ಬಿಜೆಪಿ ನಾಯಕ ಹರೀಶ್ ಪೂಂಜಾ ಸ್ಥಾನ ಕಳೆದುಕೊಳ್ತಾರಾ?
1 min read
ಬಿಜೆಪಿ ನಾಯಕ ಹರೀಶ್ ಪೂಂಜಾಗೆ ಬಿಗ್ ಶಾಕ್.. ಶಾಸಕ ಸ್ಥಾನ ಕಳೆದುಕೊಳ್ತಾರಾ?
ಬೆಂಗಳೂರು: ಕಳೆದ ಮಾರ್ಚ್ 21, 2025. ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಈ ಅಮಾನತು ಸದ್ದು, ಗದ್ದಲ ರಾಜ್ಯ ರಾಜಕೀಯದಲ್ಲಿ ಇನ್ನೂ ತಣ್ಣಗಾಗಿಲ್ಲ. ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಅನ್ನೋ ಹೋರಾಟವನ್ನು ಬಿಜೆಪಿ ನಿಲ್ಲಿಸಿಲ್ಲ. ಈ ಅಮಾನತು ಆದೇಶದ ಮಧ್ಯೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೆ ಸಂಕಷ್ಟ ಎದುರಾಗಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹರೀಶ್ ಪೂಂಜಾ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು ಹಕ್ಕುಚ್ಯುತಿ ಮಂಡಿಸಲು ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಒಂದು ಮಾತು – ಶಾಸಕ ಸ್ಥಾನಕ್ಕೆ ಕುತ್ತು!
ಮಾತು ಮಾಣಿಕ್ಯ. ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಎನ್ನುತ್ತಾರೆ. ಶಾಸಕ ಹರೀಶ್ ಪೂಂಜಾ ಅವರಿಗೆ ಒಂದೇ ಒಂದು ಮಾತು ಸದ್ಯ ಶಾಸಕ ಸ್ಥಾನಕ್ಕೆ ಕುತ್ತು ತಂದಿದೆ.
ಶಾಸಕ ಹರೀಶ್ ಪೂಂಜಾ ಅವರು ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಧರ್ಮದ ಹೇಳಿಕೆ ನೀಡಿದ ಆರೋಪಕ್ಕೆ ಸಿಲುಕಿದ್ದಾರೆ. ಯು.ಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಹರೀಶ್ ಪೂಂಜಾ ಅವರು ಸ್ಪೀಕರ್ ಮುಸ್ಲಿಂರು ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಧಾನಸಭಾಧ್ಯಕ್ಷರ ಧರ್ಮ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾಂಗ್ರೆಸ್ ಶಾಸಕರು ಅಕ್ಷರಶಃ ಸಿಡಿದೆದ್ದಿದ್ದಾರೆ. ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ಣ ಸೇರಿ ಕೆಲ ಶಾಸಕರು ಹರೀಶ್ ಪೂಂಜಾ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ದೂರು ನೀಡಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಸ್ಪೀಕರ್ ಧರ್ಮದ ವಿಚಾರ ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಹಕ್ಕು ಭಾಧ್ಯತಾ ಸಮಿತಿ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು ಈ ದೂರನ್ನು ಪರಿಶೀಲನೆ ನಡೆಸಲಿದ್ದಾರೆ.
ಇದು ಸ್ಪೀಕರ್ ಯು.ಟಿ ಖಾದರ್ ವಿರುದ್ಧದ ವಿಚಾರ ಆಗಿರೋದ್ರಿಂದ ಈ ದೂರನ್ನು ಹಕ್ಕು ಭಾದ್ಯತೆ ಸಮಿತಿ ಸಭಾಧ್ಯಕ್ಷ ಯು.ಟಿ ಖಾದರ್ಗೆ ರವಾನೆ ಮಾಡುವ ಸಾಧ್ಯತೆ ಇದೆ. ಈ ರೀತಿಯ ಪ್ರಕರಣಗಳಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಗರಿಷ್ಠ ಶಾಸಕ ಸ್ಥಾನದಿಂದ ವಜಾಗೊಳಿಸುವವರೆಗೆ ನಿಯಮಗಳಿವೆ. ಇದೀಗ ಶಾಸಕ ಹರೀಶ್ ಪೂಂಜಾ ಪ್ರಕರಣದಲ್ಲಿ ಸ್ಪೀಕರ್ ಏನು ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಅಶೋಕ್ ಪಟ್ಟಣ್ ಏನಂತಾರೆ?
ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ನೀಡಿರುವ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ಮಾಧ್ಯಮದ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.
ಸದನದ ಒಳಗೆ ಗಲಾಟೆ ಮಾಡಿರುವ ವಿಚಾರವಾಗಿ 18 ಶಾಸಕರನ್ನು ಅಮಾನತು ಮಾಡಲಾಗಿದೆ. ಸದಸ್ಯರಿಗೆ ಹೋಗಿ ಕ್ಷಮೆ ಕೇಳಿದರೆ ಅವರು ಅಮಾನತು ವಾಪಸ್ ತೆಗೆದುಕೊಳ್ಳುತ್ತಿದ್ದರು. ಅದು ಸಭಾಧ್ಯಕ್ಷರಿಗೆ ಬಿಟ್ಟ ವಿಚಾರ. ಆದರೆ ಹರೀಶ್ ಪೂಂಜಾ ಅವರು ಒಂದು ಖಾಸಗಿ ಚಾನೆಲ್ನಲ್ಲಿ ಸ್ಪೀಕರ್ ಧರ್ಮದ ವಿಚಾರದ ರೀತಿ ಮಾತನಾಡಿದ್ದಾರೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ವಿಧಾನಸಭಾಧ್ಯಕ್ಷನ್ನು ಪ್ರಶ್ನಿಸಿದ್ದಲ್ಲದೇ ಅವರ ಪೀಠದ ಆದೇಶವನ್ನು ಪ್ರಶ್ನಿಸಿದ್ದಾರೆ. ಅಮಾನತು ಮಾಡೋ ಅಧಿಕಾರ ಇದೆಯಾ ಅನ್ನೋದನ್ನು ಮಾತನಾಡಿದ್ದಾರೆ. ಯು.ಟಿ ಖಾದರ್ ಅಂತಲ್ಲ. ಸಭಾಧ್ಯಕ್ಷರಿಗೆ ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡಿದ್ದಾರೆ. ಪೀಠದ ಘನತೆ, ಗೌರವಕ್ಕೆ ಕುಂದು ತರುವ ಕೆಲಸ ಮಾಡಿದ್ದಾರೆ. ಈ ಮೂಲಕ ಸದನ ನಿಂದನೆ ಎಸಗಿರೋದನ್ನು ಹಕ್ಕು ಬಾಧ್ಯತೆ ಸಮಿತಿ ಗಮನಕ್ಕೆ ತಂದಿದ್ದೇವೆ. ಹರೀಶ್ ಪೂಂಜಾ ಅವರ ಬಗ್ಗೆ ವಿಚಾರಣೆ ನಡೆಸಬೇಕು ಎಂದು 5 ಶಾಸಕರು ಸೇರಿ ಹಕ್ಕುಬಾಧ್ಯತೆ ಸಮಿತಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.