“ಮರೆಯೋದುಂಟೆ ಮೈಸೂರು ದೊರೆಯಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ.”
1 min read
ಎಸ್ ಬಿ ಎಂ ಬ್ಯಾಂಕ್ ಚಂದ್ರಪ್ಪನವರ ಕುಟುಂಬದಿಂದ ಆತಿಥ್ಯ – ಸ್ನೇಹಿತರು ಮತ್ತು ಸಹಪಾಠಿಗಳಿಂದ ಪ್ರೀತಿಯ ಬೀಳ್ಕೊಡುಗೆ
ಸಂಬಂಜ ಅಂದ್ರೆ ದೊಡ್ದು ಕನ್ಹಾ ಎಂಬ ದೇವನೂರು ಮಹದೇವ ಅವರ ಮಾತಿಗೆ ಸಾಕ್ಷಿಯಾದ ಔತಣ ಕೂಟ
ನಗು ಎಂಬುದು ಒಂದು ವಿಶ್ವ ಭಾಷೆ, ಅದಕ್ಕೆ ನಮ್ಮ ಶತ್ರುಗಳನ್ನು ಗೆಲ್ಲುವ ಶಕ್ತಿ ಇದೆ, ಆ ನಗುವು ನಮ್ಮದಾದರೆ ಆಯಸ್ಸು ಮತ್ತು ಆರೋಗ್ಯ ಎರಡು ಹೆಚ್ಚಾಗುತ್ತದೆ ಮಾತ್ರವಲ್ಲ ಸಮಾಜದ ಮೇಲು ಕೀಳುಗಳೆಂಬ ಎಲ್ಲ ಎಲ್ಲೆಯನ್ನು ಮೀರಿ ಕುಡಿಬಳ್ಳಿಯಂಗೆ ಸಂಬಂಧಗಳು ಬೆಳೆದು ಹಬ್ಬುತ್ತದೆ,
ಇಂತಹ ಸಣ್ಣದೊಂದು ಮಂದಸ್ಮಿತ ನಗುವಿನೊಂದಿಗೆ ಅ ಒಂದು ದಿನ ಪರಿಚಯವಾದವರು,ಇಂದು ಎಂದೂ ಮರೆಯದ ಹಳೆಯ ಹಾಡಿನಂತಾದವರು ಚಿಕ್ಕಮಗಳೂರಿನ
ಎಸ್ ಬಿ ಎಂ ಬ್ಯಾಂಕಿನ ಚಂದ್ರಪ್ಪನವರು,
ನನ್ನ ಮೇಲ್ಕಂಡ ಪ್ರಥಮ ಮಾತುಗಳಿಗೆ ಸಂಬಂಧಪಟ್ಟಂತೆ ಮೈಸೂರು ದೊರೆಯ ಅರಸನಾಗಿ ತನ್ನ 11ನೇ ವಯಸ್ಸಿಗೆ ರಾಜ ಪಟ್ಟವನೇರಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ರಾಜ್ಯಬಾರ ಮಾಡಿದ್ದು ಒಟ್ಟು 46 ವರ್ಷಗಳು, ಆ 46 ವರ್ಷಗಳಲ್ಲಿ ಇಡೀ ಮೈಸೂರು ಮಹಾ ಸಂಸ್ಥಾನದ ಯಾವ ರಾಜ- ಮಹಾರಾಜರು ಕೈಗೊಳ್ಳದೆ ಇದ್ದಂತಹ ಜನಪರ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದು, ರಾಜಪ್ರಭುತ್ವವಿದ್ದರೂ ಕೂಡ ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿ ಮಾಡುವ ಮೂಲಕ ಜನಮಾನಸದಲ್ಲಿ ಉಳಿದುಕೊಂಡವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು,
ನಾಲ್ವಡಿ ಅವರ ಅವಧಿಯಲ್ಲಿ ಅಂದಿನ ಮೈಸೂರು ನಾಡು ಎಂದೂ ಅಳಿಸಿ ಹೋಗಲಾರದಂತಹ ಅನೇಕ ವಿಕ್ರಮಗಳನ್ನು ಸಾಧಿಸಿತು,ಅ ಸಾಧನೆಯ ವಿಕ್ರಮಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥಾಪನೆ ಕೂಡ ಒಂದು,
ಇಂತಹ ಇತಿಹಾಸ ಪ್ರಸಿದ್ಧವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬುದು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI )ಹೆಸರಲ್ಲಿ ವಿಲೀನ ಗೊಂಡಿದೆ,
ಇದೊಂದೇ ಬ್ಯಾಂಕ್ ಮಾತ್ರ ಅಲ್ಲ , ಇಂತಹ ಅನೇಕ ದಕ್ಷಿಣ ಭಾರತದ ಲಾಭದಾಯಕವಾದ ಬ್ಯಾಂಕುಗಳು ಉತ್ತರ ಭಾರತದ ನಷ್ಟ ಹೊಂದಿದ ಬ್ಯಾಂಕುಗಳೊಂದಿಗೆ ವಿಲೀನಗೊಂಡಿವೆ, ಅಲ್ಲ ವಿಲೀನ ಮಾಡಿದ್ದಾರೆ, ನಮ್ಮ ದೇಶವನ್ನಾಳುವ ಚಾಣಾಕ್ಷರು,
ಬಹುಶಃ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕರಿಗೆ ನಗುಮೊಗದ ಸ್ವಾಗತ ಸಿಗುವುದು ಬಹಳ ಕಡಿಮೆ, ಆದರೆ, ಬ್ಯಾಂಕುಗಳು ಇದಕ್ಕೆ ಹೊರತಾಗಿದ್ದವು,
ಅದೊಂದು ಕಾಲವಿತ್ತು, ಯಾವ ಸರ್ಕಾರಿ ಕಚೇರಿಗಳಲ್ಲೂ ನಗುಮೊಗದ ಮುಖಗಳು ಹೆಚ್ಚಾಗಿ ಕಾಣದಿದ್ದರೂ ಕೂಡ,ಬ್ಯಾಂಕುಗಳಲ್ಲಿ ಮಾತ್ರ ಕೆಳಹಂತದ ನೌಕರನಿಂದ ಹಿಡಿದು ಮೇಲಿನ ಹಂತದ ಅಧಿಕಾರಿಯವರಿಗೆ ಸದಾ ನಗುನಗುತ್ತಲೆ ಕೆಲಸ ಮಾಡುತ್ತಾ,ಗ್ರಾಹಕರನ್ನು ತಮ್ಮ ಒಂದೇ ಒಂದು ಸಣ್ಣ ಮುಗುಳ್ನಗುವಿನೊಂದಿಗೆ ಬರಮಾಡಿಕೊಂಡು ಆ ಮೂಲಕ ತಮ್ಮ ಪ್ರಥಮ ಹಂತದಲ್ಲೇ ಅವರನ್ನು ಗೆದ್ದು, ಈ ನಗುವಿಗಾಗಿ ಸದಾ ನಾವು ಬ್ಯಾಂಕಿಗೆ ಹೋಗಿ ಬರುತ್ತಿರಬೇಕು ಎನ್ನುವಂತಹ ವಾತಾವರಣವನ್ನು ಸೃಷ್ಟಿಸುವ ಮೂಲಕ ತನ್ನ ವ್ಯಾಪಾರ ವಹಿವಾಟುಗಳನ್ನು ವೃದ್ಧಿಸಿಕೊಂಡು ಇಂದು ದೊಡ್ಡ ಪ್ರಮಾಣದಲ್ಲಿ ಎಲ್ಲ ಬ್ಯಾಂಕುಗಳು ಬೆಳದು ನಿಂತಿದ್ದಾವೆ, ಇಂತಹ ನೌಕರರ ನಗುವೆ ಆ ಬ್ಯಾಂಕಿನ ಬೆಳವಣಿಗೆಗೆ – ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಇಂದು ಬಹುತೇಕ ಎಲ್ಲ ಬ್ಯಾಂಕುಗಳಲ್ಲಿ ಅಂದಿನ ಕಾಲದಲ್ಲಿ ಕೊಡ ಮಾಡುತ್ತಿದ್ದ ಈ ರೀತಿಯ ನಗು ಮೊಗದ ಮುಖಗಳು ಕಾಣೆಯಾಗಿವೆ.
ನೌಕರರು ಮತ್ತು ಕಂಪ್ಯೂಟರ್ ಒಂದೇ ರೀತಿ ನಗು ಇಲ್ಲದ ಮೊಗದೊಂದಿಗೆ ವರ್ತಿಸುವಂತೆ ಎದ್ದು ಕಾಣುತ್ತಿದೆ ಒಂದಿಷ್ಟು ಹಳಬರು ಮಾತ್ರ ಒಂದಿಷ್ಟು ನಗುತ್ತಾ ಮಾತನಾಡುತ್ತಾರೆ.
ಇಂದಿನ ಯುವ ಉದ್ಯೋಗಿಗಳಂತು ಜೀವ ಇಲ್ಲದೆ ಇರುವ ಅ ನಿರ್ಜೀವ ಕಂಪ್ಯೂಟರಿನೊಂದಿಗೆ ತಮ್ಮ ಬದುಕನೋ ಹೆಚ್ಚು
ಸಹನಿಯಗೊಳಿಸಿಕೊಂಡಿದ್ದಾರೆ ಹೊರತು ಗ್ರಾಹಕರೊಟ್ಟಿಗೆ ಮನ ಬಿಚ್ಚಿ ಮಾತನಾಡುವುದು ಇರಲಿ ನಗುವಂತು ಇಲ್ಲವೇ ಇಲ್ಲ ಇಡೀ ನಗುವನ್ನೇ ಕಳೆದುಕೊಂಡ ಯುವ ಸಮೂಹವೊಂದು ಬ್ಯಾಂಕಿನೊಳಗೆ ಲಗ್ಗೆ ಇಟ್ಟಂತೆ ಆಗಿದೆ ಇವರಿಗೆ ಕಚುಗುಳಿ ಕೊಟ್ಟರು ನಗುವು ಹೊರಬರಲಾರದು ಅಂತಹ ಸ್ಥಿತಿಗೆ ಅವ್ರು ಹೋಗಿದ್ದಾರೆ ಎಂದರೆ ತಪ್ಪಾಗಲಾರದು.
ಇಂತಹ ಒಂದು ನಗು-ಮೊಗದೊಂದಿಗೆ,ಅಂದು ಅಂದರೆ ನನ್ನ ಕಾಲೇಜು ಜೀವನದಲ್ಲಿ ಬ್ಯಾಂಕಿನ ಮೂಲಕ ಪರಿಚಯವಾದವರು ಶ್ರೀ ಚಂದ್ರಪ್ಪನವರು.
ಚಂದ್ರಪ್ಪನವರು ಹುಟ್ಟಿದ್ದು ಮಾಗಡಿ ಎಂಬ ಹಳ್ಳಿಯಲ್ಲಿ ಶೋಷಿತ ಸಮುದಾಯದ ನೋವು ನಲಿವುಗಳನ್ನು ನೋಡಿಕೊಂಡು ಅನುಭವಿಸಿಕೊಂಡು ಬೆಳೆದವರು.
ಬಿಕಾಂ ಪದವಿ ಓದುತ್ತಿರುವಾಗಲೇ ಪಿಯುಸಿ ಆಧಾರದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬೇಲೂರಿನ ಗಣಸಿ ಶಾಖೆಯಲ್ಲಿ ನೌಕರರಾಗುವ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಸಿ ನಂತರ ಮೂಡಿಗೆರೆ ಶಾಖೆಯಲ್ಲಿ ಮೂರು ವರ್ಷ ಕೆಲಸ ಮಾಡಿ, ತದನಂತರ ಚಿಕ್ಕಮಗಳೂರು ನಗರದ ತಮ್ಮ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಲಾಂಗ್ ಸ್ಟ್ಯಾಂಡಿಂಗ್ ಆಗಿ ಹೆಚ್ಚು ಕಾಲ ಇಲ್ಲೇ ಸೇವೆ ಸಲ್ಲಿಸಿದರು.
1986ರಲ್ಲಿ ಬ್ಯಾಂಕ್ ನೌಕರರಾಗಿ ಸೇರಿ 2023 ರ ಜೂನ್ 30ರಂದು ನಿವೃತ್ತರಾದ ಚಂದ್ರಪ್ಪನವರು ಸುಮಾರು 37 ವರ್ಷಗಳ ಕಾಲ ತಮ್ಮದೇ ಆದ ಸೇವೆಯನ್ನು ಬ್ಯಾಂಕಿಗೆ ಕೊಟ್ಟವರು.
ಬ್ಯಾಂಕ್ ಸೇವೆಯ ವೃತ್ತಿ ಜೊತೆ ಜೊತೆಗೆ ಪ್ರವೃತ್ತಿಯಾಗಿ ಜನಪರ ಚಿಂತನೆಯನ್ನು ಮೈಗೂಡಿಸಿಕೊಂಡು ಓದು ವಿಮರ್ಶೆ ಸಂವಾದದಂತ ಸಾಹಿತ್ಯದ ಕಾರ್ಯಕ್ರಮಗಳನ್ನು ಜನಪರ ಚಳುವಳಿ ಕುರಿತು ವಿಚಾರಗೋಷ್ಠಿಗಳನ್ನು ಬಹುತ್ವದ ಭಾರತದ ಬಗ್ಗೆ ಭ್ರಾತೃತ್ವದ ಸಂಘಟನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಯಾರಿಗೂ ಗೊತ್ತಿಲ್ಲದ ಹಾಗೆ ಎಲೆಮರೆಯ ಕಾಯಿಯಂತೆ ತಮ್ಮನ್ನು ತಾವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯುವ ಸಮೂಹದ ಬೆನ್ನೆಲುಬಗಾಗಿ ನಿಂತವರು.
ಇತರರಂತೆ ತಮ್ಮ ಮಕ್ಕಳನ್ನು ಕೇವಲ ಓದು ಮತ್ತು ನೌಕರಿಗೆ ಮೀಸಲಿಡದೆ ತಮ್ಮ ಇಬ್ಬರೂ ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸದ ಜೊತೆ ಜೊತೆಗೆ ಹೋರಾಟದ ಚಳುವಳಿಯ ಮಹತ್ವ ಮತ್ತು ಮೌಲ್ಯವನ್ನು ತಿಳಿಸುತ್ತಾ ಅವರನ್ನು ಪ್ರೇರೇಪಿಸಿ ಸಾಮಾಜಿಕ ಚಟುವಟಿಕೆಗಳಿಗೆ ಧುಮುಕಿಸಿದವರು.
ಪ್ರಾರಂಭದಲ್ಲಿ ಕ್ಯಾಶ್ ಕ್ಲರ್ಕ್ ಆಗಿ ನಂತರ ಹೆಡ್ ಕ್ಯಾಶಿಯರ್ ಆಗಿ ತದನಂತರ ಚೀಫ್ ಅಸೋಸಿಯೇಟ್ ಅಧಿಕಾರಿಯಾಗಿ ಬಡ್ತಿ ಪಡೆದು ಮೊನ್ನೆ ಅಂದರೆ ಇದೆ ಜೂನ್ 30ಕ್ಕೆ ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು.
ನಿವೃತ್ತಿಯ ಮುನ್ನ ದಿನ
ತನ್ನ ಬ್ಯಾಂಕ್ ಸಹಪಾಠಿಗಳು ಮತ್ತು ಗ್ರಾಹಕರಾಗಿ ಪರಿಚಯ ವಾದ ಅನೇಕ ಸ್ನೇಹಿತರನ್ನು ಕರೆದು ಚಿಕ್ಕಮಗಳೂರಿನ ರೋಟರಿ ಹಾಲಿನಲ್ಲಿ ಔತಣ ಕೂಟವನ್ನು ಏರ್ಪಡಿಸಿ,ತಮ್ಮ ಬ್ಯಾಂಕ್ ಸೇವಾ ದಿನಗಳಲ್ಲಿ ಸಹಕರಿಸಿದ ಸಹಪಾಠಿಗಳಿಗೆ ಮತ್ತು ಗ್ರಾಹಕ ಮಿತ್ರರು,ಬಂಧುಗಳು ಹಾಗೂ ಹಿತೈಷಿಗಳಿಗೆ ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಮಡದಿ ಮತ್ತು ಮಕ್ಕಳೊಡಗೂಡಿ ಇಡೀ ತನ್ನ ವೃತ್ತಿ ಬದುಕಿನಲ್ಲಿ ನಡೆದು ಬಂದ ಹಳೆಯ ಎಲ್ಲ ನೆನಪುಗಳ ಹೊಸ ಭಾವದೊಂದಿಗೆ ತಮ್ಮ ಸಂಪ್ರೀತಿಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಚಂದ್ರಪ್ಪ ಶಾರದಾ ದಂಪತಿಗಳನ್ನು ಸನ್ಮಾನಿಸಿ,ಅವರ ಬ್ಯಾಂಕ್ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.
ಬರಹ ಕೃಪೆ.
ಡಿ.ಎಂ.ಮಂಜುನಾಥಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











