“ಭಗವಾಧ್ವಜ ತೆರವುಗೊಳಿಸಲು ದುರ್ಗಾದೇವಿ ಸಮಿತಿ ಸದಸ್ಯರ ಸೂಚನೆ : ಪ್ರವೀಣ್ ಪೂಜಾರಿ ಸ್ಪಷ್ಟನೆ.”
1 min read
ದುರ್ಗಾ ದೇವಿ ಸಮಿತಿಯ ಸದಸ್ಯರೊಬ್ಬರ ಸೂಚನೆ ಮೇರೆಗೆ ನಾನು ಭಗವಾಧ್ವಜ ತೆರವುಗೊಳಿಸಿದ್ದೇನೆ. ಆದರೆ ದುರ್ಗಾದೇವಿ ಸಮಿತಿಯವರು ಈ ವಿಚಾರವನ್ನು ಮರೆಮಾಚಿ ನನ್ನ ಮೇಲೆ ಆರೋಪ ಹೊರೆಸಿದ್ದಾರೆಂದು ಆರೋಹಿ ಸೌಂಡ್ಸಿಸ್ಟಮ್ ಮಾಲೀಕ ಪ್ರವೀಣ್ಪೂಜಾರಿ ಹೇಳಿದರು.
ಅವರು ದಿನಾಂಕ 06/11/2023ರ ಸೋಮವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಶ್ರೀ ಸಾರ್ವಜನಿಕ ಮಹಾಗಣಪತಿ ಮತ್ತು ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್ ಮತ್ತು ಸೌಂಡ್ ಸಿಸ್ಟಮ್ ಹಾಕಲು ನನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸಲು ಭಗವಾಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಹಾಗಾಗಿ ನಾನು ಭಗವಾಧ್ವಜ ತೆರವುಗೊಳಿಸಿದ್ದೆ. ಆದರೆ ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅವರು ಮಾಡಿದ ತಪ್ಪನ್ನು ತನ್ನ ಮೇಲೆ ಹೊರೆಸಿದ್ದಾರೆ. ಈ ಬಗ್ಗೆ ನಾನು ಯಾವ ದೇವರ ಬಳಿ ಬಂದು ಪ್ರಮಾಣ ಮಾಡಲು ಸಿದ್ಧವಿದ್ದೇನೆ. ದುರ್ಗಿ ಸಮಿತಿಯವರು ಭಗವಾಧ್ವಜ ತೆರವುಗೊಳಿಸಲು ತಿಳಿಸಿಲ್ಲವೆಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕೆಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಅವಿನಾಶ್ ಮಾತನಾಡಿ, ಬಣಕಲ್ನಲ್ಲಿದ್ದ ಗೊಂಬೆ ಕುಣಿತದ ತಂಡವೊಂದನ್ನು ದುರ್ಗಿ ವಿಸರ್ಜನೆಗೆ ಬುಕಿಂಗ್ ಮಾಡಲಾಗಿತ್ತು. ನಂತರ ಆ ತಂಡ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಾರೆಂಬ ಕಾರಣಕ್ಕೆ ಬುಕಿಂಗ್ ರದ್ದುಪಡಿಸಲಾಗಿದೆ. ದುರ್ಗಿ ಉತ್ಸವದಲ್ಲಿ ಭಗವಾಧ್ವಜ ಹಾರಿಸದಿರಲು ಕಾರಣವೇನು? ಕೇಸರಿ ಬಣ್ಣದ ಮೇಲೆ ಅವರಿಗೆ ತಾತ್ಸಾರವೇಕೆ? ಇದನ್ನು ಗಮನಿಸಿದರೆ ಅವರ ಮನಸ್ಥಿತಿ ತಿಳಿಯುತ್ತದೆ. ಹಾಗಾಗಿ ಮೂಡಿಗೆರೆ ಪಟ್ಟಣದಲ್ಲಿ ನವೆಂಬರ್ 24ರಂದು ಸನಾತನ ಧರ್ಮ ಮತ್ತು ಭಗವಾಧ್ವಜದ ಬಗ್ಗೆ ಜನಜಾಗೃತಿ ಮೂಡಿಸಲು ಸನಾತನ ಹಿಂದೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.