ಮರೆಯಾಗುತ್ತಿರುವ ಮೇ ಡೇ ಸಂಭ್ರಮಾಚರಣೆ….
1 min read
ಮರೆಯಾಗುತ್ತಿರುವ ಮೇ ಡೇ ಸಂಭ್ರಮಾಚರಣೆ
ಕೆಂಪು ವಸ್ತಾಧಾರಿಗಳಾಗಿ, ಗೆಲ್ಲುವೆವು ನಾವು ಗೆಲ್ಲುವೆವು ವಿಶ್ವವನ್ನೆ ಗೆಲ್ಲುವೆವು. ಲಾಲ್ ಝಂಡಾ ಜಿಂದಾಬಾದ್, ಮೇ ಡೇ ಗೆ ಜಯವಾಗಲಿ, ವಿಶ್ವದ ಕಾರ್ಮಿಕರೆ ಒಂದಾಗಿ ಎಂಬ ಘೋಷಣೆಗಳೊಂದಿಗೆ ಧೀರ ಹೆಜ್ಜೆ ಹಾಕುತ್ತಿದ್ದವರ ಮೆರವಣಿಗೆಯನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಇಂತಹ ಚಿತ್ರಣ ಪ್ರಪಂಚದೆಲ್ಲೆಡೆ ಕಂಡು ಬರುತ್ತಿತ್ತು ಮೇ 1 ರ ವಿಶ್ವ ಕಾರ್ಮಿಕರ ದಿನಾಚರಣೆಯಂದು. ಇಂತಹ ಸಂಭ್ರಮಾಚರಣೆಗಳು ದೂರವಾಗುತ್ತಿರುವ ಈ ದಿನಗಳು ಮತ್ತು ಮೇ ದಿನಾಚರಣೆಯ ಮಹತ್ವದ ಬಗ್ಗೆ ಒಂದು ಅವಲೋಕನ.
18 ಮತ್ತು 19 ನೇ ಶತಮಾನದಲ್ಲಿ ಪ್ರಪಂಚದ ಯುರೋಪ್ ಹಾಗೂ ಅಮೇರಿಕಾ ಖಂಡಗಳ ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್, ಇಟಲಿ ಹೀಗೆ ಮುಂತಾದ ದೇಶಗಳಲ್ಲಿ ಕೃಷಿಯಿಂದ ಕೈಗಾರಿಕೆಗಳತ್ತ ಆ ದೇಶಗಳು ಹೆಜ್ಜೆ ಇಡತೊಡಗಿದವು. ಇದರ ಪರಿಣಾಮ ಇಂಜಿನಿಯರಿಂಗ್, ಗಣಿ, ಮುದ್ರಣ ಹಾಗೂ ಟೆಕ್ಸ್ ಟೈಲ್ ಸೇರಿದಂತೆ ಹಲವು ಕೈಗಾರಿಕೆಗಳು ಪ್ರವರ್ಧಮಾನಕ್ಕೆ ಬಂದವು. ಈ ಕೈಗಾ ರಿಕೆಗಳಲ್ಲಿ ದುಡಿಯಲು ಯುವಕರು, ವಿದ್ಯಾವಂತರು ಆಕರ್ಷಣೆಗೆ ಒಳಪಟ್ಟರು. ಕೈಗಾರಿಕೆಗಳ ಮಾಲೀಕರು ಯುವ ಶಕ್ತಿಯ ಲಾಭವನ್ನು ಪಡೆದು ಬಂಡವಾಳಗಾರರಾಗಿ ಪರಿವರ್ತನೆಗೊಂಡರು. ಆದ-‘ರೆ ಹಗಲು ರಾತ್ರಿಯೆನ್ನದೆ ದುಡಿಯುವ ಕಾರ್ಮಿಕರಿಗೆ ಸರಿಯಾದ ಸಂಬಳ, ರಜೆ ಇತ್ಯಾದಿ ಸೌಲಭ್ಯಗಳಿರಲಿ ದಿನಕ್ಕೆ 10 ರಿಂದ 15 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದರು.
ಬದಲಾವಣೆ ಜಗದ ನಿಯಮ ಎಂಬಂತೆ, ಶೋಷಣೆಯ ವಿರುದ್ಧ ಈ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಅವರವರಲ್ಲಿಯೇ ಮಾತನಾಡಿ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸಿದರು. ಅಲ್ಲಲ್ಲಿ ಶೋಷಣೆಯ ವಿರುದ್ಧದ ಧ್ವನಿ ಕೇಳಿಸ ತೊಡಗಿದವು. ಇದರ ದರ ಪರಿಣಾಮ 1880 ರ ದಶಕದಲ್ಲಿ ಜಗತ್ತಿನ ಮೊದಲನೆ ಕಾರ್ಮಿಕ ಸಂಘಟನೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆರಂಭಗೊಂಡವು. ಕೈಗಾರಿಕರಣದ ವೇಗದ ಜೊತೆ ದುಡಿಯುವ ಜನರ ಶಕ್ತಿ ಕೂಡ ದೃಡತೆ ಪಡೆದುಕೊಂಡಿತು. ಪರಿಣಾಮ 1886 ರ ಮೇ 04 ರಂದು ಅಮೇರಿಕಾದ ಚಿಕಾಗೊ ನಗರದಲ್ಲಿ ಮೊದಲನೆ ಪ್ರತಿಭಟನೆ ಆರಂಭವಾಯಿತು ಅದರ ಮುಖ್ಯ ಬೇಡಿಕೆ ದಿನಕ್ಕೆ 8 ಗಂಟೆ ಕೆಲಸ ಎಂಬುದಾಗಿತ್ತು.
ಪ್ರಪಂಚದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಚಿಕಾಗೊ ಹೋರಾಟವು ವಾರಗಟ್ಟಲೆ ನಡೆಯಿತು. ಇದನ್ನು ಸಹಿಸದ ಬಂಡವಾಳಶಾಯಿ ಕೈಗಾರಿಕೋದ್ಯಮಿಗಳು ಅಂದಿನ ಸರ್ಕಾರದ ಸಹಾಯದೊಂದಿಗೆ ಚಳುವಳಿನಿರತ ಕಾರ್ಮಿಕರ ಮೇಲೆ ಪೊಲೀಸರ ದಮನಕಾರಿ ಚಟುವಟಿಕೆ ಆರಂಭಿಸಿದರು. ಪರಿಣಾಮ ಸಾವಿರಾರು ಕಾರ್ಮಿಕರು ಗಾಯಗೊಂಡು ನೂರಾರು ಕಾರ್ಮಿಕರು ಜೀವತೆತ್ತರು. ಚಿಕಾಗೊ ನಗರ ರಕ್ತಸಿಕ್ತವಾಯಿತು. ಅಂದೇ ಕಾರ್ಮಿಕರು ಎಂದಾದರು ನಾವು ಗೆಲ್ಲುತ್ತೇವೆ ಎಂಬ ಕರೆಯೊಂದಿಗೆ ಮುಷ್ಕರಕ್ಕೆ ಅಂತ್ಯವಾಡಿದರು.
ತದನಂತರ ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ಕೈಗಾ-ರಿಕೋದ್ಯಮಿಗಳ ಪ್ರತಿನಿಧಿಗಳು ಹಾಗೂ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳಿಂದ ದಿನಕ್ಕೆ 8 ಗಂಟೆ ಕೆಲಸ ಎಂಬ ಘೋಷಣೆ ಹೊರಬಿದ್ದಿತು. ಇದು ವಿಶ್ವದ ದುಡಿಯುವ ಜನರ ಮೊದಲ ಜಯವಾಗಿತ್ತು. ಇದರ ನೆನಪಿಗಾಗಿ 1889 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ಸಮಾವೇಶದಲ್ಲಿ ಮೇ 1 ರಂದು ವಿಶ್ವದ ಕಾರ್ಮಿಕ ದಿನಾಚರಣೆ ಆಚರಿಸಲು ಕರೆ ನೀಡಿತು. ಅಂದಿನಿಂದ ಈ ದಿನದವರೆಗೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಮೇ 1 ನ್ನು ಮೇ ಡೇ, ಕಾರ್ಮಿಕ ದಿನಾಚರಣೆ, ಲೇಬರ್ ಡೇ ಹೀಗೆ ಹಲವು ಹೆಸರುಗಳಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರುತ್ತಿದೆ.
ಅಂದಿನ ಹೋರಾಟದ ಫಲವಾಗಿ ಭಾರತವು ಸೇರಿದಂತೆ ಜಗತ್ತಿನ ಕಾರ್ಮಿಕರಿಗೆ 8 ಗಂಟೆ ಕೆಲಸ, ಸಮಾನ ಕೆಲಸಕ್ಕೆ ಸಮಾನ ವೇತನ, ಭವಿಷ್ಯನಿಧಿ, ಬೋನಸ್ಸು, ಆರೋಗ್ಯ ರಕ್ಷಣೆ, ಶಿಕ್ಷಣಗಳು ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಕಡ್ಡಾಯವಾಗಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂದು ಜೀವತೆತ್ತು ಇಷ್ಟೆಲ್ಲಾ ಸೌಲಭ್ಯಗಳಿಗೆ ಕಾರಣರಾದ ತಮ್ಮೆಲ್ಲ ಹಿರಿಯರನ್ನು ನೆನಪು ಮಾಡಿಕೊಳ್ಳುವ, ಹೋರಾಟಗಳನ್ನು ಮೆಲುಕು ಹಾಕುವ ಇತಿಹಾಸದೊಂದಿಗೆ ಮುಂದಿನ ಹೆಜ್ಜೆ ಇಡಬೇಕಾದ ಸಂದರ್ಭ ಮೇ 1. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಹೆಜ್ಜೆಗಳನ್ನು ದುಡಿಯುವ ವರ್ಗ ಇಡುತ್ತಿದೆಯೇ ಎಂಬುದನ್ನು ಅವಲೋಕನ ಮಾಡಬೇಕಾದ ಸ್ಥಿತಿ ಬಂದಿರುವುದು ವಿಪರ್ಯಾಸ.
ಅಂದು ಹಳ್ಳಿ, ನಗರ, ರಾಜಧಾನಿಗಳ ಪ್ರಮುಖ ಬೀದಿಗಳಲ್ಲಿ ಧೀರ ಹೆಜ್ಜೆ ಹಾಕುತ್ತಿದ್ದುದು ಇಂದು ನೆನಪಾಗಿ ಉಳಿದಿದೆ.ಇಂದಿನ ಬಹುತೇಕ ದುಡಿಯುವ ಜನ ಅಲ್ಲಲ್ಲಿ ಕಾಣಸಿಗುವ ಹೋರಾಟಗಾರರನ್ನು ಕಂಡು ಅಪಹಾಸ್ಯ ಮಾಡುವ ಕಾಲಘಟ್ಟದಲ್ಲಿದ್ದಾರೆ. ನಿಜ ಇಡೀ ವಿಶ್ವ ಒಂದು ಕುಟುಂಬದಂತೆ ಕಾಣುತ್ತಿದೆ. ಆದರೆ ಈ ಕುಟುಂಬದ ಜನರು ಅದರಲ್ಲೂ ಕೂಡ ದುಡಿಯುವ ಜನರು ಒಗ್ಗಟ್ಟಾಗಿ ಇಲ್ಲದಿರುವುದು ಮುಂದಿನ ದಿನಗಳ ಅಪಾಯದ ಗುಂಡಿಯನ್ನು ತೋಡಿಕೊಳ್ಳುತ್ತಿರುವುದನ್ನು ಕಂಡು ಬೇಸರವಾಗದೆ ಇರಲಾಗದು. ವಿಶೇಷವಾಗಿ ಕರ್ನಾಟಕದ ಮಾಂಚೇಸ್ಟರ್ ಎಂದೇ ಕರೆಸಿಕೊಂಡಿದ್ದ ದಾವಣಗೆರೆ, ಪ್ರಪಂಚಕ್ಕೆ ಮಾದರಿ ಎನಿಸಿಕೊಂಡಿದ್ದ ನವರತ್ನ ಕೈಗಾ-ರಿಕೆಗಳ ಕೇಂದ್ರ ಬೆಂಗಳೂರು, ಕೃಷಿ ಕೈಗಾರಿಕೆ ಕಾಫಿ, ಟೀ ತೋಟಗಳ ಕೇಂದ್ರ ಚಿಕ್ಕಮಗಳೂರು ಹಾಗೂ ಬಗಲಲ್ಲಿ ಬಟ್ಟೆಗಂಟನ್ನು ಇಟ್ಟುಕೊಂಡು ಗುಳೆ ಹೋಗುತ್ತಿದ್ದ ಉತ್ತರ ಕರ್ನಾಟಕದಲ್ಲಿ ಮೇ 1 ರಂದು ನಡೆಯುತ್ತಿದ್ದ ಕೆಂಪಂಗಿಗಳ ಜನರ ಮೆರವಣಿಗೆಗಳು ಮಾಯವಾಗಿವೆ. ಇಂತಹ ಸಂಭ್ರಮದ ದಿನಗಳಿಗಾಗಿ ಕಾಯಬಹುದೇ…. !
ಲೇಖಕರು:-ಎಂ.ಸಿ.ಶಿವಾನಂದಸ್ವಾಮಿ ಚಿಕ್ಕಮಗಳೂರು. 94481 33109