लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಗೇಜ್ ಮರೆತು ಇಳಿದ್ರಾ, ಊಟ ಮಾಡುವಾಗ ಬಸ್ ನಿಮ್ಮನ್ನು ಬಿಟ್ಟು ಹೋಯ್ತಾ? ಈ 10 ಅಂಶಗಳು ತಿಳಿದಿರಲಿ

ಭಾರತದಲ್ಲಿ ಅತ್ಯುತ್ತಮ ಬಸ್‌ ಸೇವೆ ಒದಗಿಸುತ್ತಿರುವ ಸರ್ಕಾರಿ ಸಂಸ್ಥೆಗಳಲ್ಲಿ ಕೆಎಸ್‌ಆರ್‌ಟಿಸಿಗೆ ಅಗ್ರಸ್ಥಾನ. ದೇಶದ ಹಲವು ಪ್ರಯಾಣಿಕರು ಕರ್ನಾಟಕದ ಕೆಎಸ್‌ಆರ್‌ಟಿಸಿ ಸೇವೆಯನ್ನು ಹೊಗಳುತ್ತಾರೆ. ಅಪಾರ ಸಂಖ್ಯೆಯ ಗುಣಮಟ್ಟದ ಬಸ್‌ಗಳು, ಭಿನ್ನ ದರ್ಜೆಯ ಆರಾಮದಾಯಕ ಬಸ್‌ಗಳು, ಅನುಭವಸ್ಥ ಡ್ರೈವರ್‌ಗಳು, ಬೇರೆ ಬೇರೆ ಮಾರ್ಗ ಹಾಗೂ ರಾಜ್ಯಗಳಲ್ಲಿ ಪ್ರಯಾಣ ಹೀಗೆ ಹಲವು ರೀತಿಯಿಂದ ಕರ್ನಾಟಕ ಸಾರಿಗೆ ಅತ್ಯುತ್ತಮ ಎನಿಸಿದೆ.
ಈಗ ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣವೂ ಇದೆ. ರಾಜ್ಯದ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಕೆಲವೊಮ್ಮೆ ಏನಾದರೂ ಸಮಸ್ಯೆಗಳು ಎದುರಾಗಬಹುದು ಅದಕ್ಕೆ ಸಂಬಂಧಿಸಿದ ಅಗತ್ಯ 10 ಸಲಹೆಗಳು ಈ ಸುದ್ದಿಯಲ್ಲಿದೆ.
KSRTC ಬಸ್ಸಿನಲ್ಲಿ ಪ್ರಯಾಣಿಸಿದಾಗ ನೀವು ನಿಮ್ಮ ಲಗೇಜ್‌, ಬ್ಯಾಗ್ ಅಥವಾ ಯಾವದೇ ವಸ್ತುಗಳನ್ನು ಮರೆತಿದ್ದರೆ ಚಿಂತಿಸಬೇಕಿಲ್ಲ. ತಕ್ಷಣವೇ ಕೆಎಸ್‌ಆರ್‌ಟಿಸಿ ಕಾಲ್ ಸೆಂಟರ್‌ಗೆ ಕರೆ ಮಾಡಿ ನಿಮ್ಮ ಸಮಸ್ಯೆಯ ಬಗ್ಗೆ ದೂರು ನೀಡಿ. ಇದಕ್ಕಾಗಿ ನೀವು 080-26252625ಕ್ಕೆ ಕರೆ ಮಾಡಬಹುದು. ಇದೇ ವೇಳೆ ಕೆಎಸ್‌ಆರ್‌ಟಿಸಿಯ AWATAR ಸೆಲ್ 7760990034/35ಗೆ ಸಂಪರ್ಕಿಸಿ ಕಳೆದುಹೋದ ವಸ್ತುವಿನ ಬಗ್ಗೆ ಅವರಿಗೆ ಮಾಹಿತಿ ನೀಡಿ. ಅದನ್ನು ಮತ್ತೆ ಹೇಗೆ ಪಡೆಯಬಹುದು ಎಂಬ ಬಗ್ಗೆ ವಿಚಾರಿಸಿ.
ನೀವು ಯಾವ KSRTC ಬಸ್ಸಿನಲ್ಲಿ ಸಾಮಾನುಗಳನ್ನು ಮರೆತಿದ್ದೀರಿ ಎಂದು ಸ್ಪಷ್ಟವಾಗಿ ತಿಳಿಸಿ. ಬಸ್ ಮಾರ್ಗ (ಉದಾಹರಣಗೆ ಬೆಂಗಳೂರು-ಮಂಗಳೂರು ಬಸ್‌), ಬಸ್ ಸಂಖ್ಯೆ ಮತ್ತು ನಿಮ್ಮ ಪ್ರಯಾಣದ ಸಮಯದ ಬಗ್ಗೆ ವಿವರಗಳನ್ನು ಒದಗಿಸಿ. ನೀವು ಯಾವ ಸ್ಟಾಪ್‌ನಲ್ಲಿ ಬಸ್‌ನಿಂದ ಇಳಿದಿದ್ಧೀರಿ ಎಂಬುದನ್ನು ವಿವರವಾಗಿ ತಿಳಿಸಿ.
ಕಳೆದುಹೋದ ವಸ್ತು, ಬ್ಯಾಗ್‌ನ ಬಣ್ಣ, ಗಾತ್ರ ಮತ್ತು ಯಾವುದೇ ವಿಶಿಷ್ಟ ಲಕ್ಷಣಗಳು, ಅದರಲ್ಲಿ ಹಣ ಅಥವಾ ಅಮೂಲ್ಯ ವಸ್ತುಗಳಿದ್ದರೆ ಅವುಗಳ ವಿವರವನ್ನು ಸಾಧ್ಯವಾದಷ್ಟು ನಿಖರವಾಗಿ ವಿವರಿಸಿ.
ಕೆಎಸ್‌ಆರ್‌ಟಿಸಿಯ ITS ವೆಬ್‌ಸೈಟ್ ಮೂಲಕವೂ ನೀವು ದೂರು ನೀಡಬಹುದು. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ‘Lost’ ಆಯ್ಕೆಯನ್ನು ಕ್ಲಿಕ್‌ ಮಾಡಿ. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್, ಪ್ರದೇಶ, ದಿನಾಂಕ, ಮಾರ್ಗ ಸಂಖ್ಯೆ ಮತ್ತು ವಸ್ತುವಿನ ವಿವರಗಳನ್ನು ಭರ್ತಿ ಮಾಡಿ. ಇದು ಅನ್‌ಲೈನ್‌ ರಿಪೋರ್ಟ್‌ ಮಾಡುವ ವಿಧಾನ. ವೆಬ್‌ಸೈಟ್ ಲಿಂಕ್ https://mitra.ksrtc.in/MysoreMBus/lost.jsp
ನಿಮ್ಮ ವಸ್ತುಗಳನ್ನು ಮತ್ತೆ ಪಡೆಯಲು KSRTC ಪ್ರತಿನಿಧಿ ಒದಗಿಸುವ ಸೂಚನೆಗಳನ್ನು ಅನುಸರಿಸಿ. ವಸ್ತುವನ್ನು ಪಡೆಯಲು ಅವರು ಹೇಳುವ ನಿರ್ದಿಷ್ಟ ಬಸ್ ಡಿಪೋ ಅಥವಾ ನಿಲ್ದಾಣಕ್ಕೆ ಭೇಟಿ ನೀಡಿ. ಈ ಬಗ್ಗೆ ಪ್ರತಿನಿಧಿ ಜೊತೆ ಮಾಹಿತಿ ಕೇಳಿ.
ಬಸ್‌ನಲ್ಲಿ ದೂರ ಪ್ರಯಾಣದ ಸಂದರ್ಭದಲ್ಲಿ ಊಟಕ್ಕಾಗಿ ಬಸ್‌ ನಿಲ್ಲಿಸುತ್ತಾರೆ. ಕೆಲವೊಮ್ಮೆ ಇಂಥಾ ಸಂದರ್ಭದಲ್ಲಿ ಬಸ್‌ ನಿಮ್ಮನ್ನು ಬಿಟ್ಟು ಹೋಗಬಹುದು. ಆಗ ಏನು ಮಾಡಬಹುದು ಎಂಬ ಯೋಚನೆ ನಿಮಗೆ ಇರಬಹುದು. ಅಂಥಾ ಸಮಯದಲ್ಲಿ ತಕ್ಷಣ ಕಂಡಕ್ಟರ್ ಅಥವಾ ಚಾಲಕನಿಗೆ ತಿಳಿಸಿ. ಹತ್ತಿರದ ಸುರಕ್ಷಿತ ಸ್ಥಳದಲ್ಲಿ ಬಸ್ ನಿಲ್ಲಿಸಲು ವಿನಂತಿಸಿ.
ನೀವು ಪ್ರಯಾಣಿಸುವ ಬಸ್‌ನ ಸಂಖ್ಯೆ, ಕಂಡಕ್ಟರ್‌ ಮೊಬೈಲ್‌ ಸಂಖ್ಯೆ ನಿಮ್ಮಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮೊಂದಿಗೆ ಸಹಪ್ರಯಾಣಿಕರು ಪರಿಚಯವಾದರೆ, ಅವರ ಸಂಪರ್ಕ ಸಂಖ್ಯೆಯನ್ನೂ ಪಡೆದುಕೊಳ್ಳಿ. ಅವರಿಗೆ ಕರೆ ಮಾಡಿ ಬಸ್‌ ನಿಲ್ಲಿಸಲು ಹೇಳಿ.
ಸಂಪರ್ಕ ಸಂಖ್ಯೆ ಇಲ್ಲವಾದಲ್ಲಿ ಚಿಂತೆ ಮಾಡಬೇಡಿ. ತಕ್ಷಣ ನೀವು ಕೆಎಸ್‌ಆರ್‌ಟಿಸಿಗೆ ದೂರು ನೀಡಬಹುದು. ಇಮೇಲ್, ವಾಟ್ಸಾಪ್ ಅಥವಾ ಅವರ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು.
awatar@ksrtc.orgಗೆ ನೀವು ಇಮೇಲ್ ಮಾಡಬಹುದು. ನಿಯಂತ್ರಣ ಕೊಠಡಿಗೆ 080-26252625ಗೆ ಕರೆ ಮಾಡಬಹುದು. ಇದೇ ವೇಳೆ WhatsApp ಸಂದೇಶವನ್ನು ಕಳುಹಿಸಬಹುದು ಅಥವಾ ವೆಬ್‌ಸೈಟ್ ಮೂಲಕ ದೂರು ಸಲ್ಲಿಸಬಹುದು.
ಕೆಎಸ್‌ಆರ್‌ಟಿಸಿಯು, ನೌಕರರ ನಿರ್ಲಕ್ಷ್ಯ ಅಥವಾ ದುಷ್ಕೃತ್ಯಕ್ಕಾಗಿ ದಂಡ ವಿಧಿಸುವ ಕ್ರಮಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ, ಕರ್ತವ್ಯವನ್ನು ತಪ್ಪಿಸುವ ಅಥವಾ ಪ್ರಯಾಣಿಕರಿಗೆ ಸಕಾಲಿಕ ಮಾಹಿತಿಯನ್ನು ಒದಗಿಸದ ಕಂಡಕ್ಟರ್‌ಗೆ ದಂಡ ವಿಧಿಸಲಾಗುತ್ತದೆ. ಇದೇ ವೇಳೆ ಅಜಾಗರೂಕ ಚಾಲನೆ ಅಥವಾ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿಲ್ಲಿಸಲು ವಿಫಲವಾದ ಚಾಲಕರು ಕೂಡಾ ದಂಡವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನಿಮಗಾದ ಸಮಸ್ಯೆಯನ್ನು ಕೆಎಸ್‌ಆರ್‌ಟಿಸಿಗೆ ತಿಳಿಸುವುದು ಮುಖ್ಯ.

About Author

Leave a Reply

Your email address will not be published. Required fields are marked *