“ಜ್ಞಾನದ ಅನಾವರಣ ಈ ಅದ್ಭುತ ವಸ್ತು ಪ್ರದರ್ಶನ : ಲೇಖಕ ಪ್ರದೀಪ್ ಕೆಂಜಿಗೆ ಅಭಿಪ್ರಾಯ.”
1 min read
ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಹೊಸ ಲೋಕವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಲೇಖಕ ಪ್ರದೀಪ್ ಕೆಂಜಿಗೆ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಜ್ಞಾನದ ಅನಾವರಣ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ತೇಜಸ್ವಿ ಪ್ರತಿಷ್ಠಾನದ ಕನಸಿನ ಕಾರ್ಯಕ್ರಮ.ಜ್ಞಾನದ ಭಂಡಾರದಂತಿರುವ ಪ್ರದರ್ಶನ ಮಕ್ಕಳಿಗೆ ಜ್ಞಾನಾಸಕ್ತರಿಗೆ ಅತ್ಯಂತ ಉಪಯುಕ್ತವಾಗಿದೆ. ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಕೀಟ ಜಗತ್ತಿನ ವಿಸ್ಮಯಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದರು.ಈ ವಸ್ತು ಪ್ರದರ್ಶನದಲ್ಲಿ ಕೀಟಗಳ ವಿಸ್ಮಯ ಪ್ರಪಂಚ ಅನಾವರಣಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಸಿ.ರಮೇಶ್ ಮಾತನಾಡಿ,ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಶಾಶ್ವತವಾಗಿ ವಸ್ತು ಸಂಗ್ರಹಾಲಯವನ್ನು ಮಾಡಲು ಚಿಂತನೆ ನಡೆಸಲಾಗಿದೆ. ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ತೇಜಸ್ವಿ ಪ್ರತಿಷ್ಠಾನ ಸನ್ನದ್ದವಾಗಿದೆ ಎಂದರು.
ಕಲಾವಿದರಾದ ಸುರೇಶ್ ಚಂದ್ರ ದತ್ತ ಮಾತನಾಡಿ,
ಬೆಲೆ ಕಟ್ಟಲಾಗದ ಅಪೂರ್ವ ವಸ್ತುಗಳು ಈ ವಸ್ತು ಪ್ರದರ್ಶನದಲ್ಲಿವೆ.ವಿದ್ಯಾರ್ಥಿಗಳು,ಮಕ್ಕಳು,ಯುವಕರು, ಜ್ಞಾನಾಸಕ್ತರು ಈ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.
ವಸ್ತು ಸಂಗ್ರಹಕಾರ ಅಶೋಕ್ ಮಾತನಾಡಿ,ಬೆಲೆ ಕಟ್ಟಲಾಗದ ಅಪರೂಪದ ವಸ್ತುಗಳು ಈ ವಸ್ತು ಪ್ರದರ್ಶನದಲ್ಲಿದೆ. ಹಲವು ದಶಕಗಳ ಸಂಗ್ರಹದ ಅಪರೂಪದ ವಸ್ತುಗಳು ಇದಾಗಿದೆ. ನಮ್ಮ ಹಿರಿಕರು ಬಳಸುತ್ತಿದ್ದ ದಿನಬಳಕೆಯ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳ ಈ ವಸ್ತು ಪ್ರದರ್ಶನದ ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ತರುವೆ ಗ್ರಾ.ಪಂ ಅಧ್ಯಕ್ಷರಾದ ಬಿ.ಎಂ. ಸತೀಶ್,ಸಮಗ್ರ ಗಿರಿಜನ ಅಭಿವೃದ್ದಿ ಹಾಗೂ ಯೋಜನಾ ಸಮನ್ವಯ ಅಧಿಕಾರಿ ಡಾ.ಭಾಗೀರಥಿ,ಕಲಾವಿದರಾದ ಬಾಪು ದಿನೇಶ್,ಜಾನಪದ ಕಲಾವಿದ ಸುಬ್ರಮಣ್ಯ, ಮಂಜುನಾಥ್,ಲೇಖಕ ಪೂರ್ಣೇಶ್ ಮತ್ತಾವರ,ಕೀಟ ಪ್ರಪಂಚದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಅವಿನಾಶ್, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ಆದರ್ಶ್ ತರುವೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ,ಸಿಬ್ಬಂದಿಗಳಾದ ಸತೀಶ್ ತರುವೆ,ಸಂಗೀತಾ,ಲೇಖಕಿ ನಳಿನಾ,ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ವೆಂಕಟೇಶ್ ಏಕಲವ್ಯ ಮಾದರಿ ವಸತಿ ಶಾಲೆ,ಬಣಕಲ್ ವಿಲೇಜ್ ಸರ್ಕಾರಿ ಶಾಲೆ ಹಾಗೂ ವಿವಿಧ ಶಾಲೆಗಳ ಮಕ್ಕಳು ಇದ್ದರು.
ವಸ್ತು ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ.
ಮೊದಲ ದಿನವೇ ವಸ್ತು ಪ್ರದರ್ಶನಕ್ಕೆ ನೂರಾರು ವಿದ್ಯಾರ್ಥಿಗಳು ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಿದರು. ಬಾಳೆಹೊನ್ನೂರು,ಮಂಗಳೂರು,ಚಿಕ್ಕಮಗಳೂರು,ಕಡೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ನೂರಾರು ಸಾರ್ವಜನಿಕರು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನವೆಂಬರ್ 20 ರಿಂದ ಪ್ರಾರಂಭವಾಗಿರುವ ವಸ್ತು ಪ್ರದರ್ಶನ ನವೆಂಬರ್ 26ವರೆಗೆ ನಡೆಯಲಿದೆ.
ವಸ್ತು ಪ್ರದರ್ಶನದಲ್ಲಿ ಕೀಟ ಪ್ರಪಂಚ,ಸಾವಿರಾರು ಪುಸ್ತಕಗಳು,ಪ್ರಾಚೀನ ವಸ್ತುಗಳು, ಅಂಚೆ ಚೀಟಿ,ಲಕೋಟೆಗಳು,ಕಲಾಕೃತಿಗಳು ಇರಲಿವೆ. ಹೆಚ್ಚಿನ ಮಾಹಿತಿಗೆ 9663098873 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.