“ಸೌಜನ್ಯಳಿಗೆ ನ್ಯಾಯ ಕೊಡಿಸಿ : ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮುಖಾಂತರ ಮನವಿ.”
1 min read
ದಿನಾಂಕ 01/08/2023ರ ಮಂಗಳವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ತಾಲ್ಲೂಕು ಕಚೇರಿಯಲ್ಲಿ ಮಾನವ ಬಂಧುತ್ವ ವೇದಿಕೆ ಇವರ ವತಿಯಿಂದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಯಿತು.
ಸುಮಾರು ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಯಾದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯೆಂದು ಪರಿಗಣಿಸಿ ಹನ್ನೊಂದು ವರ್ಷಗಳ ಹಿಂದೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು ಆದರೆ ಜೂನ್ 16/2023ರಂದು ನಿರಪರಾಧಿಯೆಂದು ಸಿ.ಬಿ.ಐ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಬಿಡುಗಡೆ ಮಾಡಿದೆ. ಹಾಗಾದರೆ ಸೌಜನ್ಯಗೌಡ ಎಂಬ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ನಿಜವಾದ ಅಪರಾಧಿಗಳು ಯಾರೆಂದು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವ ಜೊತೆಗೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಸುರೇಂದ್ರ ಬಾಬು ಅವರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಂಗಡಿ ಚಂದ್ರು ಮಾತನಾಡಿ ಅಪರಾಧಿ ಎಷ್ಟೇ ಪ್ರಬಲನಾಗಿದ್ರೂ ಶಿಕ್ಷೆ ಆಗಲೇಬೇಕು ನೊಂದ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ದಲ್ಲಿ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಹೊನ್ನೇಶ್ ಬೆಟ್ಟಗೆರೆ,ಜಗದೀಶ್,ಪ್ರಶಾಂತ್,ಸಾಜಿದ್,ರಾಘವೇಂದ್ರ,,ಎಂ.ಸಿ.ಹೂವಪ್ಪ,ಅಭಿಜಿತ್ ಹೆಡದಾಳು ಹಾಗೂ ಇನ್ನಿತರ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಮನವಿ ನೀಡಿದ ಮಾನವ ಬಂಧುತ್ವ ವೇದಿಕೆಯು ಒಟ್ಟು ಐದು ಹಕ್ಕೊತ್ತಾಯಗಳನ್ನಿಟ್ಟಿದೆ.ಅವುಗಳು ಕೆಳಗಿನಂತಿದೆ.
1) ಸೌಜನ್ಯ ಗೌಡ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ಮಾಡಿಸಿ ನಿಜವಾದ ಅಪರಾಧಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
2) ಈ ಪ್ರಕರಣದ ಮುಂಚೂಣಿ ಹೋರಾಟಗಾರರಿಗೆ ಮತ್ತು ಸೌಜನ್ಯ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು.
3) ಸಂತೋಷ್ ರಾವ್ ಎಂಬ ಅಮಾಯಕನ ಮೇಲೆ ಇದುವರೆಗೂ ಆದ ಅನ್ಯಾಯಕ್ಕೆ ಕರ್ನಾಟಕ ಸರ್ಕಾರವು ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು.
4) ಈ ಪ್ರಕರಣವನ್ನು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು.
5) ಇದುವರೆಗೂ ತನಿಖೆಯನ್ನು ತಪ್ಪು ಹಾದಿಯಲ್ಲಿ ಕೊಂಡೊಯ್ದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.