಟಿವೆ.
ಬದಲಾದ ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ ಬೇಚ್ಚಿ ಬೀಳುವಂಥ ವಿಜ್ಞಾನದ ಅವಶ್ಯಕತೆಗಳು ನಡೆದಿವೆ, ಇಂತಹ ಆವಿಷ್ಕಾರಗಳ ಬಗ್ಗೆ ಪಂಚತಂತ್ರದ ಕಥೆಗಳು ಸಾವಿರಾರು ವರ್ಷಗಳ ಹಿಂದೆಯೇ ಕಟ್ಟಿಕೊಟ್ಟಿವೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಬದಲಾದ ಆಧುನಿಕತೆಯ ಸನ್ನಿವೇಶದಲ್ಲಿ ಕಥೆ ಹೇಳುವ ಮತ್ತು ಕೇಳುವ ಸಂಸ್ಕೃತಿ ಮರೆಯಾಗುತ್ತಿದೆ, ಜೆಂಜಿ ಯುಗದ ಇಂದಿನ ಮಕ್ಕಳು ಅಜ್ಜ ಅಜ್ಜಿಯ ತೊಡೆಯ ಮೇಲೆ ಬೆಚ್ಚಗೆ ಮಲಗಿ ಕಥೆ ಕೇಳಿ ಬೆಳೆಯುವ ಸೌಭಾಗ್ಯದಿಂದ ವಂಚಿತರಾಗಿದ್ದಾರೆ, ಯಂತ್ರದ ಜೊತೆಗೆ ಕಾರ್ಟೂನ್ಗೆ ಮೊರೆ ಹೋಗಿದ್ದಾರೆ, ಈ ಕಥೆಗಳು ಪ್ರಾಣಿ ಪಕ್ಷಿಗಳು ಮನುಷ್ಯರಂತೆ ಧ್ವನಿ ಪಡೆದು ಪಂಚತಂತ್ರದ ಕಥೆಯಲ್ಲಿ ಬರುವ ಪಾತ್ರಗಳು ಮಾತನಾಡುತ್ತವೆ, ಭಾರತದ ನೆಲದಲ್ಲಿ ಹುಟ್ಟಿದ ಇಂತಹ ಪಂಚತಂತ್ರ ಕಥೆಗಳು ಇಂದು ಜಾಗತಿಕವಾಗಿ ಬಹು ಭಾಷೆಗೆ ತರ್ಜಮೆಗೊಂಡಿದ್ದಾವೆ.
ಇಂತಹ ಹಲವು ವಿಶಿಷ್ಟ ಕಾರಣಗಳಿಗಾಗಿ ನಿರ್ದಿಗಂತ ರಂಗ ತಂಡವು ಆಗಾಗ ಹೊಸ ಹೊಸ ರಂಗ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಗೆ ವಿಭಿನ್ನ ಮತ್ತು ವಿಶಿಷ್ಟ ಪರಿಕಲ್ಪನೆಯೊಂದಿಗೆ ಹೊಸ ರಂಗಭಾಷೆಯನ್ನು ಕೊಡುತ್ತಾ ಬರುತ್ತಿದೆ, ರಂಗಸಕ್ತರು ಇಂತಹ ರಂಗ ಪ್ರಯೋಗಗಳಿಗೆ ವಿಶೇಷ ಆದ್ಯತೆ ಕೊಟ್ಟು ಈ ನಾಟಕಗಳೊಂದಿಗೆ ತೆರೆದುಕೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ನಿರ್ದಿಗಂತ ರಂಗ ತಂಡವು ಪ್ರಾಜೆಕ್ಟ್ ಪಂಚತಂತ್ರ ಎಂಬ ನಾಟಕವನ್ನು ಹೊತ್ತು ರಾಜ್ಯಾದ್ಯಂತ ಸುತ್ತಾಟ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ, ಕಾಡಿನ ಸಂತ ತನ್ನಂತೆ ತಾನು ಬದುಕಿ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೃತಿಗಳನ್ನು ಶಾಶ್ವತವಾಗಿ ಕೊಟ್ಟು ಹೋದ ಪೂರ್ಣಚಂದ್ರ ತೇಜಸ್ವಿಯವರ 88ನೇ ಜನ್ಮದಿನಾಚರಣೆಯು ಸೆಪ್ಟೆಂಬರ್ 8 ರಂದು ನಡೆಯಲಿದೆ, ಈ ಜನ್ಮದಿನಾಚರಣೆಯ ಪ್ರಯುಕ್ತ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಸಂಜೆ ಘಂಟೆ 5:30ಕ್ಕೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಈ ವಿಶಿಷ್ಟ ರಂಗಪ್ರಯೋಗ ನಡೆಯಲಿದೆ.
ಮೈಸೂರಿನ ರಂಗಾಯಣದಲ್ಲಿ ಈ ನಾಟಕದ ಉದ್ಘಾಟನೆಯಾಗಿ, ನೆನ್ನೆ ಶಿವಮೊಗ್ಗದಲ್ಲಿ ಎರಡನೇ ರಂಗ ಪ್ರಯೋಗವನ್ನು ಕಂಡು ಇಂದು ಚಿಕ್ಕಮಗಳೂರಿನಲ್ಲಿ ಮೂರನೇ ಪ್ರಯೋಗಕ್ಕೆ ಈ ತಂಡ ಸಿದ್ಧವಾಗಿದೆ.
ಸುಮಾರು ಎರಡುವರೆ ಘಂಟೆಗಳ ಅವಧಿಯ ಈ ನಾಟಕ 15 ಪಂಚತಂತ್ರದ ಕಥೆಗಳನ್ನು ಎತ್ತಿಕೊಂಡು, ದೃಶ್ಯಕಾವ್ಯಗಳ ಮೂಲಕ ವಿಶಿಷ್ಟ ರಂಗಭಾಷೆಯನ್ನು ಬರೆದಿರುವ ಈ ರಂಗ ಪ್ರಯೋಗಕ್ಕೆ ಪ್ರವೇಶ ಉಚಿತವಾಗಿದ್ದು ರಂಗಾಸಕ್ತರು ಮತ್ತು ಜಿಲ್ಲೆಯ ಜನತೆ ಈ ಪ್ರಯೋಗಕ್ಕೆ ಮುಖಾಮುಖಿಯಾಗಲು ಸಂಘಟಕರು ಕೋರಿದ್ದಾರೆ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

