ನೈಜ ಹೋರಾಟಗಾರರ ವೇದಿಕೆ ಹೆಚ್.ಎಂ ವೆಂಕಟೇಶ ಸಾಮಾಜಿಕ ಹೋರಾಟಗಾರರು.#avintvcom
1 min read
ನೈಜ ಹೋರಾಟಗಾರರ ವೇದಿಕೆ
ರಾಜ್ಯದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆ, ಹಲ್ಲೆ, ಸುಳ್ಳು ದೂರುಗಳನ್ನು ನೀಡಿ ಜೈಲಿಗೆ ಕಳುಹಿಸುವ ಮುಖಾಂತರ ಮಾಹಿತಿ ಹಕ್ಕು ಕಾರ್ಯಕರ್ತರ ಧ್ವನಿ ಅಡಗಿಸಿ ಅವರನ್ನು ಸಂಪೂರ್ಣ ನಾಶ ಮಾಡುವ ಹಂತಕ್ಕೆ ಹೋಗಲು ಸರ್ಕಾರವು ಕುಮ್ಮಕ್ಕು ನೀಡುತ್ತಿರುವುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭ್ರಷ್ಟರು, ಲಂಚಕೋರರು, ಭೂ ಒತ್ತುವರಿ, ಅರಣ್ಯ ಒತ್ತುವರಿ, ಅಕ್ರಮ ಕಲ್ಲುಗಣಿಗಾರಿಕೆ, ಇನ್ನಿತರ ಅಕ್ರಮಗಳನ್ನು ನಡೆಸುವವರಿಗೆ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಹೇಳಿಕೆ ಮಾಹಿತಿ ಹಕ್ಕು ಕಾರ್ಯಕರ್ತರ ಕೊಲೆಗೆ,ಹಲ್ಲೆಗೆ ಕುಮ್ಮುಕ್ಕು ನೀಡಿದಂತಾಗಿದೆ ಎಂದರೆ ತಪ್ಪಾಗಲಾರದು.
ಅಂದಿನ ಯುಪಿಎ ಸರ್ಕಾರ 2005ರಲ್ಲಿ ತಂದ ಮಾಹಿತಿ ಹಕ್ಕು ಕಾಯ್ದೆ ಇಡೀ ದೇಶದಲ್ಲಿ ನಡೆಯುವ ಭ್ರಷ್ಟಾಚಾರ ಇನ್ನಿತರ ಅಕ್ರಮಗಳನ್ನು ಬೆಳಕಿಗೆ ತರುವಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಮುಖ ಅಸ್ತ್ರವಾಗಿತ್ತು. ಇದರಿಂದ ಜನಪ್ರತಿನಿಧಿಗಳು, ಆಡಳಿತ ನಡೆಸುವವರು ಕಾನೂನುಬಾಹಿರಕ್ರಮಗಳನ್ನು ಪ್ರಶ್ನಿಸಲು ಕಾಯ್ದೆಯನ್ನು ಬ್ರಹ್ಮಾಸ್ತ್ರ ವಾಗಿ ಬಳಸಿಕೊಳ್ಳುತ್ತಿದ್ದ ಕಾರ್ಯಕರ್ತರ ವಿರುದ್ಧ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪನವರ ಹೇಳಿಕೆ ಅಕ್ರಮ ನಡೆಸುವವರಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು ನಿನ್ನೆ ಹರಪನಹಳ್ಳಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀಧರ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಾಗೆ ತಾವರೆಕೆರೆ ಸಮೀಪ ವೆಂಕಟೇಶ್ ಎಂಬುವರ ಮೇಲೆ ಹಲ್ಲೆ ನಡೆಸಿ ಅವರು ಕೈಕಾಲುಗಳನ್ನು ಕತ್ತರಿಸಿ, ತುಂಡರಿಸಿ ಅಮಾನುಷವಾಗಿ ಕೊಲೆ ಯತ್ನವನ್ನು ಮಾಡಲಾಗಿದೆ. ಅದೃಷ್ಟವಶಾತ್ ಅವರ ಸಾವು ಸಂಭವಿಸದೆ ಇದ್ದರೂ ಕೂಡ ಅವರು ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಎಲ್ಲಾ ಹಿನ್ನೆಲೆಯಲ್ಲಿ ನೈಜ ಹೋರಾಟಗಾರರ ವೇದಿಕೆ ವಿಷಲ್ ಬ್ಲೋವರ್ ಆಕ್ಟ್ (whistleblower act ) ಅನ್ನು ಜಾರಿಗೆ ತರುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುತ್ತಲೇ ಬರುತ್ತಿದೆ.
ಆಕ್ಟ ಜಾರಿಯಾದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಒಂದಷ್ಟು ಶಕ್ತಿ ಬರುವಂತಾಗುತ್ತದೆ. ಈ ಕಾಯಿದೆಯನ್ನು ಜಾರಿಗೆ ತರಲು ಈಗಿನ ಸರ್ಕಾರ ಸಿದ್ದರಿರುವುದಿಲ್ಲ ಎಂಬುದಂತೂ ಸ್ಪಷ್ಟವಾಗಿ ನಮಗೆ ತಿಳಿಯುತ್ತಿದೆ.
ಈಗ ನಾವೆಲ್ಲರೂ ಒಟ್ಟಾಗಿ ಸರ್ಕಾರದ ವಿರುದ್ಧ ವಿಷಲ್ ಬ್ಲೋವರ್ ಆಕ್ಟ ಜಾರಿಗೆ ತರುವಂತೆ ಒಂದು ಪ್ರತಿಭಟನೆಯನ್ನು ಮತ್ತು ಅಭಿಯಾನವನ್ನು ನಡೆಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಹಂಚಿಕೊಳ್ಳಬೇಕಾಗಿ ವಿನಂತಿ.
ನೈಜ ಹೋರಾಟಗಾರರ ವೇದಿಕೆ
ಹೆಚ್. ಎಂ ವೆಂಕಟೇಶ ಸಾಮಾಜಿಕ ಹೋರಾಟಗಾರರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.