“ಜಿಲ್ಲೆಯಲ್ಲಿ ಕಳೆದ ವರ್ಷಗಳಿಗಿಂತ ಈ ವರ್ಷ ಶೇಕಡಾ 24ರಷ್ಟು ಹೆಚ್ಚು ಮಳೆ ; ಅಂದಾಜು ರೂ.100 ಕೋಟಿಗೂ ಅಧಿಕ ಹಾನಿ : ಮಾಹಿತಿ ನೀಡಿದ ಜಿಲ್ಲಾಧಿಕಾರಿ.”
1 min read
ಚಿಕ್ಕಮಗಳೂರು : ಕಳೆದ ಎರಡು ವಾರಗಳಿಂದ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸುಮಾರು 100 ಕೋಟಿ ರೂ ಮೀರಿದ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ದಿನಾಂಕ 22/07/2024ರ ಸೋಮವಾರ ತಮ್ಮ ಕಚೇರಿಯಲ್ಲಿ ವಾಹಿನಿಗೆ ಮಾಹಿತಿ ನೀಡಿದ ಅವರು ಜೂನ್ ತಿಂಗಳಿಂದ ಇಂದಿನವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 24ರಷ್ಟು ಹೆಚ್ಚು ಮಳೆಯಾಗಿದೆ ಎಂದರು.
ಎಲ್ಲಾ ತಾಲ್ಲೂಕುಗಳಲ್ಲಿ ಸರಾಸರಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು,ಹೆಚ್ಚಿನ ಪ್ರಮಾಣದಲ್ಲಿ ಮನೆಗೆ ಹಾನಿಯಾಗಿದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು,09 ತಾಲ್ಲೂಕುಗಳಲ್ಲಿ ಸರಾಸರಿ ಶೇ.100ಕ್ಕೂ ಅಧಿಕ ಮಳೆಯಾಗಿರುವುದರಿಂದ ಭದ್ರಾ ಜಲಾಶಯದ ನೀರಿನ ಮಟ್ಟ 144 ಅಡಿ ತುಂಬಿದ್ದು ಇದೇ ರೀತಿ ಐದು-ಆರು ದಿನಗಳಲ್ಲಿ ಮಳೆ ಬಂದರೆ ಭದ್ರಾ ಜಲಾಶಯ ಭರ್ತಿಯಾಗಲಿದೆ ಎಂದು ಹೇಳಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಒಂದು ವಾರದೊಳಗೆ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು,ಮಣ್ಣು ಸವಕಳಿಯಿಂದ ವಿವಿಧೆಡೆ ಭೂಕುಸಿತವಾಗಿದೆ.ತಕ್ಷಣ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಮೇ ಮಾಹೆಯಲ್ಲಿ ಮರ ಬಿದ್ದು ಹಾಗೂ ಸಿಡಿಲಿಗೆ ನಾಲ್ಕು ಜಾನುವಾರುಗಳು ಸಾವನ್ನಪ್ಪಿರುವ ಪ್ರಕರಣ ಹೊರತುಪಡಿಸಿ ಇದೀಗ ಯಾವುದೇ ಜಾನುವಾರುಗಳ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದರು.ಮಳೆ ಹಾಗೂ ಗಾಳಿಯಿಂದ ಒಟ್ಟು 172 ಮನೆಗಳಿಗೆ ಹಾನಿಯಾಗಿದ್ದು,ಅದರಲ್ಲಿ ಪೂರ್ಣ ಪ್ರಮಾಣದ 40 ಮನೆಗಳು ಹಾನಿಯಾಗಿದೆ.ರಾಜ್ಯ ವಿಪತ್ತು ನಿಧಿಯ ಮಾರ್ಗಸೂಚಿಯಂತೆ ತಕ್ಷಣ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ರಸ್ತೆ-ಸೇತುವೆಗಳು ಹಾನಿಗೊಳಗಾಗಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 48 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಮತ್ತು ಸೇತುವೆ ಸುಮಾರು 56 ಕೋಟಿ ಹಾನಿ ಸಂಭವಿಸಿರುವುದಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಮಳೆಯಿಂದ ಹಾನಿಯಾಗಿರುವ ಬಗ್ಗೆ ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಒಂದು ವಾರದೊಳಗೆ ಅಂದಾಜು ಪಟ್ಟಿ ಸಿದ್ದಪಡಿಸಿಕೊಳ್ಳಲು ಕಂದಾಯ ಸಚಿವರು ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ.
ಮಳೆ ಹಾನಿಯಿಂದ ಸಂಭವಿಸಿದ ಹಾನಿಗಳಿಗೆ 15 ದಿನದ ಒಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ನಿಗದಿಪಡಿಸಿದ್ದು ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಿದೆ ಎಂದು ಹೇಳಿದರು.
ಮೆಸ್ಕಾಂ ಇಲಾಖೆ ವ್ಯಾಪ್ತಿಗೆ ಬರುವ 1844 ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದ್ದು,ಈ ಪೈಕಿ 1490 ಕಂಬಗಳನ್ನು ಬದಲಿಸಲಾಗಿದೆ.ದೂರದ ಪ್ರದೇಶಗಳಿಗೆ ಕಂಬಗಳನ್ನು ಸಾಗಿಸುವುದು ತೊಡಕಾಗಿರುವುದರಿಂದ ವಿಳಂಭವಾಗುತ್ತಿದ್ದು,ಇನ್ನೂ ಮೂರು-ನಾಲ್ಕು ದಿನಗಳಲ್ಲಿ ಎಲ್ಲಾ ಕಂಬಗಳನ್ನು ಬದಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದೆಂದು ತಿಳಿಸಿದರು.
ವಾಡಿಕೆಗಿಂತ ಅಧಿಕ ಮಳೆಯಿಂದ ಸುಮಾರು 90 ಲಕ್ಷ ಮೌಲ್ಯದ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು,ಕಾಫಿ, ಅಡಿಕೆ,ಮೆಣಸು ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯ ವಿಪತ್ತು ನಿಧಿಯಿಂದ ತಮ್ಮ ಬಳಿ 7 ಕೋಟಿ ರೂ ಹಾಗೂ ತಾಲೂಕುಗಳಲ್ಲಿ 3 ಕೋಟಿ ರೂ ಹಣ ಲಭ್ಯವಿದ್ದು ತುರ್ತು ಪರಿಹಾರ ಕಾರ್ಯಗಳಿಗೆ ಯಾವುದೇ ರೀತಿ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಮಲೆನಾಡು ಭಾಗ ಹಾಗೂ ಗಿರಿ ಪ್ರದೇಶಗಳಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು,ತಕ್ಷಣ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ.ರಾಷ್ಟ್ರೀಯ ಹೆದ್ದಾರಿ ಹಾಗೂ ಚಾರ್ಮಾಡಿ ಘಾಟ್ ರಸ್ತೆ,ಶಿರಾಡಿ ರಸ್ತೆಗಳಲ್ಲಿ ಅಧಿಕ ಭಾರದ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.ಸಂಜೆ ಮತ್ತು ರಾತ್ರಿ ವೇಳೆ ಮಳೆ ಹಾಗೂ ಮಂಜು ಕವಿಯುವುದರಿಂದ ಸಂಜೆ 6 ನಂತರ ಈ ಭಾಗದಲ್ಲಿ ವಾಹನಗಳು ಸಂಚರಿಸದಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗಿದು,ಆ ಭಾಗದಲ್ಲಿ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗದ ಬಳಕೆಗೆ ಆದೇಶಿಸಿದ್ದು,ಮಳೆ ಹಾಗೂ ಭೂಕುಸಿತ ಉಂಟಾಗುವುದರಿಂದ ಪ್ರವಾಸಿ ಸ್ಥಳಗಳಿಗೆ ಬಾರದಂತೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿ ಡಾ. ವಿಕ್ರಮ ಅಮಟೆ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್. ಕೀರ್ತನ ಉಪಸ್ಥಿತರಿದ್ದರು
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.