“ಸೌಜನ್ಯಕ್ಕಾದರೂ ನ್ಯಾಯ ಬೇಡವೇ.” ಜನಾಗ್ರಹ ಸಭೆ.
1 min read
ಸೌಜನ್ಯ ಕೊಲೆ ಪ್ರಕರಣವನ್ನು ರಾಜ್ಯ ಸರಕಾರ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಎಲ್ಲಾ ಪ್ರಗತಿಪರ ಸಂಘಟನೆಯೊಂದಿಗೆ ನವೆಂಬರ್ 03ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಜನಾಗ್ರಹ ಸಭೆ ಮತ್ತು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೂಡಿಗೆರೆ ನಾಗರೀಕ ಒಕ್ಕೂಟದ ಕಾರ್ಯದರ್ಶಿ ಜಗದೀಶ್ ಚಕ್ರವರ್ತಿ ಹೇಳಿದರು.
ಅವರು ದಿನಾಂಕ 31/10/2023ರ ಮಂಗಳವಾರದಂದು ವಾಹಿನಿಯೊಂದಿಗೆ ಮಾತನಾಡಿ, ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಅನೇಕ ವರ್ಷ ಕಳೆದರೂ ನೈಜ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಸಿಬಿಐ ವಿಶೇಷ ನ್ಯಾಯಾಲಯ 11 ವರ್ಷದ ಬಳಿಕ ಆರೋಪಿ ಸಂತೋಷ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿ ಆರೋಪ ಮುಕ್ತ ಮಾಡಿದೆ. ಹಾಗಾದರೆ ನೈಜ ಅಪರಾಧಿ ಯಾರೆಂದು ಇಂದಿಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಓರ್ವ ಹೆಣ್ಣು ಮಗಳಿಗೆ ನ್ಯಾಯ ಸಿಗದಂತಾಗಿದೆ. ಇಂತಹ ಪ್ರಕರಣ ಯಾವ ಮಹಿಳೆಯರಿಗೂ ಆಗಬಾರದು. ಹಾಗಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳೊಂದಿಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವಂತೆ ಒತ್ತಾಯಿಸಿ ಜನಾಗ್ರಹ ಮತ್ತು ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕ ಬಂಧುಗಳು ಆಗಮಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮ ಯಾವುದೇ ರಾಜಕೀಯ ಪ್ರೇರಿತವಲ್ಲ. ಯಾವುದೇ ಜಾತಿ, ಧರ್ಮ, ವ್ಯಕ್ತಿ, ಕ್ಷೇತ್ರಕ್ಕೆ ಅಪಮಾನ ಮಾಡುವ ಉದ್ದೇಶವಿಲ್ಲ. ಇದು ಕೇವಲ ಒಂದು ಹೆಣ್ಣಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟವಷ್ಟೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ, ಬೆಳ್ತಂಗಡಿ ಪ್ರಗತಿಪರ ಚಿಂತಕಿ ಪ್ರಸನ್ನ.ರವಿ, ನಿವೃತ್ತ ಡಿವೈಎಸ್ಪಿ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ನಾಗರೀಕ ವೇದಿಕೆ ಅಧ್ಯಕ್ಷ ಪ್ರಶಾಂತ್ ಪೂಜಾರಿ ಆಗಮಿಸಲಿದ್ದಾರೆ. ಎಲ್ಲಾ ಪ್ರಗತಿಪರ ಸಂಘಟನೆಗಳು ಸಭೆಗೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗರೀಕ ಒಕ್ಕೂಟದ ಉಪಾಧ್ಯಕ್ಷ ಬಿನ್ನಡಿ ಜಯಪಾಲ್, ಖಜಾಂಚಿ ಡಿ.ಎಂ.ಪ್ರವೀಣ್, ಕರವೇ ಉಪಾಧ್ಯಕ್ಷ ಯಾಕೂಬ್, ಕಾರ್ಯದರ್ಶಿ ಶಿವಾನಂದ ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.