लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು…….

1 min read

ಪೂಲಾ ಪಾಂಡ್ಯನ್,
ಮೂಸಾ ಷರೀಫ್,
ಲಿಂಗೇಗೌಡ,
ಮತ್ತು ಇನ್ನೂ ಹಲವರು…….

ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ
” ಮಂಗಳೂರಿನಿಂದ ದೆಹಲಿವರೆಗೆ ” ಪಾದಯಾತ್ರೆ ಕೈಗೊಂಡಿದ್ದ ತಂಡದ ಮೇಲೆ ಗುಜರಾತಿನ ಸೂರತ್ ಬಳಿ ಟ್ರಕ್ ಹರಿದು ಅದರ ಮುಂಚೂಣಿಯಲ್ಲಿದ್ದ ಕರ್ನಾಟಕದ ಶ್ರೀ ಮೂಸಾ ಷರೀಫ್ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ
ಶ್ರೀ ಲಿಂಗೇಗೌಡ ಅವರು ಅಕಾಲ ಮೃತ್ಯುವಿಗೆ ತುತ್ತಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಸಾರ್ವಜನಿಕರ ಒಳಿತಿಗಾಗಿ ಹೋರಾಡುತ್ತಾ ಹುತಾತ್ಮರಾದ ಅವರಿಗೆ ಭಾವಪೂರ್ಣ ನಮನಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಾ…….

ಬದುಕೇನು ಶಾಶ್ವತವಲ್ಲ. ಇರುವಾಗ ಒಂದಷ್ಟು ಪ್ರಾಮಾಣಿಕ ಕೆಲಸಗಳನ್ನು ಮಾಡಿ ಬಿಡೋಣ……

ಈ ಸಂದರ್ಭದಲ್ಲಿ ನೆನಪಾದ ಪೂಲಾ ಪಾಂಡಿಯನ್…..

ತಮಿಳುನಾಡಿನ ಈ ವ್ಯಕ್ತಿ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಸಾವಿರಾರು ರೂಪಾಯಿ ಭಿಕ್ಷಾ ಹಣವನ್ನು ಸಾರ್ವಜನಿಕರಿಗೆ ದಾನ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಯಿತು…..

ಭಿಕ್ಷುಕನಿಗೇ ದಾನದ ಮಹತ್ವಾಕಾಂಕ್ಷೆ ಇರುವಾಗ ತನ್ನದಲ್ಲದ ಪರರ ಸೊತ್ತಿಗೆ ನಮ್ಮ ಇಡೀ ವ್ಯಕ್ತಿತ್ವವನ್ನೇ ಮಾರಿಕೊಳ್ಳುವ ನಮ್ಮಂತ ವಿದ್ಯಾವಂತರ ಮನಸ್ಥಿತಿ ನೆನೆನೆನೆದು……….

ಕರ್ನಾಟಕ ಸರ್ಕಾರದ ಕಾನೂನಿನಂತೆ ಭಿಕ್ಷೆ ಬೇಡುವುದು ಒಂದು ಅಪರಾಧ.
ಕೆಲವು ವರ್ಷಗಳ ಹಿಂದೆ ಭಿಕ್ಷಾಟನಾ ನಿರ್ಮೂಲನಾ ಆಂದೋಲನವನ್ನು ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ರಸ್ತೆಗಳಲ್ಲಿ ಭಿಕ್ಷೆ ಬೇಡುವವರನ್ನು ಕಂಡರೆ ಅವರನ್ನು ಬಂಧಿಸಿ ಮಾಗಡಿ ರಸ್ತೆಯ ಸುಮನಹಳ್ಳಿ ಭಿಕ್ಷುಕರ ಕಾಲೋನಿ ಬಳಿ ಇರುವ ಸರ್ಕಾರದ ” ಪುನರ್ವಸತಿ ಕೇಂದ್ರದಲ್ಲಿ ” ಅವರನ್ನು ಇಡಲಾಗುತ್ತಿತ್ತು. ಅವರ ಸಂಬಂಧಿಗಳು ಬಂದರೆ ಕೆಲವು ಕಾನೂನು ಕ್ರಮಗಳನ್ನು ಪೂರೈಸಿ ಕರೆದುಕೊಂಡು ಹೋಗಬಹುದಿತ್ತು. ಇಲ್ಲದಿದ್ದರೆ ಅಲ್ಲಿಯೇ ಜೀವನಪರ್ಯಂತ ಊಟ, ವಸತಿ, ಆರೋಗ್ಯ, ಉದ್ಯೋಗ, ಮನರಂಜನೆ ಎಲ್ಲಾ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ಅದು ಒಂದು ರೀತಿಯ ಬಯಲು ಬಂಧೀಖಾನೆ ಇದ್ದಂತೆ.

ಅದರ ಒಳ ಹೊರಗನ್ನು ಗಮನಿಸಿದ ಮೇಲೆ ಅಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವಂತ ವ್ಯಕ್ತಿಗಳು ವಾಸಿಸುವುದು ತುಂಬಾ ಕಷ್ಟ. ಹೊರಗೆ ಬದುಕು ತೀರಾ ಕಷ್ಟವಾದಾಗ ಇದು ಅನಿವಾರ್ಯವಾದರೆ ಆಗ ಇದು ಸಹನೀಯ ‌…

ಆ ಸಮಯದಲ್ಲಿ ಅದಕ್ಕಾಗಿಯೇ ಇದ್ದ ವಾಹನಗಳಲ್ಲಿ ದಿನಕ್ಕೆ ಸುಮಾರು 20/30 ಜನರನ್ನು ಬಲವಂತವಾಗಿ ಬಂಧಿಸಿ ಕರೆತರಲಾಗುತ್ತಿತ್ತು. ಒಬ್ಬೊಬ್ಬರ ಕಥೆಯೂ ಒಂದೊಂದು ರೋಚಕ ಸಿನಿಮಾದಂತೆ ಭಾಸವಾಗುತ್ತಿತ್ತು.

ಐದಾರು ಮಕ್ಕಳಿದ್ದರೂ ಅನಾಥರಾದವರು, ಬದುಕಿನಲ್ಲಿ ಹತ್ತಿರದ ರಕ್ತ ಸಂಬಂಧಿಗಳೇ ಇಲ್ಲದವರು, ಇವರೇ ಇಡೀ ಸಂಬಂಧಗಳನ್ನು ತಿರಸ್ಕರಿಸಿದವರು, ದೀರ್ಘಕಾಲದ ರೋಗಗಳಿಗೆ ತುತ್ತಾಗಿ ಸಾವಿನ ನಿರೀಕ್ಷೆಯಲ್ಲಿ ಮನೆ ತೊರೆದವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಪ್ಪಿಸಿಕೊಂಡು ಬಂದವರು, ತಮ್ಮ ಅಸ್ತಿತ್ವವನ್ನೇ ಮರೆತವರು, ಕೆಲವೊಮ್ಮೆ ಸೋಮಾರಿಗಳು ಹೀಗೆ ವಿಭಿನ್ನ ಹಿನ್ನೆಲೆ ಹೊಂದಿರುವವರು ಅಲ್ಲಿಗೆ ದಾಖಲಾಗುತ್ತಿದ್ದರು.

ಕೆಲವರ ಬಳಿ ತುಂಡು ಬಟ್ಟೆ ಹೊರತುಪಡಿಸಿ ಏನೂ ಇರುತ್ತಿರಲಿಲ್ಲ, ಮತ್ತೆ ಕೆಲವರ ಬಳಿ ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಬಚ್ಚಿಟ್ಟುಕೊಂಡಿದ್ದ ಎರಡು ಮೂರು ಹತ್ತು ಸಾವಿರ ಒಬ್ಬರ ಬಳಿ ಐವತ್ತು ಸಾವಿರ ಹಣ ಸಹ ಇತ್ತು. ಅವರಿಗೆ ಅದನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗುತ್ತಿತ್ತು.

ಇನ್ನೂ ಒಂದು ವಿಚಿತ್ರವಾದ ಘಟನೆಯನ್ನು ಆ ವಾಹನದ ಚಾಲಕರು ಹೇಳಿದರು. ಜಿಗಣಿ – ಆನೇಕಲ್ ರಸ್ತೆಯಲ್ಲಿ ಒಬ್ಬರು ಈ ಬಗ್ಗೆ ಮಾಹಿತಿ ತಿಳಿದು ದೂರವಾಣಿ ಕರೆ ಮಾಡಿ ಈ‌ ಗಾಡಿಗಾಗಿಯೇ ಕಾದಿದ್ದು ವೃದ್ದ ಅನಾರೋಗ್ಯ ಪೀಡಿತ ದಂಪತಿಗಳನ್ನು ಭಿಕ್ಷುಕರು ಎಂದು ಹೇಳಿ ವಾಹನ ಹತ್ತಿಸಿ ಚಾಲಕರಿಗೆ 500 ರೂಪಾಯಿ ಹಣವನ್ನು ಭಕ್ಷೀಸು ಎಂದು ಹೇಳಿ ಕಳಿಸಿದರಂತೆ.

ಅಲ್ಲಿಂದ ಪುನರ್ವಸತಿ ಕೇಂದ್ರಕ್ಕೆ ಬರುವಾಗ ಈ ಚಾಲಕ ಅವರನ್ನು ಮಾತನಾಡಿಸಿ‌ ಅವರು ಯಾರು ಎಂದು ತಿಳಿದು ಆಶ್ಚರ್ಯ ಚಕಿತನಾದನು. ಏಕೆಂದರೆ ಅವರಿಬ್ಬರನ್ನು ಭಿಕ್ಷಕರೆಂದು ವಾಹನ ಹತ್ತಿಸಿದ ವ್ಯಕ್ತಿ ಇವರ ಸ್ವಂತ ಮಗ…..

ಯಾವುದೋ ಸ್ವಯಂ ಸೇವಾ ಸಂಸ್ಥೆ ಉಚಿತ ವೃದ್ದಾಶ್ರಮ ನಡೆಸುತ್ತಿದ್ದು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಸುಳ್ಳು ಹೇಳಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸ್ವಂತ ತಂದೆತಾಯಿಗಳನ್ನು ಕಳುಹಿಸಿದ.

ಇದು ಕಥೆಯಲ್ಲ. ನಾನೇ ಸಾಕ್ಷಿಯಾದ ವಾಸ್ತವ ಘಟನೆ. ಸುಮಾರು 13 ವರ್ಷಗಳ ಹಿಂದನದು…..

ಆಗ ನಾನು ಸಾಕ್ಷ್ಯಚಿತ್ರ ನಿರ್ದೇಶನ ಮಾಡುವಾಗ, ಈ ಪುನರ್ವಸತಿ ಕೇಂದ್ರದ ಬಗ್ಗೆ ಮಾಹಿತಿ ಸಂಗ್ರಹಿಸುವಾಗ ಅಲ್ಲಿ ಒಡನಾಡಿದ್ದೆ…..

ಆಗಿನ್ನು ವ್ಯಾವಹಾರಿಕ ಜಗತ್ತಿನಲ್ಲಿದ್ದೆ. ಮುಂದೆ ಅದನ್ನು ತ್ಯಜಿಸಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಮನಸ್ಸುಗಳ ಅಂತರಂಗದ ಚಳವಳಿ ಮಾಡುವ ಪ್ರಯತ್ನಗಳ ಹಿಂದೆ ‌ಈ ರೀತಿಯ ಕೆಲವು ಘಟನೆಗಳು ಪರೋಕ್ಷವಾಗಿ ಪರಿಣಾಮ ಬೀರಿವೆ…..

ದೊಡ್ಡ ದೊಡ್ಡ ‌ವ್ಯಕ್ತಿಗಳು ( ಇದು ಭ್ರಷ್ಟರಿಗೆ – ದುರಾಸೆಯವರಿಗೆ – ವಂಚಕರಿಗೆ ಮಾತ್ರ ಅನ್ವಯ. ಶ್ರಮಜೀವಿಗಳು – ಪ್ರಾಮಾಣಿಕ ವ್ಯವಹಾರ ಮಾಡುವವರಿಗೆ ಅನ್ವಯಿಸುವುದಿಲ್ಲ.) ನೂರಾರು ಕೋಟಿ ಒಡೆಯರಾದ ನಂತರವೂ, ಅರವತ್ತು ವಯಸ್ಸಾದ ಬಳಿಕವೂ ಇನ್ನೂ ಬೇಕು ಇನ್ನೂ ಬೇಕು ಎಂದು ಹಲುಬುವವರಿಗೆ ಈ ಪೂಲಾ ಪಾಂಡ್ಯನ್ ಒಂದಷ್ಟು ಪ್ರೇರಣೆ ಆಗಬಾರದೇ…..

ಇಲ್ಲಿ ಎಲ್ಲವನ್ನೂ ತ್ಯಜಿಸಿ ದಾಸರಾಗಬೇಕೆಂದು ಹೇಳುತ್ತಿಲ್ಲ ಅಥವಾ ಹಣ ಸಂಪಾದನೆ ಮಾಡಬಾರದು ಎಂದೂ‌ ಹೇಳುತ್ತಿಲ್ಲ. ಕೆಟ್ಟ ಮತ್ತು ಭ್ರಷ್ಟ ಹಣದ ಸಂಪಾದನೆಯ ಅವಶ್ಯಕತೆ ಇಲ್ಲ ಮತ್ತು ‌ಈಗಾಗಲೇ ಒಂದು ಉತ್ತಮ ಹಣಕಾಸಿನ ವ್ಯವಸ್ಥೆ ನಮ್ಮದಾಗಿದ್ದರೆ ಅದರ ಒಂದು ಸಣ್ಣ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸೋಣ ಎಂಬ ಮನವಿ ಮಾತ್ರ…….

ಒಂದು ವೇಳೆ ನಮಗೆ ನಮ್ಮ ಹಣವನ್ನು ಬೇರೆಯವರಿಗೆ ದಾನ ಮಾಡುವ ಮನಸ್ಸಿಲ್ಲದಿದ್ದರು ಚಿಂತೆ ಇಲ್ಲ ಕನಿಷ್ಠ ಬೇರೆಯವರ ಹಣ ಆಸ್ತಿಗೆ ಆಸೆ ಪಡುವ ಮನಸ್ಸು ಬಾರದಿರಲಿ ಎಂದು ಆಶಿಸುತ್ತಾ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

About Author

Leave a Reply

Your email address will not be published. Required fields are marked *