ಸಮಾನ ಮನಸ್ಕ ಹಿರಿಕಿರಿಯ ಗೆಳೆಯರ ತಂಡ ಕರೆಯೋದು ಗಣೇಶಣ್ಣ ಅಂತ ಸದಾ ಹಸನ್ಮುಖಿ ಪ್ರತಿ ಮಾತಿಗೊಂದು ನಗೆಚಟಾಕಿ #avintvcom
1 min readಅವರು ಮಗ್ಗಲಮಕ್ಕಿ ಗಣೇಶ್. ನಾವೆಲ್ಲಾ ಅಂದ್ರೆ ಸಮಾನ ಮನಸ್ಕ ಹಿರಿಕಿರಿಯ ಗೆಳೆಯರ ತಂಡ ಕರೆಯೋದು ಗಣೇಶಣ್ಣ ಅಂತ. ಸದಾ ಹಸನ್ಮುಖಿ. ಪ್ರತಿ ಮಾತಿಗೊಂದು ನಗೆಚಟಾಕಿ. ಕಲ್ಲನ್ನು ಬೇಕಾದ್ರೂ ಮಾತಾಡಿಸೋ ಮಾತುಗಾರ. ನಮ್ಮ ಎದುರಿಗೆ ಇರೋರ ಪದವಿ, ಸ್ಥಾನಮಾನ, ಜಾತಿ, ಧರ್ಮ, ಮೇಲುಕೀಳು, ವಿದ್ಯಾಭ್ಯಾಸ, ಜ್ಞಾನ, ಹಣ, ಆಸ್ತಿ ಹಿರಿತನ, ಕಿರಿತನ ಈ ಎಲ್ಲಾವನ್ನು ಗಮನಿಸಿ ಮಾತಾಡೋಕೆ ಹೋದ್ರೆ ಸರಿಯಾಗಿ ಮಾತಾಡೋಕೆ ಆಗೊಲ್ಲ ಮಾರ್ರೆ. ಎದುರಿಗೆ ಯಾರೆ ಇರ್ಲಿ. ನಮ್ಗೆ ಅನ್ಸಿದನ್ನ ನೇರವಾಗಿ ಹೇಳ್ಬೇಕು. ಆಗ್ಲೆ ಆತ್ಮವಿಶ್ವಾಸದಿಂದ ಮಾತಾಡೋಕೆ ಸಾಧ್ಯವಾಗೋದು ಅಂದಿದ್ರು ಗಣೇಶಣ್ಣ. ಅವ್ರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ, ಸ್ಕೌಟ್ ಮತ್ತು ಗೈಡ್ ನ ತಾಲ್ಲೂಕು ಅಧ್ಯಕ್ಷ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ. ಜೇಸಿಐನ ಪೂರ್ವಾಧ್ಯಕ್ಷ ಮತ್ತು ತರಬೇತುದಾರ. ಅವರ ಕಾರಿನ ಡಿಕ್ಕಿಯಲ್ಲಿ ಯಾವಾಗಲೂ ಕನ್ನಡದ ಶಾಲು, ಸ್ಕೌಟ್ ಮತ್ತು ಗೈಡ್ ನ ಸಮವಸ್ತ್ರ, ಕರ್ನಾಟಕ ರಾಷ್ಟ್ರಿಯ ಪಕ್ಷದ ಟೋಪಿ, ‘ಜೇಸಿಐನ ಪಿನ್’ ಇರುತ್ತದೆ. ಸಮಾಜದೊಡನೆ ಇರುವಾಗ ಆ ಜವಾಬ್ದಾರಿಗಳನ್ನ ನಿಭಾಯಿಸಿ ಮನೆಗೆ ಹೋಗುವಾಗ ಶಾಲು, ‘ಜೇಸಿಐ ಪಿನ್’ , ಟೋಪಿ, ಸಮವಸ್ತ್ರವನ್ನು ಮತ್ತು ಆ ಜವಾಬ್ದಾರಿಯ ಗತ್ತನ್ನು ಕಾರಿನ ಡಿಕ್ಕಿಯಲ್ಲೆ ಬಿಟ್ಟು ಸಾಮಾನ್ಯನಾಗಿ ಗೆಳೆಯರೊಂದಿಗೆ ಕುಟುಂಬದವೊಂದಿಗೆ ಬೆರೆಯುವವರು ಇವರು. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳ ನಡೆಸುತ್ತಾ ಆ ಸ್ಥಾನಕ್ಕೊಂದು ಘನತೆ ತಂದವರು ಇವರು. ‘ಎನ್ ಸಾರ್ ಪೇಪರ್ ತುಂಬಾ ನಿಮ್ದೆ ಸುದ್ದಿ?’ ಅನ್ನೋರಿಗೆ ‘ ಸುದ್ದಿ ಮಾಡಿ ಅಂತ ಯಾರಿಗೂ ಹೇಳೊಲ್ಲ ಸಾರ್. ಕಾರ್ಯಕ್ರಮ ಮಾಡ್ತೀವಿ ಅಷ್ಟೆ. ಕಾರ್ಯಕ್ರಮಗಳು ಹೆಚ್ಚಿರೋದ್ರಿಂದ ಸುದ್ದಿಗಳು ಜಾಸ್ತಿ ಅನ್ನೋದು ಗಣೇಶಣ್ಣ. ಸದಾ ನೇರ ನೇರ ಮಾತು, ನಡೆ ನುಡಿ ಎಲ್ಲಾ. ಇವತ್ತು ಅವರ ಹುಟ್ಟು ಹಬ್ಬ. ಹುಟ್ಟುಹಬ್ಬ ಜೋರಾ ಸರ್ ಅಂದಿದಕ್ಕೆ ಗಣೇಶಣ್ಣ, ತೇಜಸ್ವಿ ಅವರ್ರು ಬೈದ ಕಥೆಯನ್ನು ಹೇಳಿದ್ರು. ತೇಜಸ್ವಿ ಅವ್ರನ್ನ ಒಬ್ರು ಅವ್ರ ಹುಟ್ಟಿದ ಹಬ್ಬದ ದಿನ ಹೋಗಿ ‘ ಸರ್ ನಿಮ್ ಜನ್ಮದಿನದ ಪ್ರಯುಕ್ತ ಒಂದ್ ಕಾರ್ಯಕ್ರಮ ಮಾಡ್ಬೇಕು ಅಂತ ಇದ್ದೀವಿ ಸರ್’ ಅಂದಿದ್ರಂತೆ. ಅದ್ಕೆ ತೇಜಸ್ವಿ ಇವತ್ತು ಪ್ರಪಂಚದಲ್ಲಿರೋ ಲಕ್ಷಾಂತರ ಜನಕ್ಕೆ ಹುಟ್ಟಿದ ದಿನ. ಅವ್ರಿಗೆಲ್ಲಾ ಕಾರ್ಯಕ್ರಮ ಮಾಡಿ ಆಮೇಲೆ ನೋಡೋಣ ಅಂದ್ರಂತೆ ಅಂದ್ರು. ಗಣೇಶಣ್ಣಂಗೆ ಹುಟ್ಟಿದ ಹಬ್ಬದ ಶುಭಾಶಯ ಮತ್ತೊಮ್ಮೆ… -ನಂದೀಶ್ ಬಂಕೇನಹಳ್ಳಿ