ಯೋಗದ ಬಗ್ಗೆ. ಎಲ್ಲದನ್ನೂ ಸುಡುವುದು ಬೆಂಕಿ. ಬೆಂಕಿಯನ್ನೇ ಸುಡುವುದೆಂದರೆ? ಆಶ್ಚರ್ಯವೇ
1 min read
ಯೋಗದ ಬಗ್ಗೆ.
ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
-ಅಲ್ಲಮಪ್ರಭುದೇವರು.
ಎಲ್ಲದನ್ನೂ ಸುಡುವುದು ಬೆಂಕಿ. ಬೆಂಕಿಯನ್ನೇ ಸುಡುವುದೆಂದರೆ? ಆಶ್ಚರ್ಯವೇ ಸರಿ! ಇದರರ್ಥ, ಅಹಂಕಾರದ ರೂಪದಲ್ಲಿರುವ ಅಗ್ನಿಯನ್ನು ಸುಡಬೇಕು. ನೀರಿನಿಂದ ಎಲ್ಲವನ್ನೂ ತೊಳೆಯುತ್ತೇವೆ. ಆದರೆ ನೀರನ್ನೇ ತೊಳೆಯುವುದೆಂದರೆ, ನೀರಿನಂತೆ ಕೆಳಗೆ ಹರಿಯುವ ಮನವನ್ನು ತೊಳೆಯುವುದು ಎಂದರ್ಥ. ಅಂದರೆ ಮನವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇಲ್ಲಿ ವಾಯುವೆಂದರೆ ಪ್ರಾಣವಾಯು(ಉಸಿರಾಟ), ಅದನ್ನು ಇಷ್ಟಲಿಂಗ ತ್ರಾಟಕ ಯೋಗದ ಮೂಲಕ ಹಿಡಿತದಲ್ಲಿಟ್ಟುಕೊಳ್ಳಬೇಕು. ಉಸಿರಾಟದ ಹಿಡಿತದಿಂದ, ಮನದ ಹಿಡಿತ ಸಾಧ್ಯವಾಗುತ್ತದೆ. ಆಗ ಆಕಾಶದಂತೆ ಅಮೂರ್ತವಾದ ಆತ್ಮತತ್ತ್ವದ ಅರಿವು ಸಾಧ್ಯವಾಗುತ್ತದೆ. ನಿರಹಂಕಾರ, ಶುದ್ಧಮನ, ಚಂಚಲರಹಿತ ಉಸಿರಾಟ ಇವುಗಳಿಂದ ಆತ್ಮತತ್ತ್ವದ ಅರಿವಾಗುತ್ತದೆ. ಆಗ ಪರಮಾತ್ಮನೊಡನೆ ಐಕ್ಯವಾಗುವ ಯೋಗದ ಗುಟ್ಟು ತಿಳಿಯುತ್ತದೆ. ಹೀಗೆ ಯೋಗವನ್ನು ಸಾಧಿಸಬೇಕು. ಅದರ ಬದಲಿಗೆ, ಮದ ಮತ್ಸರಗಳನ್ನು ಹೊಂದಿ, ಅಲ್ಲಿ ಇಲ್ಲಿ ಅಂಡಲೆದು ಆಯಾಸಪಡಬೇಡ. ಕದಳಿ ಎಂದರೆ ಶ್ರೀಶೈಲದ ಭೌತಿಕ ಸ್ಥಳವಷ್ಟೇ ಅಲ್ಲ! ಅದೊಂದು ಮಹಾಯೋಗದ ಸಂಕೇತ. ಕದಳಿ ಕೆಚ್ಚಿನ ಲವಲೇಶವೂ ಇಲ್ಲದೆ ಇರುವ ಗಿಡ. ಅದರಂತೆ ಅಹಂಕಾರದ ಲವಲೇಶವೂ ಇಲ್ಲವಾದರೆ, ಆ ಕದಳಿ ನಮ್ಮಲ್ಲೇ ಸಾಧ್ಯವಲ್ಲವೇ? ಅಂತೆಯೇ ಈ ವಚನದಲ್ಲಿ ಅಲ್ಲಮಪ್ರಭುದೇವರು, ಅಹಂಕಾರ, ಅಧೋಮುಖವಾಗಿ ಹರಿವ ಮನ, ಮನದ ಚಂಚಲತೆಗೆ ಕಾರಣವಾಗುವ ಅನಿಯಂತ್ರಿತ ಉಸಿರಾಟ ಇವುಗಳನ್ನು ಸರಿಪಡಿಸಿದರೆ, ಕದಳಿಯ ಬನವನ್ನೂ, ಗುಹೇಶ್ವರನ್ನೂ ನಮ್ಮಲ್ಲೇ ಕಾಣಬಹುದು ಎಂದು ತಿಳಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಮಾತು, ಗುಹೇಶ್ವರನೆಂಬುದು ಕಲ್ಪಿತವಲ್ಲ, ಸಾಧಕನಿಗೆ ಗೋಚರವಾಗುವ ಪರಮ ಸತ್ಯ! ಅದಕ್ಕೇ ಅಲ್ಲಿ ಇಲ್ಲಿ ಅಲೆಯದೇ ಒಂದೆಡೆ ನಿಂತು ಸಾಧಿಸಬೇಕು.
-ಡಾ॥ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು
ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು
ಬಸವಕೇಂದ್ರ, ಶಿವಮೊಗ್ಗ.