“ಪ್ರಗತಿಪರ – ಜೀವಪರ ಸಾಹಿತ್ಯದ ಮೂಲಕ ಕನ್ನಡ ನಾಡಿನ ಚಿಂತನೆಯನ್ನು ಹಿಗ್ಗಿಸಿದ ಚಂಪಾ ಅವರ ಬದುಕು ಬರಹವನ್ನು ವಿದ್ಯಾರ್ಥಿ ಯುವಜನರತ್ತ ಕೊಂಡೊಯ್ಯಬೇಕು : ಡಿ.ಎಂ.ಮಂಜುನಾಥಸ್ವಾಮಿ.”
1 min read
ಕನ್ನಡದ ವಿಚಾರಗಳು ಈ ನಾಡಿನಲ್ಲಿ ಸಂಕಟಗಳೊಂದಿಗೆ ಸದ್ದು ಮಾಡುವಾಗ, ಕನ್ನಡಪರ,ಪ್ರಗತಿಪರ,ಜೀವಪರ ಚಳುವಳಿಯ ಮುಂಚೂಣಿಯಲ್ಲಿ ನಿಂತು ನೆಲ ಜಲ ಭಾಷೆ ಜನಸಾಮಾನ್ಯರ ಬದುಕು ಬವಣೆಗಳ ಕುರಿತು, ಉತ್ತರ ಕರ್ನಾಟಕದ ಜವಾರಿ ಭಾಷೆ- ಬರಹದ ಮೂಲಕ ಗುಡಿಗಿನಂತೆ ಸದ್ದುಮಾಡಿ,ಮಿಂಚಿನಂತೆ ಮಿನುಗುತ್ತಾ , ಅಕ್ಷರಗಳನ್ನು ಕುಣಿಸುತ್ತಾ, ವಿರೋಧಿಗಳಿಗೆ ಕಚಗುಳಿ ಇಡುತ್ತಾ, ಕನ್ನಡದ ನೆಲ ಜಲ ಭಾಷೆಗೆ ಸಂಬಂಧಪಟ್ಟ ಅನೇಕ ಸಂಗತಿಗಳನ್ನು ತಮ್ನದೆ ಆದ ಶೈಲಿಯಲ್ಲಿ ಮುರಿದು ಕಟ್ಟಿ ಬಾಳಿ ಬದುಕಿದ ಚಂಪಾ ಅವರ ಬದುಕು ಬರಹ ಸಾರ್ವಕಾಲಿಕವಾಗಿ ಜನಮನ್ನಣೆ ಪಡೆದ ಚೈತನ್ಯಶೀಲ ವಿಷಯಗಳಾಗಿವೆ ಎಂದು ಚಿಂತಕ ಹಾಗೂ ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ೬೮ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ನಿರಂತರವಾಗಿ ಹಮ್ಮಿಕೊಂಡಿರುವ ನುಡಿ ನಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ, ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ,ಜಾವಳಿ ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ, ಸಾಹಿತಿ ನಾಟಕಕಾರ ಪ್ರೊ,ಚಂದ್ರಶೇಖರ್ ಪಾಟೀಲ್ ರವರು ಕನ್ನಡ ನಾಡು ನುಡಿಗಾಗಿ ಸೇವೆಗೈದ ಅವರ ಬದುಕು ಬರಹ ಕುರಿತು, ಕರೆದಾಗ ಬಂದು ಭಾಷಣ ಮಾಡಿ, ಬೀದಿಯಲ್ಲಿ ಕುಳಿತು ಘೋಷಣೆ ಕೂಗಿ, ಕನ್ನಡದ ಬಾವುಟಗಳನ್ನು ಹಿಡಿದು ಜಾಗೃತಿ ಮೂಡಿಸಿ, ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ – ದ್ವೇಷವನ್ನು ಕೂಡ ಎಂಬ ಕವಿತೆಯನ್ನು ಗೋಡೆಯ ಮೇಲೆ ಬರೆದ ಚಂಪಾ ಅವರ ಬದುಕಿನ ದಿನಗಳ ಶ್ರೇಷ್ಠತೆಗಳನ್ನು ವಿವರಿಸಿದರು.
ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ ಆರ್ ಪ್ರಕಾಶ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಿರಿಗನ್ನಡ ವೇದಿಕೆಯ ಆಶಯ ಗುರಿಗಳನ್ನು ವಿವರಿಸಿ, ಕರ್ನಾಟಕ ಐವತ್ತರ ಈ ಸಂಭ್ರಮದಲ್ಲಿ ಕನ್ನಡಿಗರಾದ ನಾವು ಈ ನೆಲ ಜಲ ಭಾಷೆ ಮತ್ತು ಬದುಕಿನ ಬಗ್ಗೆ ನಮ್ಮ ನಮ್ಮ ಮುನ್ನೋಟುಗಳು ಹೇಗಿರಬೇಕೆಂದು ಕುರಿತು ಮಾತನಾಡಿದರು.
ಕುಂಭಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಅವರು ಪ್ರಾಸ್ತಾವಕವಾಗಿ ಮಾತನಾಡಿ, ನೂರಾರು ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಇವೆ, ಇಷ್ಟೊಂದು ಸಂಘಟನೆಗಳು ಕನ್ನಡದ ಪರವಾಗಿ ಕೆಲಸ ಮಾಡುತ್ತಿದ್ದರು ಕೂಡ ಈ ನೆಲ ಜಲ ಭಾಷಾ ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ, ಕನ್ನಡದ ವಿಷಯ ಬಂದಾಗ ಅಪಸ್ವರ ಎತ್ತದೆ ಒಂದಾಗುವ ಅನಿವಾರ್ಯತೆ ಕನ್ನಡಿಗರದ್ದಾಗಬೇಕು ಎಂದು ಕರೆಕೊಟ್ಟರು.
ಜಿಲ್ಲಾ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ ಭಾರತದಲ್ಲಿ ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ,ಬೇರೆ ಬೇರೆ ರೀತಿಯ ವಿಶಿಷ್ಟ ಆಚರಣೆಗಳಿವೆ,ಹಾಗಾಗಿ,ನಾಡಿನ ಎಲ್ಲಾ ಭಾಷೆಗಳನ್ನು ಗೌರವಿಸುತ್ತಾ ಮಾತೃಭಾಷೆಯನ್ನು ಪ್ರೀತಿಸುವ ಮೂಲಕ ಕನ್ನಡದ ಹಿರಿಮೆಗರಿಮೆಯನ್ನು ಇತರ ಭಾಷಿಕರಿಗೆ ತಿಳಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ, ಚಿಕ್ಕಮಗಳೂರು ತಾಲ್ಲೂಕು ಘಟಕದ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಜಾವಳಿ ಚಂದ್ರಯ್ಯನವರಿಗೆ,ಜಿಲ್ಲಾಧ್ಯಕ್ಷರಾದ ಎಮ್.ಆರ್.ಪ್ರಕಾಶ್ ಅವರು ಕನ್ನಡದ ಧ್ವಜವನ್ನು ನೀಡುವದರ ಮೂಲಕ ಸೇವಾ ದೀಕ್ಷೆ ನೀಡಿ, ಪ್ರಮಾಣವಚನ ಬೋಧಿಸಿ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿ ಅಭಿನಂದಿಸಿದರು.
ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷತೆಯನ್ನು ನೂತನವಾಗಿ ವಹಿಸಿಕೊಂಡ ಕೆ.ಜಾವಳಿ ಚಂದ್ರಯ್ಯನವರು ಕನ್ನಡದ ಕೆಲಸಗಳ ಮೂಲಕ ಈ ನಾಡಿನ ಮಣ್ಣಿನ ಋಣ ತೀರಿಸುವ ಹೆಚ್ಚಿನ ಅವಕಾಶ ಮತ್ತೊಮ್ಮೆ ತನಗೆ ದೊರೆತಿದೆ, ಕೊಟ್ಟ ಜವಾಬ್ದಾರಿಯನ್ನು ಜಾತಿ ಮತ ಧರ್ಮ ಪಕ್ಷದಿಂದ ಹೊರತಾಗಿ ಕನ್ನಡವನ್ನು ಕಟ್ಟುವ ಕೆಲಸ ಅತ್ಯಂತ ಮಹತ್ವದ್ದಾಗಿದೆ, ಈ ನಿಟ್ಟಿನಲ್ಲಿ ತನ್ನ ಜವಾಬ್ದಾರಿ ಮತ್ತು ಪಾತ್ರವನ್ನು ಕುರಿತು ಮಾತನಾಡಿ,ಯುವ ಸಾಹಿತಿ,ಕವಿ ಜಾವಳಿಯ ಮೋಹಿತ್ ಮೋನಪ್ಪ ಇವರನ್ನು ರಾಜ್ಯೋತ್ಸವದ ನೆನಪಿಗಾಗಿ ಸನ್ಮಾನಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಾಫಿ ಬೆಳಗಾರರು, ಗ್ರಾ, ಪಂ, ಮಾಜಿ ಅಧ್ಯಕ್ಷರಾದ ಜಗದೀಶ್ ಗೌಡ ವಹಿಸಿಕೊಂಡಿದ್ದರು. ಪ್ರತಿಯೊಂದು ಭಾಷೆಯ ಆಯಾಯ ಜನಸಮಾದಾಯದಲ್ಲಿ ಒಂದೊಂದು ಸಂಸ್ಕೃತಿ,ವಿಭಿನ್ನ ಸಂಸ್ಕಾರ,ವೇಷ ಭೂಷಣದ ವಿಶಿಷ್ಟತೆ,ಆಹಾರದ ರುಚಿ ಅಭಿರುಚಿಗಳು ಭಿನ್ನವಾಗಿದ್ದು,ಇವುಗಳಲ್ಲಿ ಹಲವಷ್ಟು ಈಗ ಪರಸ್ಪರ ವಿನಿಮಯವಾಗಿದ್ದಾವೆ,ಒಳಿತು ಮತ್ತು ಶ್ರೇಷ್ಠವಾದದ್ದು ಯಾವ ದಿಕ್ಕಿನಿಂದ ಸಿಕ್ಕಿದರು ಸ್ವೀಕರಿಸೋಣ ಎಂದರು.
ವೇದಿಕೆಯಲ್ಲಿ, ಬಾಳೂರು ಹೋಬಳಿ ಕಸಾಪ ಅಧ್ಯಕ್ಷರಾದ ರವಿ ಪಟೇಲ್ ಕೂವೆ,ಚನ್ನಕೇಶವ ಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ನಂದಿನಿ,ಯುವ ಮುಖಂಡ ಶಶಿಕುಮಾರ್ ,ಜೆ.ಜಿ.ಶಶಿಧರ, ಮಂಜು ಜಾವಳಿ ಮುಂತಾದವರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.