“ವ್ಯಾಘ್ರನ ತಲೆ ಬುರುಡೆ,ಹಲ್ಲು,ಉಗುರು ಸಾಗಾಟ : ಇಬ್ಬರು ಕ್ರೂರಿಗಳ ಬಂಧಿಸಿದ ಅರಣ್ಯ ಇಲಾಖೆ.”
1 min read
ಬೈಕಿಗೆ ನೇತುಹಾಕಿದ್ದ ಬ್ಯಾಗಿನಲ್ಲಿ ಹುಲಿ ತಲೆಬುರುಡೆ,ಹಲ್ಲು, ಉಗುರು ಪತ್ತೆಯಾಗಿದ್ದು,ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಕುಂಡ್ರ ಗ್ರಾಮದ ಸತೀಶ್ ಮತ್ತು ಸುಧೀರ್ ಬಂಧಿತರು. ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಜನವರಿ 19 ರಂದು ಶುಕ್ರವಾರ ಇಬ್ಬರನ್ನು ಬಂಧಿಸಲಾಗಿದೆ.
ಪ್ರಕರಣವೊಂದರ ವಿಚಾರಣೆಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ವಾಪಸಾಗುತ್ತಿದ್ದ ಸತೀಶನನ್ನು ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ಅರಣ್ಯ ಸಿಬ್ಬಂದಿ ತಡೆದು ಬೈಕ್ ಗೆ ನೇತುಹಾಕಿದ್ದ ಬ್ಯಾಗ್ ಪರೀಶೀಲನೆ ನಡೆಸಿದಾಗ ಅದರಲ್ಲಿ ಹುಲಿ ತಲೆಬುರುಡೆ,ಮೂರು ಹುಲಿ ಹಲ್ಲು,ಮೂರು ಹುಲಿ ಉಗುರು,ಒಂದು ಮೂಳೆ ಇರುವುದು ಪತ್ತೆಯಾಗಿದೆ.
ತಕ್ಷಣ ಸತೀಶ್ ಮತ್ತು ಆತನ ಜೊತೆಗಿದ್ದ ಸುಧೀರ್ ಇವರುಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿ ಕಸ್ಟಡಿಗೆ ನೀಡಿದ್ದಾರೆ.
ಈ ಬಗ್ಗೆ ವಾಹಿನಿಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ಡಿ.ಎಫ್.ಓ.ರಮೇಶ್ ಬಾಬು ಅವರು ಮಾತನಾಡಿ, ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಒಂದು ಹುಲಿಯ ತಲೆಬುರುಡೆ,ಮೂರು ಹಲ್ಲು, ಮೂರು ಉಗುರು,ಒಂದು ಮೂಳೆ,ನಾಲ್ಕು ಮೊಬೈಲ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ.ಪ್ರಕರಣದ ಹಿಂದೆ ಯಾರೇ ಇದ್ದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ಕಾರ್ಯಾಚರಣೆಯೂ ಡಿ.ಎಫ್.ಓ.ರಮೇಶ್ ಬಾಬು, ಮೂಡಿಗೆರೆ ಎ.ಸಿ.ಎಫ್.ರಘು,ಮೂಡಿಗೆರೆ ಆರ್.ಎಫ್.ಓ. ಚರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಸತೀಶನನ್ನು ಈಗ್ಗೆ ಕೆಲ ದಿನಗಳ ಹಿಂದೆ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿಸಲಾಗಿತ್ತು,ಇದೀಗ ಹುಲಿ ತಲೆಬುರುಡೆಯನ್ನೇ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಪಾರದರ್ಶಕ ತನಿಖೆಗೆ ಆಗ್ರಹ :
ಈ ಪ್ರಕರಣದಲ್ಲಿ ಸ್ಥಳೀಯರು ಹಲವಾರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಇರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಹುಲಿಯ ಅಂಗಾಂಗಗಳು ಪತ್ತೆಯಾಗಿರುವ ಪ್ರಕರಣದ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು, ಈ ಜಾಲದ ಮೂಲವನ್ನು ಭೇದಿಸಿ ನಿಜವಾದ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.