ಚಿನ್ನದ ಟೋಪಿ ಇಟ್ಟಿದ್ದ #ಗಣಿಕಳ್ಳ……
1 min read
ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳೆರಡಕ್ಕೂ ಮೋಸ ಮಾಡಿ, ದಬ್ಬಾಳಿಕೆ, ದುರ್ವರ್ತನೆ ತೋರಿ, ನೈಸರ್ಗಿಕ ಸಂಪತ್ತನ್ನು ಹಾಡುಹಗಲಲ್ಲಿ ದರೋಡೆ ಮಾಡಿ, ಎಲ್ಲವನ್ನೂ ದಕ್ಕಿಸಿಕೊಳ್ಳುತ್ತೇನೆ ಎಂದು ಮೆರೆದು, ತಿರುಪತಿ ತಿಮ್ಮಪ್ಪನಿಗೂ ಆ ಕಾಲಕ್ಕೇ ನಲವತ್ತು ಕೋಟಿ ರೂಪಾಯಿಯ ಚಿನ್ನದ ಟೋಪಿ ಇಟ್ಟಿದ್ದ #ಗಣಿಕಳ್ಳ ಜನಾರ್ದನ ರೆಡ್ಡಿ ಕಡೆಗೂ ಅಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾಯಿತು.
ಓಬಳಾಪುರ ಮೈನಿಂಗ್ ಕಂಪನಿ ಪ್ರಕರಣದಲ್ಲಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ದನ ರೆಡ್ಡಿ’ಗೆ 7 ವರ್ಷ ಜೈಲು ಶಿಕ್ಷೆ ಘೋಷಣೆ ಮಾಡಿದೆ.
ಅಂತರಗಂಗಮ್ಮಕೊಂಡ’ದ (OMC 3) 68 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವ ಪ್ರಕರಣವನ್ನು ಆಂಧ್ರ ಪ್ರದೇಶ ಸರ್ಕಾರವು ಹದಿನಾರು ವರ್ಷಗಳ ಹಿಂದೆಯೇ ಸಿಬಿಐ’ಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೇ #CashForBail ನಡೆದದ್ದು. ಅಂದರೆ ಜನಾರ್ದನ ರೆಡ್ಡಿಯ ಅಣ್ಣ ಸೋಮಶೇಖರ ರೆಡ್ಡಿಯು ತನ್ನ ಅಣ್ಣನಿಗೆ ಜಾಮೀನು ನೀಡಿ ಎಂದು ಸಿಬಿಐ ವಿಶೇಷ ನ್ಯಾಯಾಲಯದ ಆಗಿನ ನ್ಯಾಯಮೂರ್ತಿಗೆ ಮತ್ತೊಬ್ಬ ನ್ಯಾಯಮೂರ್ತಿಯ ಮೂಲಕ ಹತ್ತಾರು ಕೋಟಿ ಲಂಚ ಕೊಟ್ಟಿದ್ದ. ಸುದೈವಕ್ಕೆ ಖದೀಮರೆಲ್ಲರೂ ಸಿಕ್ಕಿಬಿದ್ದಿದ್ದರು. ಇನ್ನೂ ಆ ಪ್ರಕರಣ ವಿಚಾರಣೆ ಹಂತದಲ್ಲಿಯೇ ಇದೆ ಅನ್ನಿಸುತ್ತದೆ. (ಆ ಇಬ್ಬರೂ ಅಯೋಗ್ಯ ಮತ್ತು ಭ್ರಷ್ಟ ನ್ಯಾಯಮೂರ್ತಿಗಳು ಈಗಾಗಲೇ ಸತ್ತಿದ್ದಾರೆ ಎಂದು ಇತ್ತೀಚೆಗೆ ಎಲ್ಲೋ ಓದಿದ ನೆನಪು.)
ಈಗ ಜೈಲುಪಾಲಾಗಿರುವ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯು ಆಂಧ್ರ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು, ಅಂತರರಾಜ್ಯ ಗಡಿಯನ್ನು ಉಲ್ಲಂಘಿಸಿ, ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಉತ್ಕೃಷ್ಟ ಅದಿರನ್ನು ಅಕ್ರಮವಾಗಿ ಸಾಗಿಸಿರುತ್ತಾರೆ.
ಅಂತೂಇಂತೂ, ಪ್ರಕರಣ ದಾಖಲಾದ ಸುಮಾರು ಹದಿನಾರು ವರ್ಷಗಳ ನಂತರ (ಹದಿನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆದು) ನಮ್ಮ ಘನ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಅಪರಾಧಿಗಳಿಗೆ ಕೊನೆಗೂ ಶಿಕ್ಷೆಯಾಗಿರುವ ಕಾರಣಕ್ಕೆ ಇದು ಒಂದು ರೀತಿಯಲ್ಲಿ ನಿರಾಳತೆ ತಂದರೂ, ಅಪರಾಧ ಪ್ರಕರಣಗಳ ವಿಲೇವಾರಿ ಇಷ್ಟೊಂದು ಸಮಯ ತೆಗೆದುಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಗೇ ಅವಮಾನ. ಈ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಜನಾರ್ದನ ರೆಡ್ಡಿಯು ರಾಜಕಾರಣವನ್ನೂ ಮುಂದುವರೆಸಿ ಶಾಸಕನಾಗಿಯೂ ಆಯ್ಕೆಯಾಗಲು ಆಡಿದ ಎಲ್ಲಾ ಆಟಗಳಿಗೆ ನ್ಯಾಯಾಂಗವೇ ನೇರ ಹೊಣೆ. ದೇಶದಲ್ಲಿ ಅಪರಾಧಿಗಳು ಜಾಮೀನು ಪಡೆದು ರಾಜಾರೋಷವಾಗಿ ಓಡಾಡಿಕೊಂಡು ಅಪರಾಧಗಳನ್ನು ಮುಂದುವರೆಸುವ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಂಗದ ಪಾಲೇ ದೊಡ್ಡದು ಮತ್ತು ಈ ವಿಚಾರವಾಗಿ ದೇಶದ ನ್ಯಾಯಾಂಗವು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು.
ಏಳು ವರ್ಷಗಳ ಶಿಕ್ಷೆ ಆಗಿರುವ ಕಾರಣಕ್ಕೆ ಜನಾರ್ದನ ರೆಡ್ಡಿ ಇಂದೇ, ಈಗಾಗಲೇ ಜೈಲು ಸೇರಿರಬೇಕು. ಹಾಗೆಯೇ ಆತನ ಶಾಸಕ ಸ್ಥಾನವೂ ರದ್ದಾಗಿ ಒಂದೆರಡು ದಿನಗಳಲ್ಲಿ ಆತ ಮಾಜಿ ಶಾಸಕ. ಗಂಗಾವತಿ ಕ್ಷೇತ್ರಕ್ಕೆ ಈಗ ಉಪಚುನಾವಣೆಯೂ ಆಗಲಿದೆ ಎನ್ನಿಸುತ್ತದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಜನರು ತಮ್ಮ ಪಾತ್ರದ ಬಗ್ಗೆ ಯೋಚಿಸಬೇಕು. ಅಪರಾಧಿಗಳ ಹಣಕ್ಕೆ ಬಾಯಿಬಿಡುತ್ತ, ಅವರ ದರ್ಪಕ್ಕೆ ಹೆದರಿ, ಜಾತಿ/ಕೋಮು ಕಾರಣಕ್ಕೆ ರಹಸ್ಯ ಮತದಾನ ಪದ್ಧತಿಯಲ್ಲಿಯೂ ದುಷ್ಟರಿಗೆ ಮತ್ತು ರಾಕ್ಷಸರಿಗೆ ತಮ್ಮ ಕೈಯಾರೆ ಓಟು ಹಾಕಿ ಬೆಂಬಲಿಸುವ ಮತದಾರರು ನಿಜಕ್ಕೂ ಎಂತಹವರು ಎನ್ನುವುದು ದೇಶದ ಆತ್ಮಸಾಕ್ಷಿಯನ್ನು ಚುಚ್ಚಬೇಕಾದ ವಿಷಯ. ಸಾತ್ವಿಕ ಆಕ್ರೋಶವನ್ನು ಬಳಸಿ ಕ್ರಾಂತಿ ಮಾಡಬೇಕಾದ ಸಂದರ್ಭ ಈಗಿನದು. ಆದರೆ ಕುವ್ಯವಸ್ಥೆಯ ತುತ್ತತುದಿಯಲ್ಲಿ–ಎಂದರೆ ಯಾವುದೇ ನ್ಯಾಯ/ನೀತಿ/ಧರ್ಮ ಇಲ್ಲದ ಕಾಲದಲ್ಲಿ–ಸಮಾಜವನ್ನು ಬದಲಾಯಿಸಲು ಮನಸ್ಸು ಮಾಡದೇ ಇರುವುದು ದೇಶದ ಕೆಟ್ಟ ಸ್ಥಿತಿಯನ್ನು, ಅಂದರೆ ಇಲ್ಲಿಯ ಅಸಮಾನತೆ, ಅಕ್ರಮ, ಭ್ರಷ್ಟಾಚಾರ, ಅನ್ಯಾಯ, ಬಡತನ, ನೋವು, ನಿರಾಸೆ, ಹತಾಶೆ, ಇತ್ಯಾದಿಗಳನ್ನು ಮುಂದುವರೆಸುತ್ತಲೇ ಇರುತ್ತದೆ.
ಬಂಧುಗಳೇ, ಬದಲಾಗಿ. ನಿಮಗಾಗಿ,
ನಿಮ್ಮ ಕುಟುಂಬಕ್ಕಾಗಿ,
ನಿಮ್ಮ ಸಮುದಾಯಕ್ಕಾಗಿ,
ದೇಶಕ್ಕಾಗಿ…
ಭ್ರಷ್ಟರನ್ನು ದುಷ್ಟರನ್ನು ತಿರಸ್ಕರಿಸಿ.
ಸ್ವಜಾತಿಯವರು ಮತ್ತು ಸಿರಿವಂತರು ಮಾಡಿದ್ದೆಲ್ಲವೂ ಸರಿ ಎಂದು ಅವರನ್ನು ಮೆರೆಸುವುದನ್ನು ಬಿಡಿ.
ಯೋಗ್ಯರನ್ನು, ಒಳ್ಳೆಯವರನ್ನು, ಪ್ರಾಮಾಣಿಕರನ್ನು ಬೆಂಬಲಿಸಿ.
ಒಳ್ಳೆಯದನ್ನು ಮಾತನಾಡಿ.
ಎಂದೆಂದೂ ಸತ್ಯ ಮತ್ತು ಧರ್ಮದ ಪರ ಇರಿ.
ಸರ್ವೇ ಜನಾಃ ಸುಖಿನೋ ಭವಂತು.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ಎಲ್ಲರಿಗೂ ಒಳಿತಾಗಲಿ.
– ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
06-05-2025.