“ಕಾಡಾನೆ ಕಾಳಗ……????ಕಾಡಾನೆಯ ರಕ್ತದಾಹಕ್ಕೆ ಬಲಿಯಾದ ಅಂಬಾರಿಯ ಅರ್ಜುನ.”
1 min read
ಅನೇಕ ವರ್ಷಗಳ ಕಾಲ ಮೈಸೂರು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ವಿಶ್ವಪ್ರಸಿದ್ಧ ಅರ್ಜುನ ಕಾಡಾನೆ ದಾಳಿಯಿಂದ ಮೃತಪಟ್ಟಿದೆ.
ಹಾಸನ ಜಿಲ್ಲೆ,ಸಕಲೇಶಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪ ಕಾಡಾನೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾಡಾನೆಯೊಂದು ಅರ್ಜುನ ಆನೆಯ ಮೇಲೆ ದಾಳಿ ಮಾಡಿದ್ದು,ಹೊಟ್ಟೆ ಸೇರಿದಂತೆ ಆಯಾಕಟ್ಟಿನ ಜಾಗಕ್ಕೆ ಕೊಂಬಿನಿಂದ ಬಲವಾಗಿ ಚುಚ್ಚಿದ ಪರಿಣಾಮ ತೀವ್ರ ಗಾಯದಿಂದ ನಿತ್ರಾಣಗೊಂಡು ಅರ್ಜುನ ಕೊನೆಯುಸಿರೆಳೆದಿದ್ದಾನೆ.
ಹಾಸನ ಜಿಲ್ಲೆಯ ಸಕಲೇಶಪುರ,ಬೇಲೂರು,ಅರೇಹಳ್ಳಿ, ಯಸಳೂರು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳನ್ನು ಸೆರೆಹಿಡಿಯುವ ಮತ್ತು ರೆಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು (04/12/2023) ಸಹ ಯಸಳೂರು ಭಾಗದಲ್ಲಿ ಇಂತಹುದೇ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಕಾಡಾನೆ ಅರ್ಜುನನ ಮೇಲೆ ಏಕಾಏಕಿ ದಾಳಿ ಮಾಡಿದೆ.
ಅರವತ್ತ ಮೂರು ವರ್ಷದ ಅರ್ಜುನ ದಸರಾ ಮೆರವಣಿಗೆಯಲ್ಲಿ ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿ ಹೊರುವ ಗೌರವ ಪಡೆದಿತ್ತು. ತನ್ನ ಗಜಗಾಂಭೀರ್ಯದಿಂದ ಜನಮನ ಸೂರೆಗೊಂಡಿತ್ತು. ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡ ನಂತರ ಅರ್ಜುನನಿಗೆ ವಿಶ್ರಾಂತಿ ನೀಡಲಾಗಿತ್ತು. ಕಾಡಾನೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಡಾನೆ ಪಳಗಿಸುವುದರಲ್ಲಿ ಈತ ನಿಪುಣನಾಗಿದ್ದ .
ಇದೀಗ ಅರ್ಜುನನ ಜೀವ ದುರಂತ ಅಂತ್ಯ ಕಂಡಿದೆ. ಆರ್ಜುನನ ಸಾವು ಇಡೀ ರಾಜ್ಯಕ್ಕೆ ಶೋಕದ ಸುದ್ದಿಯಾಗಿದೆ.
ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಹೊತ್ತ ನಂತರ ಸುಮಾರು 22ವರ್ಷ ನಿಶಾನೆಯ ಆನೆಯಾಗಿ ಜವಾಬ್ದಾರಿಯನ್ನು ಅರ್ಜುನ ನಿಭಾಯಿಸಿದ್ದ.
ಎರಡು ದಿನದ ಹಿಂದಷ್ಟೇ ಮೂಡಿಗೆರೆ ತಾಲ್ಲೂಕಿನಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ಈಗ ಮತ್ತೊಂದು ಸಾಕಾನೆ ಅದರಲ್ಲೂ ಅಂಬಾರಿ ಹೊತ್ತ ಅರ್ಜುನ ಸಂಭವಿಸಿದ್ದು ನಿಜಕ್ಕೂ ದುರಂತ.
ಅರ್ಜುನನ ಮಾವುತ ಮತ್ತು ಕಾವಾಡಿಗಳಿಬ್ಬರು ಕೂಡ ತನ್ನ ಮನೆಯ ಸದಸ್ಯನನ್ನು ಕಳೆದುಕೊಂಡಂತೆ ದುಃಖತಪ್ತ ರಾಗಿದ್ದಾರೆ ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡ ಅರ್ಜುನನ ಸಾವಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.