लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಮಲಹಾಸನ್;ಕೋಳಿ ಮೊದಲೋ ಮೊಟ್ಟೆ ಮೊದಲೋ!?
****************************
“ಜನವಾಣಿ ಬೇರು ಕವಿ ವಾಣಿ ಹೂ” ಎಂಬ ಬಿ. ಎಂ. ಶ್ರೀಯವರ ಮಾತು ಕನ್ನಡ ಮಹಾಮರದ ಸಾರ-ಸರ್ವಸ್ವ ಜನಪದವೆಂತಲೂ,ಅದು ಗಟ್ಟಿಯಾಗಿ ಈ ನೆಲದ ಸತ್ವ ಹೀರಿ ಬೆಳೆದು ಬೋಧಿವೃಕ್ಷವಾಗಿದೆಯೆಂತಲೂ, ಅದರೊಡಲಲ್ಲಿ ನಳನಳಿಸುವ ರೆಂಬೆ-ಕೊಂಬೆ, ಟೊಂಗೆ-ಟಸಿಲುಗಳೆಲ್ಲ ಸಮೃದ್ಧವಾದ ಎಲೆ, ಹೂ, ಹೀಚು, ಕಾಯಿಗಳನ್ನು ಹೊಂದಿ ಜೀವಂತಿಕೆಯ ಪ್ರತೀಕವಾಗಿದೆಯೆಂತಲೂ ಅಭಿಪ್ರಾಯಿಸುತ್ತಾರೆ. ಏಕೆಂದರೆ ಕನ್ನಡವೆಂದರೆ ಅದು ಮಹಾಮರ. ಹಾಗೆಂದೇ ಅದು ಅಮರ.
ಜನಪದವೆಂಬುದೊಂದು ಪಾರಂಪರಿಕ ಸಾಹಿತ್ಯ ಪ್ರಕಾರ. ಇದೊಂದು ದಾಖಲಾಗದ ಮೌಖಿಕ ಪರಂಪರೆ. ಜಗತ್ತಿನ ಬಹುತೇಕ ಭಾಷೆಗಳಿಗೆ ಇಂತಹ ಪರಂಪರೆ ಇದ್ದೇ ಇರುತ್ತದೆ! ಹಾಗಿದ್ದ ಮೇಲೆ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಯಾವ ಆಧಾರದ ಮೇಲೆ ಹೇಳಿದಿರಿ ಕಮಲಹಾಸನ್? ಕನ್ನಡ ಜನಪದ ಸಾಹಿತ್ಯದ ಪ್ರಾಚೀನತೆಯ ಕುರುಹೆ ನಮಗೆ ಸಿಕ್ಕಿಲ್ಲ. ಇನ್ನು ನಿಮಗೆ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಯಾವ ವಿಶ್ವವಿದ್ಯಾಲಯದ ಸಂಶೋಧಕರು ನಿಮಗೆ ತಿಳಿಸಿದರೋ ಗೊತ್ತಿಲ್ಲ. ಸದ್ಯಕ್ಕಂತೂ ಕನ್ನಡದ ಮಹಾಮರವನ್ನೇ ಹೊಯ್ದು ಮೈಮೇಲೆ ಕೆಡಹಿಕೊಂಡಿದ್ದೀಯ ಕಹಾ ಹೇಳಿ ಹೋಗು ಉತ್ತರ. ಇಲ್ಲವಾದರೆ ಕನ್ನಡಿಗರ ಪ್ರತಿಭಟನೆಗೆ ತತ್ತರಿಸುವುದಂತೂ ಗ್ಯಾರಂಟಿ.
ಭಾವ, ಸಂಕೇತ, ಸಂಜ್ಞೆಗಳ ಮೂರ್ತಾಭಿವ್ಯಕ್ತಿಯೇ ಭಾಷೆ. ಆದರೆ ಈಸ್ಲರ್ ಮುಂದುವರೆದು ‘ಆತ್ಮವಿರುವ ಎಲ್ಲ ಪ್ರಾಣಿಗಳ ಅಭಿವ್ಯಕ್ತಿಯೆ ಭಾಷೆ ಎನ್ನುತ್ತಾನೆ. ಇದು ಪ್ರಪಂಚದ ಸರಿಸುಮಾರು ೬೦೦೦ ಭಾಷೆ ಉಪಭಾಷೆಗಳಿಗೂಸಂಬಂಧಿಸಿದ್ದು; ಕನ್ನಡಕ್ಕೂ ಅನ್ವಯವಾಗುವಂತದ್ದು. “ಪಲವು ಕನ್ನಡಂಗಳ್” ನಾಡಾದ ಕರ್ನಾಟಕ ಆದಿಮದಿಂದಲೂ ಬಹುಮುಖಿ ಭಾಷಾ ಸಂಸ್ಕೃತಿಗಳ ಬೀಡು. ಕನ್ನಡ-ಕನ್ನಡಿಗ-ಕರ್ನಾಟಕದ ಪ್ರಾಚೀನತೆಯ ಸಾರುವ ಉಕ್ತಿಗಳನ್ನು, ಪದಗಳು, ಶಾಸನಗಳು, ಇತಿಹಾಸ ಮತ್ತು ಸಾಹಿತ್ಯ ಅಲ್ಲದೆ ಐತಿಹ್ಯಗಳಂಥ ಮಾದರಿಗಳಲ್ಲಿ ದೊರಕುತ್ತವೆ. ಕ್ರಿ. ಪೂ. ಅಶೋಕನ ಶಾಸನಗಳಲ್ಲಿನ ‘ಇಸಿಲ'(ಕೋಟೆಗಳಿಂದಾವೃತವಾದಪ್ರದೇಶ ಡಾ. ಡಿ. ಎಲ್. ಎನ್) ಮಹಾಭಾರತದ ಸಭಾಪರ್ವ, ಭೀಷ್ಮಪರ್ವಗಳಲ್ಲಿನ ‘ಕರ್ನಾಟ’-ಕರ್ಣಾಟಕಾ ಮಾರ್ಕಾಂಡೇಯ ಪುರಾಣದ ಕರ್ಣಾಟಕ ದೇಶ ಶಾತವಾಹನ ದೊರೆ ಗಾಥಾಸಪ್ತಶತಿ ಕೃತಿ ಪೊಟ್ಟೆ(ಹೊಟ್ಟೆ) ‘ತುಪ್ಪ’ ‘ಪೆಟ್ಟು(ಹೊಡೆ) ತೀರ್ (ಸಮರ್ಥನಾಗು)’ರೊಟ್ಟಿ’ಊರೋ (ಊರು) ಅಲ್ಲದೇ, ಛಾಂದೋಗ್ಯೋಪನಿಷತ್ ನಲ್ಲಿ ಇದೆಯೆನ್ನಲಾದ ಚೆನ್(ಚಂದ್ರ) ಮಟಚಿ(ಮಿಡತೆ) ಇತ್ಯಾದಿ ಪದ ಪ್ರಯೋಗಗಳು ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಜನತೆ, ಕನ್ನಡ ಜನಪದ, ಕನ್ನಡ ಜನಾಂಗ ಹಾಗೂ ಕನ್ನಡ ಪ್ರದೇಶಗಳ ಸೂಚಕಗಳಾಗಿ ಕಂಡುಬರುತ್ತವೆ.
ಇನ್ನು ಒಂದನೇ ಶತಮಾನದ ಮಾಧವಪುರ ಶಾಸನದ ‘ನಾಟಪತಿ’ಮತ್ತು ನಾಲ್ಕನೇ ಶತಮಾನದವರೆಗಿನ ಶಾಸನಗಳಲ್ಲಿ ಬಳಕೆಯಾದ ‘ಕೊಟ್ಟ’, ಅಪ್ಪಿಟ್ಟ,ವೆಟ್ಟಕ್ಕಿ, ವೇಗಾರಂ,ಕುಂದ, ಮುಚ್ಚಂಡಿ,ಪದಗಳು ಮೂಲದ್ರಾವಿಡದಿಂದ ಕವಲೊಡೆದ ಶಬ್ದಗಳೆಂಬುದು ಭಾಷಾ ತಜ್ಞರ ಅಭಿಪ್ರಾಯ. ಮೂರನೆ ಶತಮಾನದ ಟಾಲೆಮಿ ಹೆಸರಿಸಿರುವ ಅಥಣಿಯ ‘ತವಸಿ’ ಬಿಜಾಪುರದ’inde ‘ಇಂಡಿ’ Banavausee ‘ ಬನವಾಸಿ’ ಕನ್ನಡ ಪದಗಳ ಒಂದು ಚರ್ಚೆ ಸಾಗಿದೆ. ಈ ಎಲ್ಲಾ ವಾಗ್ವಾದದ ಮಧ್ಯೆ ಕ್ರಿ. ಶ. ೪೫೦ರ ಹಲ್ಮಿಡಿ ಶಾಸನ ಒಂಭತ್ತನೇ ಶತಮಾನದ ಕವಿರಾಜ ಮಾರ್ಗ ಮೊದಲ ಕನ್ನಡ ಲಾಕ್ಷಣಿಕ ಗ್ರಂಥವೆಂದೂ, “ಕಾವೇರಿಯಿಂದಮಾ ಗೋದಾವರಿವರಮಿರ್ದನಾಡಾದಾಕನ್ನಡದೊಳ್” ಒಕ್ಕುಂದ ನಡುವನ ನಾಳೆ ಕನ್ನಡತಿರುಳ್ -ತಿರುಳ್ಗನ್ನಡ” ಅಷ್ಟೇ ❓ಎರಡನೇ ಶತಮಾನದ ತಮಿಳು ಕಾವ್ಯ’ಶಿಲಪ್ಪದಿಗಾರಂ’ಹೇಳುವ ಕರುನಾಡರ್ ಕನ್ನಡದ ಪ್ರಾಚೀನತೆಯನ್ನು ಕೂಗಿ ಹೇಳುತ್ತವೆ ಕಮಲಹಾಸನ್.
ಕರ್ನಾಟಕದ ಮೈಸೂರು ಮೂಲದ ಜಯಲಲಿತ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು. ಹಾಗೆಂದ ಮಾತ್ರಕ್ಕೆ ತಮಿಳುನಾಡನ್ನು ಕರ್ನಾಟಕದ ಭಾಗವೆಂದರೆ ಒಪ್ಪಿ ಕೊಳ್ಳುತ್ತೀರ?
ಕನ್ನಡಿಗರು ಸ್ನೇಹ, ಸೌಹಾರ್ದತೆ, ಸಾಮರಸ್ಯ, ಸ್ವಾಭಿಮಾನವನ್ನು ಸಂಸ್ಕೃತಿಯನ್ನಾಗಿ ಬದುಕಿದವರು ಹಾಗೆಂದ ಮಾತ್ರವೇ ನಮ್ಮ ಸ್ವಾಭಿಮಾನವನ್ನು ಕೆಣಕಬಾರದು.
ನಮ್ಮ ಸ್ವಾಭಿಮಾನವನ್ನು ಕೆಣಕಿದ್ದರಂದಲೇ ಕದಂಬ ವಂಶದ ಮೂಲಕ ಕರ್ನಾಟಕ ಮತ್ತಷ್ಟು ಬಲಿಷ್ಠ ವಾಯಿತು ಎಂಬುದು ನೆನಪಿರಲಿ.
ನಿಮ್ಮ ಕಂಚಿಯ ಪಲ್ಲವರು ಮಯೂರ ಶರ್ಮನನ್ನು ಅವಮಾನಕ್ಕೆ ಗುರಿಮಾಡಿದ್ದರಿಂದಲೇ ಅವನು ಅದನ್ನೇ ಸವಾಲಾಗಿ ಸ್ವೀಕರಿಸಿ ಚಿತ್ರದುರ್ಗದ ಚಂದ್ರವಳ್ಳಿ ಕಣಿವೆಯಲ್ಲಿ ಕನ್ನಡ ನಾಡಿಗೆ ಅಡಿಗಲ್ಲು ಹಾಕಿದ್ದು. ಇಷ್ಟೆಲ್ಲ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ದಾಖಲೆಗಳಿರುವಾಗ ಕನ್ನಡಿಗರ ಭಾವನೆಗಳೊಂದಿಗೆ ಆಟವಾಡುವುದನ್ನು ಇನ್ನಾದರೂ ಬಿಟ್ಟು ಬಿಡಿ.
“ಕನ್ನಡ ಸುದ್ದಿಗ್ ಏನ್ರಾಬಂದ್ರೆ ಮಾನ ಉಳಿಸಾಕಿಲ್ಲ”

*ಕುಂದೂರು ಅಶೋಕ.
ಮಾಜಿ ಅಧ್ಯಕ್ಷರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ಚಿಕ್ಕಮಗಳೂರು..

About Author

Leave a Reply

Your email address will not be published. Required fields are marked *