“ಆಣೆ ಪ್ರಮಾಣ ಎಷ್ಟು ಸರಿ…??”
1 min read
ದೈವಗಳ ಎದುರು ಆಣೆ ಪ್ರಮಾಣ ಮಾಡುವುದು ಹೇಗೆ ? ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಮಾಡಿರುವ ಆಣೆ ಪ್ರಮಾಣ ದೈವಾರಾಧನೆ ನಿಯಮಗಳ ಪ್ರಕಾರ ಸರಿಯಾಗಿದೆಯೇ ? ಕರಾವಳಿಯ ಜನಪದ ಬದುಕಿನಲ್ಲಿ ಆಣೆ ಪ್ರಮಾಣಕ್ಕೊಂದು ಮಹತ್ವ ಇದೆ. ಕೋರ್ಟ್, ಕಾನೂನು, ಸಂವಿಧಾನ ಜಾರಿಯಲ್ಲಿ ಇರುವ ಈ ದಿನಗಳಲ್ಲಿ ಆಣೆ ಪ್ರಮಾಣ ಎನ್ನುವುದು ಮೂರ್ಖತನವಾದರೂ ಕಾನೂನು ಸಂವಿದಾನ ಜಾರಿಯಲ್ಲಿ ಇಲ್ಲದ ದಿನಗಳಲ್ಲಿ ಆಣೆ ಪ್ರಮಾಣಗಳು ಸಂಘರ್ಷ ಪರಿಹಾರದ ಒಂದು ಪ್ರಮುಖ ದಾರಿಯಾಗಿತ್ತು. ಹಾಗಾಗಿ ಈಗಲೂ ಆಣೆ ಪ್ರಮಾಣವನ್ನು ನಂಬುವ ಅಮಾಯಕರಿದ್ದಾರೆ.

ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಎದುರು ಸೌಜನ್ಯ ತಾಯಿ ಮತ್ತು ಆರೋಪ ಎದುರಿಸುತ್ತಿರುವ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ ಜೈನ್ ಮಾಡಿರುವ ಆಣೆ ಪ್ರಮಾಣ ಕರಾವಳಿಯ ಜನಪದೀಯ ನಂಬಿಕೆ ಪ್ರಕಾರ ಕ್ರಮ ಬದ್ಧವಾಗಿದೆಯೇ ? ಭಾಷಣಗಳಲ್ಲಿ ಹೆಸರು ಹೇಳುವ ಸೌಜನ್ಯ ತಾಯಿ ಕುಸುಮಾವತಿಯವರು ದೈವ ನಡೆಯಲ್ಲಿ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ ಜೈನ್ ಹೆಸರು ಯಾಕೆ ಹೇಳಲಿಲ್ಲ ? ಎಂದ ಹಲವರು ಪ್ರಶ್ನಿಸುತ್ತಿದ್ದಾರೆ.

ಮೊದಲನೆಯದಾಗಿ ದೈವದ ಎದುರು ಆಣೆ ಮಾಡುವಾಗ ಕೆಲವು ಕ್ರಮಬದ್ಧ ನಿಯಮಗಳಿವೆ. ಆಣೆ ಪ್ರಮಾಣ ಮಾಡುವ ಎರಡೂ ಕಡೆಯವರು ದೈವದ ಸಾನದ ಮುಂದೆ ನಿಂತುಕೊಳ್ಳಬೇಕು. ಮದ್ಯಸ್ಥರು ಅಥವಾ ಗುರಿಕಾರರು ಅಥವಾ ದೈವದ ಚಾಕರಿ ಮಾಡುವವರು ದೈವದ ಬಳಿ ಪ್ರಾರ್ಥನೆ ಮಾಡಬೇಕು. ಆ ಬಳಿಕ ಎರಡೂ ಕಡೆಯವರ ಬಳಿ ಅಣೆ ಪ್ರಮಾಣ ಮಾಡಿಸಬೇಕು. ಆಣೆ ಪ್ರಮಾಣವನ್ನು ಹೇಗೇಗೋ ಮಾಡುವಂತಿಲ್ಲ. ಘಟನೆಯನ್ನು ನೋಡಿದ್ದರೆ ಮಾತ್ರ ಕೃತ್ಯ ಮಾಡಿದ್ದ ವ್ಯಕ್ತಿಗಳ ಹೆಸರುಗಳನ್ನು ಹೇಳಬೇಕು. ಇಲ್ಲದೇ ಇದ್ದರೆ ಸಂತ್ರಸ್ತರು ದೈವದ ಬಳಿ ಪ್ರಾರ್ಥನೆಯನ್ನಷ್ಟೇ ಮಾಡಬೇಕು. ನೇರ ಭಾದಿತ ಅಲ್ಲದವರ ಆಣೆ ಪ್ರಮಾಣವೇ ಬೇರೆ, ಭಾದಿತರ ಆಣೆ ಪ್ರಮಾಣವೇ ಬೇರೆ. ಅದನ್ನು ಮಧ್ಯಸ್ಥ/ಗುರಿಕಾರ/ಚಾಕರಿ ಮಾಡುವವರು ವಿವೇಚನೆ ಬಳಸಿ ನಿರ್ವಹಿಸಬೇಕು. ಕುಸುಮಾವತಿ ನೇರ ಸಂತ್ರಸ್ತರು. ಹಾಗಾಗಿ “ನನ್ನ ಮಗಳಿಗೆ ಈ ಸ್ಥಿತಿ ತಂದೊದಗಿದ ಹಂತಕರಿಗೆ ಶಿಕ್ಷೆಯಾಗಬೇಕು” ಎಂದು ಪ್ರಾರ್ಥನೆ ಮಾಡಬೇಕು. ಅದು ಸರಿಯಾಗಿದೆ.
ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ ಜೈನ್ ಎಂಬವರ ಮೇಲೆ ಸೌಜನ್ಯ ತಾಯಿ ಕುಸುಮಾವತಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಹಾಗಾಗಿ ಅವರು ನಾವು ಅಂತಹ ಕೃತ್ಯ ನಡೆಸಿಲ್ಲ ಎಂದು ದೈವದ ನಡೆಯಲ್ಲಿ ಹೇಳಬೇಕು. “ಸ್ವಾಮೀ ಅಣ್ಣಪ್ಪ ಪಂಜುರ್ಲಿಯೇ, ಧರ್ಮಸ್ಥಳ ಗ್ರಾಮ ಪಾಂಗಳದ ಸೌಜನ್ಯ ಅನ್ನುವ ಹುಡುಗಿಯ ಕೊಲೆ ಅತ್ಯಾಚಾರ ನಡೆದಿದ್ದು ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಈ ಕೊಲೆ ಅತ್ಯಾಚಾರದ ಹಿಂದೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನನ್ನ ಕೈವಾಡ ಇಲ್ಲ. ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಮಾಯದಲ್ಲಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಡು” (ಸ್ವಾಮೀ ಅಣ್ಣಪ್ಪಪಂಜುರ್ಲಿಯೇ, ಧರ್ಮಸ್ಥಳದ ಪಾಂಗಳದ ಸೌಜನ್ಯ ಪನ್ಪಿನ ಪೊನ್ನನ ಅತ್ಯಾಚಾರ, ಕೊಲೆ ಆತುಂಡು. ಐಕ್ಲ, ಎಂಕುಲಾ ವಾ ಸಂಬಂಧ ಇಜ್ಜಿ. ಈ ಕೊಲೆ ಬೊಕ್ಕ ಅತ್ಯಾಚಾರದ ಪಿರವು ಎನ್ನ ಕೈವಾಡಲಾ ಇಜ್ಜಿ. ನಿನ್ನ ಮಾಯೊಗು ತೆರಿಯಂದಿನ ವೊವುಲಾ ಇಜ್ಜಿ. ಮಾಯೊಡು ತೂವೊನ್ಲಾ) ಅಂತ ಹೇಳಬೇಕು. ಮೂವರು ಪ್ರತ್ಯೇಕ ಪ್ರತ್ಯೇಕವಾಗಿ ಆಣೆ ಮಾಡಬೇಕು.
ಆದರೆ ಮಲ್ಲಿಕ್ ಜೈನ್ ಮತ್ತು ಉದಯ ಜೈನ್ ಆಣೆ ಪ್ರಮಾಣ ಮಾಡಲೇ ಇಲ್ಲ. ಧೀರಜ್ ಜೈನ್ ಅವರೊಬ್ಬರೇ ಮೂವರ ಹೆಸರಿನಲ್ಲಿ ಆಣೆ ಪ್ರಮಾಣವನ್ನು ಮಾಡುತ್ತಾರೆ. ದೈವದ ಮುಂದೆ ಹೀಗೆ ಜಿಪಿಎ ತಗೊಂಡು ಆಣೆ ಮಾಡುವ ಕ್ರಮ ಇಲ್ಲ. ಆಣೆ ಪ್ರಮಾಣ ವಸ್ತುನಿಷ್ಟವಾಗಿರಬೇಕು. ದೈವದ ಮುಂದೆ ಭಾಷಣ ಮಾಡುವಂತಿರಬಾರದು. ಆರೋಪ ಎದುರಿಸುತ್ತಿರುವ ಮೂವರ ಪರವಾಗಿ ಧೀರಜ್ ಜೈನ್ ದೈವಸ್ಥಾನದ ಎದುರು ಭಾಷಣ ಮಾಡಿದ್ದಾರೆ. “ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕ್ಷೇತ್ರದಲ್ಲಿ ಒಂದು ದುರ್ಮರಣ ಆಗಿದೆ. ಆ ದುರ್ಮರಣಕ್ಕೂ ನಮ್ಮ ಮೂವರಿಗೂ ಯಾವ ಸಂಬಂಧವೂ ಇಲ್ಲ ಅಂತ ಕಾನೂನು ಹಾಗೂ ನ್ಯಾಯಾಂಗದಲ್ಲಿ ಸಾಭೀತಾಗಿದೆ. ಆದರೂ ನಮ್ಮ ಮೇಲೆ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ. ನಾವು ತಪ್ಪು ಮಾಡಿಲ್ಲ. ನಮ್ಮ ಬಗ್ಗೆ ಹೇಳುವವರಿಗೆ ದೇವರು ಸರಿಯಾದ ಶಿಕ್ಷೆ ನೀಡಬೇಕು” ಎಂದು ಪ್ರಮಾಣ ಮಾಡುತ್ತಾರೆ. ಯಾವುದೋ ಒಂದು ದುರ್ಮರಣ ಎಂದರೆ ಏನರ್ಥ ? ಧರ್ಮಸ್ಥಳ ಗ್ರಾಮದಲ್ಲಿ ನೂರಾರು ದುರ್ಮರಣ ಆಗಿದೆ. ಅವೆಲ್ಲದರಲ್ಲಿ ಈ ಮೂವರ ಪಾತ್ರ ಇದೆ ಎಂದು ಯಾರೂ ಆರೋಪಿಸಿಲ್ಲ. ನಮಗೂ ಆ ದುರ್ಮರಣಕ್ಕೂ ಸಂಬಂಧ ಇಲ್ಲ ಎಂದು ಕಾನೂನು ಹಾಗೂ ನ್ಯಾಯಾಂಗದಲ್ಲಿ ಸಾಭೀತಾಗಿದೆ ಎಂದು ಹೇಳುತ್ತಾರೆ. ಇದೇ ಜನರ ಆಕ್ಷೇಪದ ವಿಷಯವಾಗಿದ್ದು, ಎಲ್ಲರಿಗೂ ಗೊತ್ತಿದೆ. ದುರ್ಮರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ದೈವದ ಎದುರು ದುರ್ಮರಣದ ಸ್ಪಷ್ಟ ವಿಷಯದೊಂದಿಗೆ ಸ್ವಯಂ ಘೋಷಿಸಿಕೊಳ್ಳಬೇಕು. ದೇವರ ಮುಂದೆ ಆಣೆ ಪ್ರಮಾಣ ಮಾಡುವವರು ಸದ್ರಿ ದೇವರನ್ನು ನಂಬುವವರಾಗಿರಬೇಕು. ದೈವದ ಮುಂದೆ ಆಣೆ ಮಾಡುವವರು ದೈವಾರಾಧನೆ/ಭೂತಾರಾಧನೆಯನ್ನು ನಂಬುವವರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಣೆ ಪ್ರಮಾಣವನ್ನು ಮಧ್ಯಸ್ಥರು ಅಥವಾ ಗುರಿಕಾರರು ಅಥವಾ ದೈವದ ಚಾಕರಿ ಮಾಡುವವರು ನಿರ್ವಹಿಸಬೇಕೇ ಹೊರತು ಯಾವುದೇ ಸಂಘಟನೆಯ ಮುಖಂಡರಲ್ಲ.
ಹಾಗಾಗಿ ಅಣ್ಣಪ್ಪ ಬೆಟ್ಟದ ಎದುರು ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ ಜೈನ್ ಮಾಡಿದ್ದು ಆಣೆ ಪ್ರಮಾಣವಲ್ಲ. ಭಾಷಣವಷ್ಟೆ. ಕರಾವಳಿಯ ದೈವಾರಾಧನೆಯಲ್ಲಿ ಇಂತಹ ಆಣೆ ಪ್ರಮಾಣಕ್ಕೆ ಯಾವ ಮಹತ್ವವೂ ಇರುವುದಿಲ್ಲ. ಸಂವಿಧಾನ, ಕಾನೂನು, ಪ್ರಜಾಪ್ರಭುತ್ವದಲ್ಲಂತೂ ಆಣೆ ಪ್ರಮಾಣಕ್ಕೆ ಯಾವ ಕಿಮ್ಮತ್ತಿನ ಬೆಲೆಯೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಅತ್ಯಂತ ಕ್ರೂರವಾಗಿ ಸಾಯಿಸಲ್ಪಟ್ಟ ಹೆಣ್ಣು ಮಗುವಿನ ತಾಯಿಯನ್ನು “ಆಣೆ ಮಾಡು” ಎಂದು ಪೀಡಿಸುವುದು ಕ್ರೂರತೆಯ ಪರಮಾವಧಿ. ಹೋರಾಟಗಾರರು ಸಂವಿದಾನ, ಕಾನೂನು, ಪ್ರಜಾಸತ್ತಾತ್ಮಕ ಹಕ್ಕು ಆಗಿರುವ ಹೋರಾಟಗಳ ಮೂಲಕ ನ್ಯಾಯ ಪಡೆಯಬೇಕೇ ಹೊರತು ಆಣೆ ಪ್ರಮಾಣಗಳಿಂದಲ್ಲ.
ಬರಹ ಕೃಪೆ.
ನವೀನ್ ಸೂರಿಂಜೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




