‘”ಶೂಟ್- ಔಟ್”..!!!!!??????
1 min read
ಶೂಟೌಟ್ ನಲ್ಲಿ ಚಿಕ್ಕಮಗಳೂರ ಮಲೆನಾಡ ಹುಡುಗನೊಬ್ಬ ರಸ್ತೆ ಬದಿಯಲ್ಲಿ ಹೆಣವಾಗಿದ್ದ ಸುದ್ದಿ ಬೆಳಗ್ಗೆ ಕೇಳಿದಾಗಿನಿಂದ ದಿನವಿಡೀ ಡಿಸ್ಟರ್ಬ್ ಆಗಿ ಬಿಟ್ಟೆ.
ಶಿಕಾರಿಗೆಂದು ಹೋಗಿದ್ದೋ,
ಜೊತೆಯವರೇ ಹೊಡೆದು ಹಾಕಿದ್ದೋ,
ಕುಡಿದ ಮತ್ತಿನಲ್ಲಿ ಮಿಸ್ ಆಗಿದ್ದೋ,
ಪಕ್ಕದಲ್ಲೇ ಬಿದ್ದಿದ್ದ ಬಂದೂಕು ಮಾತ್ರ ನೋಡಿಯೂ ನೋಡದಂತೆ ಮೌನವಾಗಿತ್ತು.
ಮೂವತ್ತರ ಆಸು ಪಾಸಿನ ಹುಡುಗನೊಬ್ಬ ಹೀಗೆ ರಸ್ತೆ ಬದಿಯಲ್ಲಿ ಪ್ರಾಣ ಬಿಟ್ಟದ್ದು ಮಲೆನಾಡ ಮಧ್ಯಮ ವರ್ಗದ ಮಕ್ಕಳು ಅದರಲ್ಲೂ ರೈತಾಪೀ ವರ್ಗದ ಒಕ್ಕಲಿಗ ಮಕ್ಕಳ ದಯನೀಯ ಪರಿಸ್ಥಿತಿಯನ್ನು ಎತ್ತಿ ಹಿಡಿಯುವಂತಿತ್ತು.
ಚಿಕ್ಕಮಗಳೂರಿಗೆ ಸೀಮಿತವಾಗಿ ಕಳೆದತ್ತು ವರ್ಷಗಳ ನನ್ನ ಅನುಭವದಲ್ಲಿ ಆತ್ಮಹತ್ಯೆ,ಶಿಕಾರಿಗೆ ಹೋದವರು ಸತ್ತು ಹೋಗೋದು,ಅತಿಯಾದ ಕುಡಿತದಿಂದ ಸಾಯುವವರ ಸಂಖ್ಯೆ ಒಕ್ಕಲಿಗರಲ್ಲೇ ಹೆಚ್ಚು.
ಯಾಕೀಗೆ?
ಸಂಸ್ಕೃತಿಯ ಭಾಗವೆಂದುಕೊಂಡಿರುವ ಅತಿಯಾದ ಕುಡಿತದ ಚಟ ಕಮ್ ಫ್ಯಾಷನ್ನೇ ಇದಕ್ಕೆಲ್ಲ ಕಾರಣವೇ?
ಮಲೆನಾಡ ರೈತಾಪಿ ವರ್ಗ ನಡೆಯುತ್ತಿರುವ ತಪ್ಪು ಹೆಜ್ಜೆಯನ್ನ ಯಾರೂ ಎಚ್ಚರಿಸುತ್ತಿಲ್ಲವೇಕೆ?
ಶಿಕಾರಿಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸಮುದಾಯದ ಹಿರಿಯರು,ರಾಜಕಾರಣಿಗಳು,ಸಂಘಸಂಸ್ಥೆಗಳು ತಲೆ ಕೆಡಿಸಿಕೊಳ್ಳುತ್ತಿಲ್ಲವೇಕೆ?
ಕಾಫೀ ಕಲ್ಚರ್ ಹೆಸರಲ್ಲಿ ಹಣವಿರುವವರ ಕೆಲ ದುಶ್ಚಟಗಳನ್ನು,ಸಿರಿವಂತ ಜೀವನ ಶೈಲಿಯನ್ನು ಅನುಕರಣೆ ಮಾಡಲು ಹೋಗಿ ಕೆಳ ಮಧ್ಯಮ ವರ್ಗದ ಸಾವಿರ ಸಾವಿರ ಕುಟುಂಬಗಳು ಎದೆಯೆತ್ತರಕ್ಕೆ ಬೆಳೆದ ಮಕ್ಕಳನ್ನು ಕಳೆದು ಕೊಳ್ಳುತ್ತಲೇ ಇವೆ.
ಅದೂ ಒಬ್ಬರೇ ಮಕ್ಕಳಿದ್ದ ಮನೆಯಾದರೇ ಮುಗಿದೇ ಹೋಯಿತು.
ವಯಸ್ಸಾದ ತಂದೆ ತಾಯಿಯರು ಮಕ್ಕಳು ನಮ್ಮನ್ನ ಕೊನೆಗಾಲದಲ್ಲಿ ಸಾಕುತ್ತಾರೆ ಎಂದು ಜೀವಮಾನವಿಡೀ ಇದ್ದ ಒಂದಷ್ಟು ಕಾಫೀ ತೋಟದಲ್ಲಿ ಬೆವರು ಹರಿಸಿ ಬದುಕು ಕಟ್ಟಿ ವಯಸ್ಸಲ್ಲದ ವಯಸ್ಸಲ್ಲಿ ಕಣ್ಮುಂದೆ ಮಕ್ಕಳು ಸತ್ತರೆ ಅದಕ್ಕಿಂತ ನೋವು ಮತ್ತೊಂದು ಇಲ್ಲ.
ಮಧ್ಯಮ ವರ್ಗದವರು ಈ ಕಡೆ BPL ಯೋಜನೆಯಡಿಯೂ ಇಲ್ಲ ಅತ್ತ ಕೂಲಿ ಕೆಲಸ ಮಾಡುವಂತೆಯೂ ಇಲ್ಲ.
ಸಮಾಜದ,ಸರಕಾರದ ಯಾವುದೇ ಸಹಾಯವೂ ಇಲ್ಲ.
ಯಾವುದೋ ಕ್ಷಣಿಕ ಆಸೆಗಳಿಗೆ,ಭಾವನೆಗಳ ಕ್ಷಣಿಕ ಆಸೆಗಳಿಗೆ ಹೀಗೆ ಬದುಕು ಕಳೆದು ಕೊಳ್ಳುತ್ತಿದ್ದಾರೆ.
ನಮ್ಮ ಮೂಡಿಗೆರೆಯಲ್ಲೂ ಇದೇ ಕಥೆ.
ಸ್ಥಳೀಯರ ಒಬ್ಬರದೂ ಮಧ್ಯದಂಗಡಿ ಇಲ್ಲ.
ಅದಕ್ಕೆಂದೇ ವಲಸೆ ಬಂದ ಅತೀ ಬುದ್ದಿಯ ವ್ಯವಹಾರಸ್ಥರಿದ್ದಾರೆ.ಕುಡಿಯೋದು ಮಾತ್ರ ಸ್ಥಳೀಯ ಹುಡುಗರು.ಕುಡಿದುಕುಡಿದೂ ಕೆಲವರು ಇನ್ಯಾವತ್ತೂ ಸರಿಯಾಗದಷ್ಟು
ಮುಗಿದು ಹೋಗಿದ್ದಾರೆ.
ಎಣ್ಣೆಯಂಗಡಿಗಳಿಗೆ ಇಂತವರೇ ಸರಕು.
ಕುಡಿದ ಅಮಲಲ್ಲಿ ಈ ಹುಡುಗರು ಏನು ಬೇಕಾದರೂ ಮಾಡಬಲ್ಲರು.
ರಾಜ್ಯದ ಹಲವು ಕಡೆಗಳಲ್ಲಿ ಎಣ್ಣೆ ಅಂಗಡಿ ಮೇಲೆ ಮಹಿಳೆಯರು ಮನೆಯವರು ದಾಳಿ ಮಾಡಿ ಅಂಗಡಿ ಬಂದು ಮಾಡಿಸಿದ್ದಿದ್ದು ಇದೆ.
ಮಲೆನಾಡಿನಲ್ಲಿ ಇದೊಂದು ದೊಡ್ಡ ಜೋಕು.
ಶಿಕಾರಿಯೂ ಅಷ್ಟೆ.
ಯಾವಾಗ ಯಾರನ್ನ ಯಾವರೂಪದಲ್ಲಿ ಯಾವ ಮೋಸದಲ್ಲಿ ಬಲಿ ತೆಗೆದುಕೊಳ್ಳುತ್ತೋ ಗೊತ್ತಿಲ್ಲ.
ಮಲೆನಾಡ ದಾರಿ ತಪ್ಪುತ್ತಿರುವ ಇಂತಹ ಅಮಾಯಕರ ತಪ್ಪುಗಳನ್ನು ಗುರುತಿಸಿ ಬುದ್ದಿ ಹೇಳಬೇಕಾದವರು ಮಾತ್ರ ಖಾಲಿ ಖಾಲಿ.
ಇಂತಹ ಅನ್ಯಾಯದ ಸಾವುಗಳು ಕೇವಲ ಒಬ್ಬ ವ್ಯಕ್ತಿಯ,ಕುಟುಂಬದ ಸಾವಲ್ಲ.
ಇದು ಕೇವಲ ಆ ಹುಡುಗನೊಬ್ಬನ ಸಾವಲ್ಲ,ಅವನಸಾವಿಗೆ ಪರೋಕ್ಷವಾಗಿ ಕಾರಣವಾದ ಜಾತಿಯ ಸಂಘ ಸಂಸ್ಥೆಗಳು,ಕೆಲಸಕ್ಕೆ ಬಾರದ ನೂರಾರು ಕ್ಲಬ್ಬುಗಳ ಸಾವು.
ಹೀಗೆ ಮುಂದುವರೆದಲ್ಲಿ ಪಕ್ಕದ ಮನೆಯವನ ಸಾವನ್ನು ನಾವು ,ನಮ್ಮನೆಯ ಸಾವನ್ನ ಪಕ್ಕಮನೆಯವನು ನೋಡುತ್ತಾ ಕೂತುಕೊಳ್ಳಬೇಕಷ್ಟೆ…….
✒️ ದಿವಿನ್ ಮಗ್ಗಲಮಕ್ಕಿ ಮೂಡಿಗೆರೆ.