“ಕ.ರ.ವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅರಸ್ ಇನ್ನಿಲ್ಲ.”
1 min read
ದಿನಾಂಕ 27/09/2023ರ ಬುಧವಾರದಂದು ಕರ್ನಾಟಕದ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿದ್ದ ತೇಗೂರು ಜಗದೀಶ್ ಅರಸ್ ಅವರು ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಜಗದೀಶ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯವಾಗಿಯೇ ಇದ್ದ ಅವರು ಈಗ್ಗೆ ಕೆಲ ತಿಂಗಳ ಹಿಂದೆ ಇದ್ದಕ್ಕಿದಂತೆ ಅನಾರೋಗ್ಯಕ್ಕೀಡಾಗಿದ್ದರು. ಅವರು ಮೆದುಳು ಸಂಬಂಧಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಚಿಕ್ಕಮಗಳೂರು ನಗರ ಸಮೀಪದ ತೇಗೂರು ಗ್ರಾಮದವರಾದ ಜಗದೀಶ್ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕ.ರ.ವೇ ನಾರಾಯಣಗೌಡ ಬಣದಲ್ಲಿ ಗುರುತಿಸಿಕೊಂಡಿದ್ದ ಜಗದೀಶ್ ಕಳೆದ 15 ವರ್ಷಗಳಿಂದ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿದ್ದಾರೆ.

ಕನ್ನಡ ನಾಡು ನುಡಿಗೆ ಸಂಬಂಧಿಸಿದ, ಜಿಲ್ಲೆಯಲ್ಲಿ ಸಾರ್ವಜನಿಕ ಯಾವುದೇ ಸಮಸ್ಯೆಗಳು ಎದುರಾದಾಗ ಅವರು ಮುಂದೆ ನಿಂತು ಹೋರಾಟ ಸಂಘಟಿಸುತ್ತಿದ್ದರು. ತಮ್ಮ ಹೋರಾಟಗಳಿಗಾಗಿ ಅನೇಕ ಬಾರಿ ಕೇಸು ದಾಖಲಿಸಿಕೊಂಡರು ಸಹ ಎದೆಗುಂದದೇ ಸಂಘಟನೆಯನ್ನು ಕಟ್ಟಿದ್ದರು.

ಕ.ರ.ವೇ. ರಾಜ್ಯಾಧ್ಯಕ್ಷ ನಾರಾಯಣಗೌಡರ ನೆಚ್ಚಿನ ಶಿಷ್ಯರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ನಾರಾಯಣಗೌಡರು ತೇಗೂರು ಜಗದೀಶ್ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.

ಅಲ್ಲದೇ ಅವರ ಚಿಕಿತ್ಸೆಯ ಬಗ್ಗೆ ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಮತ್ತು ವೈದ್ಯರೊಂದಿಗೆ ನಾರಾಯಣ ಗೌಡ ಸಮಾಲೋಚನೆ ನಡೆಸಿದ್ದರು. ಸುಮಾರು 15 ದಿನಗಳ ಕಾಲ ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರು. ಆದರೆ ಜಗದೀಶ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 26/09/2023ರ ಮಂಗಳವಾರದಂದು ರಾತ್ರಿ ಸುಮಾರು 12-30 ರ ಸಮಯಕ್ಕೆ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವಿವಾಹಿತರಾಗಿದ್ದ ಜಗದೀಶ್, ತಂದೆ ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಅವರ ಅಂತ್ಯಸಂಸ್ಕಾರ ದಿನಾಂಕ 27/09/2023ರ ಬುಧವಾರದಂದು (ಇಂದು) ಸಂಜೆ 3 ಗಂಟೆಗೆ ಸ್ವಗ್ರಾಮ ತೇಗೂರಿನಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ತೇಗೂರು ಜಗದೀಶ್ ಅವರ ನಿಧನಕ್ಕೆ ಕ.ರ.ವೇ. ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.
ಅವರ ನಿಧನದಿಂದಾಗಿ ಜಿಲ್ಲೆಯಲ್ಲಿ ಒಬ್ಬ ಜನಪರ ಯುವ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.