ಅವಿನ್ ಟಿವಿ ಸುದ್ದಿಜಾಲ ✒️: *ಹನ್ನೊಂದು ಜನರ ಮೂರ್ಖರ ಆಟಕ್ಕೆ ಹನ್ನೊಂದು ಅಮಾಯಕರು ಬಲಿ….
1 min read
ಅವಿನ್ ಟಿವಿ ಸುದ್ದಿಜಾಲ ✒️: *ಹನ್ನೊಂದು ಜನರ ಮೂರ್ಖರ ಆಟಕ್ಕೆ ಹನ್ನೊಂದು ಅಮಾಯಕರು ಬಲಿ.*
*ಈ ದುರ್ಘಟನೆ ಕೇವಲ ವಿಷಾದಕರ ಸಂಗತಿಯಾಗಿ ಮಾತ್ರ ಉಳಿದಿಲ್ಲ,ಅದೊಂದು ಕರ್ನಾಟಕದ ಭೂಪಟದಲ್ಲಿ ಕಪ್ಪು ಚುಕ್ಕೆಯಾಗಿ ಮುಖ್ಯ ಚರ್ಚೆಯೊಂದಿಗೆ ಬಿಡಿ ಬಿಡಿಯಾಗಿ ತೆರೆದುಕೊಳ್ಳುತ್ತಾ ಸಾಗುತ್ತಿದೆ*
ಈ ಭೀಕರ ದುರ್ಘಟನೆಗೆ ಯಾರು ಹೊಣೆ ?
ಈ ಹೊಣೆಯನ್ನು ಹೊರುವವರು ಇದುವರೆಗೆ ಯಾರು ಮುಂದೆ ಬಂದಂತೆ ಕಾಣುತ್ತಿಲ್ಲ,
ಹಾಗಾದರೆ ಇದರ ನಿಜವಾದ ಹೊಣೆಗಾರರು ಯಾರು?
ಮುಖ್ಯವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಇದರ ನೇರ ಹೊಣೆಯನ್ನು ಹೊರಬೇಕಾಗುತ್ತದೆ.
ಈ ಕುರಿತು, ಕ್ರೀಡಾಭಿಮಾನದೊಂದಿಗೆ, ವಿಶೇಷವಾಗಿ ಸಮಾಜದ ರೋಗಗ್ರಸ್ತ ಐಪಿಎಲ್ ಎಂಬ ಕ್ರಿಕೆಟ್ ಅನ್ನು ವಿಮರ್ಶೆಗೊಳಪಡಿಸುತ್ತಾ, ಹತ್ತು ಹಲವು ಪ್ರಶ್ನೆಗಳೊಂದಿಗೆ ಅವಿನ್ ಟಿವಿ ಸುದ್ದಿಜಾಲ ತಮ್ಮೊಂದಿಗೆ ಮಾತನಾಡುತ್ತಿದೆ…
ಕ್ರೀಡಾಭಿಮಾನಿಗಳು ಅಂದಾಭಿಮಾನಿಗಳಾಗಿ, ಜೂಜುಕೋರರಾಗಿ, ಕ್ರೀಡಾ ಕ್ಷೇತ್ರ ಎಂಬುದು ಬೆಟ್ಟಿಂಗ್ ಕೇಂದ್ರವಾಗಿದ್ದು ದೇಶ ಬಿಟ್ಟು ಹೋದ ವಿಜಯ ಮಲ್ಯನೆಂಬ ಹೆಂಡದ ದೊರೆಯಿಂದ. ಆತ ತನ್ನ ಹೆಂಡಕ್ಕೆ ಇಟ್ಟ ರಾಯಲ್ ಚಾಲೆಂಜ್ ಎಂಬ ಹೆಸರನ್ನೆ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೂ ಆರ್ಸಿಬಿ ಎಂದು ನಾಮಕರಣ ಮಾಡಿದ. ಅಂದಿನಿಂದ ಇಂದಿನವರೆಗೂ ಅಂದರೆ 18 ವರ್ಷಗಳಿಂದ ಈ ಐಪಿಎಲ್ ಎಂಬ ಈ ಹೆಸರು ಕೇವಲ ಕ್ರೀಡೆಯಾಗಿ ಉಳಿಯದೆ, ಜೂಜು ಕೇಂದ್ರವಾಗಿ ಮಾರ್ಪಟ್ಟು, ಇಲ್ಲಿ ಆಡುವ ಕ್ರಿಕೆಟ್ ಆಟಗಾರರು ಹಣಕ್ಕಾಗಿ ತಮ್ಮನ್ನು ಹರಾಜುಗೂಳಿಸಿಕೊಂಡು, ಕ್ರೀಡಾ ಮನೋಭಾವನೆಗೆ ಎಳ್ಳು ನೀರು ಬಿಟ್ಟಿದ್ದಾರೆ.
ಹೀಗೆ ಎಳ್ಳುನೀರು ಬಿಟ್ಟ ಈ ಐಪಿಎಲ್ ಕ್ರಿಕೆಟಿಗೆ, ಕ್ರೀಡಾಭಿಮಾನಿಗಳಾಗಿದ್ದ ಪ್ರೇಕ್ಷಕರು ಅಂದಾಭಿಮಾನಿಗಳಾದ ಕಾರಣ, ದೇಶದ ಭವಿಷ್ಯದ ಬೆಳಗಬೇಕಾದವರು ಈ ಐಪಿಎಲ್ ಹೆಸರಿನಲ್ಲಿ ನಿತ್ಯ ಬಲಿಯಾಗುತ್ತಿದ್ದಾರೆ. ಇದಕ್ಕೆ ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹನ್ನೊಂದು ಅಮಾಯಕರ ಪ್ರೇಕ್ಷಕರ ಬಲಿಯು ಈಗ ಸಾರ್ವಜನಿಕವಾಗಿ ಮುಖ್ಯ ಚರ್ಚಾ ಕೇಂದ್ರವಾಗಿದೆ.
ಬಲಿಯಾದವರಲ್ಲಿ ಬಹುತೇಕ ಯುವ ಸಮುದಾಯದವರೇ ಒಳಗೊಂಡಿದ್ದಾರೆ, ಆರು ವರ್ಷದ ಬಾಲಕನಿಂದ ಹಿಡಿದು , ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ದಿವ್ಯಶ್ರೀ, ಚಾರ್ಟೆಡ್ ಅಕೌಂಟೆಂಟ್ ಓದುತ್ತಿರುವ ಸಹನಾ ಎಂಬ ಹೆಣ್ಣು ಮಕ್ಕಳು ಸೇರಿದಂತೆ 11 ಜನ ಬಲಿಯಾಗಿ 47 ಜನ ಗಾಯಗೊಂಡಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಒಟ್ಟಿಗೆ ಕುಳಿತುಕೊಂಡು ಹೊಣಗೇಡಿತನದ ಸುದ್ದಿಗೋಷ್ಠಿ ಮಾಡಿ, ಸುದ್ದಿಗೋಷ್ಠಿಯಲ್ಲಿ ಒಂದು ಹೆಣಕ್ಕೆ 10 ಲಕ್ಷ ನಿಗದಿ ಮಾಡಿ, ನಿಗದಿಯಾದ ಆ 10 ಲಕ್ಷ ಹಣವನ್ನು ಸತ್ತ ದೇಹದ ಮೇಲೆ ಇಟ್ಟು, ಕೈ ತೊಳೆದುಕೊಂಡಿದ್ದರು.
ಇನ್ನೂ, ಸತ್ತ ಅ ಅಮಾಯಕ ಹೆಣದ ಮೇಲೆ ಕರ್ನಾಟಕ ಸರ್ಕಾರ ಇಟ್ಟ ಆ 10 ಲಕ್ಷದ ಮೇಲೆ ಜೂಜು ಕೋರರಂತೆ ಕೋಟ್ಯಂತರರು ಹಣ ಗಳಿಸುತ್ತಿರುವ ಆರ್ಸಿಬಿ ಮತ್ತು ಕ್ರಿಕೆಟ್ ಅಸೋಸಿಯೇಷನ್ ತಲಾ 5 ಲಕ್ಷ ಪುಡಿಗಾಸು ಇಟ್ಟು ಶಾಂತಿ ಕೋರಿದೆ.
ಸರ್ಕಾರ ಪರಿಹಾರವಾಗಿ 10 ಲಕ್ಷ ಘೋಷಣೆ ಮಾಡಿದ ಈ ಮೊತ್ತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾದ ಕಾರಣ, ಈಗ ಈ ಪರಿಹಾರ ಮೊತ್ತವನ್ನು 25 ಲಕ್ಷಕ್ಕೆ ಹೆಚ್ಚಿಸಿದ್ದಾರೆ.
ಈ ಭೀಕರ ದುರ್ಘಟನೆಯ ಹೆಣವನ್ನು ಮುಂದಿಟ್ಟುಕೊಂಡು, ಆಡಳಿತರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಪರಸ್ಪರ ವಾಗ್ವಾದಕ್ಕೀಳಿದು, ನಿಜವಾದ ಶೋಕಾಚರಣೆಗಿಂತ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾವೆ. ಈ ಅಮಾಯಕ ಹೆಣದ ಮೇಲಾದರೂ ಒಂದಷ್ಟು ಸೀಟನ್ನು ರಾಜಕೀಯವಾಗಿ ಹೆಚ್ಚಿಸಿಕೊಳ್ಳೋಣ ಎಂದು.
ಇನ್ನೂ ದೃಶ್ಯ ಮಾಧ್ಯಮಗಳಂತೂ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟೆಲ್ಲ ಪ್ರಯತ್ನಕ್ಕೆ ಕೈ ಇಟ್ಟಿದ್ದಾವೆ.
ಈಗ, ಈ ಅವಘಡದ ನಂತರ, ನಮ್ಮ ಮುಂದಿರುವ ಪ್ರಶ್ನೆ ಕ್ರೀಡಾ ಮನೋಭಾವ ಎಂದರೇನು ?
ಐಪಿಎಲ್ ನಿಜವಾಗಿಯೂ ಒಂದು ಕ್ರಿಕೆಟ್ ಆಗಿ ಉಳಿದುಕೊಂಡಿದೆಯೇ? ಅಥವಾ ಅದು ಒಂದು ಜೂಜು ಕೇಂದ್ರವಾಗಿ ಇಡೀ ಈ ಸಮಾಜಕ್ಕೆ ಎಷ್ಟರ ಮಟ್ಟಿಗೆ ಕಳಂಕವಾಗಿದೆ ?
ಈ ಐಪಿಎಲ್ ಮ್ಯಾಚ್ ಆಡಿದ ಈ ಎಲ್ಲಾ ಕ್ರಿಕೆಟ್ ಕ್ರೀಡಾಪಟುಗಳು ನಿಜವಾದ ಕ್ರೀಡಾಪಟುಗಳೇ ? ಅಥವಾ ಹರಾಜಿನ ಮೂಲಕ ಮಾರಾಟವಾದ ಈ ಸಮಾಜದ ಅನಿಷ್ಠ ಗಳೇ ಎಂಬ ಒಂದು ಸಮಗ್ರ ಅವಲೋಕನವನ್ನು ಸಮರ್ಥವಾಗಿ ಆರಂಭ ಮಾಡುವ ಜವಾಬ್ದಾರಿ ನಿಜವಾದ ನಾಗರಿಕ ಸಮಾಜದ ಮುಂದಿದೆ.
ಈ ಹನ್ನೊಂದು ಜನರ ಮೂರ್ಖರ ಐಪಿಎಲ್ ಕ್ರಿಕೆಟ್ ಎಂಬ ಆಟ, ಜಗತ್ತಿನ ಅದೆಷ್ಟೋ ದೇಸಿ ಕ್ರೀಡೆಗಳನ್ನು ನುಂಗಿ ನೀರು ಕುಡಿದಿದೆ. ಇಷ್ಟು ಮಾತ್ರವಲ್ಲ, ಕ್ರಿಕೆಟ್ ಎಂಬ ಈ ಕ್ರೀಡೆ ಐಪಿಎಲ್ 20-20 ಎಂಬ ಹೆಸರಿನಲ್ಲಿ ಆಡುವ ಪ್ರತಿ 120 ಬಾಲ್ ಟು ಬಾಲ್ ಮೇಲೂ ಬೆಟ್ಟಿಂಗ್ ನಡೆಯುತ್ತಿದ್ದು. ಈ ಬೆಟ್ಟಿಂಗ್ ನಲ್ಲಿ ಅದೆಷ್ಟೋ ಯುವ ಸಮುದಾಯ ಬಲಿಯಾಗಿ, ಆಸ್ತಿ ಹಣ ಒಡವೆ ಕಳೆದುಕೊಂಡು ಸಾವಿಗಿಡಾಗಿದ್ದಾರೆ. ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ.
ಹೀಗೆ, ಈ ಐಪಿಎಲ್ ಕ್ರಿಕೆಟ್ ಎಂಬ ಹೆಸರಿನಲ್ಲಿ ಕುಟುಂಬಗಳು ಬೀದಿಗೆ ಬಿದ್ದು, ಅರಳಿ ಬೆಳೆದು ಬೆಳಕಾಗಬೇಕಾಗಿದ್ದ ಮಕ್ಕಳು ಬಲಿಯಾಗಿ, ಜನ್ಮ ನೀಡಿದ ಅಪ್ಪ ಅಮ್ಮಂದಿರು ಕಣ್ಣೀರಿಟ್ಟು , ಸತ್ತ ತಮ್ಮ ಮಕ್ಕಳ ಸಮಾಧಿಯ ಮೇಲೆ ಬಿದ್ದು ಹೊರಳಾಡುತ್ತಿದ್ದರು ಕೂಡ, ಏಳಷ್ಟು ಲವಲೇಶದ ಕಾಳಜಿ ಇಲ್ಲದೆ ಆಡಳಿತರೂಢ ಕರ್ನಾಟಕ ಸರ್ಕಾರವು ತನ್ನ ಬಂಡತನವನ್ನು ಪ್ರದರ್ಶನಕ್ಕಿಟ್ಟಂತೆ ಹೊಣಗೇಡಿತನದ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದೆ.
ಇನ್ನೂ ಪ್ರತಿಪಕ್ಷಗಳಿಂದ ಜವಾಬ್ದಾರಿಯುತವಾದ ಎಚ್ಚರಿಕೆಯ ವಿಮರ್ಶೆಗಳನ್ನು ಟೀಕೆಗಳನ್ನು, ಈ ಕ್ರಿಕೆಟ್ ಐಪಿಎಲ್ ಎಂಬ ಮಹಾಮಾರಿಯ ಬಗ್ಗೆ ಧ್ವನಿ ಮಾಡುತ್ತಾರೆನೋ ಅಂತ ಅಂದುಕೊಂಡಿದ್ದರೆ ಅದು ಕೂಡ ಹುಸಿಯಾಗಿದೆ. ಕೇವಲ ಪರಸ್ಪರ ಕೀಳು ಮಟ್ಟದ ಟೀಕೆಗಿಳಿದು ವೋಟ್ ಬ್ಯಾಂಕ್ ರಾಜಕಾರಣದ ಮಾತುಗಳಿಗೆ ಸೀಮಿತವಾಗಿದ್ದಾರೆ.
ಐಪಿಎಲ್ ಹೆಸರಿನಲ್ಲಿ ಈ ಆರ್ಸಿಬಿ ಗೆದ್ದ ಕಾರಣಕ್ಕೆ ಹನ್ನೊಂದು ಅಮಾಯಕರು ಬಲಿಯಾಗಿದ್ದಾರೆ. ಒಂದು ವೇಳೆ ಇದೇ ಆರ್ಸಿಬಿ ಸೋತಿದ್ದರೆ ನೂರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ಈ ಐಪಿಎಲ್7 ಪಂದ್ಯಾವಳಿಯಲ್ಲಿ ಕಳೆದ ಮೂರು ತಿಂಗಳಿನಿಂದ ನಡೆದಿದೆ ಎಂಬ ಸುದ್ದಿಯು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿಲ್ಲ.
ಇಷ್ಟಕ್ಕೂ ಈ ಐಪಿಎಲ್ ಕ್ರಿಕೆಟ್ ಪಟುಗಳು ಶತ್ರು ದೇಶದ ಮೇಲೆ ಯುದ್ಧ ಗೆದ್ದು ವಿಜಯ ಸಾಧಿಸಿ ಬಂದಿದ್ದಾರೆಯೇ ? ಈ ವಿಜಯೋತ್ಸವದ ಸಂಭ್ರಮವನ್ನು ಪ್ರಜಾಪ್ರಭುತ್ವದ ಪ್ರತೀಕದಂತಿರುವ ವಿಧಾನಸೌಧದ ಮುಂದೆ ಆಚರಿಸಿಕೊಳ್ಳಲು?
ಒಂದರ್ಥದಲ್ಲಿ ಆರ್ಸಿಬಿ ತಂಡದ ಕ್ರೀಡಾಪಟುಗಳಲ್ಲಿu ಒಬ್ಬನನ್ನು ಬಿಟ್ಟರೆ ಉಳಿದವರು ಕನ್ನಡಿಗಾರ್ಯಾರು ಅಲ್ಲ. ಈ ತಂಡದಲ್ಲಿ ಆಡಿದ ಆಟಗಾರರೆಲ್ಲರೂ, ಕ್ರೀಡೆಗಾಗಿ ಕ್ರೀಡೆ ಆಡದೆ, ಹಣಕ್ಕಾಗಿ ಹರಾಜಿನ ಮೂಲಕ ನೇಮಕಗೊಂಡವರು. ಈ ಹರಾಜಿನ ವ್ಯಕ್ತಿತ್ವ ಹೊಂದಿದವರನ್ನು ಒಂದು ಘನ ಸರ್ಕಾರ, ಪಂದ್ಯವನ್ನು ಗೆದ್ದ ಮಾರನೇ ದಿನವೇ ಅಭಿನಂದಿಸುವ ದರ್ದು ಏನಿತ್ತು ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಎದ್ದು ನಿಂತಿರುವ ಪ್ರಶ್ನೆಯಾಗಿದೆ.
ಇಂತಹ ಹತ್ತು ಹಲವು ಕಾರಣಕ್ಕಾಗಿ,
ದೇಶದ ಯುವಜನತೆಯ ಭವಿಷ್ಯಕ್ಕಾಗಿ ಐಪಿಎಲ್ ಎಂಬ ಈ ಕ್ರಿಕೆಟ್ ಪೀಡೆಯನ್ನು ಬ್ಯಾನ್ ಮಾಡಲೇಬೇಕಾಗಿರುವುದು ಅನಿವಾರ್ಯವಾಗಿದೆ.
ಇದರ ಜೊತೆಗೆ ಮೃತರ ಕುಟುಂಬದವರಿಗೆ ಆರ್.ಸಿ.ಬಿ, ಕ್ರಿಕೆಟ್ ಮಂಡಳಿಗಳಿಂದ ತಲಾ ಐದು ಕೋಟಿಕೂ ಹೆಚ್ಚು ಪರಿಹಾರ ನೀಡಿ,
ದೇಶದ ಯುವಜನತೆ ಭವಿಷ್ಯದ ಹಿತದೃಷ್ಟಿಯಿಂದ ಹೊಡಿಬಡಿ ಮಾದರಿಯ ಈ ಐಪಿಎಲ್ ಪಂದ್ಯಾವಳಿಯನ್ನು ರದ್ದುಪಡಿಸಲೆಬೇಕಾಗಿದೆ.
ಆರ್ ಸಿ ಬಿ,ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ದೇಶದ ಭವಿಷ್ಯವಾಗಬೇಕಿದ್ದ ಯುವ ಜನತೆಯನ್ನು ದುರಂತದಲ್ಲಿ ಕಳೆದುಕೊಂಡಿದ್ದೇವೆ. ಇದು ಅವರ ಕುಟುಂಬಕ್ಕಷ್ಟೇ ಅಲ್ಲ ದೇಶಕ್ಕೂ ತುಂಬಲಾರದ ನಷ್ಟವಾಗಿದೆ.
ಮೂರು ತಿಂಗಳ ಕಾಲ ಜರುಗಿದ ಐಪಿಎಲ್ ಪಂದ್ಯಾವಳಿಯನ್ನು ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಿದ್ದಾರೆ. ಆದರೆ ಈ ಟೂರ್ನಿಯಿಂದ ಬೆಟ್ಟಿಂಗ್ ಇನ್ನಿತರ ಪರಿಣಾಮಗಳಿಂದ ಲಕ್ಷಾಂತರ ಕುಟುಂಬಗಳು ಇಂದು ಸಂಕಟದ ಕಣ್ಣೀರನ್ನು ಸುರಿಸುತ್ತಿವೆ. ಹರಾಜುಗಾರ ಆಟಗಾರರು ಮಾತ್ರ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದು, ವಿಷಕಾರಿ ಪಾನೀಯವಾದ ಪೆಪ್ಸಿ, ಕೋಕೋಕೋಲಾದಂತಹ ಕಂಪನಿಗಳಿಗೆ ಜಾಹೀರಾತುದಾರರಾಗಿ ಮಿಂಚುತ್ತಿದ್ದಾರೆ.
ದೇಸಿ ಕ್ರೀಡೆಗಳನ್ನು ಆಡಿ ಉಳಿಸಿ ಬೆಳೆಸಿ ಎನ್ನುವ ಬದಲು, ರಮ್ಮಿ ಎಂಬ ಇಸ್ಪೀಟ್ ಆಟ ಆಡಿ ಲಕ್ಷ ಲಕ್ಷ ಗೆಲ್ಲಿ ಎನ್ನುತ್ತಿದ್ದಾರೆ ಈ ಕ್ರೀಡಾಪಟುಗಳು ಜಾಹಿರಾತುಗಳ ಮೂಲಕ.
H
ಈ ಐಪಿಎಲ್ ಕ್ರೀಡಾಪಟುಗಳ ತುಟಿಯಲ್ಲಿ ಪೆಪ್ಸಿಕೊಲದಂತಹ ಬಾಟಲಿಗಳು ತುಟಿಗೆ ಮುತ್ತುಕುತ್ತಿದ್ದಾವೇ ಹೊರತು, ಎಳನೀರು ಕಬ್ಬಿನ ಹಾಲಿನಂತಹ ಶ್ರೇಷ್ಠ ಪಾನೀಯಗಳು ಹರಾಜುಗಾರರಾದ ಕ್ರಿಕೆಟ್ ಕ್ರೀಡಾಪಟುಗಳ ತುಟಿಗೆ ತಾಕುತ್ತಲೇ ಇಲ್ಲ.
ಫೈನಲ್ ಪಂದ್ಯದಲ್ಲಿ ಆರ್ ಸಿಬಿ ಟ್ರೋಫಿ ಗೆದ್ದಾಗ ರಾಜ್ಯಾದ್ಯಂತ ಅಹೋರಾತ್ರಿ ಸಂಭ್ರಮಾಚರಣೆ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಈ ವೇಳೆ ಯಾವುದೇ ಅನಾಹುತ, ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಮರುದಿನವೇ ವಿಜೇತ ತಂಡ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ತರಾತುರಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮೋತ್ಸವಕ್ಕೆ ನಿರ್ಧರಿಸಲಾಯಿತು. ಒಂದು ಸ್ಥಳದಲ್ಲಿ ಕಾರ್ಯಕ್ರಮ ನಡೆಸಿದರೆ ಲಕ್ಷಾಂತರ ಜನ ಸೇರುತ್ತಾರೆಂಬ ಕನಿಷ್ಠ ಪರಿಜ್ಞಾನವಿಲ್ಲದೆ ಕಾರ್ಯಕ್ರಮಕ್ಕೆ ನಿರ್ಧರಿಸಿದ ಆರ್.ಸಿ.ಬಿ ಪ್ರಾಂಚೈಸಿ ಮತ್ತು ಕೆಎಸ್ ಸಿ ಎ ಗೆ ಸಾರ್ವಜನಿಕರು ಧಿಕ್ಕಾರ ಹೇಳಬೇಕಾಗಿದೆ.
ಪ್ರತೀ ಪಂದ್ಯಕ್ಕೂ ಟಿಕೆಟ್ ನೀಡುತ್ತಿದ್ದವರು ಸಂಭ್ರಮಾಚರಣೆ ಸಮಾರಂಭಕ್ಕೆ ಉಚಿತ ಪ್ರವೇಶ ಎಂದು ಘೋಷಿಸಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು.
ವ್ಯವಸ್ಥಿತವಾಗಿ ಟಿಕೆಟ್ ಅಥವಾ ಪಾಸ್ ವ್ಯವಸ್ಥೆ ಮಾಡಿದ್ದರೆ ಈ ಅವಘಡವೇ ಸಂಭವಿಸುತ್ತಿರಲಿಲ್ಲವೇನೂ.
ಉಚಿತ ಪ್ರವೇಶ ಎಂದಿದ್ದಕ್ಕೆ ವಿದ್ಯಾರ್ಥಿಗಳು, ಯುವ ಜನತೆ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿದರು. ಬೇರೆ ಬೇರೆ ಜಿಲ್ಲೆಗಳಿಂದಲೂ ಕಾರ್ಯಕ್ರಮಕ್ಕೆ ದೌಡಾಯಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿತ ಮೂವತ್ತು ಸಾವಿರಕ್ಕೂ ಹೆಚ್ಚು ಸೀಟುಗಳು ಭರ್ತಿಯಾಗಿ, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಅಂದಾಭಿಮಾನಿಗಳು ಪ್ರತಿ ಗೇಟ್ ಮುಂಭಾಗದಲ್ಲೂ ಜಮಾಯಿಸಿದ್ದರು.
ಆ ವೇಳೆ ಐದು ನಿಮಿಷ ಮಳೆ ಸುರಿದ ಪರಿಣಾಮ ಕಾಲ್ತುಳಿತ ಸಂಭವಿಸಿ ಹತ್ತಾರು ಅಮಾಯಕ ಜೀವಗಳು ಉಸಿರು ಚೆಲ್ಲಿದವು.
ಮೃತ ಕುಟುಂಬದ ಪೋಷಕರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ವಿದ್ಯಾಬ್ಯಾಸ ಕೊಟ್ಟು ಬದುಕು ಕಟ್ಟಿಕೊಳ್ಳಬೇಕಾದ ಹಂತದಲ್ಲಿದ್ದ 20ರಿಂದ 30ರ ವಯೋಮಾನದವರು ಜೀವ ಕಳೆದುಕೊಂಡಿದ್ದಾರೆ. ಮುಂದೆ ಅವರ ಕುಟುಂಬಗಳ ಸ್ಥಿತಿ ಏನು? ಅವರನ್ನು ನೋಡಿಕೊಳ್ಳುವವರು ಯಾರು? ಹಾಗಾಗಿ ಆ ಕುಟುಂಬಗಳಿಗೆ ತಲಾ 5 ಲಕ್ಷ ನೀಡುತ್ತಿರುವುದು ಏನೇನೂ ಅಲ್ಲ. ಕೂಡಲೇ ಈ ದುರಂತದ ಜವಾಬ್ದಾರಿಯನ್ನು ಆರ್ ಸಿ ಬಿ ಪ್ರಾಂಚೈಸಿ, ಕೆಎಸ್ ಸಿ ಎ ಮತ್ತು ಬಿಸಿಸಿಐ ಹೊತ್ತುಕೊಂಡು ಕೂಡಲೇ ದೇಶದ ಕ್ಷಮೆಯಾಚಿಸಬೇಕು.
ಬಿಸಿಸಿಐ, ಐಪಿಎಲ್ ಸಂಸ್ಥೆಗಳು ವಿಶ್ವದಲ್ಲಿಯೇ ಲಾಭದಾಯಕ ಸಂಸ್ಥೆಗಳಾಗಿದ್ದು, ಮೃತರ ಕುಟುಂಬಗಳಿಗೆ ತಲಾ 5 ಕೋಟಿ ರೂ.ಪರಿಹಾರ ಘೋಷಣೆ ಮಾಡಬೇಕು.
ಮುಂದೆಂದೂ ಇಂತಹ ಅವಘಡಗಳು ಸಂಭವಿಸಬಾರದು ಎಂದರೆ ನಿರ್ಲಕ್ಷ್ಯ ಧೋರಣೆ ಹೊಂದಿರುವ ಕ್ರಿಕೆಟ್ ಸಂಸ್ಥೆಗಳಿಗೆ ತಕ್ಕ ಶಾಸ್ತಿಯಾಗಬೇಕು.
ಈ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬದವರ ಈ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ನಡೆಸಬೇಕು.
ಐಪಿಲ್ ಒಂದು ಮೋಸದ ಜಾಲ. ಅದರ ಹಿಂದೆ ಸಾಕಷ್ಟು ರೀತಿಯ ಬೆಟ್ಟಿಂಗ್ ಗಳು ನೆಡೆಯುತ್ತಿದ್ದು ಲಕ್ಷಾಂತರ ಮನೆಗಳು ಬೀದಿ ಪಾಲಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸವೂ ಹಾಳಾಗುತ್ತಿದೆ. ಮುಂದಾದರೂ ಇದಕ್ಕೆ ಕಡಿವಾಣ ಬೀಳಬೇಕು.
ದೇಶಕ್ಕಾಗಿ ಆಟ ಆಡಿ ದೇಶಕ್ಕೆ ಕೀರ್ತಿ ತರುವವರನ್ನು ಗೌರವಿಸೋಣ. ಹಣ ಜಾಸ್ತಿ ಕೊಟ್ಟವರಿಗೆ ತಮ್ಮನ್ನು ತಾವು ಹರಾಜಿನ ಹೆಸರಿನಲ್ಲಿ ಮಾರಿಕೊಂಡು ಹಣಕ್ಕಾಗಿಯೇ ಆಟ ಆಡುವವರಿಗೆ ಹೆಚ್ಚು ಮಹತ್ವ ಕೊಡುವುದು ಒಳ್ಳೆಯದಲ್ಲ. ಹರಾಜಿನ ಮೂಲಕ ಆಡುವ ಆಟಗಾರರನ್ನೆಲ್ಲ ತಿರಸ್ಕರಿಸೋಣ.
ಹರಾಜಿನ ಮೂಲಕ ಆಯ್ಕೆಯಾಗುವ ಈ ಆಟಗಾರರನ್ನು.ಜೂಜು ಕೇಂದ್ರದಂತೆ ಪರಿವರ್ತನೆಯಾಗಿರುವ ಐಪಿಎಲ್ ಅನ್ನು ಬ್ಯಾನ್ ಮಾಡಿ, ಯುವ ಸಮೂಹವನ್ನು ರಕ್ಷಿಸಿಕೊಳ್ಳಬೇಕಿದೆ.
ಆಡಳಿತರೂಢ ಸರ್ಕಾರಗಳು ತಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿತನದ ಹೇಳಿಕೆಗಳನ್ನು ಬಿಟ್ಟು, ಪ್ರತಿಪಕ್ಷಗಳು ಸತ್ತ ಹೆಣವನ್ನು ಇಟ್ಟುಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡದೆ, ತಮ್ಮ ತಮ್ಮ ನಿಜವಾದ ಬದ್ಧತೆಯನ್ನು ಪ್ರದರ್ಶಿಸುವಂಥಾಗಲಿ.
•••••••••••••••✒️
ಡಿ.ಎಂ.ಮಂಜುನಾಥಸ್ವಾಮಿ
ಚಿಕ್ಕಮಗಳೂರು