ಸಂಪತ್ ನಾಯರ್ ಕೊಲೆ ಪ್ರಕರಣ : ಮೂವರು ಆರೋಪಿಗಳು ಲಾಕ್*….
1 min read
*ಸಂಪತ್ ನಾಯರ್ ಕೊಲೆ ಪ್ರಕರಣ : ಮೂವರು ಆರೋಪಿಗಳು ಲಾಕ್*
ಜಿಲ್ಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಗುತ್ತಿಗೆದಾರ ಸಂಪತ್ ನಾಯರ್ ಕೊಲೆ ಪ್ರಕರಣದ ಮೂವರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಮ್ (44), ಈತನ ಪತ್ನಿ ಸಂಗೀತ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ. ಗಣಪತಿ (43) ಬಂದಿತ ಆರೋಪಿಗಳಾಗಿದ್ದಾರೆ.
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 10 ರಂದು
ಸಂಪತ್ ನಾಯರ್ ನಾಪತ್ತೆ ಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ನಾಪತ್ತೆ ಯಾಗಿದ್ದವ ಕೊಲೆ ಆಗಿರುವುದು ಕಂಡು ಬಂದಿದೆ. ಅದೇ ರೀತಿ ವ್ಯವಸ್ಥಿತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿರಣ್, ಗಣಪತಿ ಮತ್ತು ಸಂಪತ್ ನಾಯರ್ ಸ್ನೇಹಿತರಾಗಿ ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಸಂಪತ್ ತನ್ನ ಬಳಿ ಇದ್ದ ಕಿರಣನ ಪತ್ನಿ ಸಂಗೀತಾಳ ವಿಡಿಯೋದಿಂದ ಆಕೆಯನ್ನು ಆಗಾಗ ಬ್ಲಾಕ್ ಮೇಲ್ ಮಾಡುತ್ತಿದ್ದ. ಕೆಲವು ತಿಂಗಳುಗಳ ಕಾಲ ಸಂಪತ್ ನೊಂದಿಗೆ ಜೀವನ ನಡೆಸುತ್ತಿದ್ದ ಸಂಗೀತ ನಂತರ ಪುನಃ ತನ್ನ ಮೊದಲ ಗಂಡ ಕಿರಣನ ಜೊತೆ ವಾಸಿಸುತ್ತಿದ್ದಳು. ಆಕೆ ಪಡೆದುಕೊಂಡಿದ್ದ ರೂ. 20 ಲಕ್ಷ ನೀಡದಿದ್ದಾಗ ಸಂಪತ್ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಕುಪಿತರಾದ ಕಿರಣ್ ಹಾಗೂ ಸಂಗೀತ, ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಕೊಲೆಗೆ ಸ್ಕೆಚ್ ಹಾಕಿ ಉಪಾಯವಾಗಿ ಆತನನ್ನು ಬರಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದ ಸಂಚುರೂಪಿಸಿದ ಆರೋಪಿ ಸಂಗೀತಾಳು ಸಂಪತ್ ನಾಯರ್ ನನ್ನು ಸೋಮವಾರಪೇಟೆಯ ಹಾನಗಲ್ ಗೆ ಮೇ 9ರಂದು ತಾನು ಪಡೆದ ಸಾಲವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿ ಬರಮಾಡಿಕೊಂಡಿದ್ದಾಳೆ. ತನ್ನ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಸಂಪತ್ ನನ್ನು ಕೋವಿಯಿಂದ ಬೆದರಿಸಿ ದೊಣ್ಣೆಯಿಂದ ಹೊಡೆದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತದೇಹವನ್ನು, ಸಂಪತ್ ನಾಯರ್ ತಂದಿದ್ದ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಎಸೆದಿದ್ದಾರೆ. ನಂತರ ಕಾರನ್ನು ಕಲ್ಲಳ್ಳಿ ಬಳಿ ನಿಲ್ಲಿಸಿ, ಈ ಕೃತ್ಯಕ್ಕೆ ಬಳಸಲೆಂದು ಬೆಂಗಳೂರಿನಿಂದ ತಂದಿದ್ದ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣನನ್ನು ಬೆಂಗಳೂರಿನಲ್ಲಿ, ಗಣಪತಿಯನ್ನು ತಾ. 17ರಂದು ಬೆಳ್ತಂಗಡಿಯಲ್ಲಿ ಬಂದಿಸಿದ್ದಾರೆ. ತಾ. 18ರಂದು ಕಿರಣನ ಹೆಂಡತಿ ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡು ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ಈ ಸಂಬಂಧ ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಇತರರನ್ನು ಕೂಡ ಸದ್ಯದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕೆ. ರಾಮರಾಜನ್ ಅವರು ಇಂದು ಮಡಿಕೇರಿಯಲ್ಲಿ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.