ಲೀಸ್ ಅರ್ಜಿ ಸಲ್ಲಿಕೆಗಾಗಿ ಜೂ.30ರವರೆಗೆ ಕಾಲಾವಕಾಶ ವಿಸ್ತರಣೆಗೆ ಬೆಳೆಗಾರರ ಸಂಘ ಆಗ್ರಹ….
1 min read
ಲೀಸ್ ಅರ್ಜಿ ಸಲ್ಲಿಕೆಗಾಗಿ ಜೂ.30ರವರೆಗೆ ಕಾಲಾವಕಾಶ ವಿಸ್ತರಣೆಗೆ ಬೆಳೆಗಾರರ ಸಂಘ ಆಗ್ರಹ
ಮೂಡಿಗೆರೆ: ಕಾರಣಾಂತರ ದಿಂದ ಲೀಸ್ ಅರ್ಜಿ ಸಲ್ಲಿಸಲು ಸಾಧ್ಯವಾಗದ ಬೆಳೆಗಾರ-ರಿಗೆ ಮತ್ತೊಮ್ಮೆ ಲೀಸ್ ಅರ್ಜಿ ಸಲ್ಲಿಕೆ ಅವಧಿ ಜೂ.30ರವರೆಗೆ ವಿಸ್ತರಣೆ ಮಾಡಬೇಕೆಂದು ಬೆಳೆಗಾರರ ಸಂಘದಿಂದ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಲಾಯಿತು.. ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದ್ದಾರೆ.
ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ರಾಜ್ಯ ಸರಕಾರ ಪ್ಲಾಂಟೇಶನ್ ಬೆಳೆಗಾರರ ಅನಧಿಕೃತ ಸಾಗುವಳಿಗಳನ್ನು ದೀರ್ಘಾವಧಿ ಲೀಸ್ಗೆ ನೀಡಲು ನಿಯಮಗಳನ್ನು ರೂಪಿಸಿದ್ದರಿಂದ ಈ ಪ್ರಕ್ರಿಯೆ ಬೆಳೆಗಾರರಿಗೆ ಅತ್ಯಂತ ಅನುಕೂಲವಾಗಲಿದೆ. ಈಗಾಗಲೇ ಲೀಸ್ ಕುರಿತಾಗಿ ಬೆಳೆಗಾರರಿಂದ ಪ್ರಾಥಮಿಕ ಹಂತದ ಅರ್ಜಿಗಳನ್ನು ಕಂದಾಯ ಇಲಾಖೆ ವತಿಯಿಂದ ಸ್ವೀಕರಿಸಲಾಗಿದೆ. ಆದರೆ ಕಂದಾಯ ಇಲಾಖೆಯಲ್ಲಿ ದಾಖಲಾತಿಗಳ ಅಲಭ್ಯತೆ, ಇಲಾಖೆ ಸಿಬ್ಬಂದಿ ಕೊರತೆ, ಗ್ರಾಮೀಣ ಭಾಗಗಳಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ನೆಟ್ ವರ್ಕ್ ಸಮಸ್ಯೆ ಹೀಗೆ ತಾಂತ್ರಿಕ ತೊಡಕಿನಿಂದಾಗಿ ನಿಗದಿತ ದಿನಾಂಕದೊಳಗೆ ಅನೇಕ ಬೆಳೆಗಾರರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಲೀಸ್ ಅರ್ಜಿ ಸಲ್ಲಿಸದ ಬೆಳೆಗಾರ-ರಿಗೆ ಪುನಃ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು.
ಈಗಾಗಲೇ ಲೀಸ್ಗಾಗಿ ಬೆಳೆಗಾರರಿಂದ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಹಾಗೂ ಪರಿಷ್ಕರಣೆಗೆ ಕೂಡಲೇ ಚಾಲನೆ ನೀಡಬೇಕು. ಅಲ್ಲದೇ, ಬೆಳೆಗಾರರ ಐಪಿ ಸೆಟ್ ವಿದ್ಯುತ್ ಸಂಪರ್ಕದ ಬಾಕಿ ಮೊತ್ತ ಪಾವತಿಗೆ ಕಾಲಾವಕಾಶ ವಿಸ್ತರಿಸುವ ಮೂಲಕ ರಾಜ್ಯ ಸರಕಾರ ಬೆಳೆಗಾರರ ನೆರವಿಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.