ಮಹಿಳಾ ನಿರ್ಭಯ ಸುರಕ್ಷತೆಗೆ 112 ಸಹಾಯವಾಣಿಯ ವಾಹನಗಳಿಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. #avintvcom
1 min read
ಮಹಿಳಾ ದೂರಿಗೆ ನಿರ್ಭಯ ; ಸಾರ್ವಜನಿಕ ಸುರಕ್ಷತೆಗೆ 112 ಸಹಾಯವಾಣಿಯ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ
ಧಾರವಾಡ (ಕರ್ನಾಟಕ ವಾರ್ತೆ) ಡಿ.02: ಜಿಲ್ಲೆಯ ಯಾವುದೇ ಸ್ಥಳದಿಂದ ನೆರವು ಬಯಸಿ ಸಾರ್ವಜನಿಕರು ಕರೆ ಮಾಡಿದರೆ ತಕ್ಷಣ ಪೊಲೀಸ್ ಇಲಾಖೆಯು ಅವರ ಸ್ಪಂದನೆಗೆ ಧಾವಿಸಿ ಸಹಾಯ ಮಾಡಲು ಒಂದೇ ಭಾರತ, ಒಂದೇ ತುರ್ತು ಕರೆ ಅಡಿಯಲ್ಲಿ ಉಚಿತ ದೂರವಾಣಿ ಸಂಖ್ಯೆ 112 ಸಹಾಯವಾಣಿಗೆ ಹಾಗೂ ನಿರ್ಭಯ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಇಂದು ಮಧ್ಯಾಹ್ನ ಎಸ್.ಪಿ.ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಭಯ ಯೋಜನೆಯಡಿ ಧಾರವಾಡ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ಒಂಬತ್ತು ನಿರ್ಭಯ ದ್ವಿ-ಚಕ್ರ ವಾಹನಗಳನ್ನು ಸರಕಾರದಿಂದ ನೀಡಲಾಗಿದೆ. ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದರೆ ಸಮೀಪದಲ್ಲಿರುವ ತುರ್ತು ಸ್ಪಂದನ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಗತ್ಯ ನೆರವು ನೀಡಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ವಿಶೇಷವಾಗಿ ಮಹಿಳೆಯರ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದನೆ ನೀಡಲು ಜಿಲ್ಲಾ ಪೊಲೀಸ್ ಘಟಕದಿಂದ ಪೊಲೀಸ್ ಠಾಣೆಗಳಿಗೆ ನಿರ್ಭಯ ವಾಹನಗಳನ್ನು ಪೂರೈಸಲಾಗಿದೆ ಎಂದು ಅವರು ಹೇಳಿದರು.
ಅಪಘಾತ, ಗಲಭೆ ಸೇರಿದಂತೆ ಯಾವುದೇ ದುರ್ಘಟನೆ ಜರುಗಿದಾಗ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು, ಪ್ರಾಥಮಿಕ ಚಿಕಿತ್ಸೆ, ರಕ್ಷಣೆ ನೀಡಲು ಅನುಕೂಲವಾಗುವ ಆಧುನಿಕ ಸೌಲಭ್ಯ ಹೊಂದಿರುವ ನಾಲ್ಕು ಚಕ್ರದ (ಇನ್ನೋವಾ ಕ್ರಿಸ್ಟಾ) ತುರ್ತು ಸ್ಪಂದನ ವಾಹನಗಳನ್ನು ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸಲಾಗಿದೆ. ಸಹಾಯವಾಣಿ ಮೂಲಕ ಇದರಲ್ಲಿ ದಾಖಲಾಗುವ ಕರೆಗಳಿಗೆ ಅನುಗುಣವಾಗಿ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್.ಪಿ. ಕೃಷ್ಣಕಾಂತ ತಿಳಿಸಿದರು.
ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಇಆರ್ಎಸ್ಎಸ್ (ಇಒಇಖಉಇಓಅಙ ಖಇSPಔಓSಇ SUPPಔಖಖಿ SಙSಖಿಇಒ) 112 ತುರ್ತು ಸೇವೆಯನ್ನು ನವೆಂಬರ್ 15, 2020 ರಿಂದ ಕಲ್ಪಿಸಲಾಗಿದ್ದು, ದಿನದ 24 ಗಂಟೆಯೂ ಧಾರವಾಡ ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಗಸ್ತು ಕರ್ತವ್ಯದಲ್ಲಿ ಸಾರ್ವಜನಿಕರ ಸೇವೆಗಾಗಿ ಸದಾ ಸನ್ನಧ್ಧ ಸ್ಥಿತಿಯಲ್ಲಿ ಈ ವಾಹನಗಳು ಕಾರ್ಯನಿರ್ವಹಿಸುತ್ತಿವೆ.
ಭಾರತ ಸರಕಾರ ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಒಂದೇ ಭಾರತ ಒಂದೇ ತುರ್ತು ಕರೆ ಅಡಿಯಲ್ಲಿ 112 ಸಹಾಯವಾಣಿ ರೂಪಿಸಿದೆ. ಅದರಂತೆ ರಾಜ್ಯದಲ್ಲೂ ಈ ಸಹಾಯವಾಣಿ ಸೇವೆಯನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ಆದ್ದರಿಂದ ಧಾರವಾಡ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಪೊಲೀಸ್, ಅಗ್ನಿ, ವಿಪತ್ತು, ಮಹಿಳಾ ಸಹಾಯ ಇನ್ನಿತರೇ ಯಾವುದೇ ತುರ್ತು ಪರಿಸ್ಥಿತಿಯಲ್ಲಿ 24×7 ತುರ್ತು ಸಹಾಯವಾಣಿ 100 ಸಂಖ್ಯೆಯ ಬದಲಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ತ್ವರಿತ ಪರಿಹಾರ ಪಡೆದುಕೊಳ್ಳಬೇಕು. ಸಮಸ್ಯೆಗಳನ್ನು ಆಧರಿಸಿ ಅದನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿ ಅಲ್ಲಿಂದ ಅಗತ್ಯವಿರುವ ಸಹಾಯ, ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಒಂಬತ್ತು ನಿರ್ಭಯ ದ್ವಿ-ಚಕ್ರ ವಾಹನಗಳಿಗೆ ಮತ್ತು 112 ಸಹಾಯವಾಣಿ ಸೇವೆಗೆ (ಇನ್ನೋವಾ ಕ್ರಿಸ್ಟಾ) ನಾಲ್ಕು ಚಕ್ರದ ಆರು ವಾಹನಗಳಿಗೆ ಎಸ್.ಪಿ. ಕೃಷ್ಣಕಾಂತ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.
ಧಾರವಾಡ ಗ್ರಾಮೀಣ ಡಿ.ವೈ.ಎಸ್ಪಿ. ಎಂ.ಬಿ. ಸಂಕದ, ಡಿಸಿಆರ್ಬಿಯ ಡಿ.ವೈ.ಎಸ್ಪಿ ರಾಮನಗೌಡ ಹಟ್ಟಿ, ಡಿ.ಎ.ಆರ್. ಡಿ.ವೈ.ಎಸ್.ಪಿ. ಜಿ.ಸಿ. ಶಿವಾನಂದ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.