ಮೂಡಿಗೆರೆಯಲ್ಲಿ ಹಾಳಾದ ಲೈಟ್ಗಳು | ಮರ್ಕ್ಯೂರಿ ಬಲ್ಟ್ ಬದಲಿಸಿದ ಬಳಿಕ ಸಮಸ್ಯೆ |……
1 min read
ಮೂಡಿಗೆರೆಯಲ್ಲಿ ಹಾಳಾದ ಲೈಟ್ಗಳು | ಮರ್ಕ್ಯೂರಿ ಬಲ್ಟ್ ಬದಲಿಸಿದ ಬಳಿಕ ಸಮಸ್ಯೆ |
ಕತ್ತಲಲ್ಲಿ ಸಂಚರಿಸುವ ಸ್ಥಿತಿ ಬೆಳಕಿನಿಂದ ಕತ್ತಲೆಗೆ ತಳ್ಳಿದ ಎಲ್ಇಡಿ.ಬೀದಿ ದೀಪ.
ಮೂಡಿಗೆರೆ ಪಟ್ಟಣದಲ್ಲಿ ವಿದ್ಯುತ್ ಕಂಬಗಳಿಗೆ ಎರಡು ವರ್ಷದ ಹಿಂದೆ ಅಳವಡಿಸಿದ್ದ ಹೊಸ ವಿನ್ಯಾಸದ ಎಲ್ಇಡಿ ಬೀದಿ ದೀಪಗಳು ಬಹಳಷ್ಟು ಕಡೆಗಳಲ್ಲಿ ಒಂದು ವರ್ಷದಿಂದ ಬೆಳಗುತ್ತಿಲ್ಲ. ಇದರಿಂದ ಪಟ್ಟಣದಲ್ಲಿ ಕತ್ತಲೆ ಆವರಿಸಿದ್ದು, ಜನ ತೊಂದರೆ ಅನುಭವಿಸುವಂತಾಗಿದೆ.
ಬೀದಿ ದೀಪಗಳು ಹಾಳಾಗಿ ಕಳೆಯಿತು ಬಹು ದಿನಗಳು.
2023 ಸೆಪ್ಟೆಂಬರ್ನಲ್ಲಿ ಹಳೆಯ ಮರ್ಕ್ಯೂರಿ ಬೀದಿ ದೀಪ ತೆರವುಗೊಳಿಸಿ ಪಟ್ಟಣದ ಎಲ್ಲ ವಿದ್ಯುತ್ ಕಂಬಗಳಿಗೆ ಕಳಪೆ 900 ಎಲ್ಇಡಿ ಬಲ್ಸ್ ಅಳವಡಿಸಲಾಗಿತ್ತು. ದೀಪ ಅಳವಡಿಸಿದ ಒಂದೇ ತಿಂಗಳಲ್ಲಿ ಬಹುತೇಕ ಬೀದಿ ದೀಪಗಳು ಹಾಳಾದವು. ಸ್ಥಳೀಯರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬಳಿಕ ಚಿಕ್ಕಮಗಳೂರು ನಗರಸಭೆಯಿಂದ ವಾಹನದೊಂದಿಗೆ ಸಿಬ್ಬಂದಿ ಬಂದು ಬೀದಿ ದೀಪಗಳನ್ನು ಸರಿಪಡಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಮತ್ತೆ ಬೀದಿ ದೀಪಗಳು ಹಾಳಾಗಿ ಪಟ್ಟಣದಲ್ಲಿ ಕತ್ತಲೆ ಆವರಿಸಿತ್ತು. ಆಗ ಸ್ಥಳೀಯರು ಗುತ್ತಿಗೆದಾರರಿಗೆ ಕರೆ ಮಾಡಿ ಬೀದಿ ದೀಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ ಬಳಿಕ ಸಿಬ್ಬಂದಿ ಬಂದು ಸರಿಪಡಿಸಿದ್ದರು.
ಈಗ ನಾಲೈದು ತಿಂಗಳಿಂದ ಪಟ್ಟಣದ ಎಂ.ಜಿ.ರಸ್ತೆ, ಕೆ.ಎಂ.ರಸ್ತೆ, ಗಂಗನಮಕ್ಕಿ, ಛತ್ರಮೈದಾನ, ಗೆಂಡೆಹಳ್ಳಿ ರಸ್ತೆ, ಪೊಲೀಸ್ ಠಾಣೆ ಮುಂಭಾಗ, ಮಾರ್ಕೆಟ್ ರಸ್ತೆ, ಪಿ.ಟಿ.ರಸ್ತೆ, ತನ್ನೊಳ ರಸ್ತೆ, ಕುರುಕಮಕ್ಕಿ, ದೊಡ್ಡಬೀದಿ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಹಾಳಾಗಿವೆ. ಪೊಲೀಸ್ ಠಾಣೆ ಮುಂಭಾಗದ ಹೈಮಾಸ್ಟ್ ಬೀದಿ ದೀಪವನ್ನು ತೆರವುಗೊಳಿಸಿ ಕಂಬವನ್ನು ಹಾಗೆಯೆ ಉಳಿಸಲಾಗಿದೆ. ಪೊಲೀಸ್ ಠಾಣೆ ಮುಂಭಾಗದಲ್ಲಿ ಹೊಸದಾಗಿ ವೃತ್ತ ನಿರ್ಮಿಸುವ ಸಲುವಾಗಿ ಹೈಮಾಸ್ಟ್ ದೀಪವನ್ನು ತೆರವುಗೊಳಿಸಿರುವುದಾಗಿ ಪಪಂ ಅಧಿಕಾರಿಗಳು ತಿಳಿಸುತ್ತಾರೆ. ಎರಡು ವರ್ಷದಿಂದ ವೃತ್ತವನ್ನು ನಿರ್ಮಿಸಿಲ್ಲ. ಹೈಮಾಸ್ಟ್ ದೀಪವನ್ನೂ ಅಳವಡಿಸಿಲ್ಲ.
ಮೂಡಿಗೆರೆ ಮಾರ್ಕೆಟ್ ರಸ್ತೆಯ ಆದಿಶಕ್ತಿ ದೇವಸ್ಥಾನದ ಮುಂಭಾಗದ ಹೈಮಾಸ್ಟ್ ಬೀದಿ ದೀಪದ ಕಂಬದ ಬುಡದಲ್ಲಿ ಅಪಾಯವನ್ನು ಆಹ್ವಾನಿಸುತ್ತಿರುವ ಮೀಟರ್ ಮತ್ತು ಸ್ವಿಚ್ ಬೋರ್ಡ್. ಸ್ವಿಚ್ ಬಾಕ್ಸ್ ಡೇಂಜರ್.
ಪಟ್ಟಣದಲ್ಲಿ ಬೀದಿ ದೀಪಗಳು ಬೆಳಗದೆ ಕತ್ತಲೆ ಆವರಿಸಿದೆ ಎಂದು ಜನ ನಿರಂತರವಾಗಿ ದೂರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಮುಂಬೈ ಮೂಲದ ಗುತ್ತಿಗೆದಾರರೊಬ್ಬರಿಗೆ ಬೀದಿ ದೀಪದ ಅಳವಡಿಕೆ ಮತ್ತು ನಿರ್ವಹಣೆ ಗುತ್ತಿಗೆಯನ್ನು ನೇರವಾಗಿ ನೀಡಿದ ಬಳಿಕ ಪಪಂಗೆ ಅದರ ಜವಾಬ್ದಾರಿ ನೀಡಿಲ್ಲ. ಪಟ್ಟಣದ ಎಲ್ಲ ವಿದ್ಯುತ್ ಕಂಬಗಳಲ್ಲಿ ಗುತ್ತಿಗೆದಾರರ ಮೊಬೈಲ್ ನಂಬರ್ ಬರೆಯಲಾಗುವುದು. ಜನ ಅವರಿಗೇ ಕರೆ ಮಾಡಿ ದೂರು ನೀಡಲಿ.ಕೆ.ವೆಂಕಟೇಶ್ ಮೂಡಿಗೆರೆ ಪಪಂ ಅಧ್ಯಕ್ಷ.
ನಿರ್ವಹಣೆಗೆ ಯಾರೂ ಇಲ್ಲ. ಸರ್ಕಾರದಿಂದ ರಾಜ್ಯದ ಎಲ್ಲ ನಗರಗಳಿಗೆ ಬೀದಿ ದೀಪ.ಹಿಂದೆ ಪಪಂನಿಂದ ಪಟ್ಟಣದ ಎಲ್ಲ ವಿದ್ಯುತ್ ಕಂಬಗಳಿಗೆ ಮರ್ಕ್ಯೂರಿ ದೀಪ ಅಳವಡಿಸಲಾಗಿತ್ತು. 2023ರಲ್ಲಿ ಕೇಂದ್ರ ಅಳವಡಿಕೆ ಮತ್ತು ನಿರ್ವಹಣಾ ಗುತ್ತಿಗೆಯನ್ನು ಮುಂಬೈ ಮೂಲದ ಗುತ್ತಿಗೆದಾರರೊಬ್ಬರಿಗೆ ವಹಿಸಿದ ಬಳಿಕ ಹಳೆಯ ಮರ್ಕ್ಯೂರಿ ದೀಪಗಳನ್ನು ತೆರವುಗೊಳಿಸಿ ಎಲ್ಇಡಿ ದೀಪ ಅಳವಡಿಸಿದ್ದಾರೆ. ನಿರ್ವಹಣೆಗೆ ಮಾತ್ರ ಯಾರೊಬ್ಬರನ್ನೂ ನೇಮಿಸಿಲ್ಲ.
ಬೀದಿ ದೀಪಗಳು ಹಾಳಾದರೆ ಅದನ್ನು ದುರಸ್ತಿ ಪಡಿಸುವವರೇ ಇಲ್ಲ. ಇದರಿಂದ ಪಟ್ಟಣದಲ್ಲಿ ಕತ್ತಲೆ ಆವರಿಸಿದೆ. ಬೀದಿ ದೀಪ ದುರಸ್ತಿ ಪಡಿಸುವಂತೆ ಪಪಂ ಆಡಳಿತಕ್ಕೆ ತಿಳಿಸಿದರೆ, ಬೀದಿ ದೀಪಕ್ಕೂ ನಮಗೂ ಸಂಬಂಧವಿಲ್ಲ. ಅದರ ನಿರ್ವಹಣೆ ಹೊಣೆಯನ್ನು ನಮಗೆ ವಹಿಸಿಲ್ಲ ಎಂದು ಹೇಳುತ್ತಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪದ ಮೀಟರ್ ಮತ್ತು ಸ್ವಿಚ್ ಬಾಕ್ಸ್ ಕಂಬದ ಬುಡದಲ್ಲಿವೆ. ಕೆಲ ಕಂಬಗಳಲ್ಲಿ ಬಾಕ್ಸ್ಗೆ ಮುಚ್ಚಳವಿದೆ. ಇನ್ನು ಕೆಲ ಕಂಬಗಳಲ್ಲಿ ಮುಚ್ಚಳ ತೆರೆದಿಡಲಾಗಿದೆ. ಆದರೊಳಗಿರುವ ತಂತಿಗಳನ್ನು ಹಾಗೆಯೆ ಬಿಡಲಾ ಗಿದೆ. ಮಕ್ಕಳು ಆಟವಾಡುತ್ತ ಬಾಕ್ಸ್ ಮುಟ್ಟಿದರೆ ಆಪಾಯ ಸಂಭವಿಸಲಿದೆ. ಮಾರ್ಕೆಟ್ ರಸ್ತೆಯ ಆದಿಶಕ್ತಿ ದೇವಸ್ಥಾನದ ಮುಂಭಾಗದಲ್ಲಿರುವ ಹೈಮಾಸ್ಟ್ ಬೀದಿ ದೀಪದ ಕಂಬದ ಬುಡದಲ್ಲಿರುವ ಬಾಕ್ಸ್ನಿಂದ ವಿದ್ಯುತ್ ಆಗಾಗ ಸೋರಿಕೆಯಾಗುತ್ತಿದೆ. ಪಕ್ಕದ ಬೋರ್ ವೆಲ್, ಕೈಪಂಪ್ ಜಗ್ಗುವಾಗ ಹಲವರಿಗೆ ವಿದ್ಯುತ್ ಪ್ರವಹಿಸಿದೆ.
ಪಟ್ಟಣದಲ್ಲಿ ಅಳವಡಿಸಿರುವ ಬೀದಿ ದೀಪಗಳು ಹಾಳಾಗಿವೆ. ಮುಂಜಾನೆ ವಾಯುವಿಹಾರಕ್ಕೆ ಟಾರ್ಚ್ ಹಿಡಿದು ಹೋಗುವ ಪರಿಸ್ಥಿತಿ ಉಂಟಾಗಿದೆ. ಬೀದಿ ದೀಪಗಳನ್ನು ಸರಿಪಡಿಸಿ ಪುಣ್ಯ ಕಟ್ಟಿಕೊಳ್ಳಲಿ.
| ಜಾಕೀರ್ ಹುಸೇನ್
ಮೇಗಳಪೇಟೆ ಬಡಾವಣೆ ನಿವಾಸಿ