“ಎಸ್ಸಿ.ಎಸ್ಟಿ.ಮೀಸಲಾತಿ : ಬಲಿತರಿಗೋ…..ದಲಿತರಿಗೋ…..”
1 min read
ಎಸ್ಸಿ.ಎಸ್ಟಿ. ಸಮುದಾಯಗಳಿಗೆ ಸೇರಿದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಕ್ಕಳ ಮೀಸಲಾತಿಯ ಲಾಭವನ್ನು ಪಡೆಯಬೇಕೇ ಎಂದು ಸ್ವತಃ ದಲಿತರಾಗಿರುವ ಮತ್ತು ಮುಂದಿನ ವರ್ಷದ ಮೇ ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಹುದ್ದೆಗೇರಲಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಬಿ.ಆರ್.ಗವಾಯಿ ಅವರು ಪ್ರಶ್ನಿಸಿರುವುದು ಸ್ವಾಗತ ಹಾಗೂ ಉತ್ತಮವಾದ ಪ್ರಗತಿಪರ ಚಿಂತನೆ.
ಎಸ್ಸಿ.ಎಸ್ಟಿ.ಮೀಸಲಾತಿ ಕೇವಲ ಎಸ್ಸಿ.ಎಸ್ಟಿ.ಬಲಿತ ದಲಿತರ ಪಾಲಾಗುತ್ತಿದೆ.ಇದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳಿಗೆ ವಿರುದ್ಧವಾಗಿದೆ.ಕೆಲವೊಂದು ಕುಟುಂಬದಲ್ಲಿ ಐಎಎಸ್ ಐಪಿಎಸ್ ಉನ್ನತ ಶ್ರೇಣಿಯ ಅಧಿಕಾರಿಗಳು,ಡಾಕ್ಟರ್,ಇಂಜಿನಿಯರ್,ಪ್ರೊಫೆಸರ್ ಗಳು. ಇರುತ್ತಾರೆ ಇವರು ಉತ್ತಮವಾದ ಜೀವನ ಮತ್ತು ಆರ್ಥಿಕವಾಗಿ ಪ್ರಬಲರಾಗಿರುತ್ತಾರೆ ಆದರೆ ಇವರೇ ಐಐಎಂ,ಐಐಟಿ ಇಂಜಿನಿಯರಿಂಗ್,ಮೆಡಿಕಲ್ ಸೀಟುಗಳನ್ನು ಎಸ್ಸಿ,ಎಸ್ಟಿ ಕೋಟಾದಡಿ ಉಚಿತವಾಗಿ ಪಡೆಯುತ್ತಾರೆ ಜೊತೆಗೆ ಉದ್ಯೋಗದಲ್ಲಿಯೂ ಇವರ ಎಸ್ ಸಿ.ಎಸ್ಟಿ. ಕೋಟಾದಡಿ ಮೀಸಲಾತಿಯನ್ನು ಎಲ್ಲಾ ಸೌಲಭ್ಯವನ್ನು ಪಡೆಯುತ್ತಾರೆ.ಇದರಿಂದ ಬಡತನದಲ್ಲಿ ಬೆಳೆದ ಪ್ರತಿಭಾವಂತ ಹಳ್ಳಿಯ ಮತ್ತು ಕೊಳಚೆ ಪ್ರದೇಶದ ದಲಿತರ ಮಕ್ಕಳಿಗೆ ಅನ್ಯಾಯವಾಗುತ್ತಿದೆ.ಇನ್ನೂ ಸಹ ಮೀಸಲಾತಿಯನ್ನು ಮುಟ್ಟಲಾರದವನ ಮನದಳದ ನೋವುಗಳು ತುಂಬಾ ಇವೆ.ಇನ್ನು ಎಷ್ಟೋ ಜನ ಕಾಲಿಗೆ ಚಪ್ಪಲಿ ಹಾಕದ,ಹರಿದ ಬಟ್ಟೆ ಹಾಕಿದ ವಾಸಿಸಲು ಸೂರು ಇಲ್ಲದೆ ಗುಡಿಸಿಲಿನಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ ಎಷ್ಟು ದಲಿತ ಕುಟುಂಬಗಳು ಹಾಗೆಯೇ ಇವೆ.ಕಸ ಗುಡಿಸುವವರು,ಮಸಣದಲ್ಲಿ ಹೆಣ ಸುಡುವವರು,ಚರಂಡಿ ಶೌಚಾಲಯ ಸ್ವಚ್ಛಗೊಳಿಸುವವರು,ಬಿಸಿಲಿನಲ್ಲಿ ಮರದ ಕೆಳಗೆ ಕುಳಿತು ಚಪ್ಪಲಿ ಹೊಲಿಯುವವರು. ಬೀದಿಯಲ್ಲಿ ದೊಂಬರಾಟ ಆಡುವ ಜನಾಂಗ,ಮಾರಿಯನ್ನು ಹೊತ್ತುಕೊಂಡು ಬಿಕ್ಷೆ ಬೇಡುವವರು,ಕಣಿ ಹೇಳುವವರು,ಬೇಟೆ ಆಡಿ ಜೀವನ ಮಾಡುವವರು, ಬುಡುಬುಡುಕೆಯವರು,ವಲಸೆ ಕಾರ್ಮಿಕರು,ಹಾವು ಆಡಿಸುವ ಜನಾಂಗದವರು,ಹಂದಿ ಜೋಗರು,ಬುಡಕಟ್ಟು ಜನಾಂಗವಾದ ಹಕ್ಕಿ ಪಿಕ್ಕಿ,ಬಂಡೆ ಹೊಡೆಯುವವರು,ಚಿಂದಿ ಆಯುವವರು,ಕುಳುವಾಡಿಗಳು,ದೇವದಾಸಿ ವೇಶ್ಯೆಯರ ಮಕ್ಕಳು,ಅನಾಥ ಮತ್ತು ಪರಿತ್ಯಕ್ತ,ತ್ಯಜಿಸಲ್ಪಟ್ಟ ಮಕ್ಕಳು ದಲಿತರಾಗಿದ್ದರು ಸಹ ಇದರ ಲಾಭ ಪಡೆಯಲು ಸಾಧ್ಯವಾಗದೆ ದಲಿತ ಅಧಿಕಾರಿಗಳ ಮಕ್ಕಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗದೇ ಒಂದು ಹೊತ್ತಿನ ಕೂಳಿಗಾಗಿ ಜೀತ ಮಾಡುತ್ತಾ ಹಗಲಿರುಳು ಬೆವರು ಸುರಿಸಿ ದುಡಿಯುತ್ತ ಸಂವಿಧಾನದತ್ತವಾಗಿ ನೀಡಿದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.ಹಸಿವಿನಿಂದ ಸಾಯುತ್ತಿದ್ದಾರೆ.
ಅಂದೇ ದುಡಿದು ಅಂದೇ ತಿನ್ನಬೇಕಾದ ಪರಿಸ್ಥಿತಿಯಲ್ಲಿದ್ದಾರೆ.ಗಂಡು ಮಕ್ಕಳು ರಕ್ತ,ಕಿಡ್ನಿ ಮಾರಿ ಕೊಳ್ಳುತ್ತಿದ್ದಾರೆ.ಹೆಣ್ಣು ಮಕ್ಕಳು ಮೈ ಮಾರಿಕೊಂಡು ಜೀವನ ಮಾಡುತ್ತಿದ್ದಾರೆ,ಆದರೆ ಮೀಸಲಾತಿಯ ಲಾಭವನ್ನು ಪಡೆದಿರುವ ಶ್ರೀಮಂತ ದಲಿತರ ಮಕ್ಕಳು ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ಮೋಜು-ಮಸ್ತಿ ಎಂದು ಪಬ್ಬು ಬಾರುಗಳಲ್ಲಿ ಮಜಾ ಮಾಡುತ್ತಿದ್ದಾರೆ.ಈ ಮೀಸಲಾತಿ ಉಳಿದಿರುವುದು ಬಡ ದಲಿತರ ಹೋರಾಟದ ಫಲವೇ ಹೊರತು,ಶ್ರೀಮಂತರ ದಲಿತರ ಸೊಕ್ಕಿನಿಂದ ಅಲ್ಲ.ಮೀಸಲಾತಿ ಮತ್ತು ಸಂವಿಧಾನಕ್ಕೆ ಧಕ್ಕೆಯಾದಾಗ ಬೀದಿಗೆ ಇಳಿದು ಹೋರಾಡುವವರು ಮತ್ತು ಕೇಸ್ ಹಾಕಿಸಿಕೊಳ್ಳುವರು ಈ ಬಡ ಜನರೇ,ಲಾಟಿ ಏಟು ತಿಂದು ಜೈಲಿಗೆ ಸೇರುವವರು ಈ ಬಡ ದಲಿತರ ಮಕ್ಕಳೇ ಆಗಿದ್ದಾರೆ.ಮೀಸಲಾತಿಯನ್ನು ಹಂಚಿ ತಿನ್ನಬೇಕೆ ಹೊರತು ಕಿತ್ತು ತಿನ್ನುವುದಲ್ಲ.ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೆನೆ ಪದರವನ್ನು ಜಾರಿಗೆ ತಂದು ದಲಿತ ಅಧಿಕಾರಿ ವರ್ಗ ಮತ್ತು ಒಂದು ಬಾರಿ ಎಂ.ಎಲ್.ಎ,ಎಂ.ಪಿ.,ಜಿಲ್ಲಾ ಪಂಚಾಯಿತಿ.,ತಾಲ್ಲೂಕು ಪಂಚಾಯಿತಿ.,ಗ್ರಾಮ ಪಂಚಾಯಿತಿ.,ಸದಸ್ಯರಾದವರನ್ನು ಹಾಗೂ ಶ್ರೀಮಂತ ದಲಿತರನ್ನು ಮೀಸಲಾತಿಯಿಂದ ಹೊರಗಿಟ್ಟು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಕೊಡಿಸುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕಾಗಿ ವಿನಂತಿಸುತ್ತೇನೆ.
ಜೈ ಭೀಮ್.,ಜೈ ಭಾರತ್.,ಜೈ ಸಂವಿಧಾನ.,ಜೈ ಸುಪ್ರೀಂಕೋರ್ಟ್.
✍🏻ಬರಹ ಕೃಪೆ.✍🏻
ಎಂ.ಜಿ.ಲೋಕೇಶ್.
ಮಾವಿನಗುಣಿ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.