ಜಗತ್ತಿಗೆ ಇಬ್ಬರೇ ತಾಯಂದಿರು……
1 min read
ಅವಿನ್ ಟಿವಿ ಸುದ್ದಿಜಾಲ:-
ಜಗತ್ತಿಗೆ ಇಬ್ಬರೇ ತಾಯಂದಿರು. ಒಂದು ಈ ಮನುಷ್ಯ ಸಂಕುಲಕ್ಕೆ ಕಾರಣರಾದ ಮೂಲ ತಾಯಿ. ಇನ್ನೊಂದು ನಮ್ಮನ್ನು ಹಡೆದ ತಾಯಿ.
ಇಡೀ ಮನುಷ್ಯ ಸಂಕುಲ ಒಂದೇ ತಾಯಿಯ ಮೂಲದಿಂದ ಹೊರ ಬಂದಿದೆ, ಹೀಗೆ ನಮ್ಮೆಲ್ಲರ ಮೂಲ ಒಂದೇ ತಾಯಿಯಿಂದ ಆದದ್ದು ಎಂಬುದಕ್ಕೆ ಜೀವ ವಿಜ್ಞಾನಿಗಳು ಆವಿಷ್ಕಾರದ ಮೂಲಕ ಪುರಾವೆ ನೀಡಿದ್ದಾರೆ.
ಹೀಗಿದ್ದು ಕೂಡ ,
ಅದ್ಯಾವ ಕಾರಣಕ್ಕಾಗಿ ನಾವೆಲ್ಲ ಪರಸ್ಪರ ನೀನೇ ಬೇರೆ ನಾನೇ ಬೇರೆ ಎಂಬ ತೀರ್ಮಾನಕ್ಕೆ ಬಂದು ನಿಂತು ಬಿಟ್ಟಿದ್ದೇವೆ ??????
ಒಂದೇ ತಾಯಿಯ ಮಕ್ಕಳಾದ ನಾವೆಲ್ಲ ತಲೆಯೆತ್ತಿ ನಗೆ ಬಿತ್ತಿ ಒಂದು ಉತ್ಕೃಷ್ಟವಾದ ಬದುಕಿನೊಂದಿಗೆ ಒಂದಾಗಿ ಬದುಕಲು ಸಾಧ್ಯವಿಲ್ಲವೇ ?????
ಇಂತಹ ಮಹಾನ್ ಪ್ರಶ್ನೆಯೊಂದನ್ನು ಮುಖ್ಯ ಚರ್ಚೆಯಾಗಿಟ್ಟುಕೊಂಡು, ನಮ್ಮದು ಎಂಬ ಎಲ್ಲವನ್ನು ಎಲ್ಲರೂ ಕಳಚಿಟ್ಟು, ಭಿನ್ನ ವಿವಿನ್ನ ಚಿಂತನೆಗಳನ್ನು, ಕಥೆ ಕವಿತೆ ಪುಸ್ತಕ ಓದು ಇನ್ನೂ ಮುಂತಾದ ಚಟುವಟಿಕೆಯ ಮೂಲಕ ಮನುಷ್ಯತ್ವಕ್ಕೆ ಮಾನವೀಯತೆಗೆ ಸಂಬಂಧಪಟ್ಟ ಅನೇಕ ಸಂಗತಿಗಳಿಗೆ ಇತ್ತೀಚಿಗೆ ಮುಖಾಮುಖಿಯಾಗಿ, ಮಲೆನಾಡಿನ ಮೂಡಿಗೆರೆಯ ಅಂಗಳದಲ್ಲೊಂದು ಚಿತ್ತಾರದ ರಂಗೋಲಿಯನ್ನು ಬಿಡಿಸಲಾಯಿತು.
ಮನುಷ್ಯನೇ ಮನುಷ್ಯರನ್ನು ಕೊಂದು,ಮಾನವೀಯತೆಗೆ ಉರುಳು ಹಾಕಿ,
ಆ ಉರುಳಿನ ಹಗ್ಗದ ಕುಣಿಕೆಯನ್ನು ಸಿಂಬಿಸುತ್ತಿ, ಆ ನೇಣಿನ ಕುಣಿಕೆಯ ಸಿಂಬಿಯಲ್ಲಿ ಧರ್ಮವನ್ನು ಕಟ್ಟಿಡುವ ಕೆಲಸಕ್ಕಾಗಿ ದುರ್ಜನರು ತಮ್ಮ ಬೆಂಕಿಯ ಬಾಯನ್ನು ಇನ್ನಷ್ಟು ಅಗಲಗಲವಾಗಿ ತೆಗೆದು ಎಗ್ಗಿಲ್ಲದೆ ಮೆರೆಯುತ್ತಿರುವ ನಡಿಗೆಗೆ ವಿಷಾದ ವ್ಯಕ್ತಪಡಿಸಲಾಯಿತು.
ಇಂತಹ ಹತ್ತು ಹಲವು ಸಂಗತಿಗಳನ್ನು ಒಟ್ಟಾಗಿ ಕೂರಿಸಿ,ಭಿನ್ನವಿಭಿನ್ನ ಚಿಂತನೆಯನ್ನು ಒಂದೇ ಹೂಮಾಲೆಯಂತೆ ಜೋಡಿಸುವ ನಿಟ್ಟಿನಲ್ಲಿ ಮೂಡಿಗೆರೆಯ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮತ್ತು ಕಾಫಿ ನಾಡು ಕಲಾ ಸೇವಾ ಸಂಘವು ಜೊತೆಗೂಡಿ ವಿಭಿನ್ನವಾದ ಕಾರ್ಯಕ್ರಮವೊಂದನ್ನು ಹೆಣೆದಿತ್ತು.
ಕಲೆ ಸಂಸ್ಕೃತಿ ಸಾಹಿತ್ಯ ಮತ್ತು ಕಲಾ ಕುಂಚದ ಹೆಸರಿನಲ್ಲಿ ಜೊತೆಗೂಡಿ, ಕವಿತೆಗೆ ದನಿಯಾಗಿ, ಕಥೆಗೆ ಕಿವಿಯಾಗಿ, ಕರ್ವಾಲೋ ಪುಸ್ತಕದ ಸಾರಕ್ಕೆ ಮುಖಾಮುಖಿಯಾಗಿ, ಪರಸ್ಪರ ನಾವು ನಮ್ಮದೆಲ್ಲವನ್ನು ತೆಗೆದಿಟ್ಟು ಮಾನವೀಯತೆಗೆ ಜೈ ಎಂದೇವು.
ಮನುಷ್ಯ ಮನುಷ್ಯನನ್ನು ಜಾತಿಯ ಹೆಸರಿನಲ್ಲಿ ಕೀಳಾಗಿ ಕಾಣುವ ಮನೋಭಾವನೆಗೆ , ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯನನ್ನೇ ಕೊಲ್ಲುವ ಭೀಕರ ಹೀನ ಕೃತ್ಯಕ್ಕೆ ಛೀಮಾರಿ ಹಾಕಿ ಏಕ ಧ್ವನಿಯಲ್ಲಿ ಖಂಡಿಸಿದೆವು.
ತನ್ನ ವ್ಯಾಪಾರದ ದುಡಿಮೆಯಲ್ಲಿ ಬಂದ ಲಾಭದಲ್ಲಿ ಶೇಕಡ 30ರಷ್ಟು ಹಣವನ್ನು ಕುಟುಂಬದ ನಿರ್ವಹಣೆಗಾಗಿ, ಉಳಿದ ಶೇಕಡ 70ರಷ್ಟುನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು, ಅನಾಥ ಹೆಣಗಳ ಶವಸಂಸ್ಕಾರಗಳನ್ನು ಮಾಡುತ್ತಾ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮೂಡಿಗೆರೆ ಪಟ್ಟಣದ ಬಿಳಗುಳ ವಾಸಿ ಹಸೈನರ್ ಅವರು, ತಮ್ಮ ಮನೆಯಂಗಳದಲ್ಲಿ ನೆಡೆದ ಈ ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದರು.
ಮೂಡಿಗೆರೆಯ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮತ್ತು ಕಾಫಿ ನಾಡು ಸೇವಾ ಸಂಘದ ಪದಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿ.ಸತ್ಕರಿಸಿ. ವಿಭಿನ್ನ ಚಿಂತನೆಯೊಂದಕ್ಕೆ ತೆರೆದಿಟ್ಟು ಬೀಳ್ಕೊಟ್ಟರು .
ಸುಮಾರು ನೂರಕ್ಕೂ ಹೆಚ್ಚು ಜನರು ಈ ಮನೆಯಂಗಳದ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
•••••••••••✒️✒️✒️
ಡಿ.ಎಂ.ಮಂಜುನಾಥಸ್ವಾಮಿ
ಚಿಕ್ಕಮಗಳೂರು