ಸುಲಭವಾಗಿ ಬದುಕೋದು ಅಷ್ಟು ಕಷ್ಟಾನ!?
1 min read
ಸುಲಭವಾಗಿ ಬದುಕೋದು ಅಷ್ಟು ಕಷ್ಟಾನ!?
ಕೆಲವೊಮ್ಮೆ ಕೆಲವೊಬ್ಬರನ್ನ ನೋಡಿದಾಗ ಈ ಪ್ರಶ್ನೆ ಪದೇ ಪದೇ ಕಾಡುತ್ತದೆ. ನಾವು ಎಲ್ಲರಿಗಿಂತ ಉತ್ತಮರು ಎಂದು ತೋರಿಸಿಕೊಳ್ಳುವ ಧಾವಂತದಲ್ಲಿ, ಅವರ ಮನಶಾಂತಿ ಹಾಳು ಮಾಡಿಕ್ಕೊಳುವುದಲ್ಲದೇ, ಇನ್ಯಾರ ಮುಂದೆಯೋ ಇನ್ಯಾರನ್ನೋ ತೆಗಳಿ, ದೂರಿ, ತುಳಿಯಲು ಪ್ರಯತ್ನಿಸಿ ಅದಾಗದಾಗ ಅವರ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿ, ಅವರ ನೆಮ್ಮದಿ ಕೆಡಿಸಲು ಹೋಗಿ ಕೊನೆಗೆ ತಾವೇ ಅತೃಪ್ತ ಆತ್ಮವಾಗಿ, ಸಮಾಜವೆಂಬ ಹುಣಸೆ ಮರದಲ್ಲಿ ವ್ಯಕ್ತಿತ್ವ ಹೀನರಾಗಿ ನೇತಾಡುತ್ತಿರುತ್ತಾರೆ. ಹಾಗಾದ್ರೆ ನಿಜಕ್ಕೂ ಬದುಕು ಅಷ್ಟು ಕಷ್ಟನಾ!? ನೋ ವೇ… ಬದುಕು ಬಲು ಸುಲಭ, ಬದುಕಲು ಬರಬೇಕಷ್ಟೇ. ನೀವು ಬದುಕಲ್ಲಿ ಯಶಸ್ವಿಯಾಗಲು ಬೇಕಿರುವುದು ಕೆಲವೇ ಕೆಲವು ಸೂತ್ರಗಳು. ಮೊದಲನೇಯದಾಗಿ, ನಿಮ್ಮ ಬದುಕು, ಭಾವ ಮತ್ತು ಯಶಸ್ಸನ್ನ ಬೇರೆಯವರ ಜೊತೆ ಹೋಲಿಸಿಕೊಳ್ಳಬೇಡಿ.
ಅವರವರ ಹಣೆಬರಹದ ಜೊತೆ, ಅವರವರ ಕೆಪ್ಯಾಸಿಟಿಯೂ ಬೇರೆಯಿರುತ್ತದೆ. ಎರಡನೆಯದಾಗಿ, ಇನ್ನೊಬ್ಬರ ಯಶಸ್ಸನ್ನ ನೋಡಿ ಹಲುಬಬೇಡಿ, ಅಸೂಯೆಪಡಬೇಡಿ. ಹಣೆಯಲ್ಲಿ ಬರೆದಿದ್ದರೆ ಹರಿಯಿಂದಲೂ ಕಿತ್ತುಕೊಳ್ಳಲಾಗುವುದಿಲ್ಲ. ಅವರಿಗೆ ದಕ್ಕಬೇಕಾಗಿದ್ದು ಅವರಿಗೆ ದಕ್ಕೇ ದಕ್ಕುತ್ತದೆ ಮತ್ತು ನಿಮಗೆ ದಕ್ಕಬೇಕಾದದ್ದು ನಿಮಗೆ. ಮೂರನೆಯದಾಗಿ, ನಿಮಗಿಂತ ಕಿರಿಯರು ಗೆಲ್ಲುತ್ತಿದ್ದರೆ ಅವರ ಬೆನ್ನಹಿಂದೆ ನಿಂತು ಪ್ರೋತ್ಸಾಹಿಸಿ.
ಸಮಕಾಲೀನರು, ಜೊತೆಯವರು ಗೆಲ್ಲುತ್ತಿದ್ದರೆ ಪಕ್ಕದಲ್ಲಿ ನಿಂತು ಬೆನ್ನು ತಟ್ಟಿ. ಹಿರಿಯರು ಗೆಲ್ಲುತ್ತಿದ್ದರೆ, ಮುಂದೆ ನಿಂತು ಅವರು ನಡೆದು ಬಂದ ಹಾದಿಯನ್ನ ಹಿಂತುರುಗಿ ನೋಡಿ. ಅದನ್ನ ಬಿಟ್ಟು ಕಿರಿಯರನ್ನ ತುಳಿಯಲು, ಜೊತೆಯವರನ್ನ ಹಣಿಯಲು, ಹಿರಿಯವರನ್ನ ಹಿಯಾಳಿಸಲು ನಿಂತರೆ.. ಹೇಳಿದ್ನಲ್ಲ ಹುಣಸೆ ಮರದ ಅತೃಪ್ತ ಆತ್ಮವಾಗುತ್ತೀರಿ.
ನಾಲ್ಕನೆಯದು.., ಇವರ ಬಗ್ಗೆ ಅವರಿಗೆ, ಅವರ ಬಗ್ಗೆ ಇವರಿಗೆ ಚಾಡಿ ಹೇಳುವುದನ್ನ ಬಿಡಿ. ಅಸೂಯೆ, ಅನುಮಾನ ಮತ್ತು ಅಪಪ್ರಚಾರದ ಬುದ್ಧಿ ಒಂದು ದಿನ ನಿಮ್ಮನ್ನೇ ಬಲಿಪಡೆದುಬಿಡುತ್ತದೆ. ಈ ಡಿಜಿಟಲ್ ಯುಗದಲ್ಲಿ ಗೋಡೆ ಗೋಡೆಗೂ ಕಿವಿಯಿದೆ. ನೀವು ಹೇಳುವ ಚಾಡಿ, ಮಾಡುವ ಅಸೂಯೆ ಕೆಲವೇ ಕ್ಷಣಗಳಲ್ಲಿ ಆ ವ್ಯಕ್ತಿಯ ಕಿವಿಗೂ ಬಿದ್ದು, ನೀವು ಬೆನ್ನಿಗೆ ಚೂರಿ ಹಾಕಿದವರು ಎನಿಸಿಕೊಳ್ಳುತ್ತೀರಿ.
ಆಮೇಲೆ ನಿಮಗೆ ಆ ಹುಣಸೆ ಮರವೇ ಗತಿ. ಹೇಳೋದೇನಾದ್ರು ಇದ್ರೆ ನೇರವಾಗಿ ಅವರಿಗೇ ಹೇಳಿ, ತಪ್ಪಿದ್ದರೆ ತಿದ್ದಿಕೊಳ್ಳಲು ಹೇಳಿ. ಯಾರಿಗೆ ಗೊತ್ತು ನಾಣ್ಯದ ಇನ್ನೊಂದು ಮುಖದಲ್ಲಿ ಬೇರೆಯದೆ ಸತ್ಯವಿರಬಹುದು. ಅವರು ಸರಿಯಾಗಿ ನೀವೇ ತಪ್ಪಾಗಿರಬಹುದು. ಐದನೆಯದಾಗಿ, ಯಾಕ್ರೋ ಈ ಅಹಂಕಾರ. ಇಲ್ಲಿ ಯಾರು ಯಾರಿಗೂ ಸೆಲೆಬ್ರಿಟಿಗಳಲ್ಲ..
ಅವರವರಿಗೆ ಅವರೇ ಸೆಲೆಬ್ರಿಟಿಗಳು. ನೀವು ಹೇಗೆ ಇನ್ನೊಬ್ಬರ ಬಳಿ ನಡೆದುಕೊಳ್ತೀರೋ, ಅವರು ಕೂಡ ನಿಮ್ಮನ್ನು ಹಾಗೆಯೇ ನಡೆಸಿಕೊಳ್ಳುತ್ತಾರೆ. ಕೋಟೆ ಕಟ್ಟಿ ಮೆರೆದವರೇ, ಕೋಟೆಯ ಜೊತೆಯೇ ಮಣ್ಣಲ್ಲಿ ಮಣ್ಣಾಗಿ ಹೋಗಾಯ್ತು.. ಇನ್ನು ನೀವು ನಾವು ಯಾವ ಲೆಕ್ಕ…
ಕೊನೆಯದಾಗಿ.., ಭಗವದ್ಗೀತೆಯ ಈ ಸಾಲು ಸದಾ ನೆನಪಿರಲಿ…
ಆದದ್ದೆಲ್ಲವೂ ಒಳ್ಳೆಯದಕ್ಕೇ ಆಗಿದೆ.. ಆಗಲಿರುವುದು ಒಳ್ಳೆಯದೇ ಆಗಿರುತ್ತದೆ. ರೋಧಿಸಲು ನೀನೇನು ಕಳೆದುಕೊಂಡಿರುವೆ!? ಕಳೆದುಕೊಳ್ಳಲು ನೀನು ತಂದಿರುವುದಾದರು ಏನು? ನೀನೇನನ್ನೇ ಪಡೆದಿದ್ದರು ಅದನ್ನು ಇಲ್ಲಿಂದಲೇ
ಪಡೆದಿರುವೆ.ನೀನು ಏನನ್ನು ನೀಡಿದ್ದರೂ..
ಅದನ್ನು ಇಲ್ಲಿಗೇ ನೀಡಿರುವೆ. ನಿನ್ನೆ ಬೇರಾರದ್ದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ಯಾರದ್ದೋ ಆಗಲಿದೆ. ಪರಿವರ್ತನೆ ಜಗದ ನಿಯಮ..
ಈ ಸತ್ಯ ಎಷ್ಟು ಬೇಗ ನಮಗೆ ಅರಿವಾಗುತ್ತದೋ, ಅಷ್ಟು ಬೇಗ ಹುಣಸೆ ಮರದಿಂದ ಇಳಿದುಬಂದ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಬದುಕು ಬಲು ಸುಲಭ, ಬದುಕಲು ಬರಬೇಕಷ್ಟೆ.. ಶುಭದಿನ..
#ಅರ್ಜುನ್_ದೇವಾಲದಕೆರೆ