लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರಿಯಾದ ವ್ಯಕ್ತಿ ಯಾವಾಗಲೂ ಜೀವನದಲ್ಲಿ ತಡವಾಗಿ ಸಿಗುತ್ತಾರೆ*…

1 min read

ಅವಿನ್ ಟಿವಿ ಸುದ್ದಿಜಾಲ ಚಿಕ್ಕಮಗಳೂರು೦೨ :-

*ಸರಿಯಾದ ವ್ಯಕ್ತಿ ಯಾವಾಗಲೂ ಜೀವನದಲ್ಲಿ ತಡವಾಗಿ ಸಿಗುತ್ತಾರೆ*.

*ಚಿಕ್ಕಮಗಳೂರಿನ ಏರೋಸ್ ಡ್ರೈ ಕ್ಲೀನ್ ಅಂಗಡಿ ಮಾಲಿಕ ಆನಂದ್ ಅವರಿಗೆ ಕಾಯಕಯೋಗಿ ಗೌರವ ಪ್ರಧಾನ*

ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಪ್ರತಿ ವರ್ಷ ಮೇ ೦೧ರಂದು ಆಚರಿಸುವ ಕಾಯಕ ದಿನಾಚರಣೆಯ ಪ್ರಯುಕ್ತ, ಎಲೆಮರೆಯ ಕಾಯಿಯಂತೆ, ವೃತ್ತಿ ಗೌರವಕ್ಕೆ ಬದ್ಧರಾಗಿ ನಿಷ್ಠೆಯಿಂದ ದುಡಿಯುತ್ತಿರುವ ಶ್ರಮಜೀವಿಗಳನ್ನು ಗುರುತಿಸಿ *ಕಾಯಕಯೋಗಿ* ಹೆಸರಿನಲ್ಲಿ ಸನ್ಮಾನ ನೀಡಿ ಗೌರವಿಸಲಾಗುತ್ತಾ ಬರುತ್ತಿದೆ.

ತಡವಾದರೂ ಅಡವಾಗಿ ಸಿಕ್ಕಿದರೂ ಎಂಬಂತೆ, ಈ ಬಾರಿ ಈ ಕಾಯಕಯೋಗಿ ಗೌರವಕ್ಕೆ ಭಾಜನರಾದವರು ಚಿಕ್ಕಮಗಳೂರು ನಗರದ ಶೆಟ್ರು ಬೀದಿಯಲ್ಲಿರುವ ಏರೋಸ್ ಡ್ರೈ ಕ್ಲೀನ್ ಅಂಗಡಿಯ ಮಾಲಿಕ ಆನಂದ್ ಅವರು.

ಚಿನ್ನ ಶಬ್ದ ಮಾಡುವುದಿಲ್ಲ, ಶಬ್ದ ಮಾಡುವುದು ತಗಡು ಎಂಬ ಮಾತಿದೆ.ಹೀಗೆ ಸುಖಾಸುಮ್ಮನೆ ತಗಡಿನಂತೆ ಶಬ್ದ ಮಾಡದಂತಹ, ಸದಾ ಮುಗುಳ್ನಗೆಯೊಂದನ್ನು ಮುಂದಿಟ್ಟುಕೊಂಡು, ಅದೆಷ್ಟೇ ಒತ್ತಡವಿದ್ದರೂ ಸಿಡಿಮಿಡಿಗೊಳ್ಳದೆ,ಮುಖ ಗಂಟಿಕ್ಕಿಕೊಳ್ಳದೆ, ಒಂದು ಹಿತಮಿತವಾದ ನಗು ಮಿಶ್ರಿತ ಮಂದಹಾಸದೊಂದಿಗೆ ಗ್ರಾಹಕರೊಂದಿಗೆ ವ್ಯವಹಾರಮಾಡುತ್ತಾ, ಹಾಗೆ ವ್ಯವಹಾರಕಷ್ಟೇ ಗ್ರಾಹಕರನ್ನು ಸೀಮಿತಗೊಳಿಸಿಕೊಳ್ಳದೆ, ತನ್ನ ಲ್ಯಾಂಡ್ರಿ ಅಂಗಡಿಯ ಎಲ್ಲ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ನಿರಂತರವಾಗಿ ಬೆಸೆದುಕೊಂಡಿರುವ ಆನಂದ್ ಅವರ ಏರೋಸ್ ಡ್ರೈ ಕ್ಲೀನ್ ಚಿಕ್ಕಮಗಳೂರು ನಗರದಲ್ಲಿ ಎಲ್ಲರಿಗೂ ಚಿರಪರಿಚಿತವಾಗಿದೆ.

ಈ ಬದುಕು ಎಂದೂ ಮುಗಿಯದ ಒಂದು ತಡಕಾಟವಿದ್ದಂತೆ. ಹೀಗೆ ಬದುಕಿನ ತಡಕಾಟದೊಂದಿಗೆ ಜೀವನವನ್ನು ಹುಡುಕುತ್ತಾ , ಸುಮಾರು 46 ವರ್ಷಗಳ ಹಿಂದೆ ಹಾಸನದಿಂದ ಚಿಕ್ಕಮಗಳೂರು ನಗರಕ್ಕೆ ಬಂದು, ನಗರದ ಶೆಟ್ರು ಬೀದಿಯಲ್ಲಿ ಒಂದು ಸಣ್ಣ ನಾಡ ಹೆಂಚಿನ ಗೂಡಂಗಡಿಯನ್ನು ತೆರೆದು, ಬಟ್ಟೆ ತೊಳೆದು, ಅದನ್ನು ಶುಭ್ರಮಾಡಿ, ಇಸ್ತ್ರಿ ಮಾಡಿಕೊಡುವ ಕಾಯಕವನ್ನು ಆರಂಭಿಸಿದರು.

ರಾಜನ ಮಗ ರಾಜನೇ ಆಗಬೇಕು, ಅಗಸನ ಮಗ ಅಗಸನೇ ಆಗಬೇಕು ಎಂಬ ನಿಯಮವೇನಿಲ್ಲ.

ಹಾಸನದ ನಂಜುಂಡಯ್ಯ ನಾಗಮ್ಮ ಎಂಬ ಪೌರೋಹಿತ್ಯ ಮಾಡುವ ಜಂಗಮ ದಂಪತಿಗಳ ಮಗನಾದ ಆನಂದ್ ಅವರು ಹತ್ತನೇ ತರಗತಿಯನ್ನು ಪಾಸು ಮಾಡಲಾಗದೆ ಫೇಲಾದವರು, ಮುಂದೆ ವೃತ್ತಿಯನ್ನು ಆರಿಸಿಕೊಂಡಿದ್ದು ಬಟ್ಟೆ ತೊಳೆದು ಶುಭ್ರ ಮಾಡಿಕೊಡುವ ಕೆಲಸ.

ಇಂಗ್ಲೀಷಿನ ಈ *EROS* ಎಂಬ ಪದದ ಅರ್ಥ ಕನ್ನಡದಲ್ಲಿ ಶುಭ್ರ ಎಂದು, ಈ ಕಾರಣಕ್ಕೆ ತಮ್ಮ ಅಂಗಡಿಯ ಹೆಸರನ್ನು ಏರೋಸ್ ಡ್ರೈ ಕ್ಲೀನ್ ಎಂದು ನಾಮಕರಣ ಮಾಡಿದರು.

ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೆ, ನಾನೊಬ್ಬ ಪೌರೋಹಿತ್ಯ ಮಾಡುವ ಜಂಗಮ ಕುಲದವನು ಎಂಬ ಹಮ್ಮು ಗಿಮ್ಮುಗಳನ್ನೆಲ್ಲ ಕಳಚಿಕೊಂಡು,ಪುರಾತನ ಭುಜಗಳ ಮೇಲೆ ನಿಂತು, ಅವಾಸ್ತಾವಿಕವಾಗಿ ಮಾತನಾಡುವಂತಹ ಮನಸ್ಸುಗಳಿಗೆ ಆನಂದ್ ಅವರು ತಮ್ಮ ಕಾಯಕದ ಮೂಲಕ ವೃತ್ತಿ ಗೌರವವನ್ನು ಎತ್ತಿ ಹಿಡಿದು, ಶರಣ ಸಂಸ್ಕೃತಿಗೆ ಮಾದರಿಯಾಗಿದ್ದಾರೆ.

ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ, ಜಾತಿಗೆ ಅನುಗುಣವಾಗಿ ವೃತ್ತಿಯನ್ನು ಮಾಡಬೇಕೆಂಬ ನಿಯಮವನ್ನು ಮುರಿದು ಕಟ್ಟಿ, ತಮ್ಮ ಕಾಯಕ ನಿಷ್ಠೆಯನ್ನು ತೋರಿಸಿಕೊಟ್ಟು, ಯಜಮಾನ ಸಂಸ್ಕೃತಿಯ ಬೇರನ್ನೆ ಅಲ್ಲಾಡಿಸಿದಂತೆ ಜೀವನ ರೂಪಿಸಿಕೊಂಡಿದ್ದಾರೆ.

ತಾವು ಮಾಡುವ ಯಾವುದೇ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಗೌರವದಿಂದ ಮಾಡಿದರೆ, ಅದರಲ್ಲಿ ಶ್ರೇಯಸ್ಸನ್ನು ಕಾಣಬಹುದು ಎಂಬುದಕ್ಕೆ ಆನಂದ್ ಅವರು ಒಂದು ತಾಜಾ ಉದಾರಣೆಯಾಗಿದ್ದಾರೆ,

ಒಂದು ಸಣ್ಣ ಗೂಡಂಗಡಿಯನ್ನು ಬಾಡಿಗೆಗೆ ಪಡೆದು, ಈ ಮೂಲಕ ಎರಡು ಜನ ಕೆಲಸಗಾರರೊಟ್ಟಿಗೆ ವೃತ್ತಿಯನ್ನು ಆರಂಭಿಸಿ, ಬಟ್ಟೆಯನ್ನು ತೊಳೆದು ಶುಭ್ರ ಮಾಡಿ, ಇಸ್ತ್ರಿ ಮಾಡಿಕೊಡುವ ಕಾಯಕವನ್ನು ಮಾಡುತ್ತಾ,ತದನಂತರ ಬಾಡಿಗೆಗೆ ಪಡೆದ ಜಾಗವನ್ನೇ ಖರೀದಿ ಮಾಡಿ, ಹತ್ತಾರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡು, ಏರೋಸ್ ಡ್ರೈ ಕ್ಲೀನ್ ಈಗ ವಿಶಾಲವಾದ ಕಟ್ಟಡದೊಂದಿಗೆ ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ,

ತಿಂಗಳಿಗೆ ಐದರಿಂದ ಆರು ಸಾವಿರ ಜನರು ತೊಟ್ಟುಬಿಟ್ಟ ಕೊಳಕು ಬಟ್ಟೆಯನ್ನು ತೊಳೆದು ಶುಭ್ರಗೊಳಿಸಿ , ಇಸ್ತ್ರಿ ಮಾಡಿ ಕೊಡುವ ಕಾಯಕದೊಂದಿಗೆ , ನಿಷ್ಠೆಯಿಂದ ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕ, ಆನಂದ್ ಅವರ ನಾಲ್ಕೂವರೆ ದಶಕಗಳ ನಿಷ್ಠೆಯ ಈ ಸೇವೆಯನ್ನು ಪರಿಗಣಿಸಿ, ಕಾಯಕ ದಿನಾಚರಣೆಯ ಪ್ರಯುಕ್ತ *ಕಾಯಕಯೋಗಿ* ಹೆಸರಿನಲ್ಲಿ ಸದಾಭಿನಂದನೆಯನ್ನು ನೀಡಿ ಸತ್ಕರಿಸಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೊಡ ಮಾಡಿದ ಈ ಕಾಯಕಯೋಗಿ ಸದಾಭಿನಂದನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು. ವಿವಿಧ ರಾಜಕೀಯ ಪಕ್ಷದ ಮುಖಂಡರು. ಸಮಾಜಮುಖಿ ಚಳುವಳಿಯ ಅನೇಕ ಪ್ರಮುಖರು. ಲೇಖಕರು.ಬರಹಗಾರರು.ಕವಿಗಳು. ವಕೀಲರು. ಉಪನ್ಯಾಸಕರು. ರೈತಪರ ದಲಿತಪರ ಕನ್ನಡಪರ ಹೋರಾಟಗಾರರು. ಮಾಧ್ಯಮದ ಸನ್ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಆನಂದ್ ಅವರನ್ನು ಅಭಿನಂದಿಸಿ ಅವರ ವೃತ್ತಿ ಗೌರವದ ನಿಷ್ಠೆಯ ಬಗ್ಗೆ ಪ್ರೌಢ ಮಾತುಗಳನ್ನಾಡಿದರು.
••••••••••••••••✒️
ಡಿ.ಎಂ.ಮಂಜುನಾಥಸ್ವಾಮಿ
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *