“ದುರ್ಗಾದೇವಿ ಉತ್ಸವಕ್ಕಾಗಿ ಭಗವಾಧ್ವಜ ತೆರವುಗೊಳಿಸಿಲ್ಲ: ಮೋಟಮ್ಮ ಸ್ಪಷ್ಟನೆ.”
1 min read
ಯಾವುದೇ ಧರ್ಮ ಹಾಗೂ ಧಾರ್ಮಿಕತೆಗೆ ಧಕ್ಕೆ ಬಾರದಂತೆ ಶಕ್ತಿ ದೇವತೆ ದುರ್ಗಾ ದೇವಿ ಉತ್ಸವವನ್ನು ಧಾರ್ಮಿಕ, ಶಕ್ತಿ, ಭಕ್ತಿ, ಇಷ್ಟಾನುಸಾರವಾಗಿ ಆಚರಿಸಲಾಗಿದೆ ಎಂದು ಶ್ರೀ ದುರ್ಗಾದೇವಿ ಸಮಿತಿ ಅಧ್ಯಕ್ಷೆ ಮೋಟಮ್ಮ ಹೇಳಿದರು.
ಅವರು ದಿನಾಂಕ 04/11/2023ರ ಶನಿವಾರದಂದು ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ದುರ್ಗಾದೇವಿ ಪ್ರತಿಷ್ಠಾಪನೆ ಮಾಡುವ ಮುನ್ನ ಶ್ರೀ ಮಹಾ ಗಣಪತಿ ಸೇವಾ ಸಮಿತಿಯವರು ಹಾಕಿದ್ದ ಭಗವಾಧ್ವಜವನ್ನು ದುರ್ಗಾದೇವಿ ಸಮಿತಿಯಿಂದ ತೆರವುಗೊಳಿಸಿದ್ದಾರೆಂದು ಗಣಪತಿ ಸಮಿತಿಯವರು ಆರೋಪಿಸಿದ್ದಾರೆ. ಆ ಆರೋಪ ಸತ್ಯಕ್ಕೆ ದೂರವಾಗಿದೆ. ದುರ್ಗಾ ದೇವಿ ಸಮಿತಿಯಿಂದ ಯಾವುದೇ ಭಗವಾಧ್ವಜವನ್ನು ತೆರವುಗೊಳಿಸಿಲ್ಲ. ನಾವು ದುರ್ಗಿ ಉತ್ಸವ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೋರ್ವರಿಗೆ ಮೈಕ್ ಮತ್ತು ವಿದ್ಯುತ್ ದೀಪ ಅಳವಡಿಸಲು ಗುತ್ತಿಗೆ ನೀಡಲಾಗಿತ್ತು. ವಿದ್ಯುತ್ ದೀಪ ಅಲಂಕಾರ ಮಾಡುವ ಸಂದರ್ಭದಲ್ಲಿ ಭಗವಾಧ್ವಜ ತೆರವುಗೊಳಿಸಿ ಅದನ್ನು ಸ್ವತಃ ಅವರ ಮನೆಯಲ್ಲಿ ಭದ್ರವಾಗಿ ಇಟ್ಟಿದ್ದಾರೆ. ಈ ಬಗ್ಗೆ ಅವರೇ ಪತ್ರದಲ್ಲಿ ಲಿಖಿತವಾಗಿ ತಿಳಿಸಿದ್ದಾರೆಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ಮಂಚೇಗೌಡ ಮಾತನಾಡಿ, ಕಳೆದ 20 ವರ್ಷದಿಂದ ಪಟ್ಟಣದಲ್ಲಿ ಶ್ರೀ ದುರ್ಗಾದೇವಿ ಉತ್ಸವ ನಡೆಸಿಕೊಂಡು ಬರಲಾಗಿದೆ. ಸಮಿತಿಯಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಇಲ್ಲಿ ಧಾರ್ಮಿಕ ವಿಚಾರದಲ್ಲಿ ರಾಜಕಾರಣ ತರಲು ಯಾರೂ ಇಷ್ಟ ಪಡುವುದಿಲ್ಲ. ಯಾವುದೇ ಧರ್ಮಕ್ಕೆ ಅಪಮಾನ ಮಾಡುವ ಉದ್ದೇಶ ಯಾರಿಗೂ ಇಲ್ಲ. ಒತ್ತಾಯವಾಗಿ ಯಾವುದೇ ಭಗವಾಧ್ವಜ ತೆರವುಗೊಳಿಸಿಲ್ಲ. ಒಂದು ಸಣ್ಣ ಗೊಂದಲದಿಂದ ಸಮಸ್ಯೆ ಉಂಟಾಗಿತ್ತು. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಮುಂದಿನ ದಿನದಲ್ಲಿ ದೇವಿ ಉತ್ಸವವನ್ನು ಯಾರಿಗೂ ನೋವಾಗದಂತೆ ಧಾರ್ಮಿಕ ಭಾವನೆ, ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದುರ್ಗಾದೇವಿ ಸಮಿತಿಯ ಪದಾಧಿಕಾರಿಗಳಾದ ಎಚ್.ಜಿ.ಸುರೇಂದ್ರಗೌಡ, ಬಿ.ಎಸ್.ಜಯರಾಂಗೌಡ, ಸಿ.ಬಿ.ಶಂಕರ್, ಎಚ್.ಪಿ.ರಮೇಶ್, ನಿಶಾಂತ್ ಪಟೇಲ್, ಅಶೋಕ್ಗೌಡ, ಸುಧೀರ್, ಹರೀಶ್, ಪ್ರಕಾಶ್, ಅನಿಲ್, ದೀಕ್ಷಿತ್ ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.