“ಕಂದಾಯ ಭೂಮಿ ಗುಳುಂ : 60 ಮಂದಿ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿ,ತನಿಖೆಯಿಂದ ಪತ್ತೆ.”
1 min read
ರಾಜ್ಯದ ಅತಿ ದೊಡ್ಡ ಕಂದಾಯ ಭೂಮಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, 60 ಕಂದಾಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಕಡೂರು ತಾಲ್ಲೂಕಿನಲ್ಲಿ ನಡೆದ ಕಂದಾಯ ಭೂಮಿಯ ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆಯ ವರದಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೈ ಸೇರಿದೆ. 15 ತಹಶಿಲ್ದಾರ್ ಗಳ ನೇತೃತ್ವದ ವಿಶೇಷ ತನಿಖಾ ತಂಡ ಕಡೂರು ತಾಲ್ಲೂಕಿನಲ್ಲಿ ನಡೆದ ಅಕ್ರಮದ ಬಗ್ಗೆ ವರದಿ ಸಿದ್ದ ಪಡಿಸಿದ್ದು ಅಕ್ರಮದಲ್ಲಿ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಸೇರಿದಂತೆ 60 ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ,ಮದಗದಕೆರೆ ಸುತ್ತಮುತ್ತಲಿನಲ್ಲಿ ಮೂರು ಸಾವಿರಾರು ಎಕರೆ ಗೋಮಾಳ, ಕಂದಾಯ ಭೂಮಿಯನ್ನ ಪ್ರಭಾವಿ ವ್ಯಕ್ತಿಗಳು ಹಿರಿಯ ಸರ್ಕಾರಿ ಅಧಿಕಾರಿಗಳ ಹೆಸರಿಗೆ ಪರಭಾರೆ ಮಾಡಿ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ತನಿಖಾ ವರದಿಯನ್ನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸರ್ಕಾರಕ್ಕೆ ಕಳಿಸಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ದೂರು ನೀಡಿ ಕಾನೂನು ಕ್ರಮಕ್ಕೆ ಸಿದ್ದತೆ ನಡೆಸಿದ್ದು. ಕಡೂರು ತಾಲ್ಲೂಕಿನ ಹಿಂದಿನ ತಹಶೀಲ್ದಾರ್ ಉಮೇಶ್ ವಿರುದ್ಧ ಡಿ.ಸಿ ಸೂಚನೆ ಮೇರೆಗೆ ಪ್ರಕರಣ ದಾಖಲಾಗಿದೆ.
ರಾಜ್ಯದ ಅತಿ ದೊಡ್ಡ ಕಂದಾಯ ಭೂಮಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ, ಏನಿದು ಹಗರಣ:
ಕಾಫಿನಾಡು ಚಿಕ್ಕಮಗಳೂರು ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ ಮಲೆನಾಡು , ಅರೆ ಮಲೆನಾಡು, ಬಯಲು ಸೀಮೆ ಭಾಗದಿಂದ ಕೂಡಿದ್ದು . ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭೂಮಿಗೆ ಚಿನ್ನದ ಬೆಲೆ ಇದೆ. ಸರ್ಕಾರಿ ಕಂದಾಯ ಭೂಮಿ ಗೋಮಾಳಗಳ ಮೇಲೆ ಕಣ್ಣಿಟ್ಟು ಪ್ರಭಾವಿಗಳು, ರಾಜಕೀಯ ಮುಖಂಡರು, ಹಿರಿಯ ಸರ್ಕಾರಿ ಅಧಿಕಾರಿಗಳು ತಾಲ್ಲೂಕು ಕಂದಾಯ ಅಧಿಕಾರಿಗಳ ಸಹಾಯ ಪಡೆದು ನಕಲಿ ದಾಖಲೆ ಸೃಷ್ಟಿ ಮಾಡಿ ಸಾವಿರರು ಎಕರೆ ಭೂಮಿಯನ್ನ ಫಾರಂ 50,53,57 ರಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಸರ್ಕಾರಿ ಕಂದಾಯ ಅಧಿಕಾರಿಗಳು ಸರ್ಕಾರ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿದ್ರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಮೌಲ್ಯದ ಭೂಮಿಯೇ ಕೈ ತಪ್ಪಿದೆ.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದ ಕಂದಾಯ ಭೂಮಿ ಹಗರಣ:
ಕಡೂರು ತಾಲ್ಲೂಕಿನಲ್ಲಿ ನಿತ್ಯವೂ ನಿರಂತರವಾಗಿ ಗ್ರಾಮಗಳಲ್ಲಿ ಗೋಮಾಳ ಭೂಮಿ ಒತ್ತುವರಿ ಬಗ್ಗೆ ದೂರುಗಳು ಜಿಲ್ಲಾಡಳಿತಕ್ಕೆ ಬಂದ ಹಿನ್ನೆಲೆ ಕಡೂರು ತಾಲೂಕಿನಲ್ಲಿ ತನಿಖೆ ನಡೆಸಿದಾಗ ಗೋಮಾಳ ಭೂಮಿ ಜೊತೆ ಕಂದಾಯ ಭೂಮಿಗಳಿಗೂ ಫಾರಂ ನಂಬರ್ 50,53 ,57 ರಲ್ಲಿ ಖಾತೆ ಆಗಿರುವುದು ಬೆಳಕಿಗೆ ಬಂದಿತ್ತು. ಹಿಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ವರದಿ ಸಿದ್ದ ಪಡಿಸಿ ಸರ್ಕಾರಕ್ಕೆ ಕಳಿಸಿದ್ರು. ಇದ್ರಿಂದ ಎಚ್ಚೆತ್ತುಕೊಂಡ ಸರ್ಕಾರ ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ತನಿಖೆ ನಡೆಸುವಂತೆ ಆದೇಶ ನೀಡಿತ್ತು.
ಚಿಕ್ಕಮಗಳೂರು ಜಿಲ್ಲೆ ಕಂದಾಯ ಭೂಮಿ ಹಗರಣ- ಸರ್ಕಾರಿ ಶಾಲೆ, ಕಟ್ಟಡ ನಿರ್ಮಾಣಕ್ಕೂ ಸರ್ಕಾರಿ ಭೂಮಿ ಕೊರತೆ:
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡ ,ಶಾಲೆ ಆಸ್ಪತ್ರೆ ನಿರ್ಮಾಣಕ್ಕೂ ಭೂಮಿ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು. ಕಂದಾಯ , ಗೋಮಾಳ ಭೂಮಿಯನ್ನ ಪ್ರಭಾವಿ ವ್ಯಕ್ತಿಗಳು ಸೇರಿದಂತೆ ರಾಜಕೀಯ ಮುಖಂಡರು,ಹಿರಿಯ ಅಧಿಕಾರಿಗಳು ಗುಳುಂ ಮಾಡಿದ್ದಾರೆ. ಸತ್ತ ವ್ಯಕ್ತಿ, ವಿದೇಶಗಳಲ್ಲಿ ನೆಲೆಸಿರುವವರ ಹೆಸರಿನಲ್ಲೂ ಖಾತೆಗಳನ್ನ ಕಂದಾಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಭಾರೆ ಮಾಡಿದ್ದು ಸರ್ಕಾರ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದೆ.
ಕಂದಾಯ ಭೂಮಿ ಹಗರಣ- ಹಂತ ಹಂತವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತನಿಖೆ:
ಸರ್ಕಾರ 15 ಜನ ತಹಶೀಲ್ದಾರ್ ಗಳ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಕ್ರಮದ ತನಿಖೆಗೆ ಸೂಚನೆ ನೀಡಿದ್ದು ಮೊದಲ ಹಂತವಾಗಿ ಮೂಡಿಗೆರೆ ಕಡೂರಿನಲ್ಲಿ ತನಿಖೆ ಆರಂಭವಾಗಿದ್ದು. ಜಿಲ್ಲೆಯಾದ್ಯಂತ ತನಿಖೆ ನಡೆಯಲಿದೆ. ವಿಶೇಷ ತಂಡ ಒಂದೊಂದೇ ತಾಲೂಕಿನಲ್ಲಿ ನಡೆದಿರುವ ಅಕ್ರಮದ ದಾಖಲೆಗಳನ್ನ ಸಂಗ್ರಹ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಮಾಡಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.