ವ್ಯಕ್ತಿ ಶ್ರೇಷ್ಟತೆ ಹುದ್ದೆಯಲ್ಲಿರುವುದಿಲ್ಲ……..
1 min read
ವ್ಯಕ್ತಿ ಶ್ರೇಷ್ಟತೆ ಹುದ್ದೆಯಲ್ಲಿರುವುದಿಲ್ಲ…..
ಈ ಪೋಟೋದಲ್ಲಿರುವವರು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಯಾರಿವ ಒಬ್ಬ ಗುಮಾಸ್ಥನ ಬಗ್ಗೆ ಐ.ಎ.ಎಸ್ ಅಧಿಕಾರಿಯಾಗಿ ಏಕೆ ಬರಿಯುತ್ತಿದ್ದಾರೆ ಅಂದುಕೊಂಡಿರಬಹುದು. ಕಾರಣ ಇದೆ. ಕೆಲವರು ಸಣ್ಣ ಹುದ್ದೆಯಲಿದ್ದರು ದೊಡ್ಡ ಆಲೋಚನೆ ಹೊಂದಿ ಆ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂಬುದಕ್ಕೆ ಈ ಚಂದ್ರುನೆ ಸಾಕ್ಷಿ. ವ್ಯಕ್ತಿ ಶ್ರೇಷ್ಟತೆ ಹುದ್ದೆಯಲ್ಲಿರುವುದಿಲ್ಲ. ನಿರ್ವಹಿಸುವ ಕೆಲಸದಲ್ಲಿರುತ್ತದೆ. ಹೀಗೆ ಹೇಳಲು ಕಾರಣವೂ ಇದೆ. ಇಂತಹವರ ಬಗ್ಗೆ ತಿಳಿದಿದ್ದು ಜೊತೆಯಲ್ಲಿ ಕೆಲಸ ನಿರ್ವಹಿಸಿದ್ದರೂ ಅವರ ಸಾಧನೆಯನ್ನು ಹಂಚಿಕೊಳ್ಳದಿದ್ದರೆ ಸರಿ ಎನಿಸುವುದಿಲ್ಲ.
ಸರಳ ವ್ಯಕ್ತಿತ್ವದ. ಕಾಯಕವೇ ನನ್ನ ಕರ್ತವ್ಯ ಎಂದುಕೊಂಡು ವಿನೂತನವಾಗಿ ಏನಾದರು ಸೇವೆ ಸಲ್ಲಿಸಬೇಕೆಂಬ ಹಂಬಲವಿರುವ ಸ್ನೇಹಿತ.
ನಾನು ಈ ಚಿಕ್ಕಮಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತನಾಗಿ ಒಂದೆರಡು ತಿಂಗಳು ಕಾರ್ಯನಿರ್ವಹಿಸುತ್ತಿದ್ದಾಗ ಗಮನಸೆಳೆದಿದ್ದು ಪ್ರಾಧಿಕಾರದ ಲೋಗೋ. ಇದನ್ನು ರೂಪಿಸಿದವನು ಈ ಚಂದ್ರು. ಕಲೆಯ ಬಗ್ಗೆಯೂ ಆಶಕ್ತಿ ಇರುವ ವ್ಯಕ್ತಿ ಇವನು. ಈತ ಆಸಕ್ತಿಯಿಂದ ವಿನೂತನವಾಗಿ ರೂಪಿಸಿದ ಡಿಸೈನ್ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರ ಲೋಗೋವಾಗಿ ಅಳವಡಿಸಿಕೊಂಡಿರುವುದು ನಮ್ಮ ಹೆಮ್ಮೆ.
ನಾನು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಇದ್ದಾಗ ಇದೇ ಚಂದ್ರು ಒಂದು ಪ್ರಸ್ಥಾವನೆ ಸಲ್ಲಿಸಿದ್ದರು. ಅದೇನೆಂದರೆ ” ಸರ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ ಐತಿಹಾಸಿಕ ಹಿನ್ನೆಲೆ ಇರುವ ಕಟ್ಟಡ. ಇಲ್ಲಿಗೆ ಮಹಾತ್ಮ ಗಾಂಧೀಜಿಯವರು 1923 ರಲ್ಲಿ ಚಿಕ್ಕಮಗಳೂರಿಗೆ ಬಂದಾಗ ಇದೇ ಕಟ್ಟಡದಲ್ಲಿ ಕುಳಿತು ಭಾಷಣ ಮಾಡಿದ್ದರು. ಅದರ ಪೋಟೋ ಕೂಡ ಇದೆ. ಮುಂದೆ ಇದು ಜಿಲ್ಲಾಧಿಕಾರಿಗಳ ಕಚೇರಿಯೂ ಆಯಿತು. ಈಗ ಜಿಲ್ಲಾಧಿಕಾರಿಗಳ ಕಟ್ಟಡ ಬೇರೆಡೆ ನಿರ್ಮಿಸಲು ಪ್ರಯತ್ನ ಇದೆ. ಜಿಲ್ಲಾಧಿಕಾರಿಗಳ ಕಚೇರಿ ಬದಲಾವಣೆಯಾದರೆ ಈ ಕಟ್ಟಡ ಬೇರಾವುದೊ ಉದ್ದೇಶಕ್ಕೆ ಬಳಕೆಯಾಗಿ ಇದರ ಐತಿಹಾಸಿಕ ಮಹತ್ವ ಮರೆಯುವ ಸಾದ್ಯತೆ ಇದೆ. ಆದ್ದರಿಂದ ಕಟ್ಟಡದ ಮಧ್ಯಭಾಗದಲ್ಲಿ ವಿಶಾಲ ಸ್ಥಳವಿರುವುದರಿಂದ ಗಾಂಧೀಜಿಯವರ ಒಂದು ಪುತ್ಥಳಿ ಪ್ರತಿಸ್ಟಾಪಿಸಿ, ಉದ್ಯಾನವನ ರೂಪಿಸಿದರೆ ಒಳ್ಳೆಯದು ಎಂದು ತಾನೆ ಪ್ರಸ್ಥಾವನೆ ತಯಾರಿಸಿರುವುದಾಗಿ” ತಿಳಿಸಿ ಸದರಿ ಪ್ರಸ್ಥಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಅನುದಾನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿದನು. ಸದರಿ ಪ್ರಸ್ಥಾವನೆ ಐದು ವರ್ಷ ಇಲಾಖೆ ಕಪಾಟು ಸೇರಿತ್ತು. ಐದು ವರ್ಷದ ನಂತರ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ ನೇಮಕಗೊಂಡಾಗ, ಚಂದ್ರು ಅದರ ಪ್ರಸ್ಥಾವನೆ ಪ್ರತಿಯೊಂದಿಗೆ ನನ್ನ ಬೆನ್ನು ಹತ್ತಿದ ಪರಿಣಾಮ 25 ಲಕ್ಷ ಮಂಜೂರಿಯಾಯಿತು. ನಂತರ ಗಾಂಧೀಜಿಯವರ ಪುತ್ಥಳಿ ಅನಾವರಣಗೊಂಡು, ಉದ್ಯಾನವನವೂ ರೂಪಗೊಂಡು ಆ ಕಟ್ಟಡದ ಕಳಸಪ್ರಾಯವಾಗಿ ಆಕರ್ಷಿಸುತ್ತಿದೆ.
ಕಳೆದೆರಡು ವರ್ಷದ ಹಿಂದೆ ಮತ್ತೆ ಚಂದ್ರು ನನ್ನ ಸಂಪರ್ಕ ಮಾಡಿ ” ಇದೇನ್ ಸರ್ ಇದು ವಿಧಾನ ಸೌಧ ನಮ್ಮ ಹೆಮ್ಮೆ ಸರಿ ಸರ್ ಆದ್ರೆ ತಾಲ್ಲೋಕು ಕಚೇರಿ ಕಟ್ಟಡಗಳನ್ನೆಲ್ಲ ಮಿನಿ ವಿಧಾನ ಸೌಧ ಎಂದು ನಾಮಕರಣ ಮಾಡುತ್ತಾರೆ. ಕೆಲವು ಕಡೆ ಸರಿಯಾದ ನಿರ್ವಹಣೆ ಇಲ್ಲ. ಸುಣ್ಣ ಬಣ್ಣ ಇರಲ್ಲ. ಹೆಸರು ಮಾತ್ರ ಮಿನಿ ವಿಧಾನ ಸೌಧ. ಮಾದರಿಯೂ ಸಹ ವಿಧಾನ ಸೌಧದಂತಿಲ್ಲ. ಆದ್ದರಿಂದ ವಿಧಾನ ಸೌಧವನ್ನು ಅಪ ಹಾಸ್ಯ ಮಾಡಿದಂತಿವೆ. ಸರಕಾರಕ್ಕೆ ಮಿನಿ ವಿಧಾನ ಸೌಧ ಎಂದು ಇರುವ ಹೆಸರನ್ನು ‘ತಾಲ್ಲೋಕು ಆಡಳಿತ ಸೌಧ’ ಎಂದು ಹೆಸರು ಬದಲಾವಣೆ ಮಾಡುವಂತೆ ಸರಕಾರಕ್ಕೆ ಪತ್ರ ಬರೆದು ಕೋರಿರುವುದಾಗಿ” ತಿಳಿಸಿ ಪ್ರಸ್ಥಾವನೆಯ ಪ್ರತಿಯನ್ನು ವಾಟ್ಸಪ್ ಮಾಡಿದ್ದ. ಆಶ್ಚರ್ಯವೆಂದರೆ ಆ ಪ್ರಸ್ಥಾವನೆಯನ್ನು ಸರಕಾರ ಗಮನಿಸಿ, ಸೂಕ್ತವೆಂದು ಪರಿಗಣಿಸಿ ತಾಲ್ಲೋಕು ಆಡಳಿತ ಸೌಧ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಚಂದ್ರುವನ್ನು ಒಬ್ಬ ಸಾಮಾನ್ಯ ಗುಮಾಸ್ಥನಾದರು ವಿಶಾಲ ವಿನೂತನ ವಿಷನ್ ಹೊಂದಿದ ಶ್ರೇಷ್ಟ ವ್ಯಕ್ತಿ ಎಂದರೆ ತಪ್ಪಾಗಲಾರದು. ಈ ಮೂಲಕ ಆತನಿಗೆ ನನ್ನ
ಅಭಿನಂಧನಾ ನುಡಿನಮನ…
ಬರಹ….
ದಯಾನಂದ ಅಪ್ಪಾಜಿಗೌಡ…
ಜಿಲ್ಲಾಧಿಕಾರಿ.