ಒಬ್ಬ ಪರಾಕ್ರಮಿ ರಾಜನಿಗೆ, ಒಬ್ಬ ಬುದ್ಧಿವಂತ ಮಂತ್ರಿ…..
1 min read
ಒಬ್ಬ ಪರಾಕ್ರಮಿ ರಾಜನಿಗೆ, ಒಬ್ಬ ಬುದ್ಧಿವಂತ ಮಂತ್ರಿ ಇರಬೇಕು. ರಾಜನ ಕೋಟೆ ಕಾಯುವಂಥ, ಶತ್ರುಗಳಿಂದ ದೇಶ ರಕ್ಷಿಸುತ್ತಲೇ, ಪ್ರಜೆಗಳ ತಲೆಕಾಯುವಂಥ ಚಾಣಕ್ಯನಿರಬೇಕು. ಸದ್ಯಕ್ಕೆ ಭಾರತದ ಪಾಲಿಗೆ ಅಂಥವನೊಬ್ಬ ಚಾಣಾಕ್ಷ ಸಿಕ್ಕಿದ್ದಾನೆ. ಅವರೇ ಅಜಿತ್ ದೋವಲ್.
ಗೂಢಾಚಾರಿಕೆಯನ್ನೇ ಜೀವವಾಗಿಸಿಕೊಂಡು, ದೇಶ ರಕ್ಷಣೆಯನ್ನೇ ಉಸಿರಾಗಿಸಿಕೊಂಡಿರುವಂಥ ದಿಟ್ಟ ಅಧಿಕಾರಿ ಅಜಿತ್ ದೋವಲ್. ಉತ್ತರಖಂಡ್ ಮೂಲದ ಅಜಿತ್
1968 ರಲ್ಲಿ ಕೇರಳದ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ಸೇರಿದ ಅವರು, ಗುಪ್ತಚರ ಇಲಾಖೆಯಲ್ಲಿ (ಐಬಿ) ಸೇವೆ ಆರಂಭಿಸಿದರು. ಅವರಿಗೆ ಕೊಟ್ಟಿದ್ದ ಮೊದಲ ಟಾಸ್ಕ್, ಪಾಕಿಸ್ತಾನದಲ್ಲಿ ಗೂಢಾಚಾರಿಯಾಗಿ ಸೇವೆ ಸಲ್ಲಿಸುವುದು. ಅದನ್ನು ಸವಾಲಾಗಿ ಸ್ವೀಕರಿಸಿದ ಅಜಿತ್,
7 ವರ್ಷ ಕಿಸ್ತಾನದಲ್ಲಿ ಗೂಢಾಚಾರಿಯಾಗಿ ಸೇವೆ ಸಲ್ಲಿಸಿದ್ದರು. ಇಡೀ ಏಳು
ವರ್ಷ ಪಾಕಿಸ್ತಾನದ ಇಂಚಿಂಚೂ ಅಗೆದು ನೋಡಿಬಿಟ್ಟರು. ಪಾಕ್ ಸೇನೆಯ ಆಳಅಗಲ ಬಲ್ಲವರು.
ಪಾಕ್ ಐಎಸ್ಐನ ಶಕ್ತಿ, ನಿಶ್ಯಕ್ತಿ, ಎಲ್ಲವೂ ಅಜಿತ್ ಅಳತೆಗಣ್ಣಿನಲ್ಲಿದೆ. ಪಾಕ್ ಉಗ್ರರು, ಉಗ್ರ ನೆಲೆಗಳು, ಉಗ್ರರನ್ನು ಪೋಷಿಸುತ್ತಿರುವವರು, ಭಾರತದ ವಿರುದ್ಧ ಕತ್ತಿ ಮಸೆಯುವವರು, ಭಾರತದಲ್ಲಿ ವಿಧ್ವಂಸಕೃತ್ಯಕ್ಕೆ ನಡೆಸುವ ಪ್ಲಾನ್..ಎಲ್ಲವನ್ನೂ ಅರೆದುಕುಡಿದವರು ದೋವಲ್. ಇಂದಿನ ಆಪರೇಷನ್ ಸಿಂದುರ ಕಾರ್ಯಾಚರಣೆಯ ಪಕ್ಕಾ ಪ್ಲಾನ್ ಇವರದ್ದೇ ಎಂದು ಹೇಳಬೇಕಿಲ್ಲ.
1975ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಹಿಂದಿರುಗಿದ ದೋವಲ್,
ಸಿಕ್ಕಿಂ ವಿಲೀನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿಜೋರಾಂ ಶಾಂತಿ ಒಪ್ಪಂದ (1986), ಖಲಿಸ್ತಾನ್ ಚಳುವಳಿಯ ನಿರ್ಮೂಲನೆ, ಪಂಜಾಬ್ ಗೋಲ್ಡನ್ ಟೆಂಪಲ್ ಮೇಲೆ ಉಗ್ರರ ದಾಳಿ
ಬಳಿಕ ನಡೆದ ಆಪರೇಷನ್ ಬ್ಲಾಕ್ ಥಂಡರ್, ಆಪರೇಷನ್ ಬ್ಲೂ ಸ್ಟಾರ್; ರೊಮೇನಿಯಾದ ರಾಜತಾಂತ್ರಿಕ ಲಿವಿಯು ರಾಡು ಎಂಬುವರನ್ನು ಅಪಹರಿಸಿದ್ದ ಖಲಿಸ್ತಾನಿ ಉಗ್ರಗಾಮಿಗಳಿಂದ ಬಿಡಿಸಿಕೊಂಡು ಬರುವ ಕಾರ್ಯಾಚರಣೆಗಳ ಸೂತ್ರಧಾರರೇ ದೋವಲ್.
ವಾಜಪೇಯಿ ಪ್ರಧಾನಿಯಾಗಿದ್ದಾಗ ನಡೆದ ಏರ್ ಇಂಡಿಯಾ ವಿಮಾನದ ಕಂದಹಾರ್ ಅಪಹರಣ ಪ್ರಕರಣದಲ್ಲಿ ಉಗ್ರರೊಂದಿಗೆ ಸಂಧಾನದ ನೇತೃತ್ವ ವಹಿಸಿದ್ದು ಇದೇ ಅಜಿತ್ ದೋವಲ್. ಆನಂತರ ಅವರನ್ನು ಭಾರತೀಯ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಯಿತು.
2005ರಲ್ಲಿ ಅಜಿತ್ ನಿವೃತ್ತರಾದರು.
2014ರಲ್ಲಿ ದೋವಲ್ ರನ್ನು ಮೋದಿ ಸರ್ಕಾರ ರಾಷ್ಟ್ರೀಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿತು.
ಆ ಬಳಿಕ ಭಾರತದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಗತಿಯೇ ಬದಲಾಯ್ತು. ತೀಕ್ಷ್ಣಬುದ್ಧಿಯ ದೋವಲ್, ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ಸದಾ ನಿರತರಾಗಿದ್ದರು. 2016ರಲ್ಲಿ ನಡೆದ ಸರ್ಜಿಕಲ್ ದಾಳಿಗೂ ಇವರದ್ದೇ ಮೇಲುಸ್ತುವಾರಿ.
ಅಯೋಧ್ಯೆ ವಿವಾದದ ತೀರ್ಪು ಹೊರಬೀಳುವ ಮುನ್ನ ಇಡೀ ದೇಶಾದ್ಯಂತ ಸಂಚರಿಸಿ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ, ಯಾವುದೇ ಗಲಭೆಗಳಾಗದಂತೆ ಎಚ್ಚರಿಕೆ ವಹಿಸಿದ್ದರು.
ಪೆಹಲ್ಗಾಮ್ ಹತ್ಯಾಕಾಂಡದ ಬಳಿಕ ಉಗ್ರರ ದಮನಕ್ಕೆ ಟೊಂಕಕಟ್ಟಿ ನಿಂತಿದ್ದ ದೋವಲ್ ಗುರಿ ಸ್ಪಷ್ಟವಾಗಿತ್ತು. ಈ ಬಾರಿ ಶತ್ರುವನ್ನು ಸದೆಬಡಿಯಲೇ ಬೇಕೆಂದು ನಿರ್ಧರಿಸಿಬಿಟ್ಟಿದ್ದರು. ಅದಕ್ಕೆ ತಕ್ಕ ಪ್ಲಾನ್, ನಿಖರ ಗುರಿ, ಕರಾರುವಾಕ್ ರೂಪುರೇಷೆ ಸಿದ್ಧಪಡಿಸಿಕೊಂಡೇ, ಗಾಢನಿದ್ದೆಯಲ್ಲಿದ್ದ ಪಾಕಿಸ್ತಾನವನ್ನು ಬಡಿದೆಬ್ಬಿಸಿದ್ದರು ದೋಹಲ್.
9 ಉಗ್ರರ ಕ್ಯಾಂಪ್ ಗಳನ್ನು ಗುರುತಿಸಿ, ಅವುಗಲ್ಲಿನ 21 ಕಟ್ಟಡಗಳನ್ನು ಹೊಡೆದು ಬರುವುದೆಂದರೆ ಸುಲಭದ ಮಾತಲ್ಲ.ಅದು ಅವರ ತಾಕತ್ತು. ಭಾರತದ ಜೇಮ್ಸ್ ಬಾಂಡ್ ಅಂತ ಸುಮ್ಮನೆ ಕರೆಯಲ್ಲ.
ಕೇವಲ 25 ನಿಮಿಷಗಳಲ್ಲಿ 21 ಕಟ್ಟಡಗಳನ್ನು ಧ್ವಂಸಗೊಳಿಸಿ, ಉಗ್ರ ಮಸೂದ್ ಫ್ಯಾಮಿಲಿಯನ್ನೇ ಮುಗಿಸಿಬಿಡುವುದು ಸುಲಭಸಾಧ್ಯದ ಮಾತಲ್ಲ. ಉಗ್ರರ ಶಿಬಿರಗಳು ಇಲ್ಲೇ ಇವೆ ಅಂತ ನಿಖರವಾಗಿ ಗುರುತಿಸುವುದೇ ಸವಾಲು. ಆದರೆ ಆ ಸವಾಲನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದರು ದೋವಲ್. ಯಾಕೆಂದರೆ, ಗೂಢಾಚಾರಿಕೆ, ರಕ್ಷಣಾ ತಂತ್ರಗಾರಿಕೆಗಳನ್ನು ಅರೆದುಕುಡಿದವರು ದೋವಲ್.
ಇಲ್ಲಿ ಕುಳಿತೇ ನೂರಾರು ಮೈಲು ದೂರವಿರುವ ಪಾಕಿಸ್ತಾನದಲ್ಲಿ ಉಗ್ರರ ಅಡಗುತಾಣವನ್ನು ಚಿಂದಿ ಉಡಾಯಿಸಿದ್ದು ಒಂದೆರಡು ದಿನದ ತಯಾರಿಯಿಂದ ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ಏಳು ವರ್ಷ ಗೂಢಾಚಾರಿಯಾಗಿದ್ದ ದೋವಲ್, ಇವತ್ತು ಅದೇ ಪಾಕಿಸ್ತಾನವನ್ನು ನೆಲಕ್ಕೆ ಬಡಿಯುತ್ತಿದ್ದಾರೆ.
ನಿವೃತ್ತಿ ಬಳಿಕವೂ ದೇಶಕ್ಕಾಗಿ ದುಡಿಯುತ್ತಿರುವ ಅಪ್ಪಟ ದೇಶಭಕ್ತ ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಪ್ರಧಾನಿ ಮೋದಿಯವರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತಿದ್ದಾರೆ.
ಅಜಿತ್ ದೋವಲ್ ಮಾತಿಗೆ ಮೋದಿಯಷ್ಟೇ ಅಲ್ಲ ಇಡೀ ರಕ್ಷಣಾ ಇಲಾಖೆ ತುಟಿಪಿಟಕ್ ಎನ್ನುವುದಿಲ್ಲ.
ಹಾಗಾಗಿಯೇ, ರಕ್ಷಣಾ ಇಲಾಖೆ ಅಧಿಕಾರಿಗಳು, ಮೂರು ಪಡೆಯ ಮುಖ್ಯಸ್ಥರು, ಪಾಕ್ ನಲ್ಲಿರುವ ತಮ್ಮ ರಹಸ್ಯ ಏಜೆಂಟ್ಗಳ ಮೂಲಕ ಎಲ್ಲ ಮಾಹಿತಿ ಕಲೆಹಾಕಿ, ಇಡೀ ಭಾರತ ಯುದ್ಧ ತಾಲೀಮಿನಲ್ಲಿರುವಾಗಲೇ, ಶತ್ರು ದೇಶಕ್ಕೆ ಒಂದಿನಿತೂ ಸುಳಿವು ನೀಡದೇ ಹೊಡೆದು ಬಂದಿದ್ದಾರೆ.
ಶತ್ರುವಿನ ಎದುರು ಗುಂಡಿಗೆ, ಕ್ಷಿಪಣಿಗೆ ಎದೆಯೊಡ್ಡಿ ನಿಲ್ಲುವ ಲಕ್ಷಾಂತರ ಸೈನಿಕರು ಒಂದೆಡೆಯಾದರೆ, ಸದ್ದಿಲ್ಲದೇ ಕುಳಿತು ಭಯೋತ್ಪಾದಕ ದೇಶಕ್ಕೆ ಡ್ರೋಣ್ ನುಗ್ಗಿಸಿ, ಛಿದ್ರಗೊಳಿಸುವಂಥ ಅಜಿತ್ ದೋವಲ್ರಿದ್ದಾರೆ. ನಿವೃತ್ತಿ ಬದುಕನ್ನು ನೆಮ್ಮದಿಯಾಗಿ ಕಳೆಯುವ ದಿನಗಳಲ್ಲಿ, ದೇಶದ ಜನರ ನೆಮ್ಮದಿಗಾಗಿ ವಯಸ್ಸು, ಆರೋಗ್ಯ ಲೆಕ್ಕಿಸದೇ ರಕ್ಷಣೆಗಿಳಿಯುವ
80 ವರ್ಷದ ದೋವಲ್ ಮತ್ತು ನಾವು ನೆಮ್ಮದಿಯಾಗಿ ನಿದ್ರೆ ಮಾಡಲು, ತಮ್ಮ ನಿದ್ದೆ ಬಿಟ್ಟು ದೇಶ ಕಾಯುವ ಸೈನಿಕರನ್ನು ಪಡೆದ ನಾವೇ ಭಾಗ್ಯವಂತರು..
#AjitDoval
#indianarmy