“ಮಡದಿಯ ಕೊಲೆ : ಬೀದಿನಾಯಿಗಳಿಂದ ಬಟಾಬಯಲು.”
1 min read
ಮಡದಿಯನ್ನು ಕೊಲೆಮಾಡಿ ಮಣ್ಣಿನಡಿ ಹೂತಿಟ್ಟ ಪ್ರಕರಣ ಮೂರು ತಿಂಗಳ ನಂತರ ಬೀದಿನಾಯಿಗಳಿಂದಾಗಿ ಬಯಲಾಗಿರುವ ವಿಚಿತ್ರ ಘಟನೆ ಹಾಸನ ಜಿಲ್ಲೆಯ,ಸಕಲೇಶಪುರ ತಾಲ್ಲೂಕಿನ,ಬಾಗೇ ಗ್ರಾಮದಲ್ಲಿ ನಡೆದಿದೆ.
ಕೊಲೆ ಮಾಡಿ ನಾಪತ್ತೆ ನಾಟಕವಾಡಿದ್ದ :
ಬಾಗೇ ಗ್ರಾಮದ ವಾಸು ಶಾಂತಿ (28 ವರ್ಷ) ಕೊಲೆಯಾದ ಮಹಿಳೆ. ಆಕೆಯ ಪತಿ ಪವನ್ ಕುಮಾರ್ ಕೊಲೆಮಾಡಿದಾತ. ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಡುವೆ ಇತ್ತೀಚೆಗೆ ಬಿರುಕು ಮೂಡಿತ್ತು. ಈಗ್ಗೆ ಮೂರು ತಿಂಗಳ ಹಿಂದೆ ಮನೆಯಲ್ಲಿ ಪತಿ ಪತ್ನಿ ಮಧ್ಯೆ ಜಗಳವಾಗಿದ್ದು ಅದು ವಿಕೋಪಕ್ಕೆ ಹೋಗಿ ಪವನ್ ಕುಮಾರ್ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಪತ್ನಿ ಸಾವನ್ನಪ್ಪಿದ್ದು, ಆಕೆಯ ಶವವನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಹಳ್ಳದ ಸಮೀಪ ಮಣ್ಣಿನಡಿ ಹೂತಿಟ್ಟಿದ್ದ. ನಂತರ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ತನ್ನಿಬ್ಬರು ಗಂಡು ಮಕ್ಕಳೊಂದಿಗೆ ಏನೂ ಅರಿಯದವನಂತೆ ಅದೇ ಮನೆಯಲ್ಲಿ ವಾಸವಾಗಿದ್ದ.
ಬೀದಿನಾಯಿಗಳಿಂದ ಬಯಲಾದ ಕೊಲೆ ರಹಸ್ಯ:
ಆದರೆ ಮೂರು ತಿಂಗಳ ನಂತರ ಪವನ್ ಕುಮಾರ್ ನ ಕೃತ್ಯ ಬಯಲಾಗಿದೆ. ಅದೂ ಬೀದಿ ನಾಯಿಗಳಿಂದಾಗಿ. ಹಳ್ಳದ ಬದಿಯಲ್ಲಿ ಶವವನ್ನು ಹೂತಿಟ್ಟ ಪ್ರದೇಶದಲ್ಲಿ ಇತ್ತೀಚೆಗೆ ಬರುತ್ತಿದ್ದ ವಾಸನೆಯ ಗ್ರಹಿಕೆಯಿಂದ ಬೀದಿ ನಾಯಿಗಳು ನೆಲವನ್ನು ಬಗೆದು ಶವದ ಅಂಗಾಂಗಗಳನ್ನು ಹೊರಗೆಳೆದಿವೆ. ಇದನ್ನು ಗಮನಿಸಿದ ಅಲ್ಲಿನ ತೋಟದ ಮಾಲೀಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರ ವಿಚಾರಣೆಯ ನಂತರ ಪವನ್ ಕುಮಾರ್ ನ ಬಣ್ಣ ಬಯಲಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಬಾಯಿಬಿಟ್ಟಿದ್ದಾನೆ.
ತಾನು ಕೊಲೆ ಪ್ರಕರಣದಿಂದ ಬಚಾವಾದೆ ಎಂದು ಭಾವಿಸಿ ಆರಾಮಾಗಿದ್ದ ಪವನ್ ಕುಮಾರನ ಕೃತ್ಯ ಬೀದಿನಾಯಿಗಳಿಂದಾಗಿ ಬಟಾಬಯಲಾಗಿದೆ.
ಪೊಲೀಸರು ಪವನ್ ಕುಮಾರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ಚಿಕ್ಕ ಗಂಡು ಮಕ್ಕಳಿಬ್ಬರು ತಬ್ಬಲಿಯಾಗಿ, ದಿಕ್ಕುತೋಚದಂತಾಗಿದ್ದಾರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.