*ಚುನಾವಣಾ ಜಿದ್ದಾ ಜಿದ್ದಿ*
1 min read
*ಚುನಾವಣಾ ಜಿದ್ದಾ ಜಿದ್ದಿ*
ಚಿಕ್ಕಮಗಳೂರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆ ಗೊಳ್ಳಲು ಕಾಫಿ ನಾಡಿನ ಚುನಾವಣೆ ಕಣ ರಂಗೇರಿದೆ. ಕಣದಲ್ಲಿ ಐವರು ಅಭ್ಯರ್ಥಿಗಳು ಉಳಿದಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ವಿಧಾನಪರಿಷತ್ ಹಾಲಿ ಉಪಸಭಾಪತಿ ಬಿಜೆಪಿಯ ಎಂ.ಕೆ. ಪ್ರಾಣೇಶ್. ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ದಿಸಿರುವ ಎ.ವಿ.ಗಾಯಿತ್ರಿ ಶಾಂತೇಗೌಡ ಒಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಗೊಂಡು, ಎರಡನೇ ಬಾರಿ ಸ್ಪರ್ದಿಸಿ ಸೋಲು ಅನುಭವಿಸಿದ್ದರು.
ಕಳೆದ ಬಾರಿಯಂತೆ ಈ ಬಾರಿಯೂ ಇವರಿಬ್ಬರ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿರುವುದು ವಿಶೇಷ.
ಉಳಿದಂತೆ ಆಮ್ಆದ್ಮಿ ಪಕ್ಷದಿಂದ ಡಾ.ಸುಂದರ ಗೌಡ,
ಪಕ್ಷೇತರರಾಗಿ ಬಿ.ಟಿ. ಚಂದ್ರಶೇಖರ್ ಹಾಗೂ ರೇಣುಕುಮಾರ್ ಕಣದಲ್ಲಿ ಉಳಿದಿದ್ದಾರೆ.
ಜಿಲ್ಲೆಯ ಒಂದು ನಗರಸಭೆ ಹಾಗೂ ಜಿಪಂ, ತಾಪಂ ಚುನಾವಣೆ ನಡೆಯದಿರುವುದರಿಂದ ಮತದಾನದಲ್ಲಿ ಅಲ್ಲಿನ ಪ್ರತಿನಿದಿಗಳು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಉಳಿದಂತೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ 1138 ಮಹಿಳಾ ಮತದಾರರು,
1279 ಪುರುಷರು ಸೇರಿ ಒಟ್ಟು 2417 ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಒಬ್ಬರು ಕಾಂಗ್ರೆಸ್ನ ಶಾಸಕರಿದ್ದರೆ, ನಾಲ್ವರು ಬಿಜೆಪಿಯ ಶಾಸಕರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾದಿಸಿಕೊಂಡಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಪಕ್ಷದ ಚಿಹ್ನೆಯಲ್ಲಿ ಗೆದ್ದಿರುವುದಿಲ್ಲ. ಆದರೆ ಜಿಲ್ಲೆಯ ಬಯಲುಸೀಮೆಗಳಾದ ಕಡೂರು, ತರೀಕೆರೆ ಭಾಗದಲ್ಲಿ ಕುರುಬ ಸಮಾಜ ಹಾಗೂ ಹಿಂದುಳಿದ ವರ್ಗದವರು ಗಾಯತ್ರಿ ಶಾಂತೇಗೌಡ ಕೈ ಹಿಡಿಯುತ್ತಾರೆ ಎನ್ನಲಾಗಿದೆ.
ಹಾಗೆಯೇ ಮಲೆನಾಡಿನ ಮೂಡಿಗೆರೆ, ಚಿಕ್ಕಮಗಳೂರು ಭಾಗಗಳಲ್ಲಿ ಬಿಜೆಪಿ ಪರ ಎಂದು ಅಂದಾಜಿಸಲಾಗಿದೆ. ಉಳಿದಂತೆ ಲಿಂಗಾಯಿತ ಸಮಾಜ ಆಯಾ ಪಕ್ಷದ ಅಭ್ಯರ್ಥಿಗಳ ಜೊತೆ ಇರಬಹುದು ಎಂಬ ಮಾತುಗಳು ನಾಯಕರ ವಲಯದಲ್ಲಿ ಕೇಳಿಬರುತ್ತಿದೆ.
ಈ ಚುನಾವಣೆಯಲ್ಲಿ ಆಸೆ-ಆಮಿಷ ಒಡ್ಡುವ ಮೂಲಕ ಮತ ಪಡೆಯುವುದು ಗೌಪ್ಯವಾಗಿ ಉಳಿದಿಲ್ಲ.
ಯಾವ ಅಭ್ಯರ್ಥಿ ಎಷ್ಟು ಹಣ ನೀಡುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಕಳೆದ ಬಾರಿ 20ರಿಂದ 30 ಸಾವಿರದವರೆಗೂ ಹಣ ನೀಡಲಾಗಿದೆ ಎನ್ನಲಾಗಿದ್ದು, ಈ ಬಾರಿ ಇನ್ನಷ್ಟು ಬೇಡಿಕೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಚರ್ಚೆಯ ವಸ್ತುವಾಗಿದೆ.
ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ಮೊದಲ ಜೆಡಿಎಸ್ ಬೆಂಬಲ ದೊಂದಿಗೆ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಸ್ಪರ್ದಿಸಿದಾಗ ಜೆಡಿಎಸ್ ಕೂಡ ಸ್ಪರ್ದಿಸಿ 400 ಮತಗಳನ್ನು ಪಡೆದಿತ್ತು. ಬಿಜೆಪಿ ಗೆಲುವಿನ ನಗೆ ಬೀರಿತ್ತು. ಈ ಬಾರಿ ಜೆಡಿಎಸ್ ಸ್ಪರ್ದಿಸದೆ ಇರುವುದು ಕಾಂಗ್ರೆಸ್ ಗೆಲುವಿಗೆ ಲೆಕ್ಕಚಾರ ಹಾಕುವಂತಾಗಿದೆ.
ಆದರೆ ಈ ಬಾರಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು ಇದು ಲಾಭದಾಯಕವಾಗುತ್ತದೆ ಎನ್ನುತ್ತಿದೆ ಬಿಜೆಪಿ ವಲಯ. ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತ ಈ ಬಾರಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ಬೆಂಬಲಿಗರ ಜೊತೆ ಸಭೆ ಮಾಡಿ ಅಭ್ಯರ್ಥಿಯ ಪರ ಪ್ರಚಾರ ಆರಂಭಿಸಿದ್ದಾರೆ. ಕಡೂರು ಕ್ಷೇತ್ರವೊಂದರಲ್ಲೆ ನೂರಕ್ಕೂ ಹೆಚ್ಚು ಸದಸ್ಯರು ಜೆಡಿಎಸ್ ಹಾಗೂ ದತ್ತ ಬೆಂಬಲಿಗರಿದ್ದಾರೆ.
ಜಾತಿ ಲೆಕ್ಕಾಚಾರ ಸಹ ಜೋರಾಗಿ ನಡೆಯುತ್ತಿದ್ದು, ಜಿಲ್ಲೆಯ ಒಕ್ಕಲಿಗರು,ಕುರುಬ ಸಮಾಜ ಹಾಗೂ ಹಿಂದುಳಿದ ಸದಸ್ಯರು ಯಾರ ಕೈ ಹಿಡಿಯುತ್ತಾರೆ ಎಂಬ ಕುತೂಹಲದೊಂದಿಗೆ ಅವರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಎರಡು ಅಭ್ಯರ್ಥಿಗಳು ಜಿಲ್ಲೆಯ ಎಲ್ಲಾ ಮತದಾರರ ಒಂದು ಸುತ್ತು ಪ್ರಚಾರ ಮುಗಿಸಿದ್ದು, ಈಗ ಆ ಪಕ್ಷದ ಘಟಾನುಘಟಿಗಳು ಪ್ರಚಾರದ ಕಣಕ್ಕಿಳಿದಿದ್ದಾರೆ.
ಗಾಯತ್ರಿ ಶಾಂತೇಗೌಡ ಅವರ ಬಗ್ಗೆ ಅನುಕಂಪವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜತೆಗೆ ಹಣಬಲ ಮತ್ತು ಜಾತಿ ಬಲ ಕೆಲಸ ಮಾಡಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ, ಕಳೆದ ಬಾರಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ಸೌಲಭ್ಯ ಒದಗಿಸಿರುವುದರಿಂದ 500ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾದಿಸುತ್ತೇನೆ ಎನ್ನುತ್ತಾರೆ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋದಿ ಆಡಳಿತದಿಂದ ಜನತೆ ಬೇಸತ್ತಿದ್ದು. ಮತಯಾಚಿಸಲು ಹೋದಾಗ ಮತದಾರರು ಉತ್ತಮ ಬೆಂಬಲ ವ್ಯಕ್ತಪಡಿಸುತ್ತಿರುವುದು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ಭರವಸೆ ಇದೆ ಎಂದೇ ಹೇಳುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಎ. ವಿ. ಗಾಯಿತ್ರಿ ಶಾಂತೇಗೌಡ,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.3 ರಂದು ಜಿಲ್ಲೆಯಲ್ಲಿ ಮತಯಾಚನೆಗೆ ಆಗಮಿಸಲಿದ್ದು, ಅಂದು ಜೆಡಿಎಸ್ನ ರಾಜ್ಯ ಉಪಾಧ್ಯಕ್ಷ ಜಿಪಂ ಮಾಜಿ ಸದಸ್ಯ ಎಚ್.ಎಚ್. ದೇವರಾಜ್ ಹಾಗೂ ಹಲವು ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಹಲವು ವರ್ಷಗಳಿಂದ ಹೋರಾಟ ಹಾಗೂ ರಾಜಕೀಯದಲ್ಲಿದ್ದ ದೇವರಾಜ್ ಸಹ ಕಾಂಗ್ರೆಸ್ಸಿಗೆ ಬಂದಿರುವುದು ಈಗ ವರದಾನವಾಗಲಿದೆ.
ಒಟ್ಟಾರೆ ಚುನಾವಣೆ ಕಣ ರಂಗೇರಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವುದು ಸತ್ಯ.
ಮಹಾಮಾರಿ ಕೊರೊನ ಮತ್ತು
ಮಹಾಮಳೆಗೆ ತತ್ತರಿಸಿರುವ ಮಲೆನಾಡಿನ ಜನತೆಗೆ ಜನಪ್ರತಿನಿದಿಗಳಿಂದ ನ್ಯಾಯ ದೊರಕಬಹುದ.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.