“ಅಂಗನವಾಡಿ ಜಾಗ ಅಕ್ರಮ ಒತ್ತುವರಿ : ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಪ್ರತಿಭಟನೆ.”
1 min read
ಅಂಗನವಾಡಿ ಕೇಂದ್ರಕ್ಕೆ ಮಂಜೂರಾದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಜಾಗವನ್ನು ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸ್ಥಳದಲ್ಲಿ ಧರಣಿ ನಡೆಸುತ್ತಾ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇಂದು (ದಿನಾಂಕ 22/09/2023ರ ಶುಕ್ರವಾರ) ಬೆಳಿಗ್ಗೆ ಮೂಡಿಗೆರೆ ಪಟ್ಟಣದಲ್ಲಿ ವಾಹಿನಿಯೊಂದಿಗೆ ಈ ವಿಚಾರವಾಗಿ ಮಾತನಾಡಿದ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸಮಸ್ಯೆಯ ಕುರಿತು ದಾಖಲೆ ಸಹಿತ ಮಾಹಿತಿ ನೀಡಿದರು. ನಂತರ ಅಂಗನವಾಡಿಗೆಂದು ಮಂಜೂರಾಗಿರುವ ಬಾಳೂರಿನ ದರ್ಬಾರ್ ಪೇಟೆಯ ಸ್ಥಳದಲ್ಲಿ ಧರಣಿ ಪ್ರಾರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ. ಮಂಜುನಾಥ್ : ಮೂಡಿಗೆರೆ ತಾಲ್ಲೂಕಿನ ಬಾಳೂರು ಗ್ರಾಮದ ದರ್ಬಾರ್ ಪೇಟೆ ಅಂಗನವಾಡಿ ಕೇಂದ್ರಕ್ಕೆಂದು ಸ.ನಂ : 179ರಲ್ಲಿ 22 ಗುಂಟೆ ಜಾಗ ಮಂಜೂರಾಗಿದೆ. ಎಂ.ಆರ್ ಟಿ2/2023-24(ದಿನಾಂಕ 24-07-2023) ರಂತೆ ಅಂಗನವಾಡಿ ಕೇಂದ್ರದ ಹೆಸರಿಗೆ ಖಾತೆ ಸಹ ಆಗಿ ಪಹಣ ಬಂದಿದೆ. ಈ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ 12.5 ಲಕ್ಷ ಅನುದಾನವು ಮಂಜೂರಾಗಿದೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈ ಜಾಗ ಮಂಜೂರು ಆದ ಮೇಲೆ ಪಕ್ಕದ ನಿವೇಶನ ಮಾಲೀಕರು ಈ ಜಾಗವನ್ನು ಒತ್ತುವರಿ ಮಾಡಿ ರಾತ್ರೋರಾತ್ರಿ ಅಕ್ರಮವಾಗಿ ಬೇಲಿ ನಿರ್ಮಾಣ ಮಾಡಿರುತ್ತಾರೆ.
ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಸ್ವಂತ ಕಟ್ಟಡ ಇಲ್ಲದೇ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿಯಲ್ಲಿ ಸುಮಾರು 15 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗ ಅಂಗನವಾಡಿ ನಡೆಸುತ್ತಿರುವ ಖಾಸಗಿ ಕಟ್ಟಡವು ಶಿಥಿಲವಾಗಿದೆ. ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಬಹುತೇಕರು ಕೂಲಿಕಾರ್ಮಿಕರು ಮತ್ತು ಕೃಷಿಕರು ಇದ್ದು ಅವರ ಮಕ್ಕಳು ಅಂಗನವಾಡಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸದರಿ ಜಾಗವನ್ನು ತೆರವುಗೊಳಿಸಲು ನ್ಯಾಯಾಲಯದ ಮತ್ತು ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಸ್ಥಳೀಯ ಅಧಿಕಾರಿಗಳು ಜಾಗ ತೆರವಿಗೆ ಹಿಂದೇಟು ಹಾಕುತ್ತಿದ್ದಾರೆ. ಶಾಸಕಿ ನಯನ ಮೋಟಮ್ಮ ನವರು ಸ್ಥಳಪರಿಶೀಲನೆ ನಡೆಸಿ ಬೇಲಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ.
ಇದನ್ನು ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರು ಆ ಜಾಗದಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಜಾಗ ತೆರವುಗೊಳಿಸುವವರೆಗೆ ಮುಷ್ಕರ ಮುಂದುವರಿಸುವುದಾಗಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಕೆ.ಆರ್., ಸದಸ್ಯರಾದ ಜಯಮ್ಮ, ಮನೋಜ್, ಪ್ರಕಾಶ್, ರಘುಪತಿ ಬಾಳೂರು ಮತ್ತು ಗ್ರಾಮಸ್ಥರು, ಪೋಷಕರು ಉಪಸ್ಥಿತರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




