*ಶತಮಾನದಂಚಿನತ್ತ ಹಾಯ್ದು ಹೋದ ಗೌ.ರು. ಓಂಕಾರಯ್ಯನವರು.
1 min read
*ಶತಮಾನದಂಚಿನತ್ತ ಹಾಯ್ದು ಹೋದ ಗೌ.ರು. ಓಂಕಾರಯ್ಯನವರು 15~12~1929 _20~09~2024 ಸವೆಸಿದ ಹಾದಿ – ಬದುಕಿ ಹೋದ ರೀತಿ ನೀತಿ ಇತರರಿಗೆ ಮಾದರಿ*
ಜಿ. ಆರ್. ಓಂಕಾರಯ್ಯನವರು ಸಾಹಿತ್ಯ ಮತ್ತು ಶೈಕ್ಷಣಿಕ ವಲಯಕ್ಕೆ ಚಿರಪರಿಚಿತವಾಗಿದ್ದು ಗೌ ರು ಓಂಕಾರಯ್ಯ ಎಂಬ ಹೆಸರಿನ ಮೂಲಕ. ಗೌ ಎಂದರೆ ಅವರ ಹುಟ್ಟೂರು ಗೌರಪುರ ಎಂದು ಮಾತ್ರವಲ್ಲ, ಗೌರವಾನ್ವಿತವಾಗಿ ಬದುಕಿ ಬಾಳಿದವರು ಎಂದು ಅರ್ಥೈಸಿಕೊಳ್ಳಬಹುದು. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಗೌರಾಪುರ ಎಂಬ ಗ್ರಾಮದ ರುದ್ರಯ್ಯ ಪಾರ್ವತಮ್ಮನವರ ಸುಪುತ್ರರಾದ ಓಂಕಾರೈನೂರು ಹುಟ್ಟಿದ ಕಾಲಘಟ್ಟ ಸ್ವತಂತ್ರ ಪೂರ್ವದ್ದು. ಅಂದರೆ 15 ~12 ~1929ನೇ ಇಸವಿ. ಸ್ವತಂತ್ರ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಈ ಎರಡು ಕಾಲಘಟ್ಟವನ್ನು ನೇರವಾಗಿ ನೋಡಿ ಅದರ ಉದ್ದಕ್ಕೂ ಸಾಗಿ ಬಂದವರು. ಸಾಗಿ ಬಂದವರು ಮಾತ್ರವಲ್ಲ, ಚಿಕ್ಕಮಗಳೂರು ಜಿಲ್ಲೆಯ ಕೆಲವೇ ಕೆಲವು ಸ್ವತಂತ್ರ ಹೋರಾಟಗಾರರಲ್ಲಿ ಇವರು ಕೂಡ ಒಬ್ಬರು ಎನ್ನುವುದು ಹೆಮ್ಮೆಯ ಸಂಗತಿ. ರೈತಾಪಿ ಕುಟುಂಬದ ಕಡು ಬಡತನದ ಮಧ್ಯೆ ಹುಟ್ಟನ್ನು ಕಂಡ ಓಂಕಾರಯ್ಯನವರು, ತಮ್ಮ ಬದುಕನ್ನು ಕೇವಲ ತಮಗಾಗಿ ಮೀಸಲಿಡದೆ , ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ, ತದನಂತರ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿ, ವೃತ್ತಿ ಬದುಕಿನೊಟ್ಟೊಟ್ಟಿಗೆ ಪ್ರವೃತ್ತಿಯಾಗಿ ಸಾಹಿತ್ಯ,ಕವಿತೆ, ಬರಹಗಳ ಮೂಲಕ ನಾಡಿನ ಜನ ಸಮುದಾಯದ ಸಂವೇದನೆಯನ್ನು ಅಕ್ಷರರೂಪಕ್ಕೆ ಇಳಿಸಿ ಸಾಹಿತ್ಯ ವಲಯದಲ್ಲಿ ಶಾಶ್ವತವವಾಗಿ ತಮ್ಮ ಇರುವನ್ನು ಕಂಡುಕೊಂಡವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ತನನಂತರ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿ, ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ವೃತ್ತಿಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು,ಸುಮಾರು 35 ವರ್ಷಗಳ ಸುದೀರ್ಘವಾದ ಸರ್ಕಾರಿ ಸೇವೆಸಲ್ಲಿಸಿ ನಿವೃತ್ತರಾದವರು. ನಿವೃತ್ತಿಯ ನಂತರವೂ ಕೂಡ ಗೌರಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡು ಜನಮನ್ನಣೆಗೆ ಪಾತ್ರವಾಗಿದ್ದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಸಾಹಿತ್ಯ, ಕವನ ಸಂಕಲನ, ಕಾದಂಬರಿ, ಕಥಾ ಸಂಕಲನ, ಚಿಂತನಧಾರೆ, ಇತಿಹಾಸ, ರೇಡಿಯೋ ನಾಟಕ ಹೀಗೆ ಎಲ್ಲ ಮಗ್ಗಲುಗಳಲ್ಲೂ 12ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದವರು. ಅಲ್ಲದೆ ಮುಚ್ಚಿ ಹೋಗಿದ್ದ ಅನೇಕ ಸತ್ಯಗಳನ್ನು ಸಾಹಿತ್ಯದ ಮೂಲಕ ಜನ ಸಮುದಾಯಕ್ಕೆ ತಿಳಿಸಿದವರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರವಾಗಿದ್ದು ಈಗ ಒಂದು ನೆನಪು ಅಷ್ಟೇ. ನಾಡಿನ ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಪರಿಗಣಿಸಿ ಪ್ರಸಸ್ತಿ, ಸನ್ಮಾನ, ಗುರುವಂದನೆಯನ್ನು ಸಲ್ಲಿಸಿದ್ದಾವೆ. ಸವೆದ ಹಾದಿಯಲ್ಲಿ ಎಲ್ಲರಂತೆ ಸಾಗಿ ಹೋಗದೆ , ಹೊಸ ದಾರಿಯನ್ನು ಸವೆಸುತ್ತಾ, ಹೊಸ ಹೊಸ ಸಂಬಂಧಗಳನ್ನು ವಿಸ್ತರಿಸಿಕೊಂಡವರು ಓಂಕಾರಯ್ಯನವರು. ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿಯೂ ಕೂಡ ಗುರುತರವಾದ ಸೇವೆ ಸಲ್ಲಿಸಿದವರು. ಇನ್ನು ನಾಲ್ಕು ವರ್ಷ ಹೋಗಿ ಕಳೆದಿದ್ದರೆ ಶತಮಾನವನ್ನು ಪೂರೈಸುತ್ತಿದ್ದರು. 96ರ ಈ ಇಳಿ ವಯಸ್ಸಿನಲ್ಲಿಯೂ ಕೂಡ, ಓದು ಬರಹ ಬಿಡದೆ, ಅಷ್ಟು ಮಾತ್ರವಲ್ಲ ಯುವ ಸಮುದಾಯ ನಾಚುವಂತೆ ಸಾಯುವ ಕೊನೆಯ ಎರಡು ದಿನದವರೆಗೂ ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಉದಾತ್ತವಾಗಿ ಚಿಂತಿಸಿ, ಸರಳವಾಗಿ ಬದುಕುತ್ತಾ, ಆರೋಗ್ಯಪೂರ್ಣವಾದ ಜೀವನದೊಂದಿಗೆ ಇಹ ಬದುಕಿನ ತನ್ನ ಬರವಣಿಗೆಗೆ ಪೂರ್ಣವಿರಾಮ ಇಟ್ಟು , ಇಂದು ಬಯಲಲ್ಲಿ ಬಯಲಾಗಿ ಎದ್ದು ಹೋಗಿರುವ ಓಂಕಾರಯ್ಯ ಸಾವು, ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಾಹಿತ್ಯ ಮತ್ತು ಶೈಕ್ಷಣಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಪತ್ನಿ ವಿಶಾಲಕ್ಷಮ್ಮ, ಮೂರು ಪುತ್ರಿಯರು , ಮೊಮ್ಮಕ್ಕಳು ಮರಿ ಮಕ್ಕಳು ಸೇರಿದಂತೆ, ತಾವು ಸಂಪಾದನೆ ಮಾಡಿಕೊಂಡಿದ್ದ ಸಾರ್ವಜನಿಕ ವಲಯದ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ. ಹೋಗಿ ಬನ್ನಿ ಗುರುಗಳೇ , ನಿಮಗಿದೋ ಚಿಕ್ಕಮಗಳೂರು ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಮಹಿಳಾ ಕದಳಿ ವೇದಿಕೆ ಪರವಾಗಿ ಅಂತಿಮ ನಮನಗಳು, ಗೌರವ ಪೂರ್ವಕ ಪ್ರಣಾಮಗಳು.🙏🌹🙏
•••••••••••••••••••••••••••••••••
ಸಂತಾಪಗಳೊಂದಿಗೆ….
ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಮಹಿಳಾ ಕದಳಿ ವೇದಿಕೆ. ಜಿಲ್ಲಾ ಘಟಕ. ಚಿಕ್ಕಮಗಳೂರು.
••••••••••••••••••••••••••••✒️ *D.M.Manjunathaswamy*