“ಕೊಡಗಿನಲ್ಲಿ ಆರಂಭಗೊಂಡಿದೆ ಪಲಾಯನದ ಪರ್ವ.”
1 min read
ಇದೊಂದು ಅನಿರೀಕ್ಷಿತ ಬೆಳವಣಿಗೆ ಕೊಡಗಿನಲ್ಲಿ ಚಾಲ್ತಿಗೊಂಡಿದೆ.ಭ್ರಷ್ಟ ಅಧಿಕಾರಿಗಳು,ನೌಕರರು ಸ್ವಯಂ ಪ್ರೇರಿತರಾಗಿ ಸದ್ದಿಲ್ಲದೆ ತಮ್ಮ ಗಂಟು ಮೂಟೆ ಕಟ್ಟಲು ಪ್ರಾಂಭಿಸಿದ್ದಾರೆ.ಕೊಡಗಿನಲ್ಲಿ ಆರಂಭಗೊಂಡಿದೆ ಪಲಾಯನದ ಪರ್ವ.
ದಶಕಗಳ ಕಾಲದಿಂದ ಜಿಲ್ಲೆಯಲ್ಲಿ ಝಾಂಡಾ ಹೂಡಿ ಬೇಕಾದಷ್ಟು ಸಂಪಾದಿಸಿ ಅಲ್ಲಿ ,ಇಲ್ಲಿ ಕಾರ್ಯಕ್ರಮಗಳಿಗೆ ಬಾಚಿ,ಬಾಚಿ ಕೊಟ್ಟು ದಾನಶೂರ ಕರ್ಣ ಎಂದು ಬಿರುದು ಬಾವಲಿಗಳನ್ನು ಗಿಟ್ಟಿಸಿಕೊಂಡಿರುವ ಕೆಲವು ಭ್ರಷ್ಟ ಅಧಿಕಾರಿಗಳು,ನೌಕರರು ಕೊಡಗಿನಲ್ಲಿ ಬೇಕಾದಷ್ಟು ಆಸ್ತಿ ಪಾಸ್ತಿ ಗಳನ್ನು ಹೊಂದಿಕೊಂಡಿದ್ದು ಜಿಲ್ಲೆಯ ಖಾಯಂ ವಾಸಿಗಳಾಗಿದ್ದರು.ಇದೀಗ ದಿಢೀರ್ ಆಗಿ ಬೇರೆ ಜಿಲ್ಲೆಗೆ ವರ್ಗಾವಣೆಯಾಗುವ ಸಲುವಾಗಿ ರಾಜಧಾನಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಇದೊಂದು ಅಚ್ಚರಿಯ ಬೆಳವಣಿಗೆ.
ಇದಕ್ಕೆ ಕಾರಣ ಕೊಡಗಿನ ನೂತನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು.ಶಾಸಕರು ಅನ್ನುವುದಕ್ಕಿಂತ ಶಾಸಕರ ಕಾರ್ಯವೈಖರಿ ಯಿಂದ ಎನ್ನುವುದು ಸೂಕ್ತ ಎಂದು ಅನಿಸುತ್ತದೆ.
ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಯುವ ವಿದ್ಯಾವಂತ ,ಪ್ರತಿಭಾವಂತ ಅಭ್ಯರ್ಥಿಗಳಾದ ಪೊನ್ನಣ್ಣ ಹಾಗೂ ಮಂತರ್ ಗೌಡ ರವರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಈ ಭ್ರಷ್ಟರು ಕನಸ್ಸು,ಮನಸ್ಸಿನಲ್ಲೂ ನೆನಸಿರಲಿಲ್ಲ.ಹಳೆಯ ಹುಲಿಗಳೇ ಪುನರಾಯ್ಕೆಗೊಳ್ಳುತ್ತಾರೆ.ಯಥಾವತ್ತಾಗಿ ನಮ್ಮ ಕಾಯಕ ಮುಂದುವರಿಯಲಿದೆ ಎಂದು ಅಚಲವಾದ ನಂಬಿಕೆ ಹೊಂದಿದ ಇವರಿಗೆ ಚುನಾವಣಾ ಫಲಿತಾಂಶ ಕಂಡು ವಿಚಲಿತರಾಗಿದ್ದರು.
ಆದರೂ ಹಳೆಯ ಅನುಭವಿಗಳನ್ನೇ ಸುಧಾರಿಸಿದ ತಮಗೆ ಈ ಅನನುಭವಿ ಹೊಸ ಶಾಸಕರನ್ನು ನಿಭಾಯಿಸುವುದು ಸುಲಲಿತ ಎಂದೇ ಭಾವಿಸಿದ್ದರು.ಹಾಗಾಗಿ ಪುಷ್ಪ ಗುಚ್ಛ ವನ್ನು ನೀಡಿ ಮನವೊಲಿಸುವ ತಂತ್ರಗಾರಿಕೆಗೆ ಕೈ ಹಾಕಿದರು.ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಹಾಗೆ ಘಟನೆಗಳು ನಡೆದು ಎಲ್ಲಾ ಲೆಕ್ಕಚಾರಗಳು ಬುಡಮೇಲಾಯಿತು.
ಬಹು ದಿನಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಪೊನ್ನಣ್ಣ ಮತ್ತು ಮಂತರ್ ರವರು ಕ್ಷೇತ್ರದ್ಯಾದಂತ ಕಾರ್ಯಕರ್ತರು ಹಾಗೂ ಜನರ ಭೇಟಿಯ ಜೊತೆಗೆ ಅಧಿಕಾರಿಗಳ ,ನೌಕರರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದರು.ಜಿಲ್ಲೆಯ ಎಲ್ಲಾ ಇಲಾಖೆಗಳ ಲೋಪ ದೋಷಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿದ್ದರು.ಯಾವುದು ಸರಿ ,ಯಾವುದು ತಪ್ಪು ಎಂಬುದರ ಸಂಪೂರ್ಣ ಚಿತ್ರಣ ಅವರ ಬಳಿ ಇತ್ತು.ಎಲ್ಲೆಲ್ಲಿ ಕಾಮಗಾರಿ ಸರಿಯಾಗಿ ನಡೆದಿದೆ.ಎಲ್ಲೆಲ್ಲಿ ಕಳಪೆ ಕಾಮಗಾರಿಯಾಗಿದೆ.ಅದರ ಗುತ್ತಿಗೆದಾರ ಯಾರು? ಉಸ್ತುವಾರಿ ಅಧಿಕಾರಿ ಯಾರು? ಇವೆಲ್ಲಾ ಮಾಹಿತಿ ಇಬ್ಬರಲ್ಲಿ ಸ್ಪಷ್ಟವಾಗಿ ಇತ್ತು. ಈ ಸಂಧರ್ಭದಲ್ಲಿ ಯಾವ ಅಧಿಕಾರಿಯನ್ನೂ ವಿಚಾರಿಸಲು ಅವರು ಹೋಗಲಿಲ್ಲ.ಚುನಾವಣೆ ನಡೆಸುವ ವಿಚಾರ ಮಾತ್ರ ಅವರಲ್ಲಿ ಇತ್ತು.ಹಾಗಾಗಿ ಅಧಿಕಾರಿಗಳು,ನೌಕರರು ಇವರುಗಳ ಬಗ್ಗೆ ಆಸಕ್ತಿ ತೋರುಲಿಲ್ಲ.
ಶಾಸಕರನ್ನು ಅಭಿನಂದಿಸಲು ಈ ಭ್ರಷ್ಟ ಅಧಿಕಾರಿಗಳು ಹೂಗುಚ್ಚದೊಂದಿಗೆ ಶಾಸಕರ ಮನೆಗೆ ಹೋದಾಗ ಒಬ್ಬ ಶಾಸಕರಿಂದ ಗೆಟ್ ಔಟ್ ಭಾಗ್ಯ ಸಿಕ್ಕಿದೆ.ಮತ್ತೊಬ್ಬ ಶಾಸಕರು ತಮ್ಮ ಮನೆಯ ಗೇಟಿನಿಂದಲೇ ಒಳ ಸೇರಿಸಲಿಲ್ಲ.ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈ ಭ್ರಷ್ಟ ಬೀಜಾಸುರನ ಸಂತತಿಗಳು ವಾಪಾಸಾಗಿದ್ದಾರೆ.ಈಗ ಮನೆ ಮನೆ ಮಠ ಬಿಟ್ಟು ಬೇರೆಡೆಗೆ ವರ್ಗಾವಣೆ ಭಾಗ್ಯ ಪಡೆಯಲು ಸಿದ್ದತೆ ನಡೆಸಿದ್ದಾರೆ.
ಶಾಸಕರಾಗಿ ಮೊದಲ ಅಧಿಕೃತ ಸಭೆಯಲ್ಲಿಯೇ ಶಾಸಕದ್ವಯರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮುನ್ಸೂಚನೆ ನೀಡಿದ್ದಾರೆ. ಎ.ಎಸ್.ಪೊನ್ನಣ್ಣ ನವರು ಎಷ್ಟು ವರ್ಷದಿಂದ ಅಧಿಕಾರಿಗಳು ಇಲ್ಲಿಯೇ ಮೊಕ್ಕಾಂ ಹೂಡಿರುವ ಮಾಹಿತಿಯನ್ನು ಕಲೆ ಹಾಕಿದ್ದಾರೆ.ಯಾವ್ಯಾವ ಲೆಕ್ಕ ಶೀರ್ಷಿಕೆಯಡಿ ಅನುದಾನ ಬಂದಿದ್ದು ಅದರ ಬಳಕೆಯ ಬಗ್ಗೆ ವಿವರಣೆ ಕೇಳಿದ್ದಾರೆ.ಡಾ ಮಂತರ್ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ದತ್ತಾಂಶ ವಿವರಣೆ ಕೇಳಿದ್ದಾರೆ.ಅಧಿಕಾರಿಗಳಿಗೆ ಇದು ಹೊಸ ವಿಚಾರ.ಶಾಸಕರ ಪ್ರಶ್ನೆಗೆ ಅವರ ಬಳಿ ಯಾವುದೇ ಉತ್ತರವಿಲ್ಲ.ಹಿಂದೆ ಯಾರೂ ಕೂಡ ಅವರನ್ನು ಪ್ರಶ್ನೆ ಮಾಡಿರಲಿಲ್ಲ.ಕೊಡಗು ಜಿಲ್ಲೆ ಒಂದು ರೀತಿಯಲ್ಲಿ ಬೇಲಿ ಇಲ್ಲದ ಹೊಲದ ಹಾಗೆ.ಎಷ್ಟು ಬೇಕಾದರೂ ಮೇಯಬಹುದು.ಆದರೆ ಈಗ ಅದಕ್ಕೆಲ್ಲಾ ಕಡಿವಾಣ ಬೀಳುವ ಲಕ್ಷಣ ಕಾಣಿಸುತ್ತಿದೆ.
ಎಷ್ಟೇ ಸಂಘಟನೆ ಮಾಡಿರಬಹುದು.ಜನರ ವಿಶ್ವಾಸವನ್ನು ಗಳಿಸಿರಬಹುದು.ಆದರೆ ತಮ್ಮ ಆಯ್ಕೆಗೆ ಮತದಾರರು ಬಳಸಿದ ಮಾನದಂಡ ಭ್ರಷ್ಟಾಚಾರ ಮುಕ್ತ ಕೊಡಗು ನಿರ್ಮಾಣ ದ ನಿರೀಕ್ಷೆ ಎಂದು ಇಬ್ಬರೂ ಶಾಸಕರಿಗೆ ಅರಿವಿದೆ.ಇಬ್ಬರೂ ಶಾಸಕರು ಆರ್ಥಿಕವಾಗಿ ಬಹಳಷ್ಟು ಸಬಲರಾಗಿರುವುದರಿಂದ ಕಮಿಷನ್ ಅವಶ್ಯಕತೆ ಇಲ್ಲಾ ಎಂಬುದು ಜಗತ್ತಿಗೆ ತಿಳಿದಿದೆ.ಬೆಳೆಯ ಸಿರಿಯನ್ನು ಮೊಳಕೆಯಲ್ಲಿಯೇ ಕಾಣು ಎಂಬಂತೆ ನೂತನ ಶಾಸಕರು ಭ್ರಷ್ಟಾಚಾರವನ್ನು ಮಟ್ಟ ಹಾಕುವ ಸೂಚನೆ ನೀಡಿದ್ದಾರೆ.ಹಾಗಾಗಿ ತಿಂದು,ತೇಗಿ ಕೊಬ್ಬಿರುವ ಕೆಲವು ಅಧಿಕಾರಿಗಳು ಪಲಾಯನದ ಕಡೆ ಚಿತ್ತ ಹರಿಸಿದ್ದಾರೆ.
( ದಿನದ ಹಿಂದೆ ಡಿ.ಸಿ.ತಡೆಗೋಡೆ ಕಾಮಗಾರಿಯ ನಿರ್ಮಾತೃ ಅಧಿಕಾರಿಯೊಬ್ಬ ಡಾ ಮಂತರ್ ರವರವರ ಓಲೈಕೆಗೆ ಪ್ರಯತ್ನಿಸಿ ವಿಫಲನಾಗಿ ಇಂಗು ತಿಂದ ಮಂಗನಾಗಿ ವಾಪಾಸಾಗಿರುತ್ತಾನೆ.ಈ ಅನುಭವ ಹಲವು ಭ್ರಷ್ಟರಿಗೆ ಆಗಿದೆ).
ಬರಹ ಕೃಪೆ.
ತೆನ್ನಿರ ಮೈನಾ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






