ಸೂಟು.ಬೂಟು ಇಲ್ಲದ ಆಂಕರ್ ಪಬ್ಲಿಕ್ ಟಿವಿ ರಂಗಣ್ಣ…..
1 min read
ಸೂಟು.ಬೂಟು ಇಲ್ಲದ ಆಂಕರ್ ಪಬ್ಲಿಕ್ ಟಿವಿ ರಂಗಣ್ಣ.
ಟಿವಿಯಲ್ಲಿ ಬರೋ ನ್ಯೂಸ್ ಆಂಕರ್ ಅಂದ್ರೆ ಸೂಟುಬೂಟು ಹಾಕಿಕೊಂಡು, ಟೈ ಕಟ್ಕೊಂಡು ಸ್ಟೈಲಿಶ್ ಆಗಿ ಇರ್ಬೇಕು, ಪೂರ್ವಭಾವಿಯಾಗಿ ಸಿದ್ಧಪಡಿಸಿಕೊಂಡ ಸ್ಕ್ರಿಪ್ಟನ್ನು ನಿರೂಪಣೆ ಮಾಡಬೇಕು ಅಂತೆಲ್ಲಾ ವಾಡಿಕೆ ಇತ್ತು. ಇವೆಲ್ಲವುಗಳಿಗೆ ಹೊರತಾಗಿ ಕನ್ನಡ ಮಾಧ್ಯಮಲೋಕದ ಅನರ್ಘ್ಯರತ್ನದಂತೆ ನಮ್ಮೆದುರು ಬೆಳೆದುನಿಂತಿರುವವರು ಎಚ್. ಆರ್. ರಂಗನಾಥ್ ಅವರು. ನಾನು ಅವರಲ್ಲಿ ಕಂಡ ಕೆಲವು ವಿಶೇಷತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮಾಧ್ಯಮರಂಗದಲ್ಲಿ ತಾವು ಸಂಪಾದಿಸಿದ ಸುದೀರ್ಘ ಅನುಭವವನ್ನು ಧಾರೆಯೆರೆದು ಪಬ್ಲಿಕ್ ಟಿವಿ ಎನ್ನುವ ಕನ್ನಡ ನ್ಯೂಸ್ ಚಾನೆಲ್ ಪ್ರಾರಂಭಿಸಿದ ರಂಗಣ್ಣ ಅವರು ಯಶಸ್ವಿ ಪತ್ರಿಕೋದ್ಯಮಿ ಎನಿಸಿಕೊಂಡರು. ರಾತ್ರಿ 9ಗಂಟೆಗೆ ಬಿಗ್ ಬುಲೆಟಿನ್ ಪ್ರಾರಂಭವಾದರೆ ಸಾಕು, ತಕ್ಷಣ ಪಟ್ಟಣದವರಿಂದ ಹಿಡಿದು ಹಳ್ಳಿಯವರು, ವಯೋವೃದ್ಧರಿಂದ ಹಿಡಿದು ಪ್ರಾಥಮಿಕ ಶಾಲೆಯ ಮಕ್ಕಳವರೆಗೆ ಹೆಚ್ಚಿನ ಜನರು ಮಿಸ್ ಮಾಡದೇ ರಂಗಣ್ಣ ಅವರ ಮಾತುಗಳನ್ನು ಕೇಳಲು ಇಷ್ಟಪಡುತ್ತಾರೆ. ನನಗಂತು ಬಿಗ್ ಬುಲೆಟಿನ್ ವೀಕ್ಷಿಸುವುದೆಂದರೆ ಕ್ರಿಕೆಟ್ ಮ್ಯಾಚ್ ನೋಡಿದಷ್ಟೇ ಸಂತೋಷ.
ಜಗತ್ತಿನ ಆಗುಹೋಗುಗಳ ಕುರಿತಾದ ಸುದ್ದಿಯನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ, ಸೂಕ್ತ ಉದಾಹರಣೆಗಳ ಮೂಲಕ ಮಂಡಿಸುವ ಕಲೆ ರಂಗಣ್ಣ ಅವರಿಗೆ ಸಿದ್ದಿಸಿದೆ. ಇವರನ್ನು copy ಮಾಡಲು ಪ್ರಯತ್ನಿಸಿ ಸಂಪೂರ್ಣ ಯಶಸ್ವಿಯಾದ ಇನ್ನೊಬ್ಬರಿಲ್ಲ. ಯಾವುದೇ ಸನ್ನಿವೇಶದ ಕುರಿತು ಜನಸಾಮಾನ್ಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಪ್ರಸ್ತುತಪಡಿಸುವ ಇವರ ಶೈಲಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಟೀಕೆಮಾಡಲು ಹೊರಟರೆ ಇವರಿಗೆ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ನರೇಂದ್ರಮೋದಿ, ರಾಹುಲ್ ಗಾಂಧಿ ಎಲ್ಲರೂ ಒಂದೇ. ತಪ್ಪುಮಾಡಿದಾಗ ಯಾರನ್ನೂ ಬಿಡದೆ ತಮ್ಮದೇ ಶೈಲಿಯಲ್ಲಿ ರೋಸ್ಟ್ ಮಡುವುದು ಇವರ ಇನ್ನೊಂದು ವಿಶೇಷತೆ. ಒಮ್ಮೆ ಸಂದರ್ಶನವೊಂದಕ್ಕೆ ಮುಖ್ಯ ಅತಿಥಿಯಾಗಿ ಪಬ್ಲಿಕ್ ಟಿವಿ ಸ್ಟುಡಿಯೋಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಂಗಣ್ಣನಿಗೆ ಒಂದು ಪ್ರಶ್ನೆ ಕೇಳುತ್ತಾರೆ; “ಎಂತಹ ಪ್ರಭಾವಿ ನಾಯಕರುಗಳನ್ನು ಬಿಡದೆ ಸರಿಯಾಗಿ ಉಗಿತೀರಲ್ಲ, ಇದು ನಿಮ್ಮಿಂದ ಹೇಗೆ ಸಾಧ್ಯವಾಗತ್ತೆ ರಂಗಣ್ಣ?”
ರಂಗಣ್ಣ ನೀಡಿದ ಉತ್ತರ ಇಂದಿಗೂ ನೆನಪಿದೆ; “ನಾನು ನನ್ನ ವಯಕ್ತಿಕ ಸಹಾಯಕ್ಕಾಗಿ ಯಾರಬಳಿಯೂ ಕೈ ಒಡ್ಡಿಲ್ಲ, ಹೀಗಾಗಿ ನನಗೆ ಯಾರ ಹಂಗೂ ಇಲ್ಲಾ, ಇದೇ ಕಾರಣದಿಂದ ನಾನು ಯಾವ ಮುಲಾಜಿಗೂ ಒಳಗಾಗದೆ ತಪ್ಪನ್ನು ತಪ್ಪು ಅಂತ ಘಂಟಾಘೋಷವಾಗಿ ಟೀಕಿಸುವ ನೈತಿಕತೆಯನ್ನು ಹೊಂದಿದ್ದೇನೆ”.
ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯತೆಯ ವಿಚಾರದಲ್ಲಿ ರಂಗಣ್ಣ ಅವರು ವ್ಯಕ್ತಪಡಿಸುವ ನಿಲುವು ಅವರಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಶ ಅಥವಾ ಧರ್ಮದ ವಿಷಯದಲ್ಲಿ ಅಗೌರವ ತೋರುವ ‘ಎಡಬಿಡಂಗಿ’ಗಳಿಗೆ ರಂಗಣ್ಣ ಅವರು ಪ್ರಯೋಗಿಸುವ ‘ಗ್ರಾಮೀಣ ಸೊಗಡಿನ ಬೈಗುಳ’ ಇನ್ನೆಲ್ಲಿಯೂ ಸಿಗದು.
ಮನುಷ್ಯ ಅಂದಮೇಲೆ ಯಾರೂ ಪರಿಪೂರ್ಣರಲ್ಲ. ಎಷ್ಟೇ ಅನುಭವಿ ಆಗಿದ್ದರೂ, ವೃತ್ತಿ ಜೀವನದಲ್ಲಿ ಎಷ್ಟೇ ಪ್ರಾವಿಣ್ಯತೆ ಹೊಂದಿದವಾರಾಗಿದ್ದರು ಒಮ್ಮೊಮ್ಮೆ ತಪ್ಪುಗಳು ಸಂಭವಿಸುತ್ತವೆ. ಅಂತೆಯೇ ಡಿಮಾನಿಟೈಸೇಷನ್ ಸಂದರ್ಭದಲ್ಲಿ 2,000ರೂ ನೋಟಿನೊಳಗೆ ಚಿಪ್ ಅಳವಡಿಸಲಾಗುತ್ತಿದೆ ಎಂದು ಹೇಳಿಬಿಟ್ಟಿದ್ದರು. ಇನ್ನೊಮ್ಮೆ ‘ಹೆಲಿಕ್ಯಾಪ್ಟರ್ ಮನಿ’ ಬಗ್ಗೆ ಇವರು ನೀಡಿದ್ದ ವಿವರಣೆ ತಪ್ಪಾಗಿತ್ತು. ಇವರಿಂದ ಉಗಿಸಿಕೊಳ್ಳುವ ‘ಎಡಬಿಡಂಗಿಗಳು’ ಇಂದಿಗೂ ಅದೇ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಅಲ್ಪತೃಪ್ತಿ ಹೊಂದುತ್ತಾರೆ.