“ಪ್ರವಾಸಿಗರಿಗೆ ಜೀವ ಸಂಕುಲದ ಅರಿವಿರಲಿ.”
1 min read
ಇಲ್ಲಿನ ಚಿತ್ರಗಳು ಈ ದಿನ ನಾವು ಕೋಗಿಲೆ ಎಂಬ ಗ್ರಾಮ ದಾಟಿ ದೇವರಮನೆಗೆ ನಡೆಯುವಾಗ ಒಂದು ಕಿಲೋಮೀಟರ್ ಅಂತರದಲ್ಲಿ ಕ್ಲಿಕ್ಕಿಸಿದವು.

( ಇದರಲ್ಲಿ ಎರಡು ನಮ್ಮ ಪಶ್ಚಿಮ ಘಟ್ಟಗಳಿಗೆ ವಿಶಿಷ್ಟವಾದ ಗ್ರೀನ್ ವೈನ್ ಸ್ನೇಕ್ ಗಳಾದರೆ ಮತ್ತೊಂದು ಶೀಲ್ಡ್ ಟೈಲ್ ಆಗಿತ್ತು. ಉಳಿದ ಇನ್ನೊಂದು ಗುರುತು ಸಿಗದಷ್ಟು ಅಪ್ಪಚ್ಚಿಯಾಗಿತ್ತು!)
ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿ ಒಂದೇ ದಿನ (ಹೆಚ್ಚೆಂದರೆ ನೆನ್ನೆಯೂ ಸೇರಿ ಎರಡು ದಿನ) ಪ್ರವಾಸಿಗರ ಬೇಜವಾಬ್ದಾರಿ ಚಾಲನೆಯಿಂದ ಇಷ್ಟರಮಟ್ಟಿಗೆ ಜೀವಸಂಕುಲದ ಮಾರಣಹೋಮ ನಡೆದಿದೆ ಎಂದರೆ ಪ್ರವಾಸಿಗರು ದೇವರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಮುಂದಿನ ಮೂರು ತಿಂಗಳ ದೀರ್ಘ ಅವಧಿಯ ಕಥೆ ಏನು?
ದೇವರಮನೆ ಬೆಟ್ಟ ಗುಡ್ಡಗಳ, ಮಳೆ ಮಂಜು ಇಬ್ಬನಿಗಳ ಪ್ರವಾಸಿ ತಾಣವಾಗಿ ತೀರಾ ಅತಿ ಎನ್ನಬಹುದಾದಷ್ಟು ಪ್ರಚಾರ ಪಡೆದಂತೆ ಜೀವಸಂಕುಲದ ವಿಶಿಷ್ಟತೆ, ಅನನ್ಯತೆಗಳ ದೃಷ್ಟಿಯಿಂದ ಅದೆಷ್ಟು ಮಹತ್ವದೆಂದು ಪ್ರಚಾರ ಪಡೆಯಲೇ ಇಲ್ಲ.ಹಾಗಾಗಿಯೇ ದೂರದ ಪ್ರವಾಸಿಗರು ಇದನ್ನು ನೋಡಿ ಮುಗಿಸಿ ಆದಷ್ಟು ಬೇಗನೇ ಇನ್ನೊಂದು ಪ್ರವಾಸಿ ತಾಣವನ್ನು ನೋಡಿ ಬಿಡುವ ಧಾವಂತದಲ್ಲಿ ವೇಗವಾಗಿ ವಾಹನ ಚಲಾಯಿಸಲಾರಂಭಿಸಿದ್ದಾರೆ. ಪರಿಣಾಮ ಈ ಬಗೆಯ ಜೀವಸಂಕುಲದ ನಾಶ ದಿನನಿತ್ಯದ ಸಂಗತಿಯಾಗಿದೆ..

ಇದನ್ನು ತಪ್ಪಿಸಲೆಂದೇ ಅರಣ್ಯ ಇಲಾಖೆಯವರು ಅಲ್ಲಲ್ಲಿ “ಕಾಡು ಪ್ರಾಣಿಗಳಿವೆ.. ನಿಧಾನವಾಗಿ ಚಲಿಸಿ..”ರೆಂಬ ಸೂಚನಾ ಫಲಕಗಳನ್ನು ಅಳವಡಿಸಿರುವರಾದರೂ ಕಾಡು ಪ್ರಾಣಿಗಳೆಂದರೆ ಆನೆ, ಹುಲಿ, ಕಾಟಿ, ಕರಡಿಗಳಂತಹ ದೊಡ್ಡ ಪ್ರಾಣಿಗಳು ಮಾತ್ರ ಎಂದು ತಿಳಿದಿರುವ ಪ್ರವಾಸಿಗರು ಸಣ್ಣಪುಟ್ಟ ಜೀವಿಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ..
ಇನ್ನೂ ಮುಂದಾದರು ಪ್ರವಾಸಿಗರು ಅಪಾರ ಸಂಖ್ಯೆಯ ಜೀವಸಂಕುಲವಿರುವ ದೇವರಮನೆಯಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿ ಅರಿತು ವಾಹನ ಚಲಾಯಿಸುವಂತಾಗಲಿ..
ಬರಹ ಕೃಪೆ.
ಪೂರ್ಣೇಶ್ ಮತ್ತಾವರ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.