“ಬಡವರ ಹೊಟ್ಟೆಗೆ ಹೊಡೆಯುವ ಮಡಿಕೇರಿ ಇಂದಿರಾ ಕ್ಯಾಂಟೀನ್ ಮಹಾವಂಚನೆ : ಕರವೇ ಸ್ವಾಭಿಮಾನಿ ಬಣದಿಂದ ಪತ್ತೆ.”
1 min read
ತಿಂಡಿಗೆ ಹತ್ತು ರೂಪಾಯಿ ಸುಲಿಗೆ, ಕಳಪೆ ಆಹಾರ, ಕಳೆ ತುಂಬಿದ ಆವರಣ ಹಾಗೂ ರಾಜಾರೋಷ ಪಾರ್ಸೆಲ್ ದಂಧೆಗೆ ನಗರಸಭೆಯ ಅಧಿಕಾರಿ ಸತೀಶ್ ಎ.ಡಬ್ಲ್ಯೂ.ಇ ಸಮ್ಮುಖದಲ್ಲೇ ಬ್ರೇಕ್.
ತಕ್ಷಣವೇ ಸುಧಾರಿಸದಿದ್ದರೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ ನೀಡಿದ ಕರವೇ ಸ್ವಾಭಿಮಾನಿ ಬಣ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಇಂದಿರಾ ಕ್ಯಾಂಟೀನ್’ ಮಡಿಕೇರಿ ತಾಲೂಕಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಟೆಂಡರ್ದಾರರ ಅತಿ ಆಸೆಯಿಂದಾಗಿ ಹಳ್ಳ ಹಿಡಿದಿದೆ. ಬಡವರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಹೊಟ್ಟೆ ತುಂಬಿಸಬೇಕಾದ ಕ್ಯಾಂಟೀನ್ನಲ್ಲಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಹಗಲು ದರೋಡೆ ನಡೆಸಲಾಗುತ್ತಿದೆ. ಈ ವ್ಯವಸ್ಥಿತ ಲೂಟಿ ಮತ್ತು ಕಳಪೆ ವ್ಯವಸ್ಥೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜನಾಂದೋಲನ ರೂಪದಲ್ಲಿ ಬಯಲಿಗೆಳೆದಿದೆ.

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ನಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ಅಂದರೆ ಐದು ರೂಪಾಯಿಯ ತಿಂಡಿಗೆ ಬರೋಬ್ಬರಿ 10 ರೂಪಾಯಿ ವಸೂಲಿ ಮಾಡಲಾಗುತ್ತಿತ್ತು. ಇಲ್ಲಿನ ಊಟದ ಸ್ಥಿತಿಯಂತೂ ಕೇಳುವವರೇ ಇಲ್ಲದಂತಾಗಿದ್ದು, ಅನ್ನ ಚೆನ್ನಾಗಿದ್ದರೆ ಸಾರು ಮಾತ್ರ ಬಾಯಿಗೆ ಇಡದಷ್ಟು ಕಳಪೆಯಾಗಿರುತ್ತಿತ್ತು.
ಇನ್ನು ಕುಡಿಯುವ ನೀರಿನ ಯಂತ್ರ ಕೆಟ್ಟು ತಿಂಗಳುಗಳೇ ಕಳೆದಿದ್ದರೂ ಬಡ ಗ್ರಾಹಕರಿಗೆ ಕುಡಿಯಲು ಯೋಗ್ಯವಾದ ನೀರು ಒದಗಿಸುವ ಕನಿಷ್ಠ ಸೌಜನ್ಯವನ್ನು ನಗರ ಸಭೆಯ ಅಧಿಕಾರಿಗಳು ತೋರಿಲ್ಲ. ಕ್ಯಾಂಟೀನ್ ಸುತ್ತಮುತ್ತ ಕಾಡು-ಕಳೆ ತುಂಬಿಕೊಂಡು ನೋಡಲು ಅಸಹ್ಯ ಹುಟ್ಟಿಸುವಂತಿದೆ ಎಂದು ಸಾರ್ವಜನಿಕರು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಬಳಿ ತೀವ್ರ ಆಕ್ರೋಶ ಹೊರಹಾಕಿದ್ದರು. ಗ್ರಾಹಕರ ದೂರಿನ ಬೆನ್ನಲ್ಲೇ ಕರವೇ ಸ್ವಾಭಿಮಾನಿ ಪದಾಧಿಕಾರಿಗಳು ಇಂದಿರಾ ಕ್ಯಾಂಟೀನ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ, ಕ್ಯಾಂಟೀನ್ ಆಡಳಿತ ಮಂಡಳಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ.
ಬಡವರ ಅನ್ನ ಕಸಿದು ನಡೆಯುತ್ತಿತ್ತು ಕಾನೂನುಬಾಹಿರ ಪಾರ್ಸೆಲ್ ವ್ಯವಹಾರ.
ಇಂದಿರಾ ಕ್ಯಾಂಟೀನ್ ನಿಯಮಾವಳಿಗಳ ಪ್ರಕಾರ ಸಾರ್ವಜನಿಕರು ಅಲ್ಲೇ ಕುಳಿತು ಊಟ-ತಿಂಡಿ ಸವಿಯಬೇಕು. ಸರ್ಕಾರದ ಯಾವುದೇ ಆದೇಶವಿಲ್ಲದಿದ್ದರೂ, ಇಲ್ಲಿನ ಟೆಂಡರ್ದಾರರು ನಿಯಮಗಳನ್ನು ಗಾಳಿಗೆ ತೂರಿ ಪಾರ್ಸೆಲ್ ದಂಧೆ ನಡೆಸುತ್ತಿದ್ದರು.
ಇದರಿಂದಾಗಿ ದೂರದ ಊರುಗಳಿಂದ ಹಸಿದು ಬರುವ ನೈಜ ಬಡ ಗ್ರಾಹಕರಿಗೆ ಆಹಾರ ಸಿಗದೆ ತೀವ್ರ ಅನ್ಯಾಯವಾಗುತ್ತಿತ್ತು. ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಕ್ಯಾಂಟೀನ್ ಟೆಂಡರ್ದಾರರನ್ನು ಸ್ಥಳದಲ್ಲೇ ಫೋನ್ ಮುಖಾಂತರ ತರಾಟೆಗೆ ತೆಗೆದುಕೊಂಡು ತೀವ್ರವಾಗಿ ತರಾಟೆಗೆ ಮುಟ್ಟಿಸಿದರು.

ಕ್ಯಾಂಟೀನ್ನಲ್ಲಿ ನಡೆಯುತ್ತಿದ್ದ ಈ ಇಡೀ ಭ್ರಷ್ಟಾಚಾರ ಮತ್ತು ಉಡಾಫೆತನದ ವಿರುದ್ಧ ಕರವೇ ಸ್ವಾಭಿಮಾನಿ ಬಣ ತಕ್ಷಣ ಮಡಿಕೇರಿ ನಗರ ಸಭೆಯ ಎ.ಡಬ್ಲ್ಯೂ.ಇ (AEE) ಸತೀಶ್ ಅವರನ್ನು ಭೇಟಿ ಮಾಡಿದ್ದು,ಖಾಸಗಿ ಬಸ್ ನಿಲ್ದಾಣ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ ಬಗ್ಗೆ ಮೌಕಿಕವಾಗಿ ತಿಳಿಸಿದೆ. ಈ ಸಂದರ್ಭದಲ್ಲಿ ಸ್ಪಂದಿಸಿದ ನಗರ ಸಭೆಯ ಅಧಿಕಾರ AEE ಸತೀಶ್ ಅವರು, ಹೀಗಾಗಿರೋದು ಆಗಿ ಹೋಗಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಮಾಡುತ್ತೇವೆ ಎಂದು ಎರಡು ದಿನದ ಒಳಗಾಗಿ ಸರಿಪಡಿಸು ಎಂದು ತಿಳಿಸಿರುತ್ತಾರೆ. ಇಂದಿನಿಂದಲೇ ಸರ್ಕಾರದ ನಿಯಮದಂತೆ ತಿಂಡಿಗೆ ಕೇವಲ 5 ರೂಪಾಯಿ ಮಾತ್ರ ಪಡೆಯಲಾಗುವುದು. ಪಾರ್ಸೆಲ್ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು. ಕ್ಯಾಂಟೀನ್ ಸುತ್ತಮುತ್ತ ತಕ್ಷಣವೇ ಸ್ವಚ್ಛತೆ ಕಾಪಾಡಿ, ಕುಡಿಯುವ ನೀರಿನ ಯಂತ್ರವನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು,” ಎಂದು ಕಟ್ಟುನಿಟ್ಟಿನ ಭರವಸೆ ನೀಡಿದ್ದಾರೆ.

ಒಂದು ವೇಳೆ ನಗರ ಸಭೆಯ ಅಧಿಕಾರಿಗಳು ಮತ್ತು ಟೆಂಡರ್ದಾರರು ನೀಡಿದ ಭರವಸೆಯಂತೆ ನಡೆದುಕೊಳ್ಳದಿದ್ದರೆ ಹಾಗೂ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಇಂದೇ ಸರಿಪಡಿಸದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಮಡಿಕೇರಿ ನಗರ ಸಭೆಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಸ್ವಾಭಿಮಾನಿ ಬಣದ ಉಪಾಧ್ಯಕ್ಷರಾದ ರಾಜಶೇಖರ ಗೌಡ ಹಾಗೂ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷರಾದ ಶಿವು ಮತ್ತು ಕುಶಾಲನಗರ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷರಾದ ನಾಸಿರ್ ಮತ್ತು ಕುಶಾಲನಗರ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಮತ್ತು ಕುಶಾಲನಗರ ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರದ ಮಣಿಕಂಠ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಂದಿನಿ ಮತ್ತು ಸುಂಟಿಕೊಪ್ಪ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಭವ್ಯ ಮತ್ತು ಪದಾಧಿಕಾರಿಗಳಾದ ರವೀಂದ್ರ ಮತ್ತು ವಿಲ್ಸನ್ ಮತ್ತು ನಂಜಪ್ಪ ಮತ್ತು ರಮೇಶ್ ಮತ್ತು ಕಾರ್ತಿಕ್ ಮತ್ತು ಬಾಲಕೃಷ್ಣ ಸಂದರ್ಭದಲ್ಲಿ ಉಪಸ್ಥಿತರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

