ಸ್ವಾವಲಂಬನೆಯ ಬದುಕಿಗೆ ಅಂಬೇಡ್ಕರ್ ತತ್ವ ಸಿದ್ಧಾಂತ ಅಗತ್ಯ :ಡಾ. ಮೋಟಮ್ಮ
1 min read
ಸ್ವಾವಲಂಬನೆಯ ಬದುಕಿಗೆ ಅಂಬೇಡ್ಕರ್ ತತ್ವ ಸಿದ್ಧಾಂತ ಅಗತ್ಯ :ಡಾ. ಮೋಟಮ್ಮ
ಭಾರತದಲ್ಲಿ ಸಾವಿರಾರು ವರ್ಷಗಳಿಂದ ಆಸ್ತಿ,ಅಧಿಕಾರ,ಶಿಕ್ಷಣದಿಂದ ವಂಚಿತರಾಗಿ ಸ್ವಾವಲಂಬನೆ ಮತ್ತು ಸ್ವಾಭಿಮಾನವನ್ನು ಕಳೆದುಕೊಂಡು ಶೋಷಣೆಗೆ ಒಳಗಾಗಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಸ್ವಾಭಿಮಾನ ಸ್ವಾವಲಂಬನೆಯ ಬದುಕನ್ನು
ಡಾ. ಬಿ. ಆರ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತ ಒದಗಿಸಿ ಕೊಟ್ಟಿದೆ ಎಂದು ಮಾಜಿ ಸಚಿವೆ ಡಾ. ಮೋಟಮ್ಮ ಹೇಳಿದರು.
ಮೂಡಿಗೆರೆ ಪಟ್ಟಣದ ಬಂಟರ ಸಮುದಾಯ ಭವನದಲ್ಲಿ ಆಶ್ರಯ ಸಾಮಾಜಿಕ ಸಂಸ್ಥೆಯವತಿಯಿಂದ ಏರ್ಪಡಿಸಿದ್ದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 65ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.
ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನವೆಂಬ ಜೀವಂತ ದಾಖಲೆಯನ್ನು ಸಿದ್ದಪಡಿಸಿ, ಸರ್ವರಿಗೂ ಸಮಾನತೆಯನ್ನು
ಒದಗಿಸಿಕೊಟ್ಟು ಪ್ರತಿ ಪ್ರಜೆಯು ಸ್ವಾವಲಂಬಿಯಾಗಿ ಜೀವಿಸುವಂತೆ ಮಾಡಲು ಅಂಬೇಡ್ಕರ್ ರವರು ಪಟ್ಟ ಪರಿಶ್ರಮ ಮತ್ತು ತ್ಯಾಗ ಭಾರತೀಯರಿಗೆ ಎಂದೆಂದಿಗೂ ಆದರ್ಶ ಎಂದರು.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿಕೇತ್ ರಾಜ್ ಮೌರ್ಯ ಮಾತನಾಡಿ ಅಂಬೇಡ್ಕರ್ ರವರ ಜೀವನವೇ ಶೋಷಿತರ ಬದುಕಿಗೆ ದಾರಿ ದೀಪವಾಗಿದೆ ಎಂದರು.
ಅಂಬೇಡ್ಕರ್ ರವರ “ಜೀವನ ಮತ್ತು ಚಿಂತನೆ”ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಿದ ಇವರು ಸರ್ವರಿಗೂ ಬುದ್ಧನ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವದ ಅಂಶಗಳನ್ನು ಪ್ರತಿಪ್ರಜೆಗೆ ದೊರಕಿಸಿಕೊಟ್ಟ ಮಹಾ ಮಾನವತಾವಾದಿಯಾದ ಅಂಬೇಡ್ಕರ್ ರವರು ಭಾರತ ದೇಶದ ಬುದ್ಧನ ನಂತರ ಬೆಳಕು ಎನ್ನುತ, ಈ ಬೆಳಕು ಹಾರಿ ಹೋಗಿ ಇಂದಿಗೆ 65ವಸಂತಗಳು ಕಳೆದಿವೆ ಎಂದರು.
ತನ್ನ ಇಡೀ ಜೀವನವನ್ನು ಜ್ಞಾನಕ್ಕಾಗಿ, ನ್ಯಾಯ ನೀತಿಗಾಗಿ ಸಮಾನತೆಗಾಗಿ, ದಮನಿತರ ಉದ್ಧಾರಕ್ಕಾಗಿ ಮುಡುಪಿಟ್ಟ ಮಹಾನ್ ಚೇತನವೆಂದರೆ ಅದು ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರು ಎಂದರು.
ಕಾರ್ಯಕ್ರಮದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ರುದ್ರಯ್ಯ ಮಾತನಾಡಿ ಅಂಬೇಡ್ಕರ್ ಕೊಟ್ಟ ಮೀಸಲಾತಿ ಎಂಬ ಸೌಲಭ್ಯವನ್ನು ಹಂತ ಹಂತವಾಗಿ ನಾಶಮಾಡುವಲ್ಲಿ ಆಡಳಿತ ಪಕ್ಷದ ಕುತಂತ್ರ ಕಾರ್ಯಗಳು ನಡೆಯುತ್ತಿದ್ದು ಎಲ್ಲಾ ಸರ್ಕಾರಿ ಉದ್ಯಮಗಳನ್ನು ಖಾಸಗಿಕರಣಮಾಡಿ ಸಂಪೂರ್ಣವಾಗಿ ಮೀಸಲಾತಿಯನ್ನು ತೆಗೆದು ಹಾಕುವ ಎಲ್ಲಾ ತಯಾರಿಗಳು ನಡೆಯುತ್ತಿವೆ ಎಂಬ ಆತಂಕವನ್ನು ಅಭಿವ್ಯಕ್ತಿಪಡಿಸಿದರು.
ಕಾರ್ಯಕ್ರಮದಲ್ಲಿ ಆಶ್ರಯ ಸಾಮಾಜಿಕ ಸಂಸ್ಥೆಯ ನಿರ್ದೇಶಕರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ. ಎಸ್.ಅನಂತ್,
ಪಟ್ಟಣ ಪಂಚಾಯತಿ ಸದಸ್ಯರಾದ ಹೊಸಕೆರೆ ರಮೇಶ್,
ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಝಾಕಿರ್ ಹುಸೇನ್,
ಬಹುಜನ ಸಮಾಜ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್, ಬಹುಜನ ಸಮಾಜ ಪಕ್ಷದ ಮುಖಂಡರಾದ ಯು.ಬಿ. ಮಂಜಯ್ಯ,
ಶಂಕರ್ ಬೆಟ್ಟಗೆರೆ, ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮೂಡಿಗೆರೆ ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್,
ಆಶ್ರಯ ಸಾಮಾಜಿಕ ಸೇವಾ ಸಂಸ್ಥೆಯ ಪದಾಧಿಕಾರಿಗಳು,
ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಕಮ್ಯುನಿಸ್ಟ್ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಸದಸ್ಯರು,
ಅಂಬೇಡ್ಕರ್, ಅನುಯಾಯಿಗಳು, ಆಹ್ವಾನಿತರು, ಸ್ಥಳೀಯರು, ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬರಹ ಕೃಪೆ :
ಹೆಸಗಲ್ ವೆಂಕಟೇಶ್.
ವರದಿ :
ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್.