“ನಿವೇಶನ ಸಮಸ್ಯೆ ಬಗೆಹರಿಸುವಂತೆ ಒತ್ತಾಯ : ವಸತಿಗಾಗಿ ಹೋರಾಟ ವೇದಿಕೆಯಿಂದ ಪ್ರತಿಭಟನೆ.”
1 min read
ನಿವೇಶನದ ಹಕ್ಕುಪತ್ರ ವಿತರಣೆ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಒತ್ತಾಯಿಸಿ ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ಶುಕ್ರವಾರ ತಾಲ್ಲೂಕಿನ ಹಳೇ ಮೂಡಿಗೆರೆ ಗ್ರಾ.ಪಂ.ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿ.ಪಿ.ಐ(ಎಂ.ಎಲ್) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ,ಕಳೆದ 7 ವರ್ಷದಿಂದ ವಸತಿಗಾಗಿ ಹೋರಾಟ ವೇದಿಕೆಯು ವಸತಿ ಮತ್ತು ನಿವೇಶನ ರಹಿತರ ಸಮಸ್ಯೆ ಪರಿಹಾರಕ್ಕಾಗಿ ಅನೇಕ ಬಾರಿ ಹೋರಾಟ ನಡೆಸಿದೆ.ಹಳೇ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ 7ರಲ್ಲಿ 7.20 ಎಕರೆ ಸರಕಾರಿ ಜಾಗವನ್ನು ನಾವೇ ಪತ್ತೆ ಮಾಡಿ ತೋರಿಸಿಕೊಟ್ಟಿದ್ದೇವೆ. ಅದರಲ್ಲಿ 4.30 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ.ಆದರೆ 7 ವರ್ಷ ಕಳೆದರೂ ಪಂಚಾಯಿತಿಯಲ್ಲಿ ರಾಜಕೀಯ ಒತ್ತಡದಿಂದ ರಸ್ತೆಗೆ ಜಾಗ ಬಿಡಿಸುವುದು,ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಕಾರ್ಯ ಇಂದಿಗೂ ಮಾಡಿಲ್ಲ.ಈ ಬಗ್ಗೆ ಪಂಚಾಯಿತಿಯಿಂದ ಸ್ಪಷ್ಟ ಉತ್ತರ ಹಾಗೂ ಯಾವಾಗ ಈ ಸಮಸ್ಯೆ ಇತ್ಯರ್ಥಪಡಿಸುತ್ತಾರೆಂಬುದರ ಬಗ್ಗೆ ಬರವಣಿಗೆ ಮೂಲಕ ತಿಳಿಸಬೇಕೆಂದು ಒತ್ತಾಯಿಸಿದರು.
ಅರ್ಹ ಫಲಾನುಭವಿಗಳ ಪಟ್ಟಿ ಶೀಘ್ರವಾಗಿ ತಯಾರಿಸಬೇಕು.ನಿವೇಶನ,ಸರಕಾರಿ ಹಾಗೂ ಇತರೆ ಕಚೇರಿಗೆ ಮೀಸಲಿಟ್ಟ ಜಾಗಕ್ಕೆ ರಸ್ತೆ ನಿರ್ಮಿಸಲು ಮುಂದಾಗಬೇಕು.ಅಲ್ಲಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು.
ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಸೈಟ್ ಫಾರ್ಮೆಷನ್ ಮಾಡಬೇಕು.ಇದರ ವಿರುದ್ಧ ರಾಜಕೀಯ ಒತ್ತಡ ತರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಿವೇಶನದ ಸಮಸ್ಯೆ ಈಡೇರಿಸದಿದ್ದರೆ ನಾವೇ ಜಾಗ ಗುರುತು ಮಾಡಿ ಗುಡಿಸಲು ನಿರ್ಮಿಸಿಕೊಳ್ಳಲಾಗುವುದು. ಇದಕ್ಕೆ ಪಂಚಾಯಿತಿ ಅವಕಾಶ ನೀಡಬಾರದೆಂದು ಎಚ್ಚರಿಕೆ ನೀಡಿದರು.ಇದಕ್ಕೂ ಮುನ್ನ ಪ್ರತಿಭಟನಾಕಾರರು ಹ್ಯಾಂಡ್ಪೋಸ್ಟಿನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹಳೇಮೂಡಿಗೆರೆ ಗ್ರಾ.ಪಂ.ಗೆ ಆಗಮಿಸಿದರು.
ವೇದಿಕೆ ಅಧ್ಯಕ್ಷೆ ಲಕ್ಷ್ಮೀ,ಕಾರ್ಯದರ್ಶಿ ಶಿವಪ್ಪ,ಜಾನಕಿ, ರಮೇಶ್,ಗೋಪಾಲ,ಹಮೀದ್,ಜುಬೇರ್, ಬಿ.ರಾಮು,ಶಂಕರ್,ಗೋಪಿ,ಆಯಿಷಾ,ಅಶೋಕ್, ಜುಜ್ಜು,ಶಾರದಾ,ರುಕ್ಸಾನ,ಮಂಜುಳ,ರಾಧ ಮತ್ತಿತರರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.