“ಜಾಮೀಯಾ ಮಸೀದಿಯ ಆಡಳಿತ ಸಮಿತಿಯಿಂದ ಅವ್ಯವಹಾರ : ತನಿಖೆಗೆ ಒತ್ತಾಯ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದ ಜೆ.ಎಂ. ರಸ್ತೆಯಲ್ಲಿರುವ ಜಾಮಿಯಾ ಮಸೀದಿಯ ಆಡಳಿತ ಸಮಿತಿಯಲ್ಲಿರುವವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆಂದು ಜಾಮಿಯಾ ಮಸೀದಿ ಜಮಾಅತ್ಗೆ ಒಳಪಟ್ಟಿರುವ ಮುಸ್ಲಿಂ ಮುಖಂಡರಾದ ಅಲ್ತಾಫ್ ಹುಸೇನ್ ಆರೋಪಿಸಿದರು.
ಅವರು ದಿನಾಂಕ 02/12/2023ರ ಶನಿವಾರದಂದು ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ,ಜಾಮಿಯಾ ಮಸೀದಿ ವಕ್ಫ್ ಆಸ್ತಿಗಳಾದ ಶಾದಿ ಮಹಲ್,ಸುಮಾರು 34 ವಾಣಿಜ್ಯ ಮಳಿಗೆಯಿಂದ ಬರುವ ಆದಾಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ವಾಣಿಜ್ಯ ಮಳಿಗೆಗಳನ್ನು ಮಸೀದಿ ಸದಸ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಪಡೆದು ಬೇರೆಯವರಿಗೆ ಹೆಚ್ಚುವರಿ ಬಾಡಿಗೆ ನೀಡುವ ಮೂಲಕ ಮಸೀದಿಯ ಅಭಿವೃದ್ಧಿಗೆ ವಂಚಿಸುತ್ತಿದ್ದಾರೆ. ಶಾದಿ ಮಹಲ್ ಬಾಡಿಗೆ ಕೊಡುತ್ತಿರುವ ಬಗ್ಗೆ ಯಾವುದೇ ರಸೀದಿ,ಲೆಕ್ಕಪುಸ್ತಕ ಇಲ್ಲದಂತೆ ಮಾಡಿದ್ದಾರೆ. ಅಲ್ಲದೇ ಕಮಿಟಿಯವರು 4 ಕೋಟಿಗೂ ಅಧಿಕ ವ್ಯವಹಾರ ನಡೆಸಿದ್ದು,ಲಕ್ಷಾಂತರ ರೂಗಳು ಬ್ಯಾಂಕ್ ಮುಖಾಂತರ ವ್ಯವಹಾರ ನಡೆಸದೇ ಜಮಾಅತಿನ ಕಣ್ಣಿಗೆ ಮಣ್ಣೆರಚಿದ್ದಾರೆ. ಈ ವರ್ಷದಲ್ಲಿ ಶಾದಿ ಮಹಲ್ ಗೆ ಬಂದಿರುವ ಆದಾಯ ಕೇವಲ 84ಸಾವಿರ ರೂ ಎಂದು ಲೆಕ್ಕ ತೋರಿಸಿರುವುದು ಸಂಶಯಕ್ಕೆ ಎಡೆಮಾಡಿದೆ. ಅಲ್ಲದೇ ಮದರಸದ ಹೆಸರಲ್ಲಿಯೂ ಕೋಟ್ಯಾಂತರ ರೂ ಅವ್ಯವಹಾರ ನಡೆಸದಿರುವುದು ಕಂಡು ಬಂದಿದೆ ಎಂದು ದೂರಿದರು.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಾಡಿಗೆದಾರರು ಬಾಕಿ ಹಣ ಉಳಿಸಿಕೊಂಡಿದ್ದಾರೆಂದು ವಕ್ಫ್ ಅಧಿಕಾರಿಗಳಿಗೆ ಸುಳ್ಳು ವರದಿ ನೀಡಲಾಗಿದೆ. ಅಲ್ಲದೇ ಅನೇಕ ವ್ಯವಹಾರದ ಬಗ್ಗೆ ಲೆಕ್ಕ ನೀಡಿಲ್ಲ. ಇಲ್ಲಿ 3 ವರ್ಷಕ್ಕೊಮ್ಮೆ ಕಮಿಟಿ ರಚನೆಯಾಗಬೇಕೆಂಬ ನಿಯಮವಿದ್ದರೂ ಕಮಿಟಿ ರಚನೆ ಕೂಡ ಮಾಡುತ್ತಿಲ್ಲ. ಕಮಿಟಿಯವರು ಕಳೆದ ಶುಕ್ರವಾರ ವ್ಯವಹಾರದ ಬಗ್ಗೆ ಸಂಪೂರ್ಣ ಲೆಕ್ಕಾಚಾರ ನೀಡುತ್ತೇವೆಂದು ಸಭೆ ಕರೆದಿದ್ದರು. ಆದರೆ ಲೆಕ್ಕಚಾರ ಪೂರ್ಣವಾಗಿ ನೀಡಿಲ್ಲ. ಜತೆಗೆ ಅದೇ ದಿನ ಯಾರಿಗೂ ಮಾಹಿತಿ ನೀಡದೇ ನೂತನ ಕಮಿಟಿ ಕೂಡ ರಚಿಸಲಾಗಿದೆ. ಕಮಿಟಿ ರಚನೆ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಅಧಿಕಾರಿ ಸತ್ತರ್ ಷಾ ಹುಸೇನ್ ಇದ್ದರೆಂದು ದಾಖಲೆಯಲ್ಲಿ ಸೃಷ್ಟಿಸಿದ್ದಾರೆ. ಆದರೆ ಆ ಸಭೆಯಲ್ಲಿ ವಕ್ಫ್ ಬೋರ್ಡಿನ ಅಧಿಕಾರಿ ಹಾಜರು ಇರಲೇ ಇಲ್ಲ. ಇವರು ನಡೆಸಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ಈ ಹಿಂದೆ ಜಿಲ್ಲಾಧಿಕಾರಿ,ವಕ್ಫ್ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಎಲ್ಲಾ ಅಕ್ರಮದ ಬಗ್ಗೆ ಚಕಾರ ಎತ್ತಿದ ಹಿನ್ನಲೆಯಲ್ಲಿ ಪ್ರಭಾವ ಬಳಸಿ ಕೆಲವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಮಸೀದಿಯಲ್ಲಿ ಕಮಿಟಿಯನ್ನು ಪುನರ್ ರಚನೆ ಮಾಡಬೇಕು. ಇಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಕ್ಫ್ ಬೋರ್ಡ್ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಾಹಿದ್ ಹುಸೇನ್, ತಜ್ಮುಲ್ಹುಸೇನ್, ಹುಮಾಯುತ್, ಜಾಬೀರ್ ಹುಸೇನ್, ಮಜಲ್ ಆಸಿಫ್, ರಿಜ್ವಾನ್, ಅಕ್ರಮ್, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.