ಇದು ಸೂರ್ಯಮಂಡಲದ ಕಥನ.*
1 min read
*✒️ಅವಿನ್ ಟಿವಿ ಸುದ್ದಿಜಾಲ :* ಸಾಹಿತಿಯೊಬ್ಬರ ಜನ್ಮದಿನದ ಪ್ರಯುಕ್ತ ಅವರ ಬದುಕು ಬರಹ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಸಭೆಯೊಳಗೆ ಕಟ್ಟಿಕೊಡುವ ಜವಾಬ್ದಾರಿ ಅಂದು ನನ್ನದಾಗಿತ್ತು.
ಹೌದು !!!
*ಇದು ಸೂರ್ಯಮಂಡಲದ ಕಥನ.*
*ಮೇಲು ದನಿಯ ಗಟ್ಟಿ ನಿಲುವಿನ ವ್ಯಕ್ತಿತ್ವವೊಂದರ ಚಿತ್ರಣ•••••*
ದಿನಾಂಕ 25ರ ಮೇ 2008. ಅಂದು ಅವರು ಎದೆ ನೋವು ಎಂದರು.
ತಕ್ಷಣ ಕಡೂರಿನ ವೈದ್ಯರೊಬ್ಬರು ಓಡೋಡಿ ಬಂದು, ಕನ್ನಡ ಶ್ರೀ ನಿಲಯದ ಮಹಡಿ ಮೆಟ್ಟಿಲನ್ನು ಏರಿ, ನೋವಿನಿಂದ ಬಳಲುತ್ತಿದ್ದ ಆ ಹೃದಯವನ್ನು ಮುಟ್ಟಿ, ನಾಡಿ ಬಡಿತವನ್ನು ನೋಡಿ, ತಕ್ಷಣ ಆಸ್ಪತ್ರೆಗೆ ಬರಲು ಹೇಳಿ, ಆ ಮಹಡಿ ಮೆಟ್ಟಿಲನ್ನು ಇಳಿದು ವೈದರು ಹೊರಗೆ ಹೋದರು.
ಅ ವೈದ್ಯರ ಸಲಹೆಯಂತೆ ತನ್ನ ಕನ್ನಡ ಶ್ರೀ ನಿಲಯದ ಮಹಡಿ ಮೆಟ್ಟಿಲುಗಳನ್ನಿಳಿದ ಅವರು ಅಷ್ಟೇ ಸಹಜವಾಗಿ ಈ ಲೋಕದಲ್ಲಿ ತಾನು ಏರಿದ ಆ ಎಲ್ಲ ಮೆಟ್ಟಿಲುಗಳನ್ನೆಲ್ಲ ಇಲ್ಲಿಯೇ ಬಿಟ್ಟು ಹೊರಟು ಹೋದರು.
ಸತ್ತಾಗ ಅವರು ಸತ್ತವರಂತಿರಲಿಲ್ಲ, ಬದುಕಿದವರಂತೆಯೂ ಇರಲಿಲ್ಲ. ನಗುವ ~ ಅಳುವ ಪೊರೆಗಳನ್ನು ಕಳಚಿಕೊಂಡು,ಸಾವು ಮತ್ತು ಬದುಕು ಈ ಎರಡನ್ನು ಮೀರಿದವರಂತಿದ್ದರು.
ಹೀಗೆ ಮೆಲುದನಿಯೊಂದಿಗೆ ಗಟ್ಟಿ ನಿಲುವಿನ ಮೂಲಕ,,,,
ಸಿಕ್ಕಿದವರನ್ನು ಬಿಡದೆ,
ಬರದವರಿಗೆ ಕಾಯದೆ,
ಬಂದವರನ್ನು ಕಳಿಸದೆ,
ಕೊಡದವರಲ್ಲಿ ಕೇಳದೆ,
ಕೊಟ್ಟವರನ್ನು ಮರೆಯದೆ,
ಬದುಕಿನ ಹಲವಷ್ಟು ಮಗ್ಗಲುಗಳೊಂದಿಗೆ ಮೈ ಮುರಿದು ಮನಸಿಟ್ಟು ದುಡಿದು, ಕೈಚಾಚಿ ಕೈಯಾಡಿಸಿ ತನ್ನಂತೆ ತಾನು ಬದುಕಿ, ತನ್ನ ಬದುಕಿನ ಅರ್ಧ ಹಾದಿಯಲ್ಲಿಯೇ ನಿರ್ಗಮಿಸಿದವರು ಸಾಹಿತಿ.ಸಂಘಟಕ. ಅನುವಾದಕ ಅಜ್ಜಂಪುರ ಜಿ ಸೂರಿ ಅವರು.
ಅಜ್ಜಂಪುರ ಜಿ ಸೂರಿಯವರ ಮೂಲ ಹೆಸರು ಸೂರ್ಯನಾರಾಯಣ ಎಂದು. ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದ ನಂತರ ಈ ಸೂರ್ಯನಾರಾಯಣ ತನ್ನ ಹೆಸರಿನೊಂದಿಗೆ ತಾನು ಹುಟ್ಟಿದ ಊರಿನ ಹೆಸರನ್ನು ಅಂಟಿಸಿಕೊಂಡು ಈ ನಾಡಿಗೆ ಚಿರಪರಿಚಿತರಾಗಿದ್ದು ಅಜ್ಜಂಪುರ ಜಿ ಸೂರಿ ಎಂಬ ಪದನಾಮದೊಂದಿಗೆ.
ಅಜ್ಜಂಪುರ ಜಿ ಸೂರಿಯವರು ತನ್ನ 69 ವರ್ಷಗಳ ಜೀವಿತಾವಧಿಯಲ್ಲಿ ಸರ್ಕಾರಿ ಸೇವೆಯಲ್ಲಿ ಒಬ್ಬ ಸಾಮಾನ್ಯ ನೌಕರನಾಗಿ ಸೇರಿ, ಅಧಿಕಾರಿಯಾಗಿ ನಿವೃತ್ತಿ ಹೊಂದಿ, ವೃತ್ತಿ ಜೊತೆಗೆ ಪ್ರವೃತ್ತಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮುಂತಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮುಖ್ಯಸ್ಥರಾಗಿ ಹಲವು ಪ್ರಥಮಗಳನ್ನು ಸಂಸ್ಥಾಪಿಸಿದ ಹೆಗ್ಗಳಿಕೆ ಸೂರಿ ಅವರಿಗೆ ಸಲ್ಲುತ್ತದೆ.
ಬಹಳ ಮುಖ್ಯವಾಗಿ ತನ್ನ ಮನೆಯ ಭಾಷೆ ತೆಲುಗು ಆಗಿದ್ದರೂ ಕೂಡ, ಕನ್ನಡ ಭಾಷೆಗೆ ಅವರ ಕೊಟ್ಟ ಕೊಡುಗೆ ಯಾರು ಮರೆಯುವಂತಿಲ್ಲ.
ಸಹೋದರಿ ಭಾಷೆಗಳಾದ ತೆಲುಗು ಮತ್ತು ಕನ್ನಡ ಈ ಎರಡು ಭಾಷಾಜ್ಞಾನ ಆಳವಾಗಿ ಇದ್ದುದ್ದರಿಂದ ತೆಲುಗಿನ ಅತ್ಯಂತ ಜನಪ್ರಿಯ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ, ತೆಲುಗಿನ ಸಂಸ್ಕೃತಿ, ಅಲ್ಲಿನ ವಿಶಿಷ್ಟ ಬದುಕು,ಅ ನೆಲದ ಜೀವನ ವಿಧಾನವನ್ನು ಕನ್ನಡಿಗರಿಗೆ ಸಮಗ್ರವಾಗಿ ಪರಿಚಯಿಸಿಕೊಟ್ಟರು.
60ಕ್ಕೂ ಹೆಚ್ಚು ಶ್ರೇಷ್ಠ ತೆಲುಗಿನ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
15 ಸ್ವತಂತ್ರ ಕಾದಂಬರಿ.
150ಕ್ಕೂ ಹೆಚ್ಚು ರೋಚಕ ಕಥೆಗಳು.
06ಬಾನುಲಿ ನಾಟಕ .
03 ರಂಗ ನಾಟಕಗಳು ಸೇರಿದಂತೆ ಹಲವಷ್ಟು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ.
ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಾದ ಸಂಯುಕ್ತ ಕರ್ನಾಟಕ. ಕನ್ನಡಪ್ರಭ. ಸುಧಾ.ತರಂಗ. ಮಂಗಳ. ಪ್ರಜಾಮತ. ಲೋಕವಾಣಿ. ಅಭಿಮಾನಿ. ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಸೂರಿ ಅವರ ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಸಾರಗೊಂಡು ಜನಮನ್ನಣೆಗೆ ಇವರ ಈ ಎಲ್ಲ ಬರಹಗಳು ಪಾತ್ರವಾಗಿದ್ದವು.
ಕನ್ನಡ ಸಾಹಿತ್ಯ, ರಾಜ ಮಹಾರಾಜರಿಗಾಗಿ ಆ ಮಹಾರಾಜರ ಆಸ್ಥಾನಿಕರಿಗಾಗಿ ಸೀಮಿತವಾಗಬಾರದು, ಸಾಹಿತ್ಯ ಎಂಬುದು ಜನಸಾಮಾನ್ಯರಿಂದ ಸಾಮಾನ್ಯರಿಗಾಗಿ ರಚಿತವಾಗಬಕು ಎಂಬ ಆಶಯಗಳೊಂದಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಹೋಬಳಿ ಮಟ್ಟದಲ್ಲೂ ಸ್ಥಾಪಿಸುವ ಮೂಲಕ, ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ವಿಸ್ತಾರತೆಯನ್ನು ಕೊಟ್ಟು, ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅತಿ ಹೆಚ್ಚು ದತ್ತಿ ನಿಧಿಯನ್ನು ಸಂಸ್ಥಾಪಿಸಿ, ಸಭೆ ಸಮಾರಂಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಸಂಸ್ಕೃತಿಯ ಅಭಿರುಚಿಯನ್ನು ಬೆಳೆಸಿ ರಾಜ್ಯಕ್ಕೆ ಮಾದರಿಯಾದವರು ಅಜ್ಜಂಪುರ ಜಿ. ಸೂರಿ ಅವರು.
ವೃತ್ತಿಯಲ್ಲಿ ಸರ್ಕಾರಿ ಇಲಾಖೆಯ ಕೃಷಿ ಅಧಿಕಾರಿಯಾಗಿದ್ದರು. ವೃತ್ತಿ ಬದುಕಿನ ಜೊತೆ ಜೊತೆಗೆ ಪ್ರವೃತ್ತಿಯಲ್ಲಿ ಸಾಹಿತಿಯಾಗಿ. ಸಂಘಟಕನಾಗಿ, ಅನುವಾದಕನಾಗಿ. ಕಾದಂಬರಿಕಾರನಾಗಿ. ಕಥೆಗಾರನಾಗಿ. ಕವಿಯಾಗಿ. ನಾಟಕಕಾರನಾಗಿ ಹೀಗೆ ವಿಭಿನ್ನ ಆಯಾಮಗಳಲ್ಲಿ ಸಾಹಿತ್ಯದ ಕೃಷಿಯನ್ನೂ ಬಿಡದೆ ಒಂದು ತಪಸ್ಸಿನಂತೆ ತನ್ನ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡವರು ಈ ಸೂರಿ ಅವರು.
ಅಜ್ಜಂಪುರ ಜಿ ಸೂರಿ ಅವರ ಮನೆತನ ಮೂಲ ಆಂಧ್ರಪ್ರದೇಶ. ತತ್ವಪದಕಾರರಾದ ಗೋವಿಂದಪ್ಪ ಪಾರ್ವತಮ್ಮ ಅವರ ಐದು ಜನ ಮಕ್ಕಳಲ್ಲಿ ಸೂರಿ ಅವರು ಹಿರಿಯ ಪುತ್ರ. ಬಳೆ ಮಲ್ಲಾರ ಹೊತ್ತು ಹಳ್ಳಿ ಹಳ್ಳಿಗೆ ತಿರುಗಿ ಕೈ ಬಳೆ ಮಾರುವ ಬಳೆಗಾರ ವೃತ್ತಿ ಇವರದು. ಈ ವೃತ್ತಿಯ ಜೊತೆ ಜೊತೆಗೆ ಸಾಂಸ್ಕೃತಿಕವಾಗಿ ತತ್ವ ಪದದ ಹಿನ್ನೆಲೆಯನ್ನು ಈ ಮನೆತನ ಹೊಂದಿದೆ. ಹಾಗೂ ನಾಟಿ ವೈದ್ಯರಾಗಿಯೂ ಕೂಡ ಆ ಭಾಗದಲ್ಲಿ ಗಣನೀಯವಾದ ಸೇವೆಯನ್ನು ಸೂರಿ ಅವರ ತಂದೆ ಗೋವಿಂದಪ್ಪನವರು ಕೊಡಮಾಡಿದ್ದಾರೆ. ಗೋವಿಂದಪ್ಪನವರ ಈ ಎಲ್ಲ ಸೇವೆಯನ್ನು ಪರಿಗಣಿಸಿ ಅಜ್ಜಂಪುರ ತಾಲೂಕ ಗಡಿ ಹಳ್ಳಿಯಲ್ಲಿ ಅಪ್ಪ ಗೋವಿಂದಪ್ಪನವರ ಹೆಸರಿನಲ್ಲಿ ಗುಡಿಯೊಂದು ನಿರ್ಮಾಣವಾಗಿರುವುದನ್ನು ಇಂದಿಗೂ ಕಾಣಬಹುದು.
ಲೋಕದ ವ್ಯವಹಾರಗಳಲ್ಲಿಯೇ ಲೋಕಾತೀತ ನೆಲೆಗೇರಿದv ಅಜ್ಜಂಪುರ ಜಿ ಸೂರಿ ಅವರ ಮುಖದಲ್ಲಿ ಎಂದಿಗೂ ಕೃತಕತೆ ಇರಲಿಲ್ಲ, ಕಪಟತನಕ್ಕೆ ಅವಕಾಶವಿರಲಿಲ್ಲ , ದ್ವೇಷ. ಸ್ವಾರ್ಥ ಮತ್ತು ಅಸೂಯೆಗಳೆಂಬ ಸಿನಿಕತನಕ್ಕೆ ಇವರೊಳಗೆ ಜಾಗವಿರಲಿಲ್ಲ. ಅದೊಂದು ಹಳ್ಳಿಯ ಅಪ್ಪಟ ಮುಗ್ಧ ಭಾವದ ಮೃದು ಮೊಗದ ಅಸೂಯೆಯೇ ಇಲ್ಲದ ವ್ಯಕ್ತಿತ್ವ ಅಜ್ಜಂಪುರ ಜಿ ಸೂರಿ ಅವರದಾಗಿತ್ತು ಎಂಬುದು ಈ ನಾಡಿನ ಹಲವಾರು ಸಾಹಿತಿಗಳ ಚಿಂತಕರ ಅಭಿಮತವಾಗಿದೆ.
ಸೂರಿ ಅವರ ಸಂಸ್ಮರಣಾರ್ಥವಾಗಿ, ಅವರು ಬದುಕು ಬರಹ ಕುರಿತು ಹೊರ ತಂದಿರುವ *ಸೂರ್ಯಮಂಡಲ* ದ ಕೃತಿಯೊಳಗೆ ಸೂರಿ ಅವರ ಆಪ್ತರ ದರ್ಪಣದಲ್ಲಿ ಈ ಮೇಲಿನ ಸಂಗತಿಗಳನ್ನೆಲ್ಲ ಅನೇಕ ಚಿಂತನ ಬರಹಗಾರರು, ಲೇಖಕರು, ಅಜ್ಜಂಪುರ ಜಿ ಸೂರಿ ಅವರನ್ನು ತೀರ ಹತ್ತಿರದಿಂದ ದಕ್ಕಿಸಿಕೊಂಡು ಬರವಣಿಗೆ ಮೂಲಕ ಉಲ್ಲೇಖಿಸಿದ್ದಾರೆ.
17 ಏಪ್ರಿಲ್ 1939ರಂದು ಜನಿಸಿದ ಸೂರಿ ಅವರು ಇಹ ಬದುಕಿಗೆ ವಿದಾಯ ಹೇಳಿ ನಿರ್ಗಮಿಸಿದ್ದು 25ನೇ ಏಪ್ರಿಲ್ 2008ರಂದು,
ತನ್ನ ಬದುಕಿನ ಜೀವಿತಾವಧಿಯ 69 ವರ್ಷಗಳನ್ನು ಸುಖಾ ಸುಮ್ಮನೆ ಎಂದಿಗೂ ವ್ಯರ್ಥ ಮಾಡಿಕೊಳ್ಳದೆ, ಪೂರ್ವಗ್ರಹ ಪೀಡಿತರಾಗಿ ಮತ್ಯಾರನ್ನು ಟೀಕಿಸದೆ,ಸರ್ಕಾರಿ ಉದ್ಯೋಗದೊಂದಿಗೆ, ಸಾಹಿತ್ಯ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಎಷ್ಟಲ್ಲ ಸಾಧ್ಯ ಮಾಡಿಕೊಳ್ಳಬಹುದೋ ಅಷ್ಟನ್ನು ತನ್ನದಾಗಿಸಿಕೊಂಡು, ಈ ಬದುಕಿಗೆ ವಿದಾಯ ಹೇಳಿ 17 ವರ್ಷಗಳು ಸಂದಾಯವಾಗಿವೆ. ಸೂರಿ ಅವರು ದೈಹಿಕವಾಗಿ ಬದುಕಿದ್ದರೆ ಇದೆ17ನೇ ಏಪ್ರಿಲ್ 2025 ಕ್ಕೆ 86 ವರ್ಷಗಳನ್ನು ಪೂರೈಸಿ 87ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದರು.
ಅಜ್ಜಂಪುರ ಜಿ. ಸೂರಿ ಅವರ ಆಪ್ತ ವಲಯ ಸೂರ್ಯಮಂಡಲದಲ್ಲಿ ನಿರೂಪಿಸಿದ ಕೆಲವು ನೆನಪುಗಳನ್ನು 87ನೇ ಜನ್ಮದಿನಾಚರಣೆಯ ಸಂಸ್ಮರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಲಾಯಿತು. ಅಜ್ಜಂಪುರ ಜಿ ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಈ ಕಾರ್ಯಕ್ರಮವನ್ನು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿತ್ತು.ಈ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾತುಗಳನ್ನೆಲ್ಲ ಅವಿನ್ ಟಿವಿ ಸುದ್ದಿಜಾಲದ ಓದುಗರಿಗಾಗಿ ಈ ಮೂಲಕ ಗೌರವಪೂರ್ವಕವಾಗಿ ಕೊಡಮಾಡಿದೆ.
••••••••••••✒️
ಡಿ.ಎಂ. ಮಂಜುನಾಥಸ್ವಾಮಿ
ಚಿಕ್ಕಮಗಳೂರು